ಅಂತೂ ಕೊನೆಗೆ ಕಾಂಗ್ರೆಸ್ ನ ಕೈ ಹಿಡಿದಎಂ.ಪಿ. ಪ್ರಕಾಶ್
ಬೆಂಗಳೂರು, ಫೆ.17: ಹಲವಾರು ಊಹಾಪೋಹಗಳ ನಂತರ ಮಾಜಿ ಗೃಹ ಸಚಿವ ಎಂ.ಪಿ.ಪ್ರಕಾಶ್ ಹಾಗೂ ಅವರ ಬೆಂಬಲಿಗರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರುವ ದಿನಾಂಕ ಖಚಿತವಾಗಿದೆ. ಇದೇ ತಿಂಗಳ 27 ರಂದು ನಗರದ ಅರಮನೆ ಮೈದಾನದಲ್ಲಿ ನಡೆಯುವ ರಾಜ್ಯ ಮಟ್ಟದ ಯುವಜನ ಸಮಾವೇಶದಲ್ಲಿ ವಿಧ್ಯುಕ್ತವಾಗಿ ಪ್ರಕಾಶ್ ಬಣ ಕಾಂಗ್ರೆಸ್ ಜತೆ ಕೈ ಜೋಡಿಸಲಿದೆ.
ಈ ಸಮಾರಂಭಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಷ್ಟ್ರ ಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಿರುವುದು ವಿಶೇಷ.ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯಿತ ಮುಖಂಡರ ಕೊರತೆಯನ್ನು ಎಂ.ಪಿ.ಪ್ರಕಾಶ್ ತುಂಬಲಿದ್ದಾರೆ. ಪ್ರಕಾಶ್ ಹಾಗೂ ಸಿದ್ದರಾಮಯ್ಯ ಬೆಂಬಲರಿಗೂ ಪಕ್ಷದಲ್ಲಿ ಮಹತ್ವದ ಸ್ಥಾನ ದೊರೆಯಲಿದೆ. ಕಾಂಗ್ರೆಸ್ ಪಕ್ಷದಲ್ಲಿ ನೆನೆಗುದಿಗೆ ಬಿದ್ದಿರುವ ಪದಾಧಿಕಾರಿಗಳ ಪುನರ್ ರಚನೆ, ಜಿಲ್ಲಾಧ್ಯಕ್ಷರ ನೇಮಕ ಮುಂತಾದ ವಿಷಯಗಳ ಬಗ್ಗೆ ಕೂಡಲೇ ಗಮನ ಹರಿಸುವಂತೆ ರಾಜ್ಯ ಕಾಂಗ್ರೆಸ್ ವರಿಷ್ಠರಿಗೆ ಹೈಕಮಾಂಡ್ ಈಗಾಗಲೇ ಹುಕುಂ ಮಾಡಿದೆ .
ಫೆ. 27 ರಂದು ನಡೆಯುವ ಯುವಜನ ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಪೃಥ್ವಿರಾಜ್ ಚೌಹಾಣ್, ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್, ಕೆ. ಮುನಿಯಪ್ಪ, ರಾಜಶೇಖರನ್, ಎಐಸಿಸಿ ಕಾರ್ಯದರ್ಶಿ ಹರೀಂದರ್ ಮಿರ್ದಾ ಮುಂತಾದ ಗಣ್ಯರ ಸಮ್ಮುಖದಲ್ಲಿ ಪ್ರಕಾಶ್ ಕಾಂಗ್ರೆಸ್ ಗೆ ಸೇರಲಿದ್ದಾರೆ.ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಏರ್ಪಾಟು ಮಾಡಿ ಸೋನಿಯಾ ಗಾಂಧಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರುವ ಇಂಗಿತವನ್ನು ಎಂ.ಪಿ.ಪ್ರಕಾಶ್ ವ್ಯಕ್ತಪಡಿಸಿದ್ದ ರು.
ಕಾಂಗ್ರೆಸ್ ಪ್ರಚಾರಸಮಿತಿ ಅಧ್ಯಕ್ಷ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೆ ಹಾಗು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನವನ್ನು ಎಂ.ಪಿ.ಪ್ರಕಾಶ್ ಅವರಿಗೆ ನೀಡುವ ಸಾಧ್ಯತೆಗಳಿವೆ ಎಂದು ಅರ್ಹಮೂಲಗಳಿಂದ ತಿಳಿದುಬಂದಿದೆ.
(ಏಜನ್ಸೀಸ್ )