ಆ್ಯಂಥ್ರಾಕ್ಸ್ ಭೀತಿ!ನೊಣ ಹೊಡೆಯುತ್ತಿರುವ ಮಾಂಸ ವ್ಯಾಪಾರಿಗಳು
ಬೆಂಗಳೂರು : ಇತ್ತ ಲಕ್ಷ್ಮೀ ಪೂಜೆಯ ಸಡಗರ. ಹಬ್ಬದ ಸಮಯದಲ್ಲಿ ಮಾಂಸ ಕತ್ತರಿಸುವುದುಂಟೇ... ಮತ್ತೆ ಇನ್ನೊಂದು ಕಡೆ ರಂಜಾನ್ ಉಪವಾಸ. ಮುಸ್ಲಿಮರು ರಾತ್ರಿಯ ಒಂದೂಟಕ್ಕೆ ಎಷ್ಟು ಅಂತ ಮಾಂಸ ಕೊಳ್ಳಬಹುದು ? ಮಗದೊಂದು ಕಡೆ ಆ್ಯಂಥ್ರಾಕ್ಸ್ ಭಯದ ಉಪಟಳ. ನಗರದ ಮಾಂಸದಂಗಡಿಯ ಮಾಲಿಕರು ನೊಣಗಳನ್ನು ಲೆಕ್ಕ ಹಾಕುತ್ತಾ ಕುಳಿತಿದ್ದಾರೆ.
ನಗರದಲ್ಲಿ ಮಾಂಸದ ರೇಟು ಕೆಜಿಗೆ 120 ರೂಪಾಯಿಗಿಂತ ಹೆಚ್ಚಿದ್ದುದು ಈಗ 90 ರೂಪಾಯಿಗಿಳಿದಿದೆ. ಕೋಲಾರದಲ್ಲಿ ಆ್ಯಂಥ್ರಾಕ್ಸ್ ಕಂಡು ಬಂದಿರುವ ಸುದ್ದಿ ಕಳೆದ ಎರಡು ತಿಂಗಳ ಹಿಂದೆಯೇ ಹೊರಬಿದ್ದಿದೆ. ಇದು ಅಮೆರಿಕನ್ನರನ್ನು ಕಾಡಿಸುತ್ತಿರುವ ಮಾರಕ ಆ್ಯಂಥ್ರಾಕ್ಸ್ ಅಲ್ಲ, ಬದಲಿಗೆ ಗುಣಪಡಿಸಬಹುದಾದ, ಸತ್ತ ಪ್ರಾಣಿಗಳ ಮೂಲಕ ಹರಡುವ ಕಾಯಿಲೆ. ಆದರೂ ಅಮೆರಿಕಾದಿಂದ ಬರುತ್ತಿರುವ ಆ್ಯಂಥ್ರಾಕ್ಸ್ ವಾರ್ತೆಗಳು ಜನರನ್ನು ಮಾಂಸದಂಗಡಿಗಳಿಂದ ವಿಮುಖವಾಗಿಸಿವೆ.
ದಿನಕ್ಕೆ 30 ಸಾವಿರ ಕಿಲೋ ಮಟನ್ ಮತ್ತು 12 ಸಾವಿರ ಕಿಲೋ ಗೋಮಾಂಸ ಮಾರಾಟವಾಗುತ್ತಿದ್ದ ನಗರದಲ್ಲಿ ಈಗ , ವ್ಯಾಪಾರದ ವೇಗ ಇಳಿಮುಖವಾಗಿದೆ. ಸರಕಾರದಿಂದ ನಡೆಯುವ ಮಾಂಸದಂಗಡಿಯಾಂದರಲ್ಲಿಯೇ ಸಾಮಾನ್ಯವಾಗಿ ದಿನಕ್ಕೆ 800 ಕುರಿಗಳ ತಲೆ ಕಡಿಯಲಾಗುತ್ತಿತ್ತು. ಈ ಸಂಖ್ಯೆ ಈಗ 500ಕ್ಕಿಂತ ಕೆಳಗಿಳಿದಿದೆ.
ಇದರಿಂದ ಮಾಂಸ ಅಗ್ಗವಾಗಿಬಿಟ್ಟಿದೆ. ಆ್ಯಂಥ್ರಾಕ್ಸ್ ಸುದ್ದಿ ಹುಟ್ಟು ಹಾಕಿದ ಕೋಲಾರದಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಅಲ್ಲಿ ಪ್ರಾಣಿ ಗಳು ಸತ್ತರೆ ಅದಕ್ಕೆ ಆ್ಯಂಥ್ರಾಕ್ಸೇ ಕಾರಣವೆಂದು ಜನರೇ ತೀರ್ಮಾನಿಸಿ ಬಿಡುತ್ತಾರೆ.
ರಸ್ಸೆಲ್ ಮಾರ್ಕೆಟ್ ಮತ್ತೆ ಮೈಸೂರು ರಸ್ತೆಯ ಸ್ಲಂಗಳಲ್ಲಿ ಮಾಂಸ ಮಾರಾಟ ಮಾಡಿ ನಷ್ಟ ತುಂಬಿಸಿಕೊಳ್ಳಲು ವ್ಯಾಪಾರಿಗಳು ಪರದಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಡಾಕ್ಟರೂ ಆರೋಗ್ಯ ಜಾಗೃತಿಯ ಮಾತಾಡುತ್ತಾ ಮಾಂಸ ಕೊಳ್ಳಬೇಡಿ ಎನ್ನುತ್ತಾರೆ. ಒಟ್ಟಿನಲ್ಲಿ ಮಾಂಸದಗಂಡಿ ಇಟ್ಟ ವ್ಯಾಪಾರಿಗಳು ಅಂಗಡಿಗೆ ಸುಣ್ಣ ಬಣ್ಣ ಕೊಟ್ಟು ಫ್ಯಾನ್ಸಿ ಸ್ಟೋರ್ ಶುರುಮಾಡಿದರೆ ಹೇಗೇ... ಅಂತ ಯೋಚಿಸುತ್ತಿದ್ದಾರೆ. ಯಾಕೆಂದರೆ ಈ ವ್ಯಾಪಾರವಾದರೆ ಯುದ್ಧ , ರೋಗಗಳ ಭೀತಿಯಿಲ್ಲದೇ ಚಿರಕಾಲ ನಡೆಯುತ್ತಿರುತ್ತದಲ್ವೇ?
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...