ಬಿಜೆಪಿಗೆ ದೊಡ್ಡ ನಮಸ್ಕಾರ ಹೇಳಿದ ಸುರೇಶ್ ಬಾಬು
ಶನಿವಾರ ಬೆಳಗ್ಗೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದ ಶಾಸಕ ಸುರೇಶ್ ಬಾಬು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಪತ್ರವನ್ನು ಸ್ಪೀಕರ್ ಕೆ.ಜೆ.ಬೋಪಯ್ಯ ಅವರಿಗೆ ಫ್ಯಾಕ್ಸ್ ಮೂಲಕ ತಲುಪಿಸಿದ್ದಾರೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವದ ರಾಜೇನಾಮೆಯನ್ನು ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರಿಗೆ ಕಳುಹಿಸಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುರೇಶ್ ಬಾಬು ಬಿಎಸ್ಆರ್ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಅವರು ಅಧಿಕೃತವಾಗಿ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಸೇರಬೇಕಷ್ಟೆ. ಈಗಾಗಲೇ ಬಿಎಸ್ಆರ್ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಸುರೇಶ್ ಬಾಬು ಅವರಿಗೆ ಟಿಕೆಟ್ ನೀಡಲಾಗಿದೆ.
ಗಣಿಧಣಿಗಳ ಪ್ರಭಾವದಿಂದಾಗಿ ಕಂಪ್ಲಿ ಕ್ಷೇತ್ರದಿಂದ ಸುರೇಶ್ ಬಾಬು ಆಯ್ಕೆಯಾಗಿದ್ದರು. ವಿಧಾನಸೌಧದಲ್ಲಿ ಬಳ್ಳಾರಿಗೆ ಬರುವಂತೆ ಸವಾಲು ಹಾಕಿ ಸುರೇಶ್ ಬಾಬು ಜನಪ್ರಿಯತೆ ಪಡೆದಿದ್ದರು. ಬಳ್ಳಾರಿಯಲ್ಲಿ ಸುಮಾರು 20 ಕೋಟಿ ಖರ್ಚು ಮಾಡಿ ವೈಭೋಗದ ಮದೆವೆ ಮಾಡಿಕೊಂಡ ಜನರು ಬಾಯಿ ಮೇಲೆ ಬೆರಳಿಡುವಂತೆ ಮಾಡಿದ್ದರು.
ಇನ್ನಿಬ್ಬರು ಬಾಕಿ : ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಸೋಮಶೇಖರ ರೆಡ್ಡಿ ಸಹ ಬಿಎಸ್ಆರ್ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದು, ಅವರು ರಾಜೀನಾಮೆ ನೀಡುವ ಪಟ್ಟಿಯಲ್ಲಿದ್ದಾರೆ. ಬಳ್ಳಾರಿಯ ಬಿಜೆಪಿ ಸಂಸದೆ ಜೆ.ಶಾಂತ ಸಹ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರೆ ಬಿಜೆಪಿ ಪಕ್ಷ ತೊರೆಯಲಿದ್ದಾರೆ.
ಆನಂದ್ ಸಿಂಗ್ ನಡೆ ನಿಗೂಢ : ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸಹ ಬಿಜೆಪಿ ತೊರೆಯುವುದಾಗಿ ಘೋಷಿಸಿದ್ದಾರೆ. ಯಾವ ಪಕ್ಷ ಸೇರುತ್ತಾರೆ ಎಂಬುದು ಇನ್ನೂ ನಿಗೂಢವಾಗಿದೆ.
ಪಕ್ಷೇತರರಾಗಿ ಸ್ಪರ್ಧಿಸಬುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಅವರು ರಾಜೀನಾಮೆ ನೀಡಿದರೆ ಬಳ್ಳಾರಿಯಲ್ಲಿ ಬಿಜೆಪಿಯ ಕಮಲ ಸಂಪೂರ್ಣವಾಗಿ ಮುದುಡಿ ಹೋಗಲಿದೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಕರುಣಾಕರ ರೆಡ್ಡಿ ಅವರಿಗೆ ಟಿಕೆಟ್ ನೀಡಲಾಗಿದ್ದು, ಅವರು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ಆದ್ದರಿಂದ ಬಳ್ಳಾರಿಯಲ್ಲಿ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಕಾಡುವುದು ನಿಶ್ಚಿತ.(ಬಳ್ಳಾರಿ ಕ್ಷೇತ್ರ ಪರಿಚಯ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ