Bengaluru BMTC: ಡ್ರೈವರ್ ಸಾಹೇಬ್ರೆ ಶಾಲಾ ಮಕ್ಕಳು ಕಾಣಿಸಿದರೆ ಬಸ್ ನಿಲ್ಲಿಸಿ: ಕಂಡಕ್ಟರ್ ವಿಡಿಯೋ ವೈರಲ್
Bengaluru BMTC: ಬೆಂಗಳೂರಿನ ಬಿಎಂಟಿಸಿ ಕಂಡಕ್ಟರ್ವೊಬ್ಬರು ಬಸ್ ಚಾಲಕರಿಗೆ ನೀಡಿರುವ ಸಲಹೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕರ್ನಾಟಕದಾದ್ಯಂತ ಮಾರ್ಚ್18ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಬಸ್ ನಿಲ್ಲಿಸುವುದಕ್ಕೆ ಹೇಳಿರುವುದು ಈ ವೈರಲ್ ವಿಡಿಯೋದಲ್ಲಿ ಇದೆ.
ಈ ತಿಂಗಳು 18ರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗುತ್ತದೆ. ದಯವಿಟ್ಟು ಪರೀಕ್ಷೆಗೆ ಹೋಗುವ ಮಕ್ಕಳು ಎಲ್ಲೇ ಕಾಣಿಸಿಕೊಂಡರೂ, ಬಸ್ ನಿಲ್ಲಿಸಿ ಮಕ್ಕಳನ್ನು ಹತ್ತಿಸಿಕೊಳ್ಳಿ. ನಾವು ಡ್ಯೂಟಿಗೆ ಹೋಗುವುದು ಹತ್ತು ನಿಮಿಷ ತಡವಾದರೂ ಪರವಾಗಿಲ್ಲ. ಪರೀಕ್ಷೆಗೆ ಹೋಗುವ ಮಕ್ಕಳಿಗೆ ಸಹಾಯವಾಗಲಿ. ಮಕ್ಕಳು ಧೈರ್ಯವಾಗಿ ಹೋಗಿ ಪರೀಕ್ಷೆ ಬರೆಯಲಿ. ನಮ್ಮ ಸಾರಿಗೆ ವ್ಯವಸ್ಥೆ ಮಕ್ಕಳಿಗೆ ಉಪಯೋಗವಾಗಲಿ. ನಮ್ಮ ಸಂಸ್ಥೆಯ ಬಗ್ಗೆ ಇರುವ ಗೌರವ ಇನ್ನೂ ಹೆಚ್ಚಾಗಲಿ. ಇನ್ನು ನಮ್ಮ ರೀತಿ ಡ್ಯೂಟಿ ಮಾಡುವ ಯಾರೇ ಬಿಎಂಟಿಸಿ ಸಿಬ್ಬಂದಿ ಇದ್ದರೂ, ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಎಲ್ಲೇ ಕಾಣಿಸಿಕೊಂಡರೂ, ಕೈ ಮಾಡಿದರೂ ಪರೀಕ್ಷೆ ಸಮಯದಲ್ಲಿ ಬಸ್ ನಿಲ್ಲಿಸಿ, ಪರೀಕ್ಷಾ ಕೇಂದ್ರದ ಬಳಿ ಬಿಡಿ ಎಂದು ಕಂಡಕ್ಟರ್ವೊಬ್ಬರು ಮನವಿ ಮಾಡಿದ್ದಾರೆ.

ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಲವರು ಈ ಬಿಎಂಟಿಸಿ ಕಂಡಕ್ಟರ್ ಅವರ ವಿಡಿಯೋವನ್ನು ಹಂಚಿಕೊಂಡಿದ್ದು, ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕರ್ನಾಟಕದ ಒಬ್ಬ ಬಿಎಂಟಿಸಿ ಬಸ್ ಕಂಡಕ್ಟರ್ವೊಬ್ಬರು ಚಾಲಕರೊಬ್ಬರಿಗೆ ಈ ರೀತಿ ಹೇಳಿದ್ದಾರೆ. 10ನೇ ತರಗತಿಯ ವಿದ್ಯಾರ್ಥಿಗಳು ಲಿಫ್ಟ್ ಕೇಳುವಲ್ಲಿ ನಿಲ್ಲಿಸಿ. ಅವರಿಗೆ 18ನೇ ತಾರೀಕಿನಿಂದ ಬೋರ್ಡ್ ಪರೀಕ್ಷೆ ಇದೆ ಎಂದು ಹೇಳಿದ್ದಾರೆ. ಇದು ಕರ್ನಾಟಕ ರಾಜ್ಯ ಸಾರಿಗೆಯ ನಿಜವಾದ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ - ಅಲ್ಲಿ ಕರ್ತವ್ಯವು ಮಾನವೀಯತೆಯಿಂದ ಕೂಡಿದೆ ಎಂದು ನೆಟ್ಟಿಗರೊಬ್ಬರು (Aparajite) ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
Bengaluru BMTC: ನೆಟ್ಟಿಗರು ಹೇಳಿದ್ದೇನು
ಕರ್ನಾಟಕದ ಈ ಬಸ್ ಕಂಡಕ್ಟರ್ಗೆ ವಿದ್ಯಾರ್ಥಿಗಳ ಶಿಕ್ಷಣ ಮುಖ್ಯ ಎಂದು ತಿಳಿದಿದೆ, ಏಕೆಂದರೆ ವಿದ್ಯಾವಂತ ವಿದ್ಯಾರ್ಥಿಗಳು ಉಚಿತ ಕೊಡುಗೆಗಳಿಗೆ ಮತ ಚಲಾಯಿಸುವುದಿಲ್ಲ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಇಂತಹ ನಿರ್ಧಾರಗಳು ಹೃದಯವನ್ನು ಮುಟ್ಟುತ್ತವೆ. ಮಾನವೀಯತೆ ಯಾವಾಗಲೂ ಎಲ್ಲಕ್ಕಿಂತ ದೊಡ್ಡದು ಎಂದು ಇದು ತೋರಿಸುತ್ತದೆ. ಇದಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಗ್ಗೆ ನಿಜವಾಗಿಯೂ ಹೆಮ್ಮೆಯಿದೆ ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ. ಮಾನವೀಯತೆ ಇನ್ನೂ ಇದೆ. ಅದು ಅಪರೂಪ, ಅಷ್ಟೇ. ಇವರಂತಹ ಬಸ್ ಕಂಡಕ್ಟರ್ಗಳು ಎಲ್ಲಾ ಸಾರ್ವಜನಿಕ ಸಾರಿಗೆ ಸಿಬ್ಬಂದಿಗೆ ಒಂದು ಉದಾಹರಣೆಯಾಗಿರಬೇಕು. ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳನ್ನು ಸಮಯಕ್ಕೆ ಸರಿಯಾಗಿ ತಲುಪಲು ಅವರು ಸಹಾಯ ಮಾಡಬೇಕು. ಅದೇ ಸಮಯದಲ್ಲಿ ಪ್ರಯಾಣಿಸಲು ಬಯಸುವ ನಮಗೆಲ್ಲರಿಗೂ ಪಾಠ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.
A bus conductor in Karnataka told his driver:
— Aparajite (@amshilparaghu) March 17, 2026
“Stop wherever Grade 10 students ask for a lift… they have board exams from the 18th.”
“Even if we get late, it’s okay. Let’s help them.”
He even urged other buses to follow the same.
This shows the true heart of Karnataka State… pic.twitter.com/XhpvN2rX1Z
ಆಕಾಶ್ ಎನ್ನುವವರು, ಪರೀಕ್ಷೆಗೆ ಹೋಗೋ ಮಕ್ಕಳಿಗೆ ನಗು ನೀಡೋಣ, ಬಸ್ ನಿಲ್ಲಿಸಿ ಕನಸುಗಳಿಗೆ ದಾರಿ ಬಿಡೋಣ. ತಡವಾದರೂ ಪರವಾಗಿಲ್ಲ, ಸಹಾಯವೇ ಧರ್ಮ, ಕರ್ನಾಟಕ ಸಾರಿಗೆ - ಮಾನವೀಯತೆಯ ತಪಸ್ಸು, ನಿಜವಾದ ಕರ್ಮ. ಪಾಠವಿಲ್ಲದ ಪಾಠ ಕಲಿಸೋಣ ಸೇವೆಯ ಮೂಲಕ, ಇದು ಸಾರಿಗೆ ಅಲ್ಲ, ಇದು ಪ್ರೀತಿಯ ಪಾಠಶಾಲೆ. ಜೈ ಕರ್ನಾಟಕ. ಕನ್ನಡಿಗ ಎನ್ನಲು ಹೆಮ್ಮೆ ಎಂದು ಹೇಳಿದ್ದಾರೆ.












Click it and Unblock the Notifications