ಡಿವೋರ್ಸ್ ಆದ್ರೂ ಮುರಿಯದ ಬಂಧ: ಖ್ಯಾತ ಗಾಯಕಿಯ 2ನೇ ಮದುವೆಗೆ ಬಂದು ಕನ್ಯಾದಾನ ಮಾಡಿದ ಮೊದಲ ಗಂಡ
ಸಿನಿಮಾ ಕಥೆಗಳನ್ನೂ ಮೀರಿಸುವಂತಹ ಅಪರೂಪದ ಮತ್ತು ಅಷ್ಟೇ ಅಚ್ಚರಿಯ ಘಟನೆಯೊಂದು ಖ್ಯಾತ ಗಾಯಕಿಯೊಬ್ಬರ ಮದುವೆಯಲ್ಲಿ ನಡೆದಿದೆ. ಸಾಮಾನ್ಯವಾಗಿ ಡಿವೋರ್ಸ್ ಬಳಿಕ ದಂಪತಿ ಮುಖ ನೋಡುವುದನ್ನೂ ಬಿಡುತ್ತಾರೆ. ಆದರೆ, ಇಲ್ಲೊಬ್ಬರು ತನ್ನ ಮಾಜಿ ಪತ್ನಿಯ ಎರಡನೇ ಮದುವೆಗೆ ಖುದ್ದಾಗಿ ಹಾಜರಾಗಿದ್ದಲ್ಲದೆ, ಹೊಸ ಜೋಡಿಯ ಜೊತೆ ನಿಂತು ಫೋಟೋ ತೆಗೆಸಿಕೊಂಡು ಶುಭ ಹಾರೈಸಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕೇರಳ ಮೂಲದ ಖ್ಯಾತ ಗಾಯಕಿ ಗೌರಿ ಲಕ್ಷ್ಮಿ (Gowry Lekshmi) ಅವರು ಇತ್ತೀಚೆಗಷ್ಟೇ ದೃಶ್ಯ ಕಲಾವಿದ ಕಾಲೇಶ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೋವಾ ಹಾಗೂ ಕೇರಳದ ಶೈಲಿಯಲ್ಲಿ ನಡೆದ ಈ ಮದುವೆಯ ಸುಂದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಚಿತ್ರರಂಗದ ಹಲವು ಗಣ್ಯರು ಹಾಗೂ ಅಭಿಮಾನಿಗಳು ಹೊಸ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಆದರೆ, ಈ ಇಡೀ ಮದುವೆಯ ಸಮಾರಂಭದಲ್ಲಿ ಎಲ್ಲರ ಕಣ್ಣು ನೆಟ್ಟಿದ್ದು ಮಾತ್ರ ಒಬ್ಬ ವಿಶೇಷ ಅತಿಥಿಯ ಮೇಲೆ. ಅವರೇ ಗೌರಿ ಲಕ್ಷ್ಮಿ ಅವರ ಮೊದಲ ಪತಿ ಗಣೇಶ್ ವೆಂಕಟರಮಣಿ.

ಎಲ್ಲ ಕುಟುಂಬಕ್ಕೂ ರಕ್ತದ ಸಂಬಂಧ ಇರಬೇಕಾಗಿಲ್ಲ
ಸಾಮಾನ್ಯವಾಗಿ ವಿಚ್ಛೇದನ ಪಡೆದ ದಂಪತಿಗಳು ಪರಸ್ಪರ ದೂರ ಉಳಿಯಲು ಬಯಸುತ್ತಾರೆ. ಆದರೆ, ಗೌರಿ ಲಕ್ಷ್ಮಿ ಅವರ ಮೊದಲ ಪತಿ ಗಣೇಶ್ ವೆಂಕಟರಮಣಿ ಅವರು ಈ ಮದುವೆಗೆ ಕೇವಲ ಅತಿಥಿಯಾಗಿ ಬರಲಿಲ್ಲ, ಬದಲಿಗೆ ಗೌರಿಯ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರೊಂದಿಗೆ ನಿಂತು ಮದುವೆಯ ಕೆಲಸ ಕಾರ್ಯಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು.
ಅಷ್ಟೇ ಅಲ್ಲದೆ, ನವಜೋಡಿಯ ಜೊತೆಗಿನ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿರುವ ಗಣೇಶ್, "ಎಲ್ಲ ಕುಟುಂಬಗಳೂ ನಿಮ್ಮ ರಕ್ತದ ಸಂಬಂಧವನ್ನೇ ಹಂಚಿಕೊಳ್ಳಬೇಕಾಗಿಲ್ಲ" ಎಂಬ ಸಾಲುಗಳನ್ನು ಬರೆದು ಶುಭ ಕೋರಿದ್ದಾರೆ. ಇವರ ಈ ದೊಡ್ಡ ಗುಣಕ್ಕೆ ಸದ್ಯ ನೆಟ್ಟಿಗರು ಫಿದಾ ಆಗಿದ್ದು, ಹಳೆಯ ಕಹಿ ನೆನಪುಗಳನ್ನು ಮರೆತು ಸ್ನೇಹಕ್ಕೆ ಗೌರವ ಕೊಟ್ಟ ಇಬ್ಬರನ್ನೂ ಶ್ಲಾಘಿಸುತ್ತಿದ್ದಾರೆ.
ಅಭಿಮಾನಿಯಾಗಿದ್ದವನು ಪತಿಯಾಗಿದ್ದ ಕಥೆ
ಗೌರಿ ಲಕ್ಷ್ಮಿ ಹಾಗೂ ತಮಿಳುನಾಡು ಮೂಲದ ಡ್ರಮ್ಮರ್ ಗಣೇಶ್ ವೆಂಕಟರಮಣಿ ಅವರ ಪರಿಚಯವೇ ಒಂದು ರೋಚಕ ಕಥೆ. ಆರಂಭದಲ್ಲಿ ಗೌರಿ ಲಕ್ಷ್ಮಿ ಅವರ ದೊಡ್ಡ ಅಭಿಮಾನಿಯಾಗಿದ್ದ ಗಣೇಶ್, ಒಮ್ಮೆ ಗೌರಿ ಅವರ ಶೋ ಮುಗಿದ ಮೇಲೆ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಹೋಗಿದ್ದರು. ಆ ಬಳಿಕ ಚೆನ್ನೈನಲ್ಲಿ ನಡೆದ ಮತ್ತೊಂದು ಮ್ಯೂಸಿಕ್ ಶೋನಲ್ಲಿ ಗಣೇಶ್ ಡ್ರಮ್ಸ್ ನುಡಿಸುವುದನ್ನು ನೋಡಿದ ಗೌರಿ, ಅವರ ಪ್ರತಿಭೆಗೆ ಮನಸೋತು ತಮ್ಮದೇ ಮ್ಯೂಸಿಕ್ ಬ್ಯಾಂಡ್ಗೆ ಸೇರಿಸಿಕೊಂಡಿದ್ದರು. ಹೀಗೆ ಒಟ್ಟಿಗೆ ಸಂಗೀತದ ಜರ್ನಿ ಆರಂಭಿಸಿದ ಇಬ್ಬರ ನಡುವೆ ಸ್ನೇಹ ಬೆಳೆದು, ಪ್ರೇಮಕ್ಕೆ ತಿರುಗಿ 2002ರಲ್ಲಿ ಮದುವೆಯಾಗಿದ್ದರು. ಆದರೆ, ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಈ ದಂಪತಿ ನಂತರದ ದಿನಗಳಲ್ಲಿ ಪರಸ್ಪರ ಒಪ್ಪಿಗೆಯಿಂದಲೇ ಡಿವೋರ್ಸ್ ಪಡೆದಿದ್ದರು.
ಮುರಿಯದ ಸ್ನೇಹದ ಬಾಂಧವ್ಯ
ಮದುವೆಯ ಬಂಧ ಮುರಿದು ಬಿದ್ದರೂ, ಗೌರಿ ಮತ್ತು ಗಣೇಶ್ ತಮ್ಮ ನಡುವಿನ ಸ್ನೇಹ ಮತ್ತು ಪರಸ್ಪರ ಗೌರವವನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ಈಗ ಗೌರಿ ತನ್ನ ಜೀವನದ ಹೊಸ ಅಧ್ಯಾಯವನ್ನು ಆರಂಭಿಸುತ್ತಿರುವಾಗ, ಮೊದಲ ಪತಿಯೇ ಮುಂದೆ ನಿಂತು ಹರಸಿರುವುದು ಇಂದಿನ ಸಮಾಜಕ್ಕೆ ಒಂದು ವಿಭಿನ್ನ ಮತ್ತು ಪ್ರಬುದ್ಧವಾದ ಸಂದೇಶವನ್ನು ನೀಡಿದೆ. ಸದ್ಯ ಈ ಮಾಜಿ ದಂಪತಿಯ ಸ್ನೇಹದ ನಡೆ ಇಂಟರ್ನೆಟ್ನಲ್ಲಿ ಭಾರಿ ಸುದ್ದಿಯಾಗುತ್ತಿದೆ. ಇವರ ಮದುವೆ ಫೋಟೋಗಳು ವೈರಲ್ ಆಗಿವೆ.













Click it and Unblock the Notifications