ಪುನಃ ಜೆಡಿಎಸ್ ಸೇರಲಿದ್ದಾರೆ ಮಹಿಮಾ ಪಟೇಲ್ ?
ಕಾರ್ಯಕರ್ತರ ಒತ್ತಡಕ್ಕೆ ಮಣಿದಿರುವ ಮಹಿಮಾ ಪಟೇಲ್ ಚುನಾವಣೆಗೆ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ. ಆದರೆ, ಸದ್ಯ ಕಾಂಗ್ರೆಸ್ ಪಕ್ಷದಲ್ಲಿರುವ ಅವರಿಗೆ ಟಿಕಕೆಟ್ ದೊರಕಿಲ್ಲ. ಆದ್ದರಿಂದ ಜೆಡಿಎಸ್ ಅಥವ ಬೇರೆ ಪಕ್ಷ ಸೇರಿ ಚನ್ನಗಿರಿ ವಿಧಾನಭೆ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲು ಸಜ್ಜಾಗಿದ್ದಾರೆ.
ಈಗಾಗಲೇ ಕಾರ್ಯಕರ್ತರೊಂದಿಗೆ ಎರಡು ಸುತ್ತಿನ ಸಭೆ ನಡೆಸಿರುವ ಪಟೇಲ್ , ಕಾಂಗ್ರೆಸ್ ಸಂಸ್ಕೃತಿ ನಮಗೆ ಸರಿ ಕಾಣುತ್ತಿಲ್ಲ. ಜನತಾ ಪರಿವಾರದ ಜೆಡಿಎಸ್ ಅಥವಾ ಜೆಡಿಯುಗೆ ಮರಳುತ್ತೇನೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಬೆಂಬಲಿಗರನ್ನು ಕೇಳಿದ್ದಾರೆ. ಜೆಡಿಎಸ್ಗೆ ಸೇರುವಂತೆ ಬಹುತೇಕರು ಒತ್ತಾಯಿಸಿದ್ದಾರೆ.
ಯಾವುದೇ ಅವಸರ ನಿರ್ಣಯ ಕೈಗೊಳ್ಳದ ಮಹಿಮಾ ಪಟೇಲ್, ಕಾರ್ಯಕರ್ತರ ಮನಸ್ಸಿಗೆ ನೋವಾಗದಂತೆ, ನನ್ನ ತತ್ವ, ನಂಬಿಕೆಗಳಿಗೆ ಧಕ್ಕೆಯಾಗದಂತೆ ಒಂದು ಗಟ್ಟಿ ನಿರ್ಧಾರ ಕೈಗೊಳ್ಳುತ್ತೇನೆ ಒಂದಷ್ಟು ಸಮಯ ಕೊಡಿ ಎಂದು ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.
ಸ್ವರ್ಣಯುಗ ಅಡ್ಡಿ : ಮಹಿಮಾ ಪಟೇಲ್ ಜೆಡಿಎಸ್ ಸೇರಲು ಸ್ವರ್ಣಯುಗ ಪಕ್ಷ ತೊಡಕಾಗಿದೆ. ಸ್ವರ್ಣಯುಗ ಪಕ್ಷ ಸ್ಥಾಪನೆ ಮಾಡಿ ವಿನೂತನ ರಾಜಕಾರಣ ಮಾಡಹೊರಟಿದ್ದ ಮಾಜಿ ಶಾಸಕ ಮಹಿಮಾ ಪಟೇಲ್ ಚುನಾವಣೆಯಲ್ಲಿ ಸೋಲುಂಡು ಕೊನೆಗೆ ಕಾಂಗ್ರೆಸ್ ಕೈ ಹಿಡಿದಿದ್ದರು.
ಸ್ವರ್ಣಯುಗ ಸ್ಥಾಪಿಸಲು ಜೆಡಿಎಸ್ ತೊರೆದಿದ್ದ ಅವರು ಮತ್ತೆ ಅದೇ ಪಕ್ಷ ಹೇಗೆ ಸೇರುವುದು ಎಂದು ಆಲೋಚಿಸುತ್ತಿದ್ದಾರೆ. ಪಟೇಲ್ ಪಕ್ಷಕ್ಕೆ ಮರಳಿದರೆ ಜೆಡಿಎಸ್ ಗೆ ಲಾಭವಿದೆ. ಮಹಿಮಾ ಲಿಂಗಾಯತ ಮುಖಂಡರು. ಇದನ್ನು ಬಳಸಿಕೊಂಡು ಪಕ್ಷಕ್ಕೆ ಲಾಭ ಮಾಡಿಕೊಳ್ಳಬಹುದು ಎಂಬುದು ಜೆಡಿಎಸ್ ಲೆಕ್ಕಾಚಾರ.
ಆದರೆ, ಜೆಡಿಎಸ್ ಸೇರುವ ಬಗ್ಗೆ ಮಹಿಮಾ ಪಟೇಲ್ ಅಂತಿಮ ನಿರ್ಧಾರ ಕೈಗೊಳ್ಳಬೇಕು. ಎರಡು ಮೂರು ದಿನಗಳಲ್ಲಿ ಈ ಕುರಿತು ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆ ಇದ್ದು, ನಂತರ ಮಹಿಮಾ ಪಟೇಲ್ ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.
ಚನ್ನಗಿರಿ ಕ್ಷೇತ್ರದಲ್ಲಿ ಹಾಲಿ ಶಾಸಕರಿಲ್ಲ. ಬಿಜೆಪಿಯಿಂದ ಗೆಲುವು ಸಾಧಿಸಿದ್ದ ಮಾಡಾಳು ವಿರೂಪಾಕ್ಷಪ್ಪ ಕೆಜೆಪಿ ಸೇರಿದ್ದಾರೆ. ಕಾಂಗ್ರೆಸ್ ನಿಂದ ವಡ್ನಾಳ್ ರಾಜಣ್ಣ ಸ್ಪರ್ಧಿಸಲಿದ್ದಾರೆ. ಜೆಡಿಎಸ್ ಕ್ಷೇತ್ರದಲ್ಲಿ ಹೊರಿಗೆರೆ ಉಮೇಶ್ ಅವರಿಗೆ ಟಿಕೆಟ್ ನೀಡಿದೆ. ಮಹಿಮಾ ಪಟೇಲ್ ಜೆಡಿಎಸ್ ಗೆ ಮರಳಿದರೆ, ಅವರಿಗೆ ಟಿಕೆಟ್ ನೀಡುತ್ತಾರೋ ಇಲ್ಲವೋ ಕಾದು ನೋಡಬೇಕು.(ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಪರಿಚಯ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ