ಬ್ಯಾಂಕ್ ದರೋಡೆ- ನಾಲ್ಕೂ ಆರೋಪಿಗಳೂ ಸಿಕ್ಕಿಬಿದ್ದರು

ಹಿಂದಿನ ಸುದ್ದಿ: ಬಿಹಾರದ ಪಾತಕಿ ದಿವೇಶ್ ಕುಮಾರ್ ಸಿಂಗ್ ಮತ್ತು ಅವನ ತಂಡ ಒಂದು ವಾರದಿಂದ ಕಾರ್ಪೊರೇಶನ್ ಬ್ಯಾಂಕ್ ಮೇಲೆ ಕಾಕದೃಷ್ಟಿ ಬೀರಿತ್ತು. ದರೋಡೆಯ ನಂತರ ಬ್ಯಾಂಕ್ ಹೊರಗಿದ್ದ ಆಟೋ ಮೂಲಕ ಜಾಲಹಳ್ಳಿ ಕ್ರಾಸ್ ವರೆಗೆ 'ಲಿಫ್ಟ್'. ಅಲ್ಲಿಂದ ಮುಂದಕ್ಕೆ ಮೆಜಿಸ್ಟಿಕ್ ಗೆ ಬಸ್ಸಿನಲ್ಲಿ ಸುಖಕರ ಪ್ರಯಾಣ. ಆ ನಂತರ ಸನ್ಮಾನ್ ಡೀಲಕ್ಸ್ ಲಾಡ್ಜಿನಲ್ಲಿ ತಂಡದ ನಾಲ್ಕೂ ಜನರ ಸಮಾಗಮ.
ನಾಲ್ಕಾರು ತಂಡಗಳಲ್ಲಿ ಕ್ಷಿಪ್ರ ಕಾರ್ಯಾಚರಣೆಗೆ ಇಳಿದ ಖಡಕ್ ಪೊಲೀಸರು ಒಂದೊಂದೇ ಲಾಡ್ಜುಗಳ ತಲಾಶೆಯಲ್ಲಿ ತೊಡಗುತ್ತಾರೆ. ಪೊಲೀಸ್ ತಂಡವೊಂದು ಸನ್ಮಾನ್ ಲಾಡ್ಜಿಗೆ ಬಂದಾಗ, ಎದುರಿಗೇ ಸಿಗುತ್ತಾನೆ ಧೂರ್ತ ದಿವೇಶ. ಅನುಮಾಗೊಂಡ ಪೊಲೀಸರು ಅವನನ್ನು ಸುತ್ತುವರಿದಾಗ ಅವನ ಜತೆಗಿದ್ದ ಇನ್ನೂ ಮೂವರು ಪರಾರಿಯಾಗುತ್ತಾರೆ.
ಆದರೆ ದಿವೇಶನಿಗೆ ತಪ್ಪಿಸಿಕೊಳ್ಳಲು ಅವಕಾಶ ನೀಡದ ಪೊಲೀಸರು ಅವನನ್ನು ಬಂಧಿಸುತ್ತಾರೆ. ಇದೆಲ್ಲ ಆಗಿದ್ದು ಸಂಜೆ 8 ಗಂಟೆಯ ವೇಳೆಯಲ್ಲಿ. ಅಂದರೆ ಅಪರಾಧ ನಡೆದ ಐದೇ ಗಂಟೆಗಳಲ್ಲಿ. ಪಾತಕಿ ದಿವೇಶನ ಬೆನ್ನಿಗಿದ್ದ ಬ್ಯಾಗಿನಲ್ಲಿ ಭದ್ರವಾಗಿ ಅಡಗಿ ಕುಳಿತಿತ್ತು ದೋಚಿದ್ದ ಅಷ್ಟೂ ಹಣ ಮತ್ತು ತಣ್ಣಗೆ ಅಡಗಿತ್ತು ಹತ್ಯೆಗೆ ಬಳಸಿದ್ದ ಪಿಸ್ತೂಲು!
ಬೆಳಗಿನ ಸುದ್ದಿ:
ನಗರದ ಹೆಸರಘಟ್ಟ ರಸ್ತೆಯಲ್ಲಿ ಕಾರ್ಪೊರೇಶನ್ ಬ್ಯಾಂಕಿನಿಂದ 15 ಲಕ್ಷ ರೂ. ದರೋಡೆ ಮಾಡಿ, ಆ ವೇಳೆ ಅಡ್ಡಬಂದ ಗ್ರಾಹಕನನ್ನು ಸಾಯಿಸಿದ್ದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಆತಂಕದ ಛಾಯೆ ಮೂಡಿಸಿದ್ದ ಪ್ರಕರಣವನ್ನು ಬೆಂಗಳೂರಿನ ಚಾಣಾಕ್ಷ ಪೊಲೀಸರು ತ್ವರಿತವಾಗಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಮುಖ ಆರೋಪಿಯನ್ನು ಬಿಹಾರ ಮೂಲದ ದಿವೇಶ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ನಗರದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ದರೋಡೆಯ ಬಳಿಕ ಪೂರ್ವಯೋಜನೆಯಂತೆ ಬ್ಯಾಂಕ್ ಹೊರಗೆ ನಿಂತು, ದಿವೇಶ್ ಗೆ ಸಹಕರಿಸಿ ಇತರೆ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಅವರ ಬಂಧನಕ್ಕೂ ಜಾಲ ಬೀಸಿದ್ದಾರೆ.
ಆರೋಪಿಯು ದರೋಡೆ ವೇಳೆ ಹಿಂದಿ ಮಿಶ್ರಿತ ಇಂಗ್ಲೀಷ್ ಮಾತನಾಡುತ್ತಿದ್ದ. ಸ್ಥಳೀಯ ವ್ಯಕ್ತಿಯಂತೆ ಕಂಡುಬರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯನ್ನಾಧರಿಸಿ ಪೊಲೀಸರು ಇದು ಉತ್ತರ ಭಾರತದವ ಕೃತ್ಯವೆಂದು ಪರಿಗಣಿಸಿದ್ದರು. ಹಾಗಾಗಿ ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣದಲ್ಲಿ ಆರೋಪಿಗಳಿಗೆ ಜಾ ಬೀಸಿದ್ದರು. ಕೊನೆಗೆ ಆರೋಪಿ ದೀಪಕ್ ರೈಲ್ವೆ ಸ್ಟೇಷನ್ ಬಳಿಯಿರುವ ಸನ್ಮಾನ್ ಲಾಡ್ಜಿನಲ್ಲಿ ಸಿಕ್ಕಿಬಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣ ನಡೆದಿತ್ತು. ದರೋಡೆ ವೇಳೆ ಗ್ರಾಹಕ ಮುರಳೀಧರ್ ಪಾತಕಿ ದಿವೇಶ್ ಹಾರಿಸಿದ ಗುಂಡಿಗೆ ಬಲಿಯಾಗಿದ್ದರು.












Click it and Unblock the Notifications