₹24,200ಕ್ಕೆ 5 ಪುಣ್ಯಕ್ಷೇತ್ರಗಳ ದರ್ಶನ! ಐಆರ್ಸಿಟಿಸಿಯ ಪಂಚ ಮಹಾತೀರ್ಥ ಯಾತ್ರೆ ಆರಂಭ
ಬಜೆಟ್ ಹಾಗೂ ಸಮಯದ ಕೊರತೆಯಿಂದ ಧಾರ್ಮಿಕ ಪ್ರವಾಸಗಳನ್ನು ಮುಂದೂಡುತ್ತಿದ್ದ ಭಕ್ತರಿಗಾಗಿ ಐಆರ್ಸಿಟಿಸಿ (IRCTC) ವಿಶೇಷ ಪ್ಯಾಕೇಜ್ ಘೋಷಿಸಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್ನಲ್ಲಿ ಜಾರಿಗೆ ಬರಲಿರುವ ಈ 'ಪಂಚ ಮಹಾತೀರ್ಥ ದರ್ಶನ ಯಾತ್ರೆ'ಯ ಮೂಲಕ, ದೇಶದ ಐದು ಪ್ರಮುಖ ಪುಣ್ಯಕ್ಷೇತ್ರಗಳನ್ನು ಒಂದೇ ಟ್ರಿಪ್ನಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಂದರ್ಶಿಸುವ ಸುವರ್ಣ ಅವಕಾಶ ಭಕ್ತಾದಿಗಳಿಗೆ ಸಿಗಲಿದೆ.
ಈ ಪ್ಯಾಕೇಜ್ನ ವಿಶೇಷತೆ ಏನು ಎಂದರೆ ರೈಲು ಪ್ರಯಾಣ, ವಸತಿ, ಊಟ, ಸ್ಥಳೀಯ ಸಾರಿಗೆ ಹಾಗೂ ಟೂರ್ ಮ್ಯಾನೇಜರ್ ಸೇವೆ ಸೇರಿದಂತೆ ಬಹುತೇಕ ಎಲ್ಲಾ ಸೌಲಭ್ಯಗಳು ಒಂದೇ ಪ್ಯಾಕೇಜ್ನಲ್ಲಿ ಲಭ್ಯವಾಗುತ್ತವೆ. ಪ್ರತ್ಯೇಕವಾಗಿ ರೈಲು ಟಿಕೆಟ್, ಹೋಟೆಲ್ ಅಥವಾ ವಾಹನ ಬುಕ್ ಮಾಡುವ ತೊಂದರೆ ಇಲ್ಲ.

ಏನಿದು ಪಂಚ ಮಹಾತೀರ್ಥ ದರ್ಶನ ಯಾತ್ರೆ?
ಈ ವಿಶೇಷ ಧಾರ್ಮಿಕ ಯಾತ್ರೆಯನ್ನು ಭಾರತ್ ಗೌರವ್ ಟೂರಿಸ್ಟ್ ರೈಲು ಮೂಲಕ ಆಯೋಜಿಸಲಾಗಿದೆ. ಸುಮಾರು 13 ರಾತ್ರಿ ಮತ್ತು 12 ದಿನಗಳ ಈ ಯಾತ್ರೆ 2026ರ ಆಗಸ್ಟ್ 29ರಂದು ಆರಂಭವಾಗಿ ಸೆಪ್ಟೆಂಬರ್ 10ರಂದು ಮುಕ್ತಾಯವಾಗಲಿದೆ.
ಯಾವ ಪುಣ್ಯಕ್ಷೇತ್ರಗಳ ದರ್ಶನ?
ಈ ಯಾತ್ರೆಯಲ್ಲಿ ಭಕ್ತರು ಈ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಬಹುದು.
ಶ್ರೀ ಜಗನ್ನಾಥ ಪುರಿ (ಒಡಿಶಾ)
ಕಾಮಾಕ್ಯ ದೇವಸ್ಥಾನ (ಅಸ್ಸಾಂ)
ಗಯಾ ಮತ್ತು ಬೋಧಗಯಾ (ಬಿಹಾರ)
ಕಾಶಿ ವಿಶ್ವನಾಥ ಕ್ಷೇತ್ರ / ವಾರಾಣಸಿ (ಉತ್ತರ ಪ್ರದೇಶ)
ಭವ್ಯ ರಾಮಮಂದಿರದ ಅಯೋಧ್ಯೆ (ಉತ್ತರ ಪ್ರದೇಶ)
ಎಲ್ಲಿಂದ ರೈಲು ಹೊರಡಲಿದೆ?
ಈ ವಿಶೇಷ ಭಾರತ್ ಗೌರವ್ ರೈಲು ರಾಜ್ಕೋಟ್ನಿಂದ ಹೊರಡಲಿದೆ. ಮಾರ್ಗಮಧ್ಯೆ ಸುರೇಂದ್ರನಗರ, ವಿರಂಗಾಂ, ಸಾಬರಮತಿ ಜಂಕ್ಷನ್, ನಾಡಿಯಾಡ್, ಆನಂದ್, ಛಾಯಾಪುರಿ, ಗೋಧ್ರಾ, ದಾಹೋದ್, ರತ್ಲಂ, ಉಜ್ಜಯಿನಿ ಹಾಗೂ ಸಂತ್ ಹಿರ್ದಾರಾಮ್ ನಗರ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಪ್ರಯಾಣಿಕರು ಹತ್ತುವ ಅವಕಾಶ ಕಲ್ಪಿಸಲಾಗಿದೆ.
ಯಾತ್ರೆಯಲ್ಲಿ ಏನೆಲ್ಲ ನೋಡಬಹುದು?
ಜಗನ್ನಾಥ ಪುರಿ: ಜಗನ್ನಾಥ ದೇವಾಲಯದ ದರ್ಶನದ ಜೊತೆಗೆ ಪುರಿ ಬೀಚ್, ಸ್ಥಳೀಯ ಮಾರುಕಟ್ಟೆ, ವಿಶ್ವಪ್ರಸಿದ್ಧ ಕೋಣಾರ್ಕ ಸೂರ್ಯ ದೇವಾಲಯ ಹಾಗೂ ಭುವನೇಶ್ವರದ ಲಿಂಗರಾಜ ದೇವಾಲಯಕ್ಕೂ ಭೇಟಿ ನೀಡಲಾಗುತ್ತದೆ.
ಕಾಮಾಕ್ಯ: ಕಾಮಾಕ್ಯ ದೇವಿ ಭಾರತದ ಅತ್ಯಂತ ಪ್ರಸಿದ್ಧ ಹಾಗೂ ಪುರಾತನ ಶಕ್ತಿಪೀಠಗಳಲ್ಲಿ ಒಂದಾಗಿದೆ. ಅಸ್ಸಾಂನ ಗುವಾಹಟಿಯಲ್ಲಿರುವ ಪ್ರಸಿದ್ಧ ಶಕ್ತಿಪೀಠ ಕಾಮಾಕ್ಯ ದೇವಿಯ ದರ್ಶನ ಹಾಗೂ ವಿಶೇಷ ಪೂಜೆಯಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ.
ಗಯಾ: ಬಿಹಾರದ ಅತ್ಯಂತ ಪ್ರಸಿದ್ಧ ಹಾಗೂ ಪವಿತ್ರವಾದ ಐತಿಹಾಸಿಕ ಮತ್ತು ಧಾರ್ಮಿಕ ನಗರವಾಗಿದೆ. ಬೋಧಗಯಾದ ಮಹಾಬೋಧಿ ದೇವಾಲಯ, ಬೃಹತ್ ಬುದ್ಧ ಪ್ರತಿಮೆ, ವಿಷ್ಣುಪಾದ ದೇವಸ್ಥಾನ ಹಾಗೂ ಸರ್ವಮಂಗಲ ಗೌರಿ ಶಕ್ತಿಪೀಠಕ್ಕೆ ಭೇಟಿ ನೀಡಲಾಗುತ್ತದೆ.
ಕಾಶಿ ಮತ್ತು ಅಯೋಧ್ಯೆ: ಕಾಶಿ ವಿಶ್ವನಾಥ ದೇವಸ್ಥಾನ, ಅನ್ನಪೂರ್ಣೇಶ್ವರಿ ದೇವಾಲಯ ಹಾಗೂ ಗಂಗಾ ಘಾಟ್ಗಳ ದರ್ಶನದ ಬಳಿಕ ಅಯೋಧ್ಯೆಯ ರಾಮ ಜನ್ಮಭೂಮಿ ದೇವಸ್ಥಾನ ಮತ್ತು ಹನುಮಾನ್ಗಢಿಗೂ ಭೇಟಿ ನೀಡಲಾಗುತ್ತದೆ. ಭಾರತದ ಎರಡು ಅತ್ಯಂತ ಪವಿತ್ರವಾದ ಮತ್ತು ಪ್ರಾಚೀನವಾದ ಆಧ್ಯಾತ್ಮಿಕ ತಾಣಗಳಾಗಿವೆ.
ಪ್ಯಾಕೇಜ್ ದರ ಎಷ್ಟು?
ಪ್ರಯಾಣಿಕರು ತಮ್ಮ ಆದ್ಯತೆಗೆ ಅನುಗುಣವಾಗಿ ಮೂರು ವಿಭಿನ್ನ ವರ್ಗಗಳಲ್ಲಿ ಸೀಟುಗಳನ್ನು ಕಾಯ್ದಿರಿಸಬಹುದು. ಪ್ರತಿ ವ್ಯಕ್ತಿಗೆ ನಿಗದಿಪಡಿಸಲಾದ ದರಗಳು ಹೀಗಿವೆ:
ಸ್ಲೀಪರ್ ಕ್ಲಾಸ್: ₹24,200
3AC: ₹40,100
2AC: ₹49,500 (ಪ್ರತಿ ವ್ಯಕ್ತಿಗೆ)
ಪ್ಯಾಕೇಜ್ನಲ್ಲಿ ಏನೆಲ್ಲ ಸೌಲಭ್ಯ?
ಐಆರ್ಸಿಟಿಸಿ ಈ ಪ್ಯಾಕೇಜ್ನಲ್ಲಿ ಹಲವು ಸೌಲಭ್ಯಗಳನ್ನು ಒದಗಿಸುತ್ತದೆ.
ಹೋಗಿ-ಬರುವ ರೈಲು ಪ್ರಯಾಣದ ಟಿಕೆಟ್
ಹೋಟೆಲ್ ಅಥವಾ ಧರ್ಮಶಾಲೆಯಲ್ಲಿ ಉತ್ತಮ ವಸತಿ
3 ಹೊತ್ತಿನ ಶುದ್ಧ ಸಸ್ಯಾಹಾರಿ ಆಹಾರ ಮತ್ತು ನೀರಿನ ಬಾಟಲಿ
ಸ್ಥಳೀಯ ದರ್ಶನಕ್ಕಾಗಿ ಬಸ್ ಸೌಲಭ್ಯ
ಪ್ರಯಾಣ ವಿಮೆ ಮತ್ತು ಭದ್ರತಾ ವ್ಯವಸ್ಥೆ
ಟೂರ್ ಮ್ಯಾನೇಜರ್, ಗೈಡ್ ಹಾಗೂ ರೈಲಿನಲ್ಲಿ ಸಹಾಯ ಸೇವೆ
ಆದರೆ ಕೆಲವು ದೇವಸ್ಥಾನಗಳ ವಿಐಪಿ ದರ್ಶನ ಅಥವಾ ವಿಶೇಷ ಪ್ರವೇಶ ಟಿಕೆಟ್ ಶುಲ್ಕವನ್ನು ಪ್ರಯಾಣಿಕರು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಕಡಿಮೆ ವೆಚ್ಚದಲ್ಲಿ ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡಲು ಬಯಸುವ ಭಕ್ತರಿಗೆ ಈ ಐಆರ್ಸಿಟಿಸಿ ಪಂಚ ಮಹಾತೀರ್ಥ ದರ್ಶನ ಯಾತ್ರೆ ಉತ್ತಮ ಅವಕಾಶವಾಗಿದೆ.














Click it and Unblock the Notifications