ಯಾವ ಅಭ್ಯರ್ಥಿಗಳನ್ನು ಬಿಪ್ಯಾಕ್ ಬೆಂಬಲಿಸಲಿದೆ?
ಬೆಂಗಳೂರು, ಏ. 27 : ಐಟಿ ಸಿಟಿ ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತು ಬೆಂಗಳೂರಿನ ಜನತೆಗೆ ಉತ್ತಮ ಆಡಳಿತ ಸಿಗಬೇಕೆಂಬ ಉದ್ದೇಶದಿಂದ ಸ್ಥಾಪಿತವಾಗಿರುವ BPAC (ಬೆಂಗಳೂರು ಪಾಲಿಟಿಕಲ್ ಆಕ್ಷನ್ ಕಮಿಟಿ) ನಾಗರಿಕ ಸಂಸ್ಥೆ, ತಾನು ಬೆಂಬಲ ಸೂಚಿಸುತ್ತಿರುವ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಲಿದೆ.
ಬೆಂಗಳೂರನ್ನು ದೃಷ್ಟಿಯಲ್ಲಿಟ್ಟುಕೊಂಡು, ನಗರಕ್ಕೆ ಉತ್ತಮ ಆಡಳಿತ ನೀಡಬಲ್ಲಂಥ ಸೂಕ್ತವಾದ ಅಭ್ಯರ್ಥಿಯನ್ನು ಗುರುತಿಸಿ ಬೆಂಬಲಿಸುವುದು ಬಿಪ್ಯಾಕ್ ಸಂಸ್ಥೆಯ ಮುಂದಿರುವ ಪ್ರಮುಖ ಗುರಿ. ರಾಜಕೀಯವಾಗಿ ತಟಸ್ಥವಾಗಿರುವ ಈ ಸಂಸ್ಥೆ, ಸೂಕ್ತ ಅಭ್ಯರ್ಥಿಗೆ ತಕ್ಕ ಬೆಂಬಲ ಸೂಚಿಸಿ, ಚುನಾವಣೆಯಲ್ಲಿ ಗೆಲ್ಲಲು ಸಹಾಯಮಾಡುವ ಉದ್ದೇಶ ಹೊಂದಿದೆ.
ಈ ಚುನಾವಣೆಯಲ್ಲಿ ನಾನಾ ರಾಜಕೀಯ ಪಕ್ಷಗಳು ಹಣವನ್ನು ಸುರಿಯುತ್ತಿವೆ. ಹಣ ಚೆಲ್ಲಿದರೆ ಮಾತ್ರ ಓಟು ಸಿಗುತ್ತದೆ ಎಂಬ ವಾತಾವರಣವನ್ನು ಪಕ್ಷಗಳು ಸೃಷ್ಟಿಸಿವೆ. ಆದರೆ, ಹಣವನ್ನು ಪೋಲು ಮಾಡದೆಯೂ ಚುನಾವಣೆಯಲ್ಲಿ ಪ್ರಚಾರಕಾರ್ಯ ಕೈಗೊಳ್ಳಬಹುದು ಎಂಬ ಜಿಜ್ಞಾಸೆಯೊಂದಿಗೆ ಬಿಪ್ಯಾಕ್ ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.
ಈ ನಿಟ್ಟಿನಲ್ಲಿ ಬಿಪ್ಯಾಕ್ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಟಿ.ವಿ. ಮೋಹನದಾಸ್ ಪೈ ಅವರು ಹೀಗೆ ಟ್ವೀಟ್ ಮಾಡಿದ್ದಾರೆ, "ನಮಗೆ ಉತ್ತಮ ಆಡಳಿತ ಮತ್ತು ಸ್ವಚ್ಛ ರಾಜಕೀಯ ಬೇಕಿದ್ದರೆ ಚುನಾವಣೆಗೆ ನಾಗರಿಕರೇ ಹಣವನ್ನು ತೊಡಗಿಸಬೇಕು. ಆದರೆ ಉಳಿದ ಪಕ್ಷಗಳು ಹಣ ದುಂದು ಮಾಡುತ್ತಿರುವುದು ಭ್ರಷ್ಟಾಚಾರಕ್ಕೆ ಇಂಬುಕೊಟ್ಟಂತಾಗುತ್ತದೆ." ಚುನಾವಣೆಯಲ್ಲಿ ನಾಗರಿಕರು ಸಕ್ರೀಯವಾಗಿ ತೊಡಗಿಕೊಂಡಾಗ ಮತ್ರ ಸುಧಾರಣೆ ತರಲು ಸಾಧ್ಯ ಎಂಬುದು ಅವರ ಅಭಿಪ್ರಾಯ.
ಮೋಹನದಾಸ್ ಪೈ ಅವರ ಮಾತಿಗೆ ಪುಷ್ಟಿಕೊಡುವಂತೆ, ಈ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿಯವರೆಗೆ 12 ಕೋಟಿ ರು.ಗೂ ಹೆಚ್ಚು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇದು ಅಧಿಕೃತವಾಗಿ ಸಿಕ್ಕಿರುವ ಹಣ ಮಾತ್ರ. ಇನ್ನು ಸಿಗದಿರುವ ಕಪ್ಪುಹಣ ಇನ್ನೆಷ್ಟಿದೆಯೋ? ರುದ್ರನರ್ತನ ಮಾಡುತ್ತಿರುವ ಹಣ ಪ್ರಜಾಪ್ರಭುತ್ವವನ್ನೇ ಅಪಹಾಸ್ಯ ಮಾಡುತ್ತಿರುವಂತಿದೆ.
ಈ ವಿಷಯದಲ್ಲಿ ಯಾವ ಪಕ್ಷವೂ ಹಿಂದೆ ಬಿದ್ದಿಲ್ಲ. ಲೋಕಸತ್ತಾ ಪಕ್ಷ ಮಾತ್ರ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ನಾಗರಿಕರಿಂದಲೇ ಚುನಾವಣೆ ಪ್ರಚಾರಕ್ಕೆ ಹಣ ಸಂಗ್ರಹ ಮಾಡಿ, ಲೆಕ್ಕ ನೀಡುತ್ತಿದೆ. ಇಂಥ ವ್ಯವಸ್ಥೆಯನ್ನು ಇತರ ರಾಜಕೀಯ ಪಕ್ಷಗಳು ಜಾರಿಗೆ ತರುವುದು ಯಾವಾಗ?
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ