ಜೈಲಿನಿಂದಲೇ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧೆ
ಬೆಳಗಾವಿ : ಮೇ 3ರಂದು ನಡೆಯಲಿರುವ ಬೆಳಗಾವಿ ಮಹಾ ನಗರಪಾಲಿಕೆ ಚುನಾವಣೆಗೆ ಜೈಲಿನಲ್ಲಿರುವ ಸಂಜಯ ಸುಂಠಕರ್ ಎಂಬ ಅಭ್ಯರ್ಥಿ ಸ್ಪರ್ಧಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ್ 56ರಿಂದ ಸ್ಪರ್ಧಿಸಿರುವ ಕುಖ್ಯಾತ ರೌಡಿ ಸಂಜಯ ಸುಂಠಕರ್ ಜೈಲಿನಲ್ಲಿದುಕೊಂಡೇ ಸ್ಪರ್ಧಿಸಲು ಸ್ಫೂರ್ತಿ ಯಾರು ಗೊತ್ತೆ ? ಶಾಸಕ ರವಿಕಾಂತ ಪಾಟೀಲ್. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಂಡಿ ಕ್ಷೇತ್ರದಿಂದ ಸ್ಪರ್ಧಿಸಿ, ಶಾಸಕರಾಗಿ ಆಯ್ಕೆಯಾದ ರವಿಕಾಂತ್ ಪಾಟೀಲ್ ಆಗ ಸೊಲ್ಲಾಪುರ ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿದ್ದರು.
ಈ ಸ್ಫೂರ್ತಿಯಿಂದ ಕಣಕ್ಕಿಳಿದಿರುವ ಸುಂಠಕರ್ ನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಲು ತಮ್ಮ ವಕೀಲರ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ. ಹಲವಾರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಅವರು, ಈಗ ಬೆಳಗಾವಿ ಹೊರವಲಯದ ಜೈಲಿನಲ್ಲಿದ್ದಾರೆ. ಸುಂಠಕರ್ ಜೈಲಿನಲ್ಲಿದ್ದರೂ, ಅವರ ಪರ ಭರದ ಪ್ರಚಾರ ನಡೆಯುತ್ತಿದೆ.
ಈ ಬಾರಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿರುವ 20ಕ್ಕೂ ಹೆಚ್ಚು ಅಭ್ಯರ್ಥಿಗಳು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಎನ್ನುವುದು ವಿಶೇಷ.
ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಎಐಡಿಎಂಕೆ ನಾಯಕಿ ಜಯಲಲಿತಾ ಅವರು ನಾಲ್ಕು ಕ್ಷೇತ್ರಗಳಲ್ಲಿ ಸಲ್ಲಿಸಿದ್ದ ನಾಮಪತ್ರಗಳನ್ನೂ ಭ್ರಷ್ಟಾಚಾರ ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ ಎಂಬ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.