ಹನುಮ ಜಯಂತಿ ಮುನ್ನವೇ ಅಯೋಧ್ಯೆಗೆ ಗೌತಮ್ ಅದಾನಿ ಭೇಟಿ: ಪ್ರಾಚೀನ ಗುರುಕುಲಕ್ಕೆ AI ಲ್ಯಾಬ್ ಘೋಷಣೆ
ಹನುಮ ಜಯಂತಿ ಮುನ್ನಾದಿನ ಬುಧವಾರ ದೇಶದ ಶ್ರೀಮಂತ ವ್ಯಕ್ತಿ, ಉದ್ಯಮಿ ಮತ್ತು ಅದಾನಿ ಗ್ರೂಪ್ನ ಅಧ್ಯಕ್ಷ ಗೌತಮ್ ಅದಾನಿ ಅವರು ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆ ರಾಮ ದೇಗುಲಕ್ಕೆ ಭೇಟಿ ನೀಡಿದರು. ಆಧ್ಯಾತ್ಮಿಕ ಭಕ್ತಿಯನ್ನು ಭಾರತದ ಸಾಂಸ್ಕೃತಿಕ ನಿರಂತರತೆಯನ್ನು ಕಣ್ತುಂಬಿಕೊಂಡರು. ವಿಶೇಷ ಪೂಜೆ ಸಲ್ಲಿಸಿದರು. ಗೌತಮ್ ಅದಾನಿ ಅವರೊಂದಿಗೆ ಪತ್ನಿ ಪ್ರೀತಿ ಅದಾನಿ, ಮಗ ಕರಣ್ ಅದಾನಿ ಮತ್ತು ಸೊಸೆ ಪರಿಧಿ ಅದಾನಿ ಅವರು ದೇಶದ ಆಧ್ಯಾತ್ಮಿಕ ಹೆಗ್ಗುರುತು ಆದ ಶ್ರೀ ರಾಮ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಹನುಮಾನ್ ಜಯಂತಿ ಅಂಗವಾಗಿ ಅವರ ಭೇಟಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಶ್ರೀರಾಮನ ದರ್ಶನ ಬಳಿಕ ಭಕ್ತಿ-ಭಾವ ಮತ್ತು ಹೆಮ್ಮೆಯ ಕ್ಷಣ ಅನುಭವಿಸಿದ ಅದಾನಿ ಅವರು ಭೇಟಿ ಕುರಿತು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ದೇವಾಲಯದ ಮಹತ್ವವನ್ನು ಪೂಜಾ ಸ್ಥಳವಾಗಿ ಮಾತ್ರವಲ್ಲದೆ, ಭಾರತದ ಶಾಶ್ವತ ನಾಗರಿಕ ಮೌಲ್ಯಗಳು, ಏಕತೆ ಮತ್ತು ಹೆಚ್ಚುತ್ತಿರುವ ರಾಷ್ಟ್ರೀಯ ವಿಶ್ವಾಸದ ಸಂಕೇತವಾಗಿದೆ. ಭಗವಾನ್ ಶ್ರೀರಾಮ ನಡೆದು ಬಂದ ಸತ್ಯ, ಕರ್ತವ್ಯ, ಕರುಣೆ ಮತ್ತು ಸೇವೆಗಳು ಭಾರತದ ಭವ್ಯ ಭವಿಷ್ಯದ ಪಥ ರೂಪಿಸುವಲ್ಲಿ ಇಂದಿಗೂ ಪ್ರಸ್ತುತ ಎಂದು ತಿಳಿಸಿದರು.

ಗುರುಕುಲಕ್ಕೂ ಭೇಟಿ, ವಿದ್ಯಾರ್ಥಿಗಳ ಜತೆ ಸಂವಾದ
ಅಯೋಧ್ಯೆ ಭೇಟಿ ಬಳಿಕ ಅಲ್ಲಿಂದ ಕೊಂಚ ದೂರದಲ್ಲಿರುವ ಶ್ರೀ ನಿಶುಲ್ಕ ಗುರುಕುಲ ಮಹಾವಿದ್ಯಾಲಯಕ್ಕೆ ತೆರಳಿದರು. ಅಲ್ಲಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಂದಿಗೆ ಒಂದಷ್ಟು ಕಾಲ ಸಂವಾದ ನಡೆಸಿದರು. 1935 ರಲ್ಲಿ ಸ್ವಾಮಿ ತ್ಯಾಗಾನಂದ್ ಜಿ ಸ್ಥಾಪಿಸಿದ ಮತ್ತು ಆರ್ಯ ಸಮಾಜದ ತತ್ವಗಳಿಂದ ಪ್ರೇರಿತರಾದ ಈ ಸಂಸ್ಥೆಯು ಭಾರತದ ಸಾಂಪ್ರದಾಯಿಕ ಗುರುಕುಲ ವ್ಯವಸ್ಥೆಯ ಜೀವಂತ ಉದಾಹರಣೆಯನ್ನು ಪ್ರತಿನಿಧಿಸುತ್ತದೆ ಎಂದು ಸಂಸ್ಥೆ ನಡೆದು ಬಂದ ಹಾದಿ ಕುರಿತು ಸ್ಮರಿಸಿದರು.
ಗುರುಕುಲವು ಇಲ್ಲಿ ಕಲಿಯುವ ಎಲ್ಲ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಕುತೂಹಲ, ನೈತಿಕ ನೆಲೆಯನ್ನು ಪೋಷಿಸುತ್ತದೆ. ಮಾತ್ರವಲ್ಲದೇ ಸಂಸ್ಥೆಯು ದೇಶದ ಪ್ರಾಚೀನ ಜ್ಞಾನ ಸಂಪ್ರದಾಯಗಳನ್ನು ಹೇಗೆ ಸಂರಕ್ಷಿಸುತ್ತಿದೆ ಎಂಬುದನ್ನು ಗಮನಿಸಿದರು. ಸಾಂಸ್ಕೃತಿಕ ಬಲವಾದ ಅಡಿಪಾಯ ಕಟ್ಟುಕೊಂಡಂತಹ ಸಂಸ್ಥೆಗಳ ಇದು ಸಹ ಒಂದಾಗಿದೆ. ದೇಶ ಇಷ್ಟೊಂದು ತಂತ್ರಜ್ಞಾನದಲ್ಲಿ ಮುಂದುವರಿದರೂ ಸಹಿತ ಸಂಪ್ರದಾಯ ಜೊತೆಗೆ ಆಧುನಿಕತೆ ಸಮ್ಮಿಳನವು ಇಂದಿಗೂ ಅದರ ಅಗತ್ಯತೆ ಇದೆ ಎಂದರು.
ಎಐ ಸಹಿತ ಪ್ರಯೋಗಾಲಯ ಘೋಷಿಸಿದ ಅದಾನಿ
ಈ ಸಂಸ್ಥೆಯಲ್ಲಿ ಮಕ್ಕಳಿಗೆ ನೆರವಾಗುವಂತೆ ಇವತ್ತಿಗೆ ತಕ್ಕಂತೆ ಅದಾನಿ ಫೌಂಡೇಶನ್ ವತಿಯಿಂದ ಕೃತಕ ಬುದ್ಧಿಮತ್ತೆ (ಎಐ) ಸಹಿತ ಪ್ರಯೋಗಾಲಯ ಪರಿಚಯಿಸುವುದಾಗಿ ಈ ವೇಳೆ ಅವರು ಘೋಷಿಸಿದರು. ಈ ಉಪಕ್ರಮವು ಉದಯೋನ್ಮುಖ ತಾಂತ್ರಿಕ ಸಾಧನಗಳನ್ನು ಸಾಂಪ್ರದಾಯಿಕ ಕಲಿಕೆಯ ವಿಧಾನಗಳೊಂದಿಗೆ ಸಂಯೋಜಿಸುವ ಗುರಿಯನ್ನು ಹೊಂದಿದೆ,. ದೇಶದ ಶೈಕ್ಷಣಿಕ ಪರಂಪರೆಯ ಸಾರವನ್ನು ಸಂರಕ್ಷಿಸಿ, ಇಲ್ಲಿನ ವಿದ್ಯಾರ್ಥಿಗಳಿಗೆ ಭವಿಷ್ಯಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಒದಗಿಸುತ್ತದೆ ಎಂದು ಅವರು ತಿಳಿಸಿಕೊಟ್ಟರು.
ಸದರಿ ಗುರುಕುಲದಲ್ಲಿ ಇಂದಿಗೂ ಸುಮಾರು 200 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಒದಗಿಸುತ್ತಿದೆ. ಸಂಸ್ಥೆ ಶೈಕ್ಷಣಿಕ ವಲಯಕ್ಕೆ ತನ್ನದೇ ಆದ ಬದ್ಧತೆ ಪ್ರತಿಬಿಂಬಿಸುತ್ತಿದೆ. ಇಲ್ಲಿ ಗೋಶಾಲೆಯೂ ಇದ್ದು, ಮಕ್ಕಳು ದೈನಂದಿನ ಕಲಿಕೆಯ ಜೊತೆಗೆ ಜಾನುವಾರು, ಹಸುವಿನ ಮಹತ್ವದ, ಗ್ರಾಮೀಣ ಪದ್ಧತಿಗಳು, ಸಾಂಪ್ರದಾಯಗಳನ್ನು ಕಲಿಯುತ್ತಿದ್ದಾರೆ. ಸಂಸ್ಥೆಯು ಐತಿಹಾಸಿಕವಾಗಿ ಮಹಾತ್ಮ ಗಾಂಧಿ ಮತ್ತು ಸುಭಾಷ್ ಚಂದ್ರ ಬೋಸ್ ಅವರಂತವರನ್ನು ಆಕರ್ಷಿಸಿದೆ ಎಂದು ಹೇಳಿದರು.
ಅದಾನಿ ಅವರ ಭೇಟಿ ವೇಳೆ ಗುರುಕುಲದ ವಿದ್ಯಾರ್ಥಿಗಳು ಸಂಸ್ಕೃತ ಶ್ಲೋಕಗಳ ಸಾಮೂಹಿಕ ಪಠಣದಲ್ಲಿ ನಿರತರಾಗಿದ್ದರು. ಇದು ಅಲ್ಲಿನ ವಿಶಾಲ ಸಭಾಂಗಣದಲ್ಲಿ ಪ್ರತಿಧ್ವನಿಸುತ್ತಿತ್ತು. ಈ ಮೂಲಕ ಅವರು ಗುರುಕುಲ ವ್ಯವಸ್ಥೆಯಲ್ಲಿನ ಶಿಸ್ತು ಮತ್ತು ಮಕ್ಕಳ ಭಕ್ತಿಯನ್ನು ಕಂಡುಕೊಂಡರು. ಪಠಣ ಪೂರ್ಣಗೊಂಡ ಬಳಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಅದಾನಿ ಸಂವಹನ ನಡೆಸಿದರು.
"ಸೇವಾ ಹಿ ಸಾಧನಾ ಹೈ" ಎಂಬ ತತ್ವ ಉಚ್ಚರಿಸಿದ ಅದಾನಿ, ಸೇವೆಯನ್ನು ಸಾಂದರ್ಭಿಕ ಕ್ರಿಯೆಯಾಗಿ ನೋಡಬಾರದು, ಸಮಾಜಕ್ಕೆ ನೀಡಬಹುದಾದ ಉದ್ದೇಶಪೂರ್ವಕ ಬದ್ಧತೆಯಾಗಿ ಕಾಣಬೇಕೆಂದು ಸಲಹೆ ನೀಡಿದರು. ತತ್ವಶಾಸ್ತ್ರವನ್ನು ಭಾರತದ ಜ್ಞಾನ ವ್ಯವಸ್ಥೆಗಳನ್ನು ಸಂರಕ್ಷಿಸುವ ವಿಶಾಲ ಜವಾಬ್ದಾರಿಯಾಗಿದೆ. ಅದಾನಿ ಅವರು ಅಯೋಧ್ಯೆಗೆ ಮಾತ್ರವಲ್ಲದೇ ಈಚೆಗೆ ಪ್ರಯಾಗರಾಜ್ನಲ್ಲಿ ಮಹಾ ಕುಂಭ ಮತ್ತು ಪುರಿಯಲ್ಲಿ ರಥಯಾತ್ರೆಯಂತಹ ಪ್ರಮುಖ ಧಾರ್ಮಿಕ ಕೂಟಗಳಲ್ಲಿ ಪಾಲ್ಗೊಂಡಿದ್ದರು. ಅವರು ಉದ್ಯಮಿಯಾದರೂ ಸಹಿತ ದೇಶದ ಸಾಂಸ್ಕೃತಿ, ಇತಿಹಾಸ, ಭಾಷೆಗಳು ಮತ್ತು ತತ್ತ್ವಶಾಸ್ತ್ರದ ಅಧ್ಯಯನ, ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಹೆಚ್ಚಿನ ಗಮನ ಹರಿಸುತ್ತಾರೆ.












Click it and Unblock the Notifications