ರಾಜ್ ಸಮಾಧಿಯಲ್ಲಿ ಶೀಘ್ರವೇ ಸ್ಮಾರಕ ನಿರ್ಮಾಣ
ಬೆಂಗಳೂರು,ಏ.25: ವರನಟ ಡಾ.ರಾಜಕುಮಾರ್ ಅವರ ಸಮಾಧಿ ಸ್ಥಳದಲ್ಲಿ ಭವ್ಯ ಸ್ಮಾರಕವನ್ನು ಶೀಘ್ರವೇ ನಿರ್ಮಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಐ.ಎಂ.ವಿಠ್ಠಲಮೂರ್ತಿ ಹೇಳಿದರು.
ರಾಜಕುಮಾರ್ ಅವರ 80ನೇ ಹುಟ್ಟುಹಬ್ಬದ ಅಂಗವಾಗಿ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ನೆನಪು-ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಐ.ಎಂ.ವಿಠ್ಠಲಮೂರ್ತಿ ಅವರು ಕನ್ನಡ ಚಿತ್ರರಂಗ, ನಾಡು- ನುಡಿಗೆ ರಾಜ್ ನೀಡಿದ ಕೊಡುಗೆ ಅನನ್ಯ. ಸ್ಮಾರಕ ನಿರ್ಮಾಣಕ್ಕೆ ಕಳೆದ ಬಾರಿ ಮೂರು ಕೋಟಿ ಹಣವನ್ನು ವೆಚ್ಚ ಮಾಡಲಾಗಿತ್ತು. ರಾಜ್ಯಪಾಲರ ಸರ್ಕಾರ ಈ ಬಾರಿಯೂ 3 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಮೇರು ನಟನ ಸ್ಮಾರಕವನ್ನುಆದಷ್ಟು ಬೇಗ ನಿರ್ಮಿಸಲಾಗುವುದು ಎಂದುಭರವಸೆ ನೀಡದರು.
ಈ ಸಂದರ್ಭದಲ್ಲಿ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ , ಪಾರ್ವತಮ್ಮ ರಾಜಕುಮಾರ್, ನಟ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಕೆ.ಎಸ್.ಅಶ್ವಥ್ , ರಂಗಕರ್ಮಿ ಪರಮಶಿವನ್, ರಾಜ್ ಪ್ರತಿಷ್ಠಾನದ ಕಾರ್ಯದರ್ಶಿ ವಿಶುಕುಮಾರ್ ಉಪಸ್ಥಿತರಿದ್ದರು.
ಸನ್ಮಾನ: ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಗಣ್ಯರನ್ನು ರಾಜಕುಮಾರ್ ಪ್ರತಿಷ್ಠಾನದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ರಾಜ್ ಹುಟ್ಟುಹಬ್ಬದ ಸವಿನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ನಾಡೋಜ ಬುರ್ರಾಕಥಾ ಈರಮ್ಮ(ಜಾನಪದ), ಆರ್.ರತನ್ ಸಿಂಗ್(ವಿಕಲಚೇತನರ ಕ್ರೀಡೆ), ಭುಜಂಗ್ ಶೆಟ್ಟಿ(ವೈದ್ಯಕೀಯ), ರಾಮದಾಸ್ ಅತ್ತಾವರ್(ಹೊರನಾಡು ಕನ್ನಡಿಗ), ಬಿ.ಕೃಷ್ಣಭಟ್(ಪರಿಸರ), ಬಾಗೇಗೌಡ ಮತ್ತು ಪಟ್ಟಣಗೆರೆ ಜಯಣ್ಣ(ಸಮಾಜಸೇವೆ) ಅವರನ್ನು ಕೊಳದಮಠದ ಶಾಂತವೀರ ಸ್ವಾಮಿಜೀಗಳು ಶಾಲು ಹೊದಿಸಿ ಗೌರವಿಸಿದರು.
(ದಟ್ಸ್ ಕನ್ನಡ ವಾರ್ತೆ)