ವೈಭವ್ ಸೂರ್ಯವಂಶಿ ಇಂದೇ ಟೀಮ್ ಇಂಡಿಯಾಗೆ ಪಾದಾರ್ಪಣೆ? ಬಿಸಿಸಿಐ ವಿಶೇಷ ಮುನ್ಸೂಚನೆ
Vaibhav Sooryavanshi: ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿಯು ಇಂದಿನಿಂದ (ಜೂನ್ 26) ಆರಂಭವಾಗುತ್ತಿದೆ. ಇದೀಗ ಇಡೀ ಕ್ರಿಕೆಟ್ ಜಗತ್ತಿನ ಕಣ್ಣು 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲಿದೆ. ಹಾಗಾದ್ರೆ ಇಂದಿನ ಪಂದ್ಯದಲ್ಲಿ ಈ ಬಾಲಕ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರಾ? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡ ಐರ್ಲೆಂಡ್ ತಲುಪಿದ್ದು, ಮೊದಲ ಪಂದ್ಯದಲ್ಲೇ ವೈಭವ್ ಸೂರ್ಯವಂಶಿ ಸೀನಿಯರ್ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ. ಈ ನಡುವೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಂಚಿಕೊಂಡಿರುವ ವಿಶೇಷ ವಿಡಿಯೋವೊಂದು ಇದಕ್ಕೆ ಪ್ರಬಲ ಸಾಕ್ಷಿಯಾಗಿದೆ.

ಭಾವುಕರಾಗಿ ಕಣ್ಣೀರಿಟ್ಟಿದ್ದ ವೈಭವ್
ಇತ್ತೀಗಷ್ಟೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿತ್ತು. ಇದರಲ್ಲಿ ಐರ್ಲೆಂಡ್ನಲ್ಲಿರುವ ಟೀಮ್ ಇಂಡಿಯಾ ತಂಗಿರುವ ಹೋಟೆಲ್ನಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಅವರ ಹೆಸರಿರುವ ಮೊದಲ ಅಧಿಕೃತ ಟೀಮ್ ಇಂಡಿಯಾ ಜರ್ಸಿಯನ್ನು ಹಸ್ತಾಂತರಿಸಲಾಯಿತು. ಇದನ್ನ ಗಮನಿಸಿದರೆ ವೈಭವ್ ಇಂದಿನ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಪರ ಕಣಕ್ಕಿಳಿಯುವುದು ಪಕ್ಕಾ ಎನ್ನಲಾಗುತ್ತಿದೆ.
ಜರ್ಸಿ ಸಂಖ್ಯೆ '03' ಹೊಂದಿರುವ ಈ ನೀಲಿ ಉಡುಪನ್ನು ಕೈಯಲ್ಲಿ ಹಿಡಿದು ವೈಭವ್ ಭಾವುಕರಾಗಿ ಕಣ್ಣೀರಿಟ್ಟಿದ್ದರು. ಇದೇ ವೇಳೆ ಮಾತನಾಡಿದ ಅವರು' 'ಈ ಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನಾನು ಮೊದಲ ದಿನದಿಂದ ಬ್ಯಾಟ್ ಹಿಡಿದು ಮೈದಾನಕ್ಕೆ ಅಭ್ಯಾಸಕ್ಕೆ ಹೋಗಿದ್ದೇ ಈ ಕನಸಿಗಾಗಿ, ಆ ಕನಸು ಇದೀಗ ನನಸಾಗಿದೆ. ನನ್ನ ಪ್ರಯಾಣದ ಅತ್ಯಂತ ದೊಡ್ಡ ಹೆಜ್ಜೆಯನ್ನು ನಾನು ಈಗ ಪೂರೈಸಿದ್ದೇನೆ,' ಎಂದು ವಿಡಿಯೋದಲ್ಲಿ ಸಂತಸ ಹಂಚಿಕೊಂಡಿದ್ದರು.
ಸಚಿನ್ ದಾಖಲೆ ಮುರಿಯುವ ಹೊಸ್ತಿಲಲ್ಲಿ ವೈಭವ್
ವೈಭವ್ ಸೂರ್ಯವಂಶಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದರೆ ಅವರು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ ಆಟಗಾರರ ಸಾಲಿಗೆ ಸೇರಲಿದ್ದಾರೆ. ಕಳೆದ 36 ವರ್ಷಗಳಲ್ಲಿ ಭಾರತದ ಪರ ಆಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. 1989ರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ 16ನೇ ವಯಸ್ಸಿನಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯ ಆಡಿದ್ದರು. ಈಗ ವೈಭವ್ ಕೇವಲ 15ನೇ ವಯಸ್ಸಿನಲ್ಲೇ ಈ ಮೈಲಿಗಲ್ಲು ತಲುಪಲು ಸಜ್ಜಾಗಿದ್ದಾರೆ.
ವೈಭವ್ ಸೂರ್ಯವಂಶಿ ಅಬ್ಬರದ ಆಟ
ಐಪಿಎಲ್ 2026 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ ವೈಭವ್ ಅವರು 237.3 ರ ಸ್ಟ್ರೈಕ್ ರೇಟ್ನಲ್ಲಿ ಬರೋಬ್ಬರಿ 776 ರನ್ ಗಳಿಸಿ 'ಆರೆಂಜ್ ಕ್ಯಾಪ್' ಗೆದ್ದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು. ಇನ್ನೂ ಇತ್ತೀಚೆಗೆ ಶ್ರೀಲಂಕಾ ಎ ವಿರುದ್ಧ ನಡೆದ ತ್ರಿಕೋನ ಸರಣಿಯ ಫೈನಲ್ನಲ್ಲಿ ಭಾರತ ಎ ಪರ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಲಿಸ್ಟ್-ಎ ಕ್ರಿಕೆಟ್ನಲ್ಲಿ ಜಾಗತಿಕ ದಾಖಲೆ ಬರೆದಿದ್ದರು. ಕೇವಲ 29 ಎಸೆತಗಳಲ್ಲಿ 94 ರನ್ ಚಚ್ಚಿ ಅವರು ತಂಡಕ್ಕೆ ಪ್ರಶಸ್ತಿ ತಂದುಕೊಟ್ಟರು.
ಪಂದ್ಯಕ್ಕೆ ಮಳೆ ಭೀತಿ
ಇನ್ನು ಶುಕ್ರವಾರ (ಜೂನ್ 26) ಬೆಲ್ಫಾಸ್ಟ್ನ ಸ್ಟೋರ್ಮಾಂಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಹವಾಮಾನ ವರದಿಯ ಪ್ರಕಾರ ಪಂದ್ಯದ ದಿನದಂದು ಶೇಕಡಾ 88ರಷ್ಟು ಮಳೆಯಾಗುವ ಮುನ್ಸೂಚನೆ ಇದೆ. ಆದ್ದರಿಂದ ಯುವ ಆಟಗಾರನ ಬಹುನಿರೀಕ್ಷಿತ ಪದಾರ್ಪಣೆಯ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಆತಂಕ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದೆ. ಒಂದು ವೇಳೆ ಮೊದಲ ಪಂದ್ಯ ರದ್ದಾದರೂ, ಜೂನ್ 28ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅವರ ಆಟ ನೋಡಲು ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ.












Click it and Unblock the Notifications