ಬೆಲೆ ಹೊರೆ ಇಳಿಕೆಗೆ ಪ್ರತಿಭಾ ವಾಗ್ದಾನ
ಸೋಮವಾರ ಆರಂಭವಾದ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಮುಂಗಾರು ವೈಫಲ್ಯದಿಂದ ಉಂಟಾಗಿರುವ ಜಟಿಲ ಸಮಸ್ಯೆಯಿಂದ ಆಮ್ ಆದ್ಮಿಯನ್ನು ಬಚಾವ್ ಮಾಡುವುದು ಸರಕಾರದ ಆದ್ಯತೆಗಳಲ್ಲಿ ಪ್ರಮುಖ ಸ್ಥಾನ ಪಡೆಯುತ್ತದೆ ಎಂದು ವಾಗ್ದಾನ ಮಾಡಿದರು.
ಬೆಲೆ ಏರಿಕೆ ವಿರುದ್ಧ ಸರಕಾರ ಸಾರುವ ಸಮರದ ನಡುವೆಯೂ ವಾರ್ಷಿಕ ಬೆಳವಣಿಗೆಯ ವೇಗ ಕಾಪಾಡಿಕೊಳ್ಳುವುದರ ಕಡೆಗೆ ಸರಕಾರದ ಗಮನ ಇದ್ದೇ ಇರುತ್ತದೆ. ಪ್ರಸಕ್ತ ಸಾಲಿನಲ್ಲಿ ಬೆಳವಣಿಗೆಯ ವೇಗದ ಗುರಿ ಪ್ರತಿಶತ 8ರಷ್ಟು ಇರುತ್ತದೆ. ಬರುವ ಆರ್ಥಿಕ ವರ್ಷಕ್ಕೆ ಗುರಿ ಪ್ರತಿಶತ 9ರತ್ತ ನೆಟ್ಟಿರುತ್ತದೆ ಎಂದು ಪ್ರತಿಭಾ ಪ್ರತಿಪಾದಿಸಿದರು.
ದೇಶವನ್ನು ಕಾಡುತ್ತಿರುವ ನಾನಾ ಸಮಸ್ಯೆಗಳತ್ತ ಬೊಟ್ಟು ಮಾಡಿ ತೋರಿಸಿ, ಸವಿಸ್ತಾರ ಸಾಂಪ್ರದಾಯಿಕ ಭಾಷಣ ಬಿಗಿದ ರಾಷ್ಟ್ರಪತಿಗಳು ನೆರೆಯ ಪಾಕಿಸ್ತಾನದ ಬಗೆಗೆ ಹೇಳಿದ್ದು ಏನೆಂದರೆ :
"ಪಾಕಿಸ್ತಾನದೊಂದಿಗೆ ಅರ್ಥಪೂರ್ಣ ಸಂಬಂಧಗಳನ್ನು ಬೆಸೆಯುವ ಸಾಧ್ಯತೆಗಳನ್ನು ಭಾರತ ಅರಸುತ್ತದೆ. ಆದರೆ, ಭಾರತ ಕೆಲವು ಷರತ್ತುಗಳಿಗೆ ಬದ್ಧವಾಗಿದೆ. ಭಯೋತ್ಪಾದನೆಯ ಸವಾಲುಗಳನ್ನು ಮೆಟ್ಟಿನಿಲ್ಲಲು ಪಾಕ್ ಗಂಭೀರವಾಗಿ ಚಿಂತಿಸಬೇಕು ಮತ್ತು ಭಾರತದ ವಿರುದ್ಧದ ಭಯೋತ್ಪಾದಕ ಕೃತ್ಯಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು."
ಇಂದಿನಿಂದ ಆರಂಭವಾದ ಅಧಿವೇಶನ ಮೂರು ತಿಂಗಳ ಅವಧಿಯದಾಗಿರುತ್ತದೆ. ರೈಲ್ವೆ ಮುಂಗಡ ಪತ್ರವನ್ನು ಫೆ. 24ರ ಬುಧವಾರದಂದು ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಮಂಡಿಸುತ್ತಿದ್ದಾರೆ. 2010-11 ಸಾಲಿನ ಆರ್ಥಿಕ ಸಮೀಕ್ಷೆಯನ್ನು 25ರಂದು ಪ್ರಕಟಿಸಲಾಗುತ್ತಿದೆ. ಸಾಮಾನ್ಯ ಮುಂಗಡಪತ್ರ ಫೆ. 26, ಶುಕ್ರವಾರದಂದು ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಮಂಡಿಸಲಿದ್ದಾರೆ.