ದೆಹಲಿ ರೇಪ್ : ಮತ್ತೊಬ್ಬ ಆರೋಪಿಯ ಬಂಧನ
ಪಟ್ನಾ/ನವದೆಹಲಿ, ಏ. 22 : ಐದು ವರ್ಷದ ಮಗುವಿನ ಮೇಲೆ ನಡೆದ ಪೈಶಾಚಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ವ್ಯಕ್ತಿಯನ್ನು ಪಟ್ನಾದಲ್ಲಿ ಸೋಮವಾರ ಬೆಳಗಿನ ಜಾವ ಬಂಧಿಸಲಾಗಿದೆ. ಮೊದಲನೇ ಆರೋಪಿ ಮನೋಜ್ ಕುಮಾರ್ ನೀಡಿದ ಹೇಳಿಕೆಯ ಆಧಾರದ ಮೇಲೆ ಪ್ರದೀಪ್ ಎಂಬಾತನನ್ನು ಬಿಹಾರದ ಬರಹಿಯಾ ಗ್ರಾಮದಲ್ಲಿ ಬಂಧಿಸಲಾಗಿದೆ.
ಮನೋಜ್ ನೀಡಿದ ಸುಳಿವಿನ ಮೇರೆಗೆ ತನ್ನ ಸೋದರಮಾವನ ಮನೆಯಲ್ಲಿ ಅಡಗಿಕೊಂಡಿದ್ದ ಪ್ರದೀಪನನ್ನು ದೆಹಲಿ ಮತ್ತು ಬಿಹಾರದ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಆತನನ್ನು ದರಭಂಗಾ ಕೋರ್ಟಿನಲ್ಲಿ ಸೋಮವಾರ ಹಾಜರುಪಡಿಸಿದ ಬಳಿಕ ದೆಹಲಿಗೆ ಸೋಮವಾರ ಕರೆತರಲಾಗುವುದು ಎಂದು ದೆಹಲಿ ಪೊಲೀಸ್ ಕಮಿಷನರ್ ನೀರಜ್ ಕುಮಾರ್ ಹೇಳಿದ್ದಾರೆ.
ಶನಿವಾರ ಬಿಹಾರದ ಮುಜಫರ್ಪುರದಲ್ಲಿ ಬಂಧಿತನಾಗಿದ್ದ ಪ್ರಮುಖ ಆರೋಪಿ ಮನೋಜ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಮಗುವಿನ ಮೇಲೆ ಅತ್ಯಾಚಾರವನ್ನು ತನ್ನ ಸ್ನೇಹಿತ ಪ್ರದೀಪ್ ಕೂಡ ಮಾಡಿದ್ದ ಎಂದಿದ್ದ. ತನ್ನ ಮನೆಗೆ ಬಂದಿದ್ದ ಪ್ರದೀಪನೇ ಮಗುವನ್ನು ತನ್ನ ಬಳಿ ತರಬೇಕೆಂದು ಹೇಳಿದ್ದ.

ಕುಡಿದ ಮತ್ತಿನಲ್ಲಿದ್ದ ಪ್ರದೀಪ್ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ, ತಾನು ಅತ್ಯಾಚಾರ ಮಾಡಿರಲಿಲ್ಲ. ಆದರೆ, ಈ ಘಟನೆ ಬಗ್ಗೆ ಯಾರಿಗೂ ತಿಳಿಯಬಾರದೆಂದು ಮಗುವಿನ ಕುತ್ತಿಗೆ ಹಿಸುಕಿ ಸಾಯಿಸಲು ಯತ್ನಿಸಿ, ನಂತರ ಮಗು ಸತ್ತಿದೆ ಎಂದು ತಿಳಿದು ಪರಾರಿಯಾಗಿದ್ದೆ ಎಂದು ಮನೋಜ್ ಪೊಲೀಸರಿಗೆ ತಿಳಿಸಿದ್ದಾನೆ.
ಮಗು ಏ.15ರಂದೇ ಕಾಣೆಯಾಗಿತ್ತು. ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಎರಡು ದಿನಗಳ ನಂತರ ಏ.17ರಂದು ದಯನೀಯ ಸ್ಥಿತಿಯಲ್ಲಿ ಮಗುವ ಪತ್ತೆಯಾಗಿತ್ತು. ಮಗುವಿನ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಜನನಾಂಗದಲ್ಲಿ ಬಾಟಲಿ ಮತ್ತು ಮೇಣದಬತ್ತಿ ತುರುಕಿ ಪೈಶಾಚಿಕ ಕೃತ್ಯ ಎಸಗಲಾಗಿತ್ತು. ಮಗುವಿನ ಸ್ಥಿತಿಯನ್ನು ನೋಡಿ ವೈದ್ಯರೇ ದಂಗುಬಡಿದಿದ್ದರು.
ಸದ್ಯಕ್ಕೆ ಎಐಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಚಿಕಿತ್ಸೆಗೆ ಸಕಾರಾತ್ಮಕವಾಗಿ ಪ್ರತಿಸ್ಪಂದಿಸುತ್ತಿದ್ದು, ಚೇತರಿಕೆಯ ಹಾದಿಯಲ್ಲಿದೆ. ಈ ನಡುವೆ, ದೆಹಲಿ ಪೊಲೀಸ್ ಕಮಿಷನರನ್ನು ಎತ್ತಂಗಡಿ ಮಾಡಬೇಕು ಮತ್ತು ಮಗುವನ್ನು ಹುಡುಕಲು ಹಿಂದೇಟು ಹಾಕಿ ಕರ್ತವ್ಯಲೋಪ ಎಸಗಿದ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.
ಮತ್ತೊಂದು ಸಾಮೂಹಿಕ ಅತ್ಯಾಚಾರ : ಐದು ವರ್ಷದ ಮಗುವಿನ ಮೇಲೆ ದೆಹಲಿಯಲ್ಲಿ ಅತ್ಯಾಚಾರ ನಡೆದ ಬೆನ್ನಹಿಂದೆಯೇ 13 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಅಪಹರಿಸಿ 8 ದುರುಳರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಘಟನೆ ರಾಷ್ಟ್ರದ ರಾಜಧಾನಿಯಲ್ಲಿ ನಡೆದಿದೆ. ಬಾಲಕಿಗೆ ಪರಿಚಯವಿರುವ ಜನರೇ ಈ ಕೃತ್ಯ ಎಸಗಿದ್ದು, ಮೂವರನ್ನು ಬಂಧಿಸಲಾಗಿದೆ.












Click it and Unblock the Notifications