ಬಂಡಾಯ ಶಮನಕ್ಕೆ ಬಿಜೆಪಿ ನಾಯಕರ ರಣತಂತ್ರ

ಟಿಕೆಟ್ ಗಾಗಿ ಕಾದಾಡುವುದು ನಮ್ಮ ಸಂಸ್ಕೃತಿಯಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ಮೀರಿ ಪಕ್ಷದಲ್ಲಿ ಬಂಡಾಯ ಸ್ಪೋಟಗೊಂಡಿರುವುದರಿಂದ, ನಾಯಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಬಂಡಾಯ ಶಮನಗೊಳಿಸಲು ಟಿಕೆಟ್ ವಂಚಿತ ಶಾಸಕರ ಕುಟುಂಬ ಸದಸ್ಯರಿಗೆ ಅವಕಾಶ ನೀಡುತ್ತೇವೆ ಎಂಬ ಹೊಸ ಮಂತ್ರ ಪಠಿಸ ತೊಡಿಗಿದ್ದಾರೆ.
ಮಾಲೂರಿನ ಎಸ್.ಎನ್. ಕೃಷ್ಣಯ್ಯಶೆಟ್ಟಿ, ಕೆಜಿಎಫ್ನ ವೈ.ಸಂಪಂಗಿ ಹಾಗೂ ಹೆಬ್ಬಾಳದ ಕಟ್ಟಾ ಸುಬ್ರಹ್ಮಣ್ಯನಾಯ್ಡು ಅವರಿಗ ಟಿಕೆಟ್ ನೀಡುವುದಕ್ಕೆ ಬಿಜೆಪಿ ವರಿಷ್ಠರು ಹಿಂದೇಟು ಹಾಕಿದ್ದಾರೆ. ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದವರಿಗೆ ಟಿಕೆಟ್ ನೀಡಬಾರದು ಎಂಬುದು ಬಿಜೆಪಿ ನಿಯಮ.
ಬಿಜೆಪಿ ವರಿಷ್ಠ ನಾಯಕ ಎಲ್.ಕೆ.ಅಡ್ವಾಣಿ ಸಹ ಜೈಲುವಾಸಿಗಳಿಗೆ ಟಿಕೆಟ್ ನೀಡಬಾರದು ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ. ಆದರೆ, ಟಿಕೆಟ್ ವಂಚಿತ ಶಾಸಕರಿಂದ ತೀವ್ರ ಒತ್ತಡ ಬರುತ್ತಿದೆ. ಬಂಡಾಯದ ಕಹಳೆ ಮೊಳಗಿದೆ. ಈಗಾಗಲೇ ಮಾಲೂರು ಶಾಸಕ ಕೃಷ್ಣಯ್ಯ ಶೆಟ್ಟಿ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಆದ್ದರಿಂದ ಪಕ್ಷದ ನಾಯಕರು ಹೊಸ ತಂತ್ರ ಅನುಸರಿಸಲು ಚಿಂತನೆ ನಡೆಸಿದ್ದಾರೆ. ಟಿಕೆಟ್ ವಂಚಿತ ಶಾಸಕರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುತ್ತೇವೆ ಎಂದು ಘೋಷಿಸಲು ಸಜ್ಜಾಗಿದ್ದಾರೆ. ಈಗಾಗಲೇ ತಮಗೆ ಟಿಕೆಟ್ ನೀಡದಿದ್ದರೆ, ತಮ್ಮ ತಾಯಿ ಇಲ್ಲವೇ ಸಹೋದರನಿಗೆ ಟಿಕೆಟ್ ಕೊಡಬೇಕೆಂದು ವೈ. ಸಂಪಂಗಿ ಬೇಡಿಕೆ ಇಟ್ಟಿದ್ದಾರೆ.(ಬಿಜೆಪಿ 140 ಅಭ್ಯರ್ಥಿಗಳ ಮೊದಲ ಪಟ್ಟಿ)
ಕಟ್ಟಾ ಸುಬ್ರಹ್ಮಣ್ಯನಾಯ್ಡು ಕುಟುಂಬದ ಸದಸ್ಯರನ್ನು ಕಣಕ್ಕಿಳಿಸುವ ಕುರಿತು ಇನ್ನು ಒಪ್ಪಿಗೆ ನೀಡಿಲ್ಲ. ಆದ್ದರಿಂದ ಯಾರಿಗೆ ಟಿಕೆಟ್ ನೀಡಬೇಕು ಎಂದು ನಾಯಕರು ಆಲೋಚನೆ ನಡೆಸಿದ್ದಾರೆ. ಏ.14ರಂದು ಬಿಜೆಪಿ ಅಂತಿಮ ಪಟ್ಟಿ ಪ್ರಕಟಗೊಳ್ಳಲಿದ್ದು, ಅಂದು ಯಾರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಯಲಿದೆ.
ಮೂವರು ಹಾಲಿ ಶಾಸಕರಿಗೆ ಕೊಕ್ : ಪುತ್ತೂರಿನ ಹಾಲಿ ಶಾಸಕಿ ಮಲ್ಲಿಕಾ ಪ್ರಸಾದ್, ಬೈಂದೂರಿನ ಲಕ್ಷ್ಮೀನಾರಾಯಣ, ಅವರಿಗೆ ಟಿಕೆಟ್ ನೀಡಿಲ್ಲ. ಬೆಂಗಳೂರು ನಗರ ಜಿಲ್ಲೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಎಂ.ಶ್ರೀನಿವಾಸ ಹಾಗೂ ಚಿಕ್ಕಪೇಟೆಯ ಹೇಮಚಂದ್ರ ಸಾಗರ್ ಅವರಿಗೂ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ.(ಬಿಜೆಪಿ ಅಧಿಕೃತ ಅಭ್ಯರ್ಥಿಗಳ 2ನೇ ಪಟ್ಟಿ)
2ನೇ ಪಟ್ಟಿ ಬಿಡುಗಡೆ ಮಾಡಿದರೂ ಈ ಶಾಸಕರಿಗೆ ಟಿಕೆಟ್ ಘೋಷಣೆ ಮಾಡದಿರುವುದು ಇವರಿಗೆ ಕೊಕ್ ನೀಡಲಾಗುತ್ತದೆ ಎಂಬ ಅನುಮಾನ ಹುಟ್ಟು ಹಾಕಿದೆ. ಆದರೆ, ಟಿಕೆಟ್ ನಿರಾಕರಣೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications