Get Updates
Get notified of breaking news, exclusive insights, and must-see stories!

ಪತ್ನಿ ತವರಿಗೆ ಹೋದಾಗ ಪ್ರೇಯಸಿಯನ್ನ ಕೊಂದು ಮೃತದೇಹ ಫ್ರಿಜ್‌ನಲ್ಲಿಟ್ಟ ಕಿರಾತಕ: ವಿಶಾಖಪಟ್ಟಣದಲ್ಲಿ ಬೆಚ್ಚಿಬೀಳಿಸುವ ಘಟನೆ

ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಅತ್ಯಂತ ಕ್ರೂರ ಮತ್ತು ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ನೌಕಾಪಡೆಯ ತಾಂತ್ರಿಕ ಸಿಬ್ಬಂದಿಯೊಬ್ಬ ತನ್ನ ಪ್ರೇಯಸಿಯನ್ನು ಹತ್ಯೆಗೈದು, ಶವವನ್ನು ತುಂಡರಿಸಿ ಫ್ರಿಜ್‌ನಲ್ಲಿ ಅಡಗಿಸಿಟ್ಟಿರುವ ಘಟನೆ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ನಗರದ ಗಾಜುವಾಕ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್‌ವಿ ನಗರದಲ್ಲಿ ಈ ಘಟನೆ ನಡೆದಿದೆ. ಆರೋಪಿ ಮತ್ತು ಸಂತ್ರಸ್ತೆ ಕಳೆದ ಕೆಲವು ಸಮಯದಿಂದ ಲಿವ್-ಇನ್ ಸಂಬಂಧದಲ್ಲಿದ್ದರು ಎಂದು ತಿಳಿದುಬಂದಿದೆ.

ಇಬ್ಬರ ನಡುವೆ ಉಂಟಾದ ಕ್ಷುಲ್ಲಕ ಜಗಳ ವಿಕೋಪಕ್ಕೆ ತಿರುಗಿದ್ದು, ಆಕ್ರೋಶಗೊಂಡ ಆರೋಪಿಯು ಪ್ರೇಯಸಿಯ ಗಂಟಲು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯ ನಂತರ ಸಿಕ್ಕಿಬೀಳುವ ಭಯದಿಂದ ಆರೋಪಿಯು ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ದೇಹದ ಭಾಗಗಳಿಂದ ದುರ್ವಾಸನೆ ಹರಡದಂತೆ ತಡೆಯಲು ಅವುಗಳನ್ನು ದೊಡ್ಡ ಫ್ರಿಜ್‌ನಲ್ಲಿ ಅಡಗಿಸಿಟ್ಟಿದ್ದಾನೆ. ಅಷ್ಟೇ ಅಲ್ಲದೆ, ಸಂತ್ರಸ್ತೆಯ ಗುರುತು ಪತ್ತೆಯಾಗಬಾರದು ಎಂಬ ಕಾರಣಕ್ಕೆ ಆಕೆಯ ತಲೆಯನ್ನು ಕತ್ತರಿಸಿ ಸುಟ್ಟು ಹಾಕಿದ್ದಾನೆ ಎಂಬ ಆಘಾತಕಾರಿ ವಿಷಯ ತನಿಖೆಯಿಂದ ತಿಳಿದುಬಂದಿದೆ.

Visakhapatnam Murder Case

ಘೋರ ಕೃತ್ಯ ಎಸಗಿದ ನಂತರವೂ ಆರೋಪಿಯು ಏನೂ ತಿಳಿಯದವನಂತೆ ಮನೆಯಲ್ಲೇ ವಾಸಿಸುತ್ತಿದ್ದನು. ಆದರೆ ತಾಂತ್ರಿಕ ತನಿಖೆ ಮತ್ತು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆಯೇ, ಆರೋಪಿ ನೌಕಾ ತಾಂತ್ರಿಕನು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಈ ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ.

ಡೇಟಿಂಗ್ ಆ್ಯಪ್ ಪರಿಚಯ

ಆರೋಪಿ 30 ವರ್ಷದ ಚಿಂದದ ರವೀಂದ್ರ, ವಿಶಾಖಪಟ್ಟಣದ 'ಐಎನ್ಎಸ್ ದೇಗಾ' (INS Dega) ನೌಕಾ ನೆಲೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದನು. ಈತ 2021ರಲ್ಲಿ ಡೇಟಿಂಗ್ ಆ್ಯಪ್ ಮೂಲಕ 31 ವರ್ಷದ ಪೋಲಿಪಲ್ಲಿ ಮೌನಿಕಾಳ ಪರಿಚಯ ಮಾಡಿಕೊಂಡಿದ್ದನು. ಕಳೆದ ಮೂರು ವರ್ಷಗಳಿಂದ ಇವರಿಬ್ಬರು ನಗರದ ವಿವಿಧ ಪಾರ್ಕ್‌ಗಳು ಮತ್ತು ಚಿತ್ರಮಂದಿರಗಳಲ್ಲಿ ಭೇಟಿಯಾಗುತ್ತಾ ಪ್ರೇಮ ಸಂಬಂಧ ಬೆಳೆಸಿದ್ದರು.

Live-in Couples: 2027ರ ಜನಗಣತಿ: ಲಿವ್-ಇನ್ ಸಂಬಂಧದಲ್ಲಿರುವವರಿಗೂ ವಿವಾಹಿತ ದಂಪತಿ ಸ್ಥಾನಮಾನ
Live-in Couples: 2027ರ ಜನಗಣತಿ: ಲಿವ್-ಇನ್ ಸಂಬಂಧದಲ್ಲಿರುವವರಿಗೂ ವಿವಾಹಿತ ದಂಪತಿ ಸ್ಥಾನಮಾನ

ರವೀಂದ್ರನಿಗೆ ಈಗಾಗಲೇ ಮದುವೆಯಾಗಿದ್ದು, ಪತ್ನಿ ವಿಜಯನಗರಂನಲ್ಲಿರುವ ತನ್ನ ತವರು ಮನೆಗೆ ಹೋದ ಸಮಯವನ್ನೇ ಹೊಂಚು ಹಾಕಿದ್ದ ಈತ, ಭಾನುವಾರ ಮಧ್ಯಾಹ್ನ ಮೌನಿಕಾಳನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಸಂಜೆಯ ವೇಳೆಗೆ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಜಗಳ ಆರಂಭವಾಗಿದೆ. ಈ ವೇಳೆ ಆಕ್ರೋಶಗೊಂಡ ರವೀಂದ್ರ, ಮೌನಿಕಾಳ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಆನ್‌ಲೈನ್‌ನಲ್ಲಿ ಚಾಕು ಖರೀದಿ

ಕೊಲೆಯ ನಂತರ ಅತ್ಯಂತ ವ್ಯವಸ್ಥಿತವಾಗಿ ಸಾಕ್ಷ್ಯ ನಾಶಪಡಿಸಲು ಮುಂದಾದ ರವೀಂದ್ರ, ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್ ಮೂಲಕ ಚಾಕುವನ್ನು ಆರ್ಡರ್ ಮಾಡಿ ತರಿಸಿಕೊಂಡಿದ್ದ. ಆ ಚಾಕುವಿನಿಂದ ಮೌನಿಕಾಳ ಮೃತದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ್ದ. ಕಾಲುಗಳು ಮತ್ತು ಸೊಂಟದ ಭಾಗವನ್ನು ಟ್ರಾಲಿ ಬ್ಯಾಗ್‌ನಲ್ಲಿ ಪ್ಯಾಕ್ ಮಾಡಿದ್ದ. ಮೃತದೇಹದ ಎದೆಯ ಭಾಗವನ್ನು ಮನೆಯಲ್ಲಿದ್ದ ಫ್ರಿಜ್‌ನಲ್ಲಿ ಅಡಗಿಸಿಟ್ಟಿದ್ದ. ಗುರುತು ಸಿಗದಂತೆ ಮಾಡಲು ತಲೆ ಮತ್ತು ಕೈಗಳನ್ನು ಬೇರೆಡೆಗೆ ಸಾಗಿಸಿ ಅಲ್ಲಿ ಸುಟ್ಟು ಹಾಕಿದ್ದಾನೆ.

Visakhapatnam Murder Case

ಪೊಲೀಸ್ ವಿಚಾರಣೆಯ ವೇಳೆ ಆರೋಪಿ ರವೀಂದ್ರ ಕೆಲವು ಪ್ರಮುಖ ವಿಷಯಗಳನ್ನು ಬಾಯಿಬಿಟ್ಟಿದ್ದಾನೆ. ಮೌನಿಕಾ ತನ್ನಿಂದ ಸುಮಾರು 3.5 ಲಕ್ಷ ರೂಪಾಯಿ ಹಣ ಪಡೆದಿದ್ದಳು ಮತ್ತು ಈ ಹಣದ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಆತ ಹೇಳಿಕೊಂಡಿದ್ದಾನೆ. ರವೀಂದ್ರನಿಗೆ 2024ರಲ್ಲಿ ಮದುವೆಯಾದ ನಂತರ, ಮೌನಿಕಾ ಅವರ ಸಂಬಂಧದ ವಿಷಯವನ್ನು ಆತನ ಪತ್ನಿಗೆ ತಿಳಿಸುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದ್ದಳು. ಈ ನಿರಂತರ ಕಿರುಕುಳ ಮತ್ತು ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತಿದ್ದ ರವೀಂದ್ರ, ಮೌನಿಕಾಳನ್ನು ಹತ್ಯೆ ಮಾಡಲು ಮೊದಲೇ ಸಂಚು ರೂಪಿಸಿದ್ದನು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ತಲೆಗಾಗಿ ಹುಡುಕಾಟ

ರವೀಂದ್ರ ತನ್ನ ತಪ್ಪೊಪ್ಪಿಕೊಂಡ ನಂತರ ಪೊಲೀಸರು ಆತನ ಮನೆಗೆ ಧಾವಿಸಿದಾಗ, ಫ್ರಿಜ್ ಮತ್ತು ಮನೆಯೊಳಗೆ ದೇಹದ ವಿವಿಧ ಭಾಗಗಳು ಪತ್ತೆಯಾಗಿವೆ. ಆದರೆ ಮೌನಿಕಾಳ ತಲೆ ಮಾತ್ರ ಪತ್ತೆಯಾಗಿಲ್ಲ. ದೇಹದ ಉಳಿದ ಭಾಗಗಳನ್ನು ಹುಡುಕಲು ಮತ್ತು ವಿಲೇವಾರಿ ಮಾಡಿದ ಸ್ಥಳಗಳನ್ನು ಪತ್ತೆಹಚ್ಚಲು ಪೊಲೀಸರು ಈಗ ವಿಶೇಷ ತಂಡವನ್ನು ರಚಿಸಿದ್ದಾರೆ. ಕೇವಲ ಪ್ರೀತಿ ಮತ್ತು ಡೇಟಿಂಗ್‌ನಿಂದ ಆರಂಭವಾದ ಈ ಸಂಬಂಧ, ಇಂದು ಅತ್ಯಂತ ಭಯಾನಕ ಅಂತ್ಯ ಕಂಡಿದೆ. ನೌಕಾಪಡೆಯಂತಹ ಜವಾಬ್ದಾರಿಯುತ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಯೊಬ್ಬ ಇಷ್ಟು ಕ್ರೂರವಾಗಿ ವರ್ತಿಸಿರುವುದು ಸಾರ್ವಜನಿಕರಲ್ಲಿ ನಿಜಕ್ಕೂ ಆತಂಕ ಮೂಡಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+