ಅಭಿವೃದ್ಧಿ ಹೆಸರಲ್ಲಿ ಗಣಿಗಾರಿಕೆ ಇಲ್ಲ : ಜೈರಾಮ್
ಎಂ.ಸಿ.ಹಳ್ಳಿಯಲ್ಲಿ ನಡೆದಿರುವ ಪುನರ್ವಸತಿ ಯೋಜನೆಯು ಒಂದು ಉತ್ತಮ ಯಶಸ್ವಿ ಮಾದರಿ ಯೋಜನೆಯಾಗಿದೆ, ರಾಜ್ಯದ ನಾಗರಹೊಳೆ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಇದೇ ಮಾದರಿಯಲ್ಲಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದ ಅವರು, ಇಲ್ಲಿ ನಡೆದಿರುವ ಯೋಜನೆ ಶೇಕಡ 90 ಭಾಗ ಯಶಸ್ವಿಯಾಗಿದೆ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಹುಲಿ ಸಂರಕ್ಷಣೆ ಯೋಜನೆಯಡಿ ಈ ಯೋಜನೆಯನ್ನು ಕೈಗೊಳ್ಳಲಾಗಿದ್ದು, ಭಾರತದಲ್ಲಿ 1400 ರಿಂದ 1500 ಹುಲಿಗಳು ಮಾತ್ರ ಇವೆ ಎಂದ ಅವರು, ಹುಲಿಗಳನ್ನು ಸಂರಕ್ಷಿಸುವ ಜೊತೆಗೆ ಜನರ ಜೀವನವನ್ನು ಸಹ ಸುಧಾರಿಸಬೇಕಾಗಿದೆ ಎಂದರು.
ಪರಿಸರಕ್ಕೆ ಇಂದು ಗಂಡಾಂತರ ಕಾದಿದ್ದು, ಕಾಡು ನಾಶದ ಜೊತೆಗೆ ನೀರಿನ ಮೂಲಗಳು ಕೂಡ ಬತ್ತುತ್ತಿವೆ, ವಾತಾವರಣ ಸಹ ಕಲುಷಿತಗೊಳ್ಳುತ್ತಿದೆ, ಚಿಕ್ಕಮಗಳೂರಿನಂಥ ಮಲೆನಾಡು ಭಾಗದಲ್ಲಿಯೂ ಸಹ ಪರಿಸರ ಹಾಳಾಗುತ್ತಿದ್ದು, ಈ ದಿಸೆಯಲ್ಲಿ ಎಲ್ಲರೂ ಕಾಡನ್ನು ಸಂರಕ್ಷಿಸಿಕೊಂಡು ಬರಬೇಕಾಗಿದೆ, ಕಾಡು ಇಲ್ಲದೆ ದೇಶಕ್ಕೆ ಭವಿಷ್ಯವಿಲ್ಲ ದೇಶದಲ್ಲಿರುವ ಶೇ. 20ರಷ್ಟು ಅರಣ್ಯ ಪ್ರದೇಶವನ್ನು ಹೆಚ್ಚಿಸುವಲ್ಲಿ ಎಲ್ಲರೂ ಮುಂದಾಗಬೇಕೆಂದರು. ಜನರ ಜೀವನಕ್ಕೆ ಅರಣ್ಯ ಅತಿ ಮುಖ್ಯವಾಗಿದ್ದು, ವಿಶೇಷವಾಗಿ ಬುಡಕಟ್ಟು ಜನರ ಜೀವನಕ್ಕೆ ಅರಣ್ಯ ಹೆಚ್ಚು ಉಪಯುಕ್ತವಾಗಿದೆ ಎಂದು ತಿಳಿಸಿದರು.
ಪ್ರವಾಸೋಧ್ಯಮ ಅಭಿವೃದ್ಧಿ ಮತ್ತಿತರ ಮೂಲಗಳಿಂದ ಬರುವ ಆದಾಯಗಳನ್ನು ಇಲ್ಲಿನ ಪುನರ್ವಸತಿದಾರರ ಅಭಿವೃದ್ಧಿಗೆ ಬಳಸಲು ಚಿಂತಿಸಲಾಗುವುದು ಎಂದು ಜೈರಾಮ್ ರಮೇಶ್ ಅವರು ಭರವಸೆ ನೀಡಿದರು. ಸಚಿವರು ಇದಕ್ಕೂ ಮುನ್ನ ಗ್ರಾಮದ ಸುತ್ತ ನಡೆದಿರುವ ಪುನರ್ವಸತಿ ಯೋಜನೆ ಕಾರ್ಯ ವೀಕ್ಷಿಸಿದರು.
(ದಟ್ಸ್ ಕನ್ನಡ ವಾರ್ತೆ)