ಪಾಪ‌ರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್‌ ಕಾಲೇಜ್‌ ಬಗ್ಗೆ ಬೊಮ್ಮಾಯಿ ಪ್ರಶ್ನೆ

ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ಪಾಪ‌ರ್ ಸರ್ಕಾರದ ಸಾಹುಕಾರ. ರಾಜ್ಯ ಸರ್ಕಾರದ ಕಿಸೆಯಲ್ಲಿ, ಖಜಾನೆಯಲ್ಲಿ ಏನೂ ಇಲ್ಲ. ಸಾಹುಕಾರನ ಧಿಮಾಕು ಸಾಲಗಾರರು ಬಂದಾಗ ಗೊತ್ತಾಗುತ್ತದೆ. ಈ ಸರ್ಕಾರದ ಬಂಡವಾಳ ಈ ಸರ್ಕಾರ ಹೋದಾಗ ಗೊತ್ತಾಗುತ್ತದೆಬಾಗಲಕೋಟೆಗೆ ಮೆಡಿಕಲ್ ಕಾಲೇಜು ಘೋಷಣೆ ಮಾಡಿದ್ದ ಸರ್ಕಾರದ ಬಳಿಕ ಹಣ ನೀಡಲು ದುಡ್ಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಬಾಗಲಕೋಟೆಯ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ಭಾನುವಾರ ಇಲ್ಲಿನ ವಾರ್ಡ ನಂಬರ 29 ರಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚನೆಯನ್ನು ಮಾಡಿದರು. ಅಭಿವೃದ್ಧಿ ನಿರಂತರ ನಡೆಯುವ ಪ್ರಕ್ರಿಯೆ ಅದು ಹಳಿ ತಪ್ಪಿದರೆ ಅದನ್ನು ಹಳಿಗೆ ತರುವುದು ದುಬಾರಿಯಾಗುತ್ತದೆ. ಒಂದು ಕೆಲಸ ಈಗ ಮಾಡಿದರೆ 1 ಕೋಟಿ ರೂ. ಇರುತ್ತದೆ. ಅದನ್ನು ಎರಡು ವರ್ಷ ಬಿಟ್ಟರೆ ಎರಡು ಕೋಟಿ ಹೆಚ್ಚಾಗುತ್ತದೆ. ಮೂರು ವರ್ಷದಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆಯದಿರುವುದರಿಂದ ಬಾಗಲಕೋಟೆಯ ವೆಚ್ಚ ಸಾವಿರ ಕೋಟಿ ಹೆಚ್ಚಾಗುತ್ತದೆ.

Bagalkot Medical College

ಬಾಗಲಕೋಟೆಯೊಂದಿಗೆ ನನ್ನ ಸಂಬಂಧ ದೈವಿಚ್ಚೆ. ನಾನು ನೀರಾವರಿ ಸಚಿವನಾಗಿದ್ದಾಗ ಸ್ಟೇಜ್ 1 ನಲ್ಲಿ ಅಭಿವೃದ್ದಿಗೆ 700 ಕೋಟಿ ಕೊಟ್ಟಿದ್ದೆ. ನಾನು ಸಿಎಂ ಆಗಿದ್ದಾಗ ಸ್ಟೇಜ್ 2ಗೆ ವೀರಣ್ಣ ಚರಂತಿ ಮಠ ಅವರ ಹಠ, ಸಂಸದ ಗೋವಿಂದ ಕಾರಜೋಳ ಅವರ ಛಲದಿಂದ 2300 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇಂದಿಗೂ ಕೆಲಸ ನಡೆಯುತ್ತಿದೆ. ಈ ಸರ್ಕಾರದ ಬಳಿ ಹಣ ಇಲ್ಲ. ಸಿದ್ದರಾಮಯ್ಯ ಪಾಪ‌ರ್ ಸರ್ಕಾರದ ಮುಖ್ಯಸ್ಥರು. ಕಿಸೆಯಲ್ಲಿಯೂ ಹಣ ಇಲ್ಲ. ಸರ್ಕಾರದ ಕಿಸೆಯಲ್ಲಿ, ಖಜಾನೆಯಲ್ಲಿ ಏನೂ ಇಲ್ಲ ಎಂದು ಲೇವಡಿ ಮಾಡಿದರು.

ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ

ಸುಮ್ಮನೆ ಶ್ರೀಮಂತ ಅಪ್ಪ ಅಜ್ಜ ಮುತ್ತಜ್ಞ ಮಾಡಿರುವ ಆಸ್ತಿಯನ್ನು ಹಾಳು ಮಾಡಿ, ನಂತರ ತಮ್ಮ ಬಳಿ ಏನೂ ಇಲ್ಲ ಎಂದು ಹೇಳುವುದು ಕಷ್ಟವಾಗುತ್ತದೆ. ಅದನ್ನು ತೋರಿಸಿಕೊಳ್ಳದೇ ಆತ ಗರಿ ಗರಿ ಅಂಗಿ ಹಾಕುತ್ತಾನೆ. ಸಾಹುಕಾರನ ಧಿಮಾಕು ಸಾಲಗಾರರು ಬಂದಾಗ ಗೊತ್ತಾಗುತ್ತದೆ. ಮನೆ ಮಂದಿಗಿಂತ ಸಾಲಗಾರರೇ ಹೆಚ್ಚಾಗುತ್ತಾರೆ. ಅದೇ ರೀತಿ ಈ ಸರ್ಕಾರದ ಬಂಡವಾಳ ಈ ಸರ್ಕಾರ ಹೋದಾಗ ಗೊತ್ತಾಗುತ್ತದೆ. ಈಗ ಖಾಲಿ ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ. ಈಗ ಏನು ಕೇಳಿದರೂ ಕೊಡಲು ಅವರ ಬಳಿ ಏನೂ ಇಲ್ಲ ಎಂದರು.

ಮೆಡಿಕಲ್ ಕಾಲೇಜಿಗೆ ಹಣ ಇಲ್ಲ, ಜಾಗ ಇಲ್ಲ?

ಬಾಗಲಕೋಟೆಗೆ ಮೆಡಿಕಲ್ ಕಾಲೇಜು ಘೋಷಣೆ ಮಾಡಿದ್ದಾರೆ ಅದಕ್ಕೆ ಹಣ ಕೊಡಲು ಹಣ ಇಲ್ಲ. ವಿದ್ಯಾರ್ಥಿಗಳು ಕಟ್ಟಿದ ಫೀ ಹಣದಲ್ಲಿ ಮೆಡಿಕಲ್ ಕಾಲೇಜು ಕಟ್ಟುತ್ತಾರಂತೆ ಅದು ಸಾಧ್ಯವಿಲ್ಲ. ಬಾಗಲಕೋಟೆ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ. ಬಾಗಲಕೋಟೆ ವ್ಯಾಪಾರಸ್ಥರಿಗೆ 200 ಎಕರೆ ಜಾಗ ಕೊಡುತ್ತೇನೆ ಎಂದು ಸುಳ್ಳು ಹೇಳಿದ್ದಾರೆ. ಬಾಗಲಕೋಟೆ ವ್ಯಾಪಾಸ್ಯರು ಬುದ್ಧಿವಂತರೆಂದು ತಿಳಿದುಕೊಂಡಿದ್ದೇನೆ. ಮೇ 4 ಕ್ಕೆ ಗೊತ್ತಾಗುತ್ತದೆ. ಅವರ ಬಳಿ 200 ಎಕರೆ ಕೊಡಲು ಜಮೀನು ಇಲ್ಲ. ಭೂಸ್ವಾಧೀನ ಮಾಡಿ, ಅಭಿವೃದ್ಧಿ ಮಾಡಿ ಕೊಡಬೇಕು. ಅವರು ಟೊಪ್ಪಿಗೆ ಹಾಕಲು ನೋಡುತ್ತಾರೆ. ಟೊಪಿಗೆ ಹಾಕಿಸಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ಎಚ್. ವೈ. ಮೇಟಿಗೆ ಅವಮಾನ

2009 ರಲ್ಲಿ ತೋಟಗಾರಿಕೆ ವಿಶ್ವ ವಿದ್ಯಾಲಯ ಮಾಡಬೇಕಿತ್ತು. ನಾವು ನೀರಾವರಿ ಇಲಾಖೆ ಸಂತಸ್ಥರಿಗೆ ಕೊಡಬೇಕೆಂದು ಜಮೀನು ಇಟ್ಟಿದ್ದೇವು. ಅದನ್ನು ತೋಟಗಾರಿಕೆ ವಿಶ್ವ ವಿದ್ಯಾಲಯ ಮಾಡಲು ಕೊಟ್ಟಿದ್ದೇವೆ. ಮೆಡಿಕಲ್ ಕಾಲೇಜು ಎಚ್. ವೈ. ಮೇಟಿ ಕನಸಿತ್ತು ಅಂತ ಈಗ ಸಿಎಂ ಹೇಳುತ್ತಿದ್ದಾರೆ. ಹಿರಿಯ ಶಾಸಕರಾಗಿದ್ದ ಮೇಟಿಯವರಿಗೆ ಒಂದು ಸಚಿವ ಸ್ಥಾನ ನೀಡಿಲ್ಲ ಅವರಿಗೆ ಬಹಳ ಅಪಮಾನ ಆಗಿದೆ. ಅವರು ಹೇಳಿದ್ದ ಕೆಲಸ ಮಾಡಲಿಲ್ಲ, ಅವರನ್ನು ಗುರುತಿಸಲಿಲ್ಲ. ಈ ಚುನಾವನೆಯಲ್ಲಿ ಚರಂತಿ ಮಠ ಗೆಲ್ಲುವುದು ನಿಶ್ಚಿತ ಎಂದು ಸಿಎಂಗೆ ತಿರುಗೇಟು ಕೊಟ್ಟರು.

ಮೈಸೂರಿನವರು ದೂರವಾದಾಗ ಬಾದಾಮಿ ಹತ್ತಿರ

ಬಾದಾಮಿ ಕ್ಷೇತ್ರದಲ್ಲಿ ಒಂದು ಸಣ್ಣ ಕೆಲಸ ಮಾಡಲಿಲ್ಲ. ಕೆರೂರು ಏತ ನೀರಾವರಿ ಮಾಡಿದರೆ ಬಾದಾಮಿ ತಾಲುಕಿನ ರೈತರಿಗೆ ಅನುಕೂಲವಾಗುತ್ತದೆ. ಅದನ್ನು ನಾನು 700 ಕೋಟಿ ರೂ. ಯೋಜನೆ ಪ್ರಾರಂಭಿಸಿ ಸಿದ್ದರಾಮಯ್ಯ ಅವರನ್ನು ಕರೆಯಿಸಿ ಉದ್ಘಾಟಿಸಿದ್ದೇನೆ. ಪತ್ರಕರ್ತರು ಸಿದ್ದರಾಮಯ್ಯ ಅವರನ್ನು ಬಾದಾಮಿ ಯಾಕೆ ಬಿಟ್ಟರಿ ಎಂದು ಕೇಳಿದರೆ ಬಾದಾಮಿ ಬಹಳ ದೂರ ಆಗುತ್ತದೆ ಎಂದು ಹೇಳಿದ್ದಾರೆ. ಮೈಸೂರಿನವರು ದೂರ ಮಾಡಿದಾಗ ಬಾದಾಮಿಯವರು ಹತ್ತಿರ ಆಗಿದ್ದರು. ಈಗ ಬಾದಾಮಿಯವರು ದೂರ ಆಗಿದ್ದಾರೆ ಎಂದು ಸಿದ್ದರಾಮಯ್ಯ ನಡೆಯನ್ನು ಖಂಡಿಸಿದರು.

ವೀರಣ್ಣ ಚರಂತಿಮಠ ಅವರು ಕ್ರಿಯಾಶೀಲ ಯುವಕ, ಸಮಯ ಪ್ರಜ್ಞೆ ಇರುವ ವ್ಯಕ್ತಿ. ಕೆಲಸಗಾರರು ಯಾರೂ ಕತೆ ಹೇಳುವುದಿಲ್ಲ. ಬಾಗಲಕೋಟೆ ಸಮಗ್ರ ಅಭಿವೃದ್ಧಿ ಆಗಬೇಕೆಂದರೆ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸಬೇಕು ಎಂದು ಬೊಮ್ಮಾಯಿ ಕೋರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+