ಕನ್ನಡ ವಿದ್ಯುನ್ಮಾನ ಜ್ಞಾನಕೋಶ
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಜ್ಞಾನ ಆಯೋಗದ ಸದಸ್ಯ ಕಾರ್ಯದರ್ಶಿ ಡಾ ಎಂ ಕೆ ಶ್ರೀಧರ್, ಚಲನಶೀಲ ಜಗತ್ತಿನ ಎಲ್ಲಾ ಮಾಹಿತಿಗಳನ್ನು ಕನ್ನಡದಲ್ಲಿ ಒದಗಿಸಲಾಗುತ್ತಿದೆ. ಸಾಹಿತ್ಯ, ಕಲೆ, ವಿಜ್ಞಾನ, ಸಾಮಾಜಿಕ ವಿಷಯಗಳು, ಕೃಷಿ, ಪರಿಸರ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ವ್ಯಾಪಾರ, ಕ್ರೀಡೆ, ಮನರಂಜನೆ ಹೀಗೆ ಹತ್ತು ಹಲವು ವಿಷಯಗಳು ಖಚಿತವಾಗಿ ಮತ್ತು ಅಧಿಕೃತವಾಗಿ ಕನ್ನಡದಲ್ಲಿ ಒದಗಿಸುವುದು ಕರ್ನಾಟಕ ವಿದ್ಯುನ್ಮಾನ ಜ್ಞಾನಕೋಶದ ಉದ್ದೇಶ ಎಂದರು. ಮುಂಬರುವ ದಿನಗಳಲ್ಲಿ ಕರ್ನಾಟಕವನ್ನು ಜ್ಞಾನೋನ್ಮುಖ ಸಮಾಜವನ್ನು ರೂಪಿಸುವ ಹೆಗ್ಗುರಿ ಕನ್ನಡ ವಿದ್ಯುನ್ಮಾನ ಜ್ಞಾನಕೋಶದ್ದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಕನ್ನಡ ಬಲ್ಲ ಕೃಷಿ ಕಾರ್ಮಿಕರು, ವಿದ್ಯಾರ್ಥಿಗಳು, ಗೃಹಿಣಿಯರು, ಅಧ್ಯಾಪಕರು, ತಂತ್ರಜ್ಞರು, ವ್ಯಾಪಾರಸ್ಥರು, ಯುವಜನತೆ, ಹಿರಿಯ ನಾಗರೀಕರಿಗೆ ಅಗತ್ಯವಿರುವ ಜ್ಞಾನದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಜ್ಞಾನಕೋಶವು ಸುಮಾರು 150 ಪುಟಗಳಷ್ಟಿರುವುದು. ಜನರ ಸ್ಪಂದನೆ, ತಜ್ಞರ ಮಾರ್ಗದರ್ಶನ, ಓದುಗರ ಬೇಡಿಕೆಗಳ ವೈಜ್ಞಾನಿಕ ವಿಶ್ಲೇಷಣೆಯನ್ನು ಆಧರಿಸಿ ಈ ಜ್ಞಾನಕೋಶವು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಪರಿಣಿತಿ ಪಡೆಯಬೇಕೆಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಡಿಸೆಂಬರ್ 5 ರಂದು ಬೆಳಿಗ್ಗೆ 11 ಗಂಟೆಗೆ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿಗಳು ವಿದ್ಯುನ್ಮಾನ ಜ್ಞಾನಕೋಶದ ಕರಡನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡೋಜ ದೇ ಜವರೇಗೌಡ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜ್ಞಾನ ಆಯೋಗದ ಅಧ್ಯಕ್ಷ ಡಾ ಕಸ್ತೂರಿ ರಂಗನ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಪಾಲ್ಗೊಳ್ಳಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)