ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎ. ಎನ್‌. ಮೂರ್ತಿರಾವ್‌ ಎಂಬ ತುಂಬಿದ ಕೊಡ

By Super
|
Google Oneindia Kannada News

ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾಯರಿಗೆ ಈ ಹೊತ್ತಿಗೆ (ಜೂನ್‌16) ನೂರು ವರ್ಷ ತುಂಬಿತು. ಶತಮಾನಂ ಭವತಿ, ಶತಾಯು ಭವತಿ ಎಂಬ ಹರಕೆ ನಿಜವಾಯಿತು.

ಹಗಲುಗನಸುಗಳು ಪ್ರಬಂಧಸಂಕಲನ, ಆಷಾಢಭೂತಿ ನಾಟಕ, ಒಂದಷ್ಟು ಕವನ ಸಂಕಲನ ಹಾಗೂ ಇತ್ತೀಚೆಗೆ ಬರೆದ ದೇವರು ಪ್ರಬಂಧಮಾಲೆ- ಹೀಗೆ ಮೂರ್ತಿರಾಯರ ನೂರು ವರುಷಗಳು ಹುಸಿಹೋದ ಅಲೆಮಾರಿ ಬದುಕಲ್ಲ . ಸಾಹಿತ್ಯ ಕ್ಷೇತ್ರದಲ್ಲಿ ಬಾಳಿನಲ್ಲಿ ನೆಲೆ ಕಂಡುಕೊಂಡ ಹಿರಿಯ ಜೀವಿ ಅವರು.

ಕನ್ನಡಕ್ಕೆ ಲಲಿತ ಪ್ರಬಂಧದ ಸೊಗಡನ್ನು ಪರಿಚಯಿಸಿದ ಎ. ಎನ್‌. ಮೂರ್ತಿರಾಯರು ಈಗಲೂ ಆರೋಗ್ಯವಾಗಿದ್ದಾರೆ. ಪೇಪರ್‌ ಓದುತ್ತಾರೆ. ತಮಗೆ ಅನ್ನಿಸಿದ್ದನ್ನು ಬರೆದಿಡುತ್ತಾರೆ. ಮುಂಜಾನೆ ಎದ್ದು ಮೂರು ಕಿಲೋಮೀಟರ್‌ ವಾಕಿಂಗ್‌ ಹೋಗುತ್ತಾರೆ; ಒಂಟಿಯಾಗಿ.

ಒಂಟಿಯಾಗಿ ಯಾಕೆ ಹೋಗುತ್ತೀರಿ ಎಂದು ಗೆಳೆಯರೊಬ್ಬರು ಕೇಳಿದ್ದಕ್ಕೆ ಮೂರ್ತಿರಾಯರು ಉತ್ತರಿಸಿದ್ದು ಹೀಗೆ : ಜತೆಗೆ ಯಾರಾದರೂ ಎಷ್ಟು ದಿನ ಇರುತ್ತಾರೆ. ಜತೆಗೆ ಯಾರನ್ನಾದರೂ ಕರೆದುಕೊಂಡು ಹೋದೆ ಅಂತಿಟ್ಟುಕೊಳ್ಳಿ. ಮುಂದೆ ಜೀವ ಒಂಟಿಯಾಗಿ ಅಲೆಯೋದಕ್ಕೆ ಹಿಂದೇಟು ಹಾಕುತ್ತೆ. ಎಲ್ಲದಕ್ಕೂ ಇನ್ನೊಬ್ಬರ ಸಹಾಯ ಬೇಡುತ್ತೆ. ಅದು ಸಿಗುತ್ತೆ ಅಂತ ಏನು ಗ್ಯಾರಂಟಿ?

ವರ್ಷದ ಹಿಂದೆ ತಮ್ಮ ಪತ್ನಿ ತೀರಿಕೊಂಡಾಗ ದೇವರನ್ನು ನಂಬದ ಮೂರ್ತಿರಾಯರು ನಮ್ಮ ಮನೆದೇವತೆ ಮನೆ ಬಿಟ್ಟು ಹೊರಟಳು ಅಂದಿದ್ದರು. ಅದು ಅವರ ಪ್ರಾಮಾಣಿಕತೆಗೆ ಸಾಕ್ಷಿ . ಯಾವುದನ್ನೂ ಅವರು ಗಾಗಿ ಮಾಡಲಿಲ್ಲ , ನಿಂದ ಮಾಡಿದರು ಅನ್ನೋದೇ ಅವರು ಬದುಕಿದ ನೂರು ವರುಷಗಳೂ ಸಾರ್ಥಕ ಎನ್ನುವುದಕ್ಕೆ ಸಾಕ್ಷಿ .

ಮಿತಾಹಾರ, ಮಿತಭಾಷಿ, ಮಿತ ಜೀವನ ಅವರ ಬದುಕಿನ ಗುಟ್ಟು ಅನ್ನುತ್ತಾರೆ. ಯಾವುದನ್ನು ಅತಿರೇಕಕ್ಕೆ ಹೋಗಿ ಅನುಭವಿಸದೆ, ಮೇಲುಮೇಲಿನಿಂದಲೇ ತಡವದೆ, ಎಷ್ಟು ಬೇಕೋ ಅಷ್ಟು ಪಡಕೊಂಡವರು.

ಈ ಸಹನೆ ಮತ್ತು ತೃಪ್ತಿಯೇ ಮೂರ್ತಿರಾಯರು ಹಾಗೂ ಅವರಂಥ ಅನೇಕರನ್ನು ತುಂಬುಜೀವನ ನಡೆಸುವಂತೆ ಮಾಡಿತ್ತೇ? ಯಾರಿಗೆ ಗೊತ್ತು ?

ಮೂರ್ತಿರಾಯರ ಬಗ್ಗೆ:
ಡಾ. ಎ.ಎನ್‌. ಮೂರ್ತಿರಾವ್‌
(ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿ) ಮೂರ್ತಿರಾಯರು ಹುಟ್ಟಿದ್ದು 1900ರ ಜೂನ್‌ 16ರಂದು. ಮಂಡ್ಯ ಜಿಲ್ಲೆಯ ಅಕ್ಕಿ ಹೆಬ್ಬಾಳಿನಲ್ಲಿ. ಇವರ ತಂದೆ ಎಂ. ಸುಬ್ಬರಾವ್‌, ತಾಯಿ ವೆಂಕಟಲಕ್ಷ್ಮಮ್ಮ. ಇಂಗ್ಲಿಷ್‌ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಚಿತ್ರದುರ್ಗ ಕಾಲೇಜಿನ ಪ್ರಾಂಶುಪಾಲರಾಗಿ ತಮ್ಮ ಬದುಕಿನಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ನಡೆಸಿದ ಮೂರ್ತಿರಾಯರು, ಕೆಲ ವರ್ಷಗಳ ಕಾಲ ಕರ್ನಾಟಕ ಸಾಹಿತ್ಯ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಇವರಿಗೆ ಡಿಲಿಟ್‌ ಪದವಿ ನೀಡಿ ಗೌರವಿಸಿದೆ. ಕೈವಾರದಲ್ಲಿ ನಡೆದ 56ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಅವರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದ ಅವರು ಕನ್ನಡ ಸಾರಸ್ವತ ಲೋಕಕ್ಕೆ ಸಲ್ಲಿಸಿದ ಸೇವೆ ಅಪಾರ.

ಮೂರ್ತಿರಾಯರದು ಬಹುಮುಖ ಪ್ರತಿಭೆ. ನಾಟಕ, ಪ್ರಬಂಧ, ಕತೆ, ಕಾದಂಬರಿ, ಪ್ರವಾಸ ಕಥನ, ವಿಡಂಬನೆ ಮೊದಲಾಗಿ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯ. ಈ ಎಲ್ಲ ಕ್ಷೇತ್ರಗಳು ಮೂರ್ತಿರಾಯರ ಕೊಡುಗೆಯಿಂದ ಮತ್ತಷ್ಟು ಸಂಪನ್ನವಾಗಿವೆ. ಪ್ರಬಂಧ ಸಾಹಿತ್ಯ ಕ್ಷೇತ್ರದಲ್ಲಂತೂ ಇವರು ಅಗ್ರಗಣ್ಯರು. ಇವರ ಕಾವ್ಯಗಳಲ್ಲಿ ಹೊಳಪು, ಕತೆಗಳಲ್ಲಿ ಕುತೂಹಲ, ನಾಟಕಗಳಲ್ಲಿ ಪಾತ್ರಸೃಷ್ಟಿ, ಮಾತಿನಲ್ಲಿ ಹಾಸ್ಯದ ಮೃದು ಲೇಪನ, ನಿರೂಪಣೆಯಲ್ಲಿ ಚಮತ್ಕಾರ ಎಲ್ಲವೂ ಮೇಳೈಸುತ್ತವೆ.

ಹೂವುಗಳು ಇವರ ಪ್ರಥಮ ಪ್ರಬಂಧ. ಹಗಲುಗನಸುಗಳು, ಅಲೆಯುವ ಮನ, ಮಿನುಗು ಮಿಂಚು ಇವರ ಕೆಲವು ಪ್ರಮುಖ ಪ್ರಬಂಧ ಸಂಕಲನಗಳು, ಚಿತ್ರಗಳು - ಪತ್ರಗಳು ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕಾರ ತಂದಿತ್ತ ಪ್ರಸಿದ್ಧ ಪ್ರಬಂಧ ಸಂಕಲನ. ಆಷಾಢಭೂತಿ, ಚಂಡಮಾರುತ ಅನುವಾದಿತ ಕೃತಿಗಳು. ಡಾ. ಶಿವರಾಮ ಕಾರಂತರ ಮರಳಿ ಮಣ್ಣಿಗೆ ಕಾದಂಬರಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ.

ಅಪರ ವಯಸ್ಕನ ಅಮೆರಿಕಾಯಾತ್ರೆ ಇವರ ಪ್ರವಾಸ ಕಥನ. ಮೂರ್ತಿರಾಯರು ಕೇವಲ ಗಂಭೀರ ಸಾಹಿತ್ಯವಷ್ಟೇ ಅಲ್ಲದೆ ಹವಳದ್ವೀಪ ಎಂಬ ಶಿಶುಸಾಹಿತ್ಯವನ್ನೂ ಕನ್ನಡಕ್ಕೆ ನೀಡಿದ್ದಾರೆ. ನೂರಾರು ಪ್ರಬಂಧ, ಕಾದಂಬರಿ, ಕತೆಗಳನ್ನು ಬರೆದಿರುವ ಮೂರ್ತಿರಾಯರು ನೂರ್ಕಾಲ ಬದುಕಿದ್ದಾರೆ. ಅವರಿಗೆ 'ದೇವರು" ಹರಸಲಿ.

English summary
A.N. Murthy rao is centurian today the 16th of june 2000
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X