ನೆಲಮಂಗಲ : 50 ಲಕ್ಷದ ಗರಿಗರಿ ನೋಟು ವಶ
ಸೋಮವಾರ ಬೆಳಗ್ಗೆ 12 ಗಂಟೆ ಸಮಯದಲ್ಲಿ ಟಾಟಾ ಸುಮೋದಲ್ಲಿ ಮೂರು ಬಾಕ್ಸ್ಗಳಲ್ಲಿ ಸಾಗಿಸಲಾಗುತ್ತಿದ್ದ ಗರಿಗರಿ ನೋಟಿನ 50 ಲಕ್ಷ ಹಣವನ್ನು ಪೊಲೀಸರು ಹಾಗೂ ಚುನಾವಣಾ ವೀಕ್ಷಕರು ಪತ್ತೆ ಹಚ್ಚಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಹಣವನ್ನು ಬಂಗಾರಪೇಟೆಯ ಐಎನ್ಜಿ ವೈಶ್ಯ ಬ್ಯಾಂಕ್ನಿಂದ ಡ್ರಾ ಮಾಡಿಕೊಂಡು ತರಲಾಗುತ್ತಿತ್ತು. ಈ ವೇಳೆ ದೊಡ್ಡಬಳ್ಳಾಪುರ - ದಾಬಸ್ಪೇಟೆ (೨೧೬ ಎನ್ಎಚ್) ರಸ್ತೆಯಲ್ಲಿ ಚೆಕ್ ಪೋಸ್ಟ್ ಬಳಿ ಮೂವರು ಸಿಕ್ಕಿ ಬಿದ್ದಿದ್ದಾರೆ.
ಚೆಕ್ ಪೋಸ್ಟ್ ಬಳಿ ವಾಹನಗಳ ತಪಾಸಣೆ ನಡೆಸಿದಾಗ ಅದರಲ್ಲಿದ್ದವರು ಗಾಬರಿಗೊಂಡರು. ವಾಹನದಲ್ಲಿ ಪೆಟ್ಟಿಗಳಲ್ಲಿ ಕಾಗದ ಪತ್ರಗಳ ಜೊತೆ ೧೦೦೦ ಹಾಗೂ ೫೦೦ರೂ. ಮುಖಬೆಲೆಯ ಹಣದ ಕಟ್ಟು ಇರುವುದು ಪತ್ತೆಯಾಗಿದೆ. ವಿಚಾರಣೆ ನಡೆಸಿದಾಗ ಇದನ್ನು ತಿಪಟೂರಿನ ಎಟಿಎಂಗೆ ಸಾಗಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಅನುಮಾನಗೊಂಡ ಪೊಲೀಸರು ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಆದರೆ, ಹಣದ ಕುರಿತಾಗಿ ಯಾವುದೇ ದಾಖಲೆ ಪತ್ರಗಳು ಇದುವರೆಗೂ ಪತ್ತೆಯಾಗಿಲ್ಲ. ಹಣ ಡ್ರಾ ಮಾಡಿದ ರಶೀದಿ ಇದೆಯೇ ಹೊರತು, ಎಲ್ಲಿಗೆ ಅದನ್ನು ತಲುಪಿಸಬೇಕೆಂಬುದರ ಬಗ್ಗೆ ಯಾವುದೇ ದಾಖಲೆಗಳಿಲ್ಲ.
ಗನ್ ಮ್ಯಾನ್ ಇಲ್ಲ : ಎಟಿಎಂಗೆ ಹಣ ತುಂಬಿಸಲು ಬಳಸುವಂತಹ ವಾಹನಗಳಿಗೆ ಗನ್ಮ್ಯಾನ್ನ ಭದ್ರತೆ ಒದಗಿಸಲಾಗಿದೆ. ಆದರೆ, ಸುಮೋದಲ್ಲಿ ಮೂವರು ಮಾತ್ರವಿದ್ದು, ಗನ್ ಮ್ಯಾನ್ ಸಹ ಇಲ್ಲ. ತ್ಯಾಮಗೊಂಡ್ಲು ಪೊಲೀಸರು ಮೂವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ-೪ರ ಜಾಸ್ಟೋಲ್ನಲ್ಲಿ ಸಿಕ್ಕಿದ್ದ ೧.೬೯ ಕೋಟಿ ರೂ. ಹಣದ ಮೂಲ ಪತ್ತೆಹಚ್ಚಲು ಚುನಾವಣಾ ಅಧಿಕಾರಿಗಳು ಹರಸಾಹಸ ನಡೆಸುತ್ತಿರುವಾಗಲೇ ಮತ್ತೆ ತಾಲೂಕಿನಲ್ಲಿ ಗರಿ ಗರಿ ನೋಟು ಸಿಕ್ಕಿವೆ.
ಕುಣಿಯುತ್ತಿದೆ ಕುರುಡು ಕಾಂಚಣ : ಭಾನುವಾರ ಬೆಳಗ್ಗೆ ಸಹ ಬೆಂಗಳೂರಿನಲ್ಲಿ ದಾಖಲೆಯಿಲ್ಲದ 2 ಕೋಟಿ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ. ಕುರುಡು ಕಾಂಚಣದ ನರ್ತನ ಹೆಚ್ಚಾಗಿದೆ. ಆಯೋಗದ ಕಟ್ಟು ನಿಟ್ಟು ಮತ್ತು ಒಂದೇ ಹಂತದ ಚುನಾವಣೆ ನಡೆಯುತ್ತಿರುವುದರಿಂದ ಹಣ ಸಾಗಿಸಿ, ಹಂಚುವುದು ದೊಡ್ಡ ಸವಾಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ