ತಂತಿ ಬೇಲಿಗೆ ವಿದ್ಯುತ್ ಹರಿಸುವುದು ಶಿಕ್ಷಾರ್ಹ ಅಪರಾಧ
ಬೆಂಗಳೂರು : ಹೊಲ ಅಥವಾ ತೋಟ ರಕ್ಷಿಸುವ ತಂತಿ ಬೇಲಿಯಲ್ಲಿ ವಿದ್ಯುತ್ ಪ್ರವಹಿಸುವಂತೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಗೊತ್ತಿದ್ದೂ ಅದನ್ನು ಅನೇಕರು ಮುಂದುವರೆಸಿದ್ದಾರೆ. ಈ ನಡೆ ಕೇವಲ ಪ್ರಾಣಿಗಳ ಜೀವಕ್ಕಷ್ಟೇ ಅಲ್ಲ, ತಂತಿಯನ್ನು ಮುಟ್ಟುವ ಜನರನ್ನೂ ಬಲಿತೆಗೆದುಕೊಂಡ ಉದಾಹರಣೆಗಳಿವೆ. ವಿದ್ಯುತ್ ತಂತಿ ಬೇಲಿ ಕೆಲವು ಆನೆಗಳನ್ನೂ ಬಲಿ ತೆಗೆದುಕೊಂಡಿದೆ. ಮೂಕ ಪ್ರಾಣಿಗಳ ಸಾವಿಗೆ ಕಾರಣರಾಗುತ್ತಿರುವ ರೈತರು ತಂತಿ ಬೇಲಿಗೆ ವಿದ್ಯುತ್ ಹರಿಸಿದರೆ ಅವರಿಗೆ ನೀಡಲಾಗುವ ಶಿಕ್ಷೆಯನ್ನು ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ಪಟ್ಟಿ ಮಾಡಿದೆ. ಸಾರ್ವಜನಿಕರಿಗೆ ಈ ಬಗ್ಗೆ ಜಾಹೀರಾತಿನ ಮೂಲಕ ಎಚ್ಚರಿಕೆಯನ್ನೂ ನೀಡಿದೆ.
- ಭಾರತೀಯ ದಂಡ ಸಂಹಿತೆಯ 336ನೇ ವಿಧಿಯ ಪ್ರಕಾರ, ಅಪಾಯಕಾರಿಯಾದ, ಆತುರದ ಅಥವಾ ಉಪೇಕ್ಷಿಸುವ ಕ್ರಿಯೆಯಿಂದ ಯಾರದೇ ಪ್ರಾಣಕ್ಕೆ ಅಪಾಯವಾದರೆ, ಅದಕ್ಕೆ ಕಾರಣರಾದವರಿಗೆ 3 ತಿಂಗಳ ಸೆರೆವಾಸ ಅಥವಾ 250 ರುಪಾಯಿ ದಂಡ ಅಥವಾ ಎರಡನ್ನೂ ವಿಧಿಸಲಾಗುವುದು.
- ಐಪಿಸಿ 304 ಎ ವಿಧಿಯನ್ವಯ ಅಪಾಯಕಾರಿ ಕ್ರಿಯೆಯಿಂದ ಯಾರ ಸಾವಿಗಾದರೂ ಕಾರಣರಾದಲ್ಲಿ 2 ವರ್ಷದವರೆಗೆ ಸೆರೆವಾಸ/ದಂಡ ಅಥವಾ ಎರಡ್ನನೂ ವಿಧಿಸಲಾಗುವುದು.
- ಐಪಿಸಿ 429ನೇ ವಿಧಿ ಹೀಗೆನ್ನುತ್ತದೆ- ಹಸು, ಕುರಿ ಮುಂತಾದ ಮುಗ್ಧ ಪ್ರಾಣಿಗಳ ಹತ್ಯೆಗೆ ಕಾರಣರಾದವರಿಗೆ 5 ವರ್ಷಗಳವರೆಗೆ ಸೆರೆವಾಸ/ದಂಡ ಅಥವಾ ಎರಡನ್ನೂ ವಿಧಿಸಲಾಗುವುದು.
- ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ 51ನೇ ವಿಧೇಯಕದ ಪ್ರಕಾರ, ಕಾಡುಪ್ರಾಣಿಗಳ ಸಾವಿಗೆ ಕಾರಣರಾದವರು 25 ಸಾವಿರ ರುಪಾಯಿವರೆಗೆ ದಂಡ ತೆರಬೇಕಾಗುತ್ತದೆ ಅಥವಾ 3 ತಿಂಗಳು ಜೈಲಿನಲ್ಲಿ ಕೊಳೆಯಬೇಕಾಗುತ್ತದೆ.
- ಭಾರತೀಯ ವಿದ್ಯುಚ್ಛಕ್ತಿ ಅಧಿನಿಯಮ 1910ರ 40ನೇ ವಿಧೇಯಕ ಹೇಳುವಂತೆ ಅನಧಿಕೃತ ವಿದ್ಯುತ್ ಬಳಕೆ ಒಂದು ಅಪರಾಧ. ಇದಕ್ಕೆ 2 ವರ್ಷಗಳ ಜೈಲುವಾಸ/1000 ರುಪಾಯಿವರೆಗೆ ದಂಡ ಅಥವಾ ಎರಡೂ ರೀತಿಯ ಶಿಕ್ಷೆ ನೀಡಲಾಗುತ್ತದೆ.
ಈ ಕಾನೂನುಗಳು ಹೊಸದೇನೂ ಅಲ್ಲ. ಹಾಲಿ ಚಾಲ್ತಿಯಲ್ಲಿರುವ ಕಟ್ಟಳೆಗಳೇ. ಆದರೂ ರೈತರು ತಮ್ಮ ಶ್ರಮದ ಫಲವನ್ನು ಕಾಪಾಡಿಕೊಳ್ಳುವ ಆತುರದಲ್ಲಿ, ಗೊತ್ತಿದ್ದೂ ಮಾಡುವ ಈ ತಪ್ಪಿನಿಂದ ಹಲವು ಅನಾಹುತಗಳು ಸಂಭವಿಸಿವೆ, ಸಂಭವಿಸುತ್ತಿವೆ. ಅದಕ್ಕಾಗೇ ವಿದ್ಯುತ್ ನಿಗಮ ಸಾರ್ವಜನಿಕ ತಿಳಿವಳಿಕೆ ನೋಟಿಸ್ ನೀಡಿದೆ. ಕಡ್ಡಾಯವಾಗಿ ಹಾಗೂ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಕೇವಲ ಕಾನೂನು ಪಾಲನೆಗಾಗಿ ಮಾತ್ರವಲ್ಲ, ಮಾನವೀಯತೆಯ ದೃಷ್ಟಿಯಿಂದಲೂ ಮುಗ್ಧ ಜೀವಿಗಳ ಪ್ರಾಣಕ್ಕೆ ಮಾರಕವಾಗುವಂತಹ ಇಂತಹ ವಿದ್ಯುತ್ ತಂತಿ ಬೇಲಿ ಹಾಕುವುದು ಅಕ್ಷಮ್ಯ.