ಕಾಶ್ಮೀರ ಸಮಸ್ಯೆಗೆ ಪೂರ್ಣವಿರಾಮದ ನಿರೀಕ್ಷೆಯಲ್ಲಿ ಪಾಕ್ ನಾಗರಿಕರು
ಇಸ್ಲಾಮಾಬಾದ್ : ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್ ಅವರಿಗೆ ಭಾರತದಲ್ಲಿ ಸಿಕ್ಕ ಗೌರವಾದರಗಳು ಪ್ರಧಾನಿ ವಾಜಪೇಯಿ ಅವರಿಗೂ ಪಾಕ್ನಲ್ಲಿ ದೊರೆಯಲಿದೆ ಎಂಬ ಅಭಿಪ್ರಾಯಗಳು ಪಾಕಿಸ್ತಾನದ ನಾಗರಿಕರಿಂದ ಹೊಮ್ಮುತ್ತಿವೆ. ಪಾಕಿಸ್ತಾನಕ್ಕೆ ಬನ್ನಿ ಎಂದು ಮುಷರ್ರಫ್ ಕೊಟ್ಟ ಆಮಂತ್ರಣಕ್ಕೆ ವಾಜಪೇಯಿ ಒಪ್ಪಿರುವುದು ಪಾಕ್ನ ಮಂದಿಗೆ ಖುಷಿ ತಂದಿದೆ.
ಇಲ್ಲಿನ ಮಾಧ್ಯಮಗಳಲ್ಲೂ ಆಗ್ರಾ ಶೃಂಗಸಭೆಯದೇ ಸದ್ದು. ಈ ಬಾರಿ ಕಾಶ್ಮೀರ ಸಮಸ್ಯೆ ಬಗೆಹರಿದೇ ತೀರುತ್ತದೆ ಎಂಬ ಬಲವಾದ ವಿಶ್ವಾಸ ಕೆಲವು ನಾಗರಿಕರದ್ದು. ಭಾರತ- ಪಾಕಿಸ್ತಾನದ ನಡುವಣ ವೈಷಮ್ಯಕ್ಕೆ ಕಾಶ್ಮೀರ ಸಮಸ್ಯೆಯಾಂದೇ ಕಾರಣ. ಅದು ಬಗೆಹರಿದಲ್ಲಿ ಉಭಯ ರಾಷ್ಟ್ರಗಳ ಸಂಬಂಧ ಉತ್ತಮವಾಗಲಿದೆ. ಭಾರತದ ಜೊತೆ ಶಾಂತಿ, ಸೌಹಾರ್ದಯುತ ಸಂಬಂಧವನ್ನೇ ನಾವು ಬಯಸೋದು ಅನ್ನುತ್ತಾರೆ ಪಾಕ್ನ ಒಬ್ಬ ನಾಗರಿಕ.
ತಮ್ಮ ವಿರೋಧಿಗಳ ಹೆಜ್ಜೆಯನ್ನು ಹಿಮ್ಮೆಟ್ಟಿಸಲು ಮುಷರ್ರಫ್ ಅವರಿಗೆ ಸಿಕ್ಕಿರುವ ಸದವಕಾಶವಿದು. ವಾಜಪೇಯಿ ಅವರ ಜೊತೆ ಮಾತುಕತೆಯಲ್ಲಾಗಲೀ, ಒಡಂಬಡಿಕೆಗೆ ಸಹಿ ಹಾಕುವ ವಿಷಯದಲ್ಲಾಗಲೀ ಅವರು ಹಿಂದೂಮುಂದು ನೋಡಬೇಕಾದ ಅಗತ್ಯವಿಲ್ಲ. ಸೇನಾಬಲಗಳ ಪ್ರತಿನಿಧಿಯಾದ ಮುಷರ್ರಫ್ ಯಶಸ್ಸನ್ನು ಹೊತ್ತು ವಾಪಸ್ಸಾಗುವರಂಬ ವಿಶ್ವಾಸ ನಮಗಿದೆ ಎನ್ನುತ್ತಾರೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಮುಷಾಹಿದ್ ಹುಸೇನ್.
ಪಾಕಿಸ್ತಾನೀಯರ ಕಣ್ಣುಗಳು ಈ ಹೊತ್ತು ಆಗ್ರಾದತ್ತ ದೃಷ್ಟಿ ನೆಟ್ಟಿವೆ. ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧದ ಭವಿತವ್ಯ ಸೋಮವಾರ ಹೊಸ ತಿರುವು ಪಡೆಯಲಿ ಎಂಬ ಹಾರೈಕೆ ಆ ಕಣ್ಣುಗಳಲ್ಲಿ.
(ಇನ್ಫೋ ವಾರ್ತೆ)
what do you think about this ?
ಮುಖಪುಟ / ಆಗ್ರಾ ಶೃಂಗಸಭೆ