ಸೋನಿಯಾ ಕೈ ಹಿಡಿಯಲು ಮಾಯಾವತಿ ಸಿದ್ಧ?
545 ಸದಸ್ಯರ ಲೋಕಸಭೆಯಲ್ಲಿ ಬಹುಮತಕ್ಕೆ 272 ಮತಗಳು ಬೇಕಾಗುತ್ತದೆ. ಯುಪಿಎಗೆ ಇನ್ನೂ 21 ಸದಸ್ಯರ ಬೆಂಬಲ ಬೇಕಿದೆ.
ಸಮಾಜವಾದಿ ಪಕ್ಷ (22) ಅಥವಾ ಬಹುಜನ ಸಮಾಜವಾದಿ ಪಕ್ಷ (21) ಹಾಗೂ ಇನ್ನಿತರರ ಬಾಹ್ಯ ಬೆಂಬಲದಿಂದ ಯುಪಿಎ ಅಗತ್ಯ ಮತ ಪಡೆದು ರಾಜ್ಯಭಾರ ಮುಂದುವರೆಸುವ ನಿರೀಕ್ಷೆ ಹೆಚ್ಚಾಗಿದೆ.
ಈ ಪೈಕಿ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರು ಗುರುವಾರ(ಸೆ.20) ಯುಪಿಎ ಆರ್ಥಿಕ ನೀತಿ, ಚಿಲ್ಲರೆ ಮಾರುಕಟ್ಟೆಯಲ್ಲಿ ಎಫ್ ಡಿಐ, ಡೀಸೆಲ್ ಬೆಲೆ ಏರಿಕೆ, ಅಡುಗೆ ಅನಿಲ ಸಿಲಿಂಡರ್ ಮಿತಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಆದರೆ, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಿಲೆಂಡರ್ ಮಿತಿ 9 ರಿಂದ 12ಕ್ಕೆ ಏರಿಸಲು ಯುಪಿಎ ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಸೋನಿಯಾ ಗಾಂಧಿ ಆವರು ಓಕೆ ಎಂದಿದ್ದಾರೆ ಎಂಬ ಸುದ್ದಿಯಿದೆ.
ಮಮತಾ ಅವರ ಸಹಾಯ ಹಸ್ತ ಭದ್ರ ಪಡಿಸಿಕೊಳ್ಳುವ ಸಂಧಾನ ಪ್ರಕ್ರಿಯೆ ನಡುವೇ ಮಯಾವತಿ ಜೊತೆ ಕೂಡಾ ಡೀಲ್ ಕುದುರಿಸುವ ಕಾರ್ಯ ಶುರುವಾಗಿದೆ.
ಮಧ್ಯಂತರ ಚುನಾವಣೆ ನಮಗೆ ಬೇಡವೇ ಬೇಡ ಎಂದಿರುವ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು, ಯುಪಿಎ ಆಫರ್ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಅಲ್ಲದೆ, ಬಿಜೆಪಿ ನೇತೃತ್ವದ ಎನ್ ಡಿಎ, ಜೆಡಿಯು, ಎಡಪಕ್ಷಗಳು ಗುರುವಾರ ನಡೆಸಿರುವ ಭಾರತ್ ಬಂದ್ ಗೆ ಬಿಎಸ್ಪಿ ಬೆಂಬಲ ವ್ಯಕ್ತಪಡಿಸಿಲ್ಲ. ಹೀಗಾಗಿ ಯುಪಿಎಗೆ ಬಿಎಸ್ ಪಿ ಬಾಹ್ಯ ಬೆಂಬಲ ನೀಡಿ ಸರ್ಕಾರದ ಆಯಸ್ಸು ಹೆಚ್ಚಿಸಲಿದೆ.
ಯುಪಿಎಗೆ ಬೆಂಬಲ ನೀಡುವ ಬಗ್ಗೆ ಅಕ್ಟೋಬರ್ 7 ರಂದು ಪಕ್ಷದ ಕಾರ್ಯಕರ್ತರ ನಡುವೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಬಹುಜನ ಸಮಾಜಪಕ್ಷದ ವಕ್ತಾರರು ಹೇಳಿದ್ದಾರೆ.
ಡೀಸೆಲ್ ಬೆಲೆ ಏರಿಕೆ, ಎಲ್ಪಿಜಿ ಸಬ್ಸಿಡಿ ಕಡಿತ, ಬಹು ಬ್ರ್ಯಾಂಡ್ ರೀಟೈಲ್ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಬಗ್ಗೆ ಯುಪಿಎ ತಳೆದಿರುವ ನೀತಿಯನ್ನು ಪುನರ್ ಪರಿಶೀಲಿಸುವಂತೆ ಯುಪಿಎ ಸರ್ಕಾರಕ್ಕೆ ಮಮತಾ ಅವರು 72 ಗಂಟೆಗಳ ಡೆಡ್ ಲೈನ್ ನೀಡಿದ್ದರು.
ಮಮತಾ ನೀಡಿದ್ದ ಗುಡುವು ಮುಗಿದರೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದ ಕಾರಣ. ಮಂಗಳವಾರ ಮಮತಾ ತಮ್ಮ ಪಕ್ಷದ ಸದಸ್ಯರೊಡನೆ ಚರ್ಚಿಸಿ ಯುಪಿಎಗೆ ನೀಡಿರುವ ಬೆಂಬಲ ವಾಪಸ್ ಪಡೆಯುವ ಕಠಿಣ ನಿರ್ಧಾರ ಪ್ರಕಟಿಸಿದ್ದಾರೆ.
ಕೇಂದ್ರ ಸರ್ಕಾರದಲ್ಲಿ 6 ಜನ ಸಚಿವ(1 ಕ್ಯಾಬಿನೆಟ್ ದರ್ಜೆ, 5 ರಾಜ್ಯ ಸಚಿವರು)ರೂ ಸೇರಿದಂತೆ ಒಟ್ಟು 19 ಜನ ಸಂಸದರನ್ನು ಹೊಂದಿರುವ ಟಿಎಂಸಿ ಯುಪಿಎಯಿಂದ ಹೊರಬರುವ ನಿರ್ಧಾರ ಪ್ರಕಟಿಸಿರುವುದರಿಂದ ಕೇಂದ್ರ ಸರ್ಕಾರ ತೀವ್ರ ಇಕ್ಕಟ್ಟಿನಲ್ಲಿ ಸಿಲುಕಲಿದೆ