ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಇನ್ನು ಸ್ವತಂತ್ರ ಹಕ್ಕಿ
ಒಟ್ಟು ಐದು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಮುತ್ತುಲಕ್ಷ್ಮಿಯನ್ನು ರಾಜ್ಯ ಪೊಲೀಸರು 2008ರ ನವೆಂಬರ್ 26ರಂದು ಮೆಟ್ಟೂರಿನಲ್ಲಿ ಬಂಧಿಸಿದ್ದರು. ಎಲ್ಲ ಐದೂ ಪ್ರಕರಣಗಳಲ್ಲಿ ಖುಲಾಸೆಗೊಂಡ ಮುತ್ತುಲಕ್ಷ್ಮಿಯನ್ನು ಗುರುವಾರ ಬೆಂಗಳೂರಿನ ಕಾರಾಗೃಹದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
1993ರ ಮೇ 24ರಂದು ಮಹದೇಶ್ವರ ಬೆಟ್ಟ ಠಾಣೆ ಸರಹದ್ದಿನ ರಂಗಸ್ವಾಮಿ ವಡ್ಡುವಿನಲ್ಲಿ ನಡೆದ ಆರು ಪೊಲೀಸರ ಹತ್ಯೆ ಪ್ರಕರಣದಲ್ಲಿ ಸಾಕ್ಷ್ಯಾಧಾರದ ಕೊರತೆಯ ನೆಪವೊಡ್ಡಿ ಮುತ್ತುಲಕ್ಷ್ಮಿ ಮತ್ತು ವೀರಪ್ಪನ್ ನ ಸಹಚರೆ ಪಾಪತ್ತಿ ಎಂಬುವಳನ್ನು ಖುಲಾಸೆಗೊಳಿಸಿದೆ. ತೀರ್ಪು ಪ್ರಕಟವಾದ ಬಳಿಕ ನ್ಯಾಯಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಳು. ಸಂತೋಷ ತಡೆಯಲಾರದೆ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣಿರು ಹಾಕುತ್ತಲೇ ಮಾತನಾಡಿದ ಮುತ್ತುಲಕ್ಷ್ಮಿ, ಕೊನೆಗೂ ನನಗೆ ನ್ಯಾಯ ದಕ್ಕಿತು. ಇಬ್ಬರು ಹೆಣ್ಣುಮಕ್ಕಳೊಂದಿಗೆ ಮೆಟ್ಟೂರಿನಲ್ಲಿ ನೆಮ್ಮದಿಯಾಗಿ ಜೀವನ ನಡೆಸುವೆ ಎಂದು ಹೇಳಿದಳು.
ನಾನು ನಿರಪರಾಧಿ. ನನ್ನ ಪತಿ ವೀರಪ್ಪನ್ ಮಾಡಿದ ತಪ್ಪಿಗಾಗಿ ನನ್ನನ್ನು ಜೈಲಿನಲ್ಲಿ ಕೂಡಿಹಾಕಿದ್ದರು. ನನ್ನ ಮೇಲಿರುವ ಎಲ್ಲ ಆರೋಪಗಳಿಂದ ಮುಕ್ತಳಾಗಿ ಹೊರಬರುವ ವಿಶ್ವಾಸ ಹೊಂದಿದ್ದೆ. ನಂಬಿಕೆ ಸುಳ್ಳಾಗಲಿಲ್ಲ. ಎಲ್ಲ ಪ್ರಕರಣಗಳಿಂದಲೂ ಮುಕ್ತಳಾಗಿದ್ದೇನೆ ಎಂದು ಸಂತೋಷಗೊಂಡಳು.