ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನ
ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿವರ್ಷದಂತೆ 2008ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗಾಗಿ ಈ ಕೆಳಕಂಡ ಪ್ರಕಾರಗಳ ಕನ್ನಡ ಪುಸ್ತಕಗಳನ್ನು ಆಹ್ವಾನಿಸಿದೆ. ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಶ್ರೇಷ್ಠವೆಂದು ಆಯ್ಕೆ ಮಾಡುವ ಒಂದು ಕೃತಿಗೆ ಬಹುಮಾನ ನೀಡಲಾಗುವುದು. (2008 ರ ಜನವರಿ 1 ರಿಂದ ಡಿಸೆಂಬರ್ 31 ರೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಕೃತಿಗಳಾಗಿರಬೇಕು).
ಕಾವ್ಯ (ವಚನಗಳು ಮತ್ತು ಹನಿಗವನಗಳು ಸೇರಿ), ಕಾದಂಬರಿ, ಸಣ್ಣಕತೆ, ನಾಟಕ, ಲಲಿತ ಪ್ರಬಂಧ (ಹರಟೆ ಮತ್ತು ವಿನೋದ ಸಾಹಿತ್ಯ ಸೇರಿ), ಪ್ರವಾಸ ಸಾಹಿತ್ಯ, ಜೀವನಚರಿತ್ರೆ/ಆತ್ಮಕಥೆ (ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ), ಸಾಹಿತ್ಯ ವಿಮರ್ಶೆ (ಸಾಹಿತ್ಯ ಚರಿತ್ರೆ, ಸಾಹಿತ್ಯ ತತ್ವ ಮತ್ತು ಸೌಂದರ್ಯ ಮೀಮಾಂಸೆ ಸೇರಿ) (ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ) ಗ್ರಂಥ ಸಂಪಾದನೆ (ಪ್ರಾಚೀನ ಕೃತಿಗಳ ಸಂಪಾದನೆ), ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ-(ಭೌತ, ರಸಾಯನ, ಗಣಿತ, ಪ್ರಾಣಿ, ಸಸ್ಯ, ಇಂಜನೀಯರಿಂಗ್, ವೈದ್ಯ, ಭೂ, ಖಗೋಳ, ಗೃಹವಿಜ್ಞಾನ, ಪರಿಸರ, ವಿದ್ಯುನ್ಮಾನ ಇತ್ಯಾದಿ.
ಮಾನವಿಕಗಳು-(ಇತಿಹಾಸ, ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ, ಮಾನವಶಾಸ್ತ್ರ, ಮನ:ಶಾಸ್ತ್ರ, ಭಾಷಾಶಾಸ್ತ್ರ, ಶಿಕ್ಷಣ, ವಾಣಿಜ್ಯ, ಕಾನೂನು, ಗ್ರಂಥಭಂಡಾರ ವಿಜ್ಞಾನ, ಸಮೂಹಸಂವಹನ, ಧಾರ್ಮಿಕ, ದಾರ್ಶನಿಕ), ಸಂಶೋಧನೆ-(ಕನ್ನಡ ಭಾಷೆ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದ ಸಂಶೋಧನೆ), ಅನುವಾದ-1(ಕಾದಂಬರಿ, ಕಾವ್ಯ, ಸಣ್ಣಕಥೆ, ನಾಟಕ, ಲಲಿತಪ್ರಬಂಧ, ಪ್ರವಾಸ ಸಾಹಿತ್ಯ, ಜೀವನಚರಿತ್ರೆ ಇತ್ಯಾದಿ ಸೃಜನಶೀಲ ಕೃತಿಗಳು), ಅನುವಾದ-2(ಶಾಸ್ತ್ರ ಸಾಹಿತ್ಯ, ಸಾಹಿತ್ಯ ವಿಮರ್ಶೆ-ಇತ್ಯಾದಿ ಸೃಜನೇತರ ಕೃತಿಗಳು), ಸಂಕೀರ್ಣ (ಯಾವುದೇ ಪ್ರಕಾರಕ್ಕೆ ಹೊಂದಿಕೊಳ್ಳದ ವಿಶಿಷ್ಟ ಕೃತಿಗಳನ್ನು ಈ ಪ್ರಕಾರದಲ್ಲಿ ಬಹುಮಾನಕ್ಕೆ ಪರಿಗಣಿಸಲಾಗುವುದು).
ಅದರಂತೆ ಲೇಖಕರ ಮೊದಲ ಸ್ವತಂತ್ರ ಕೃತಿಗೆ ಬಹುಮಾನ (ಮಧುರಚೆನ್ನ ದತ್ತಿನಿಧಿ ಬಹುಮಾನ), ಕನ್ನಡದಿಂದ ಇಂಗ್ಲೀಷಗೆ ಅನುವಾದ (ಅಮೆರಿಕನ್ನಡ ದತ್ತಿನಿಧಿ ಬಹುಮಾನ), ಅನುವಾದ-1, ಅನುವಾದ-2 ಮತ್ತು ಕನ್ನಡದಿಂದ ಇಂಗ್ಲೀಷಗೆ ಅನುವಾದ- ಈ ಮೂರು ಪ್ರಕಾರಗಳಿಗೆ ಕೃತಿ ಸಲ್ಲಿಸುವವರು ಅನುವಾದಿತ ಕೃತಿಯೊಂದಿಗೆ ಮೂಲ ಕೃತಿಯನ್ನು (ಒಂದು ಪ್ರತಿ) ಸಲ್ಲಿಸಬೇಕು.
ಅದರಂತೆ ಬಹುಮಾನಕ್ಕೆ ಪರಿಗಣಿಸಲ್ಪಡದ ಪುಸ್ತಕಗಳು ಈ ರೀತಿ ಇವೆ. ಮರುಮುದ್ರಣವಾದ ಪುಸ್ತಕಗಳು, ಜಾನಪದ ಕೃತಿಗಳು, ಪದವಿಗಾಗಿ ಸಿದ್ಧಪಡಿಸಿದ ಸಂಶೋಧನಾ ಗ್ರಂಥಗಳು, ಪಠ್ಯಪುಸ್ತಕಗಳು, ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಕೃತಿಗಳು, ಈಗಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಒಟ್ಟಾರೆ ಮೂರು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳು, ಒಂದೇ ಪ್ರಕಾರದಲ್ಲಿ ಎರಡು ಬಾರಿ ಪುಸ್ತಕ ಬಹುಮಾನ ಪಡೆದವರ ಕೃತಿಗಳನ್ನು ಅದೇ ಪ್ರಕಾರದಲ್ಲಿ ಮತ್ತೆ ಪರಿಗಣಿಸುವುದಿಲ್ಲ.
ಮೇಲ್ಕಂಡ ಅವಧಿಯಲ್ಲಿ ಪ್ರಕಟವಾದ ಪುಸ್ತಕಗಳ ಒಂದೊಂದು ಸಾದಾ ಪ್ರತಿಯನ್ನು ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು ಇವರಿಗೆ ರಿಜಿಸ್ಟರ್ಡ್ ಅಂಚೆ, ಕೊರಿಯರ್ ಮೂಲಕ ಅಥವಾ ಖುದ್ದಾಗಿ ಜೂನ್ 30 ರೊಳಗೆ ಕಳುಹಿಸಬೇಕು. ಕೃತಿಯು ಮೇಲೆ ತಿಳಿಸಿದ ಯಾವ ಸಾಹಿತ್ಯ ಪ್ರಕಾರಕ್ಕೆ ಸೇರುತ್ತದೆ ಎನ್ನುವುದನ್ನು ಪುಸ್ತಕದ ಶೀರ್ಷಿಕೆ ಪುಟದಲ್ಲಿ ಬರೆದು ತಿಳಿಸಲು ಕೋರಿದೆ.