ಸತ್ಯಮಂಗಲಂ ದಟ್ಟ ಕಾನನದ ದುರ್ಗಮ ದಾರಿಯಲ್ಲಿ ಎಸ್ಟಿಎಫ್
ಚೆನ್ನೈ: ಹೊಸ ಹುಮ್ಮಸ್ಸಿನೊಂದಿಗೆ ಪುನಃ ವೀರಪ್ಪನ್ ಶಿಕಾರಿಗೆ ನುಗ್ಗಿರುವ ಕರ್ನಾಟಕ- ತಮಿಳುನಾಡು ಜಂಟಿ ಕಾರ್ಯಾಚರಣೆ ಪಡೆ ಬುಧವಾರ ಮಧ್ಯರಾತ್ರಿಯಿಂದಲೇ ಸತ್ಯಮಂಗಲಂ ದಟ್ಟ ಕಾಡಿನ ದಾರಿಗಳಲ್ಲಿ ಹೆಜ್ಜೆ ಹಾಕುತ್ತಿದೆ.
ತಮಿಳುನಾಡು ವಿಶೇಷ ಕಾರ್ಯಾಚರಣೆ ಪಡೆಯ ಐಜಿ ವಿಜಯ್ ಕುಮಾರ್ ಅವರು ತಂಡವೊಂದನ್ನು ಕಾಡಿನಲ್ಲಿ ಮುನ್ನಡೆಸಿದ್ದಾರೆ. ಗೆರಿಲ್ಲ ಕದನದಲ್ಲಿ ಪಳಗಿರುವ ಉಭಯ ರಾಜ್ಯಗಳ ಎಸ್ಟಿಎಫ್ ಮುಖ್ಯಸ್ಥ ವಾಲ್ಟರ್ ಥೇವರಂ, ಕ್ಯಾಂಪ್ನ ಮೂಲ ನೆಲೆಯಿಂದ ತಂಡವನ್ನು ಮುನ್ನಡೆಸಿದ್ದಾರೆ ಎಂದು ಚೆನ್ನೈ ಮೂಲಗಳು ತಿಳಿಸಿವೆ.
ವೀರಪ್ಪನ್ ಶಿಕಾರಿಗೆ ಯಾವುದೇ ಕಾಲಮಿತಿ ಗೊತ್ತುಪಡಿಸಿಲ್ಲ ವಾದರೂ, ವಾಲ್ಟರ್ ಥೇವರಂ ತಮ್ಮ ಅಧಿಕಾರಾವಧಿ ಮುಗಿಯುವ ಮುನ್ನ (ಒಂದು ವರ್ಷದೊಳಗಾಗಿ) ವೀರಪ್ಪನ್ ಶಿಕಾರಿಯನ್ನು ಯಶಸ್ವಿಯಾಗಿ ಪೂರೈಸುವುದಾಗಿ ಹೇಳಿದ್ದಾರೆ. ಈ ಮುನ್ನಿನ ಕಾರ್ಯಾಚರಣೆಗಳು ವಿಫಲವಾಗಿದ್ದರೂ, ಈ ಬಾರಿ ಜಯಲಲಿತಾ ನೇತೃತ್ವದ ಸರ್ಕಾರ ವೀರಪ್ಪನ್ ಶಿಕಾರಿಗೆ ಅತ್ಯುತ್ಸಾಹದಿಂದಿರುವ ಹಿನ್ನೆಲೆಯಲ್ಲಿ ಶಿಕಾರಿಯ ಕುರಿತು ಹೊಸ ಆಸೆಗಳು ಚಿಗುರಿವೆ.
(ಇನ್ಫೋ ವಾರ್ತೆ)