ಭಾರತ Vs ಐರ್ಲೆಂಡ್: ಟೀಮ್ ಇಂಡಿಯಾ ಬ್ಯಾಟಿಂಗ್ ಆರಂಭಕ್ಕೂ ಮುನ್ನ ವೈಭವ್ ಕಣಕ್ಕಿಳಿಯುವ ಕುರಿತು ಕೋಚ್ ಮಹತ್ವದ ಹೇಳಿಕೆ
Vaibhav Sooryavanshi: ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿ (ಜೂನ್ 26) ಇಂದಿನಿಂದ ಆರಂಭವಾಗಲಿದೆ. ಇದಕ್ಕೂ ಮುನ್ನ 15 ವರ್ಷದ ಯುವ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಅಂತಾರಾಷ್ಟ್ರೀಯ ಪಾದಾರ್ಪಣೆಯ ಬಗ್ಗೆ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ವೈಭವ್ ಆಡುವ 11ರ ಬಳಗದಲ್ಲಿ ಇರಲಿದ್ದಾರೆಯೇ ಎನ್ನುವ ಪ್ರಶ್ನೆಗೆ ಭಾರತ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಬೆಲ್ಫಾಸ್ಟ್ನಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಮಾತನಾಡಿದ ಅವರು, ವೈಭವ್ ಸೂರ್ಯವಂಶಿ ಅವರ ಪಾದಾರ್ಪಣೆಯ ಕುರಿತು ಮುಕ್ತವಾಗಿ ಮಾತನಾಡಿ ಗಮನ ಸೆಳೆದಿದ್ದಾರೆ. ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಸಿತಾಂಶು ಕೋಟಕ್ ಹೇಳಿದ್ದೇನು?
'ವೈಭವ್ ಸೂರ್ಯವಂಶಿ ಅವರು ಅದ್ಭುತ ಪ್ರತಿಭೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅವರು ಭವಿಷ್ಯದಲ್ಲಿ ತಮ್ಮ ಪಾಲಿನ ಎಲ್ಲಾ ಅವಕಾಶಗಳನ್ನು ಮತ್ತು ಮನ್ನಣೆಯನ್ನು ಖಂಡಿತವಾಗಿಯೂ ಪಡೆಯಲಿದ್ದಾರೆ. ಆದರೆ ಕೇವಲ ಒಬ್ಬ ಆಟಗಾರನಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕಾಗಿ ಈಗಾಗಲೇ ತಂಡದಲ್ಲಿದ್ದುಕೊಂಡು ರನ್ ಗಳಿಸುತ್ತಿರುವ ಮತ್ತೊಬ್ಬ ಆಟಗಾರನನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈಬಿಡುವುದು ನ್ಯಾಯವಲ್ಲ. ಒಬ್ಬರಿಗೆ ಅವಕಾಶ ನೀಡುವುದು ಮತ್ತು ಮತ್ತೊಬ್ಬ ಆಟಗಾರನಿಗೆ ಅನ್ಯಾಯ ಮಾಡುವುದು ಸರಿಯಲ್ಲ,' ಎಂದು ಹೇಳಿದ್ದಾರೆ.
ಅಂತಿಮ ಹನ್ನೊಂದರ ಬಳಗವನ್ನು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರು ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸಲಿದ್ದಾರೆ ಅಂತಲೂ ಹೇಳಿದ್ದಾರೆ. 15 ವರ್ಷದ ಬಾಲಕನ ಮೇಲೆ ಮಾಧ್ಯಮಗಳು ಮತ್ತು ಅಭಿಮಾನಿಗಳು ಭಾರಿ ಒತ್ತಡ ಹೇರುತ್ತಿರುವುದರ ಬಗ್ಗೆ ಅವರು ಎಚ್ಚರಿಕೆ ನೀಡಿದ್ದಾರೆ. 'ಯುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಾಗ ಅವರಿಗೆ ಮುಕ್ತವಾಗಿ ಇರಲು ಬಿಡಬೇಕು ಎಂದು ಹೇಳಿದರು.
ವೈಭವ್ ಸೂರ್ಯವಂಶಿ ಬಗ್ಗೆ ಹೇಳಿದ್ದೇನು?
'ಅವರ ಬ್ಯಾಟಿಂಗ್ ಶೈಲಿಯಲ್ಲಿ ತಕ್ಷಣವೇ ಯಾವುದೇ ಬದಲಾವಣೆ ತರಲು ನಾವು ಬಯಸುವುದಿಲ್ಲ. ಅವರು ತಮ್ಮ ಹಿರಿಯರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದನ್ನು ಮತ್ತು ಈ ಅನುಭವವನ್ನು ಆನಂದಿಸುವುದನ್ನು ಕಲಿಯಬೇಕು. ಅವರಲ್ಲಿ ಉತ್ತಮ ಪ್ರಬುದ್ಧತೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿದೆ,' ಎಂದು ಕೋಚ್ ಬೆಂಬಲ ವ್ಯಕ್ತಪಡಿಸಿದರು.
ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ 776 ರನ್ ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದ ವೈಭವ್ ಸೂರ್ಯವಂಶಿ ಅವರು ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದರು. ಇದಾದ ಬಳಿಕ ಅವರು ಶ್ರೀಲಾಂಕಾ ವಿರುದ್ಧದ ಏಕದಿನ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಭಾರತದ ಪರ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಭಾರತ ಅಂತಾರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಐರ್ಲೆಂಡ್ ನಾಯಕನಿಂದಲೂ ವೈಭವ್ ಬಗ್ಗೆ ಪ್ರಶಂಸೆ
ಮತ್ತೊಂದೆಡೆ ಐರ್ಲೆಂಡ್ ತಂಡದ ನೂತನ ಟಿ20 ನಾಯಕ ಲೋರ್ಕನ್ ಟಕರ್ ಕೂಡ ವೈಭವ್ ಸೂರ್ಯವಂಶಿ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಕೇವಲ 15ನೇ ವಯಸ್ಸಿನಲ್ಲಿ ಬಲಿಷ್ಠ ಭಾರತೀಯ ಸೀನಿಯರ್ ತಂಡದಲ್ಲಿ ಸ್ಥಾನ ಪಡೆದಿರುವುದು ಸಾಮಾನ್ಯ ವಿಷಯವಲ್ಲ ಎಂದು ಅವರು ಹೇಳಿದ್ದಾರೆ. ಬಿಸಿಸಿಐ ಇತ್ತೀಚೆಗಷ್ಟೇ ವೈಭವ್ಗೆ ಅವರ ಹೆಸರಿರುವ ನೀಲಿ ಜರ್ಸಿ ಹಸ್ತಾಂತರಿಸುವ ವಿಡಿಯೋ ಹಂಚಿಕೊಂಡಿದ್ದರಿಂದ ಅವರು ಮೊದಲ ಪಂದ್ಯದಲ್ಲೇ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿತ್ತು. ಆದರೆ ಕೋಚ್ ಕೋಟಕ್ ಅವರು, ತಂಡದ ಸಮತೋಲನವನ್ನು ಕಾಯ್ದುಕೊಳ್ಳಲು ವೈಭವ್ ಅವರ ಪಾದಾರ್ಪಣೆಯನ್ನು ಇನ್ನೂ ಕೆಲವು ಪಂದ್ಯಗಳ ಕಾಲ ಮುಂದೂಡುವ ಮುನ್ಸೂಚನೆಯನ್ನು ನೀಡಿದೆ.












Click it and Unblock the Notifications