ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಕಣ ಸೂರ್ಯಗ್ರಹಣ ಶಾಂತಿ ಇತ್ಯಾದಿ..

By * ಆರ್. ಸೀತಾರಾಮಯ್ಯ, ಶಿವಮೊಗ್ಗ
|
Google Oneindia Kannada News

The sun god
(ಕಂಕಣ ಸೂರ್ಯಗ್ರಹಣ : ಮುಂದುವರಿದ ಭಾಗ...)

ಪಂಚಾಂಗಗಳ ಪ್ರಕಾರ ರಾಹುಗ್ರಸ್ತ ಕಂಕಣ ಸೂರ್ಯ ಗ್ರಹಣವು ಮಕರ ರಾಶಿಯಲ್ಲಿ ಉತ್ತರಾಷಾಢ ನಕ್ಷತ್ರದಲ್ಲಿ ಹಿಡಿಯುತ್ತದೆ. ಜನ್ಮರಾಶಿಯಿಂದ, ಮೇಷ, ಸಿಂಹ, ವೃಶ್ಚಿಕ, ಮೀನ ರಾಶಿಯವರಿಗೆ ಶುಭ ಫಲ, ವೃಷಭ, ಕಟಕ, ಕನ್ಯಾ, ಧನಸ್ಸು ರಾಶಿಯವರಿಗೆ ಮಿಶ್ರಫಲ, ಮಿಥುನ, ತುಲ, ಮಕರ, ಕುಂಭ ರಾಶಿಯವರಿಗೆ ಅಶುಭಫಲ ಉಂಟಾಗುತ್ತದೆ. ಅಶುಭ ಫಲವಿರುವ ರಾಶಿಯವರು ಮತ್ತು ಗರ್ಭಿಣಿ ಸ್ತ್ರೀಯರು ಗ್ರಹಣ ನೋಡಬಾರದು, ಉತ್ತರಾಷಾಢ ನಕ್ಷತ್ರದವರು ಗ್ರಹಣ ಶಾಂತಿ ಮಾಡಿಸುವುದು ಸೂಕ್ತ.

ಧಾರ್ಮಿಕ ವಿಧಿ ಆಚಾರಣೆಗಳನ್ನು ಆಚರಿಸುವವರು, ಗ್ರಹಣವು ಶುಕ್ರವಾರ ಎರಡನೇ ಪ್ರಹರದಲ್ಲಿ ಪ್ರಾರಂಭವಾಗುವುದರಿಂದ, ಹಿಂದಿನ ದಿವಸ ಗುರುವಾರ ರಾತ್ರಿ 9.34 ಗಂಟೆಗೆ ವೇದ ಪ್ರಾರಂಭವಾಗುವುದರಿಂದ ಶಕ್ತರು ಆಹಾರ ಸೇವಿಸಬಾರದು. ಅಶಕ್ತರು, ಅನಾರೋಗ್ಯದವರು ಶುಕ್ರವಾರ ಸೂರ್ಯೋದಯದಿಂದ ವೇದವನ್ನು ಪಾಲಿಸಬೇಕು. ಗ್ರಹಣ ಸ್ಪರ್ಶ ಕಾಲದಿಂದ ಮೋಕ್ಷದವರೆಗೆ ಪುಣ್ಯಕಾಲವಾಗಿರುತ್ತದೆ.

ಗ್ರಹಣ ಸ್ಪರ್ಶ ಕಾಲದಲ್ಲಿ ಸ್ನಾನ, ಗ್ರಹಣ ಮಧ್ಯ ಕಾಲದಲ್ಲಿ ಹೋಮ ಅಥವಾ ದೇವತಾರ್ಚನೆ ಮತ್ತು ಶ್ರಾದ್ಧ, ಗ್ರಹಣ ಬಿಡುವ ಸಮಯದಲ್ಲಿ ದಾನ, ಮೋಕ್ಷಾ ನಂತರ ಪುನಃ ಸ್ನಾನ ಮಾಡುವುದು ಕ್ರಮವಾಗಿದೆ. ಗ್ರಹಣ ಸ್ಪರ್ಶ ಕಾಲದಲ್ಲಿ ಹರಿಯುವ ನೀರು, ಸರೋವರ, ನದಿ, ಸಮುದ್ರಗಳಲ್ಲಿ ಸ್ನಾನಮಾಡಬೇಕು. ಸಾಧ್ಯವಾಗದಿದ್ದಲ್ಲಿ ಮನೆಯಲ್ಲೇ ತಣ್ಣೀರಿನಲ್ಲಿ ಸ್ನಾನ ಮಾಡುವುದು ಉತ್ತಮ. ಸ್ನಾನಾನಂತರ, ಮೋಕ್ಷ ಸಮಯದವರೆಗೆ, ಪೂಜೆ, ಜಪ, ತರ್ಪಣ, ಗ್ರಹಣ ಶ್ರಾದ್ಧ ಇವುಗಳ ಪೈಕಿ ಶಕ್ಯವಾದುದ್ದನ್ನು ಮಾಡಬೇಕು.

ಗ್ರಹಣ ಕಾಲದಲ್ಲಿ ಮೊದಲು ತೆಗೆದುಕೊಂಡಿರುವ ಮಂತ್ರದ ಪುನಶ್ಚರಣ ಮಾಡಬೇಕು. ಇಲ್ಲದಿದ್ದಲ್ಲಿ ಮಂತ್ರಶಕ್ತಿ ಕ್ಷೀಣಿಸುತ್ತದೆ. ಹೊಸ ಮಂತ್ರಗಳನ್ನು ಪ್ರಾರಂಭಿಸಲು ಮತ್ತು ಮಂತ್ರದ ಪನಶ್ಚರಣ ಮಾಡಲು ಸೂರ್ಯಗ್ರಹಣದ ಕಾಲ ಅತ್ಯಂತ್ರ ಶ್ರೇಷ್ಠವಾಗಿದೆ. ಗ್ರಹಣಕಾಲದಲ್ಲಿ ನಿದ್ರೆ, ಅಭ್ಯಂಗ, ಆಹಾರ ಸೇವನೆ ಹಾಗೂ ಇತರೆ ಕಾರ್ಯಗಳನ್ನು ಮಾಡಬಾರದು. ಗ್ರಹಣ ಕಾಲದಲ್ಲಿ ಮಾಡುವ ಯಾವುದೇ ದಾನವು, ಭೂದಾನಕ್ಕೆ ಸಮಾನ, ಗ್ರಹಣಕಾಲದಲ್ಲಿ ಎಲ್ಲಾ ಜಲವು ಗಂಗಾ ಜಲಕ್ಕೆ ಸಮಾನವಾಗಿರುತ್ತದೆ. ತೀರ್ಥಕ್ಷೇತ್ರಗಳಲ್ಲಿಯೂ, ಸಿದ್ಧ ಕ್ಷೇತ್ರಗಳಲ್ಲಿಯೂ, ಶಿವಾಲಯಗಲ್ಲಿಯೂ ಗ್ರಹಣ ಕಾಲದಲ್ಲಿ ಮಂತ್ರವನ್ನು ಉಪದೇಶಿಸಿದರೆ, ಅದು ದೀಕ್ಷೋಪದೇಶವಾಗುವುದೆಂದು ಧರ್ಮಸಿಂಧುವಿನಲ್ಲಿ ಹೇಳಿದೆ. ಅಲ್ಲದೆ ಗ್ರಹಣ ಕಾಲದ ಆಚರಣೆಗಳನ್ನು ಮತ್ಸ್ಯಪುರಾಣದ 67ನೇ ಅಧ್ಯಾಯದಲ್ಲಿ ವಿವರಸಿದ್ದಾರೆ.

ಬೃಹತ್ ಸಂಹಿತೆಯಲ್ಲಿ ಧನಸ್ಸು ಮತ್ತು ಮಕರರಾಶಿ ಮಧ್ಯದಲ್ಲಿ ಸೂರ್ಯಗ್ರಹಣ ಸಂಭವಿಸುವುದರಿಂದ, ಪ್ರಮುಖ ಮಂತ್ರಿಗಳಿಗೂ, ಕುಸ್ತಿಪಟುಗಳಿಗೆ, ವೈದ್ಯರು, ವ್ಯಾಪಾರಸ್ಥರು, ಗುರುಗಳಿಗೆ, ಅಶ್ವಗಳಿಗೆ ಹಾಗೂ ಮೀನುಗಳಿಗೆ ಅಲ್ಲದೆ ಕೆಳವರ್ಗದ ಜನತೆಗೆ, ಮಾಂತ್ರಿಕರಿಗೆ ಮೂಲಿಕೆ ಔಷಧಿ ತಯಾರಕರಿಗೆ ತೊಂದರೆ ಉಂಟಾಗುತ್ತದೆ. ಗ್ರಹಣದ ಜೊತೆ ಶುಕ್ರನಿದ್ದು ಕುಜನ ದೃಷ್ಠಿ ಗ್ರಹಣಕ್ಕಿರುವುದರಿಂದ ಮಹಿಳೆಯರಿಗೆ ಹೆಚ್ಚಾಗಿ ತೊಂದರೆ ಉಂಟಾಗುತ್ತದೆ. ಪೌಷ ಮಾಸದಲ್ಲಿ ಗ್ರಹಣವಾಗುವುದರಿಂದ ಬ್ರಾಹ್ಮಣ, ಕ್ಷತ್ರಿಯರಿಗೆ ತೊಂದರೆ, ಮಳೆ ಕಡಿಮೆ, ಮಹಿಳೆಯರಿಗೆ ಹೆಚ್ಚಿನ ಕಳವಳ ಉಂಟಾಗುತ್ತದೆಂದು ಸೂಚಿಸಿದೆ.

ಶುಭಫಲ ಅಥವಾ ಅಶುಭಫಲ

ಗ್ರಹಣಗಳಿಂದ ರಾಷ್ಟ್ರಗಳ ಕುಂಡಲಿಗಳಲ್ಲಿ ಗ್ರಹಣ ಸಂಭವಿಸುವ ರಾಶಿಯನ್ನು ಗುರ್ತಿಸಿ, ಆ ರಾಶಿ ಲಗ್ನದಿಂದ ಯಾವ ಭಾವವೆಂದು, ಆ ಭಾವ ನೀಡುವ ಶುಭಫಲ ಅಥವಾ ಅಶುಭಫಲವನ್ನು ವಿಶ್ಲೇಷಿಸಬಹುದು. ಜೊತೆಗೆ ವಾರ್ಷಿಕ ಕುಂಡಲಿ ತಯಾರಿಸಿಕೊಂಡು ಇದರ ಆಧಾರದಿಂದ ನಿಖರವಾಗಿ ಶುಭ ಅಥವಾ ಅಶುಭ ಫಲವನ್ನು ವಿಶ್ಲೇಷಿಸಬಹುದು. ಅಲ್ಲದೆ ರಾಜಕೀಯ ಪಕ್ಷಗಳ, ಸಂಘಗಳ, ಸಮಾಜ ಹಾಗೂ ವರ್ಗಗಳ ಮತ್ತು ಅತೀ ಪ್ರಾಮುಖ್ಯ ವ್ಯಕ್ತಿಗಳ (ಪ್ರಧಾನಮಂತ್ರಿ, ರಾಷ್ಟ್ರಪತಿ) ವಿದ್ಯಮಾನಗಳನ್ನು ವಿಶ್ಲೇಷಿಸಬಹುದು. ಯಾವರಾಶಿಯಲ್ಲಿ ಗ್ರಹಣ ಸಂಭವಿಸುತ್ತದೆಯೋ ಆ ರಾಶಿಗೆ ಗೋಚಾರದಲ್ಲಿ ಕುಜನ ದೃಷ್ಟಿ ಪಡೆದಾಗ ಅಶುಭ ಫಲವನ್ನು ಅನುಭವಿಸಬೇಕಾಗುತ್ತದೆ. ಸೂರ್ಯಗ್ರಹಣವಾಗಿ 6 ತಿಂಗಳುಗಳಲ್ಲಿ ಚಂದ್ರ ಗ್ರಹಣವಾಗಿ 3 ತಿಂಗಳುಗಳಲ್ಲಿ ಗ್ರಹಣದ ಫಲ ಉಂಟಾಗುತ್ತದೆ. ಒಬ್ಬ ವ್ಯಕ್ತಿಯ ವೈಯಕ್ತಿಕ ಘಟನೆಗಳನ್ನು ಗ್ರಹಣದಿಂದ ವಿಶ್ಲೇಷಿಸಲು ಸಾಧ್ಯವಾಗುವುದಿಲ್ಲ.

ಆಕಾಶಕಾಯದಲ್ಲಿ ಸಂಭವಿಸುವ ಗ್ರಹಣಗಳು ಒಂದು ನೈಸರ್ಗಿಕ ಕ್ರಿಯೆ. ಅದೊಂದು ನಿಸರ್ಗದ ಸುಂದರ ಪ್ರದರ್ಶನ. ಜಗತ್ತಿನಾದ್ಯಂತ ವಿಜ್ಞಾನಿಗಳು ಮತ್ತು ಹವ್ಯಾಸಿ ಖಗೋಳ ಶಾಸ್ತ್ರಜ್ಞರು ಕಾತುರದಿಂದ ಕಾಯುತ್ತಿದ್ದಾರೆ. ಅಪರೂಪದ ಕಂಕಣ ಸೂರ್ಯ ಗ್ರಹಣದ ವಿಸ್ಮಯ ವಿದ್ಯಮಾನವನ್ನು ಭಾರತದಲ್ಲಿ ವೀಕ್ಷಿಸಬಹುದಾಗಿದೆ. ಬೇಕೆಂದಾಗ ಬಾರದ, ಬಂದಾಗ ಕಳೆದುಕೊಳ್ಳಬಾರದ ಒಂದು ಸುಂದರ ವಿದ್ಯಮಾನ. ಅದನ್ನು ಸುರಕ್ಷಿತವಾಗಿ ವೀಕ್ಷಿಸಿದಲ್ಲಿ, ಮನಸ್ಸಿನಲ್ಲಿ ತೃಪ್ತಿ ಮತ್ತು ನಿಸರ್ಗದ ಬಗ್ಗೆ ಆಸಕ್ತಿ ಮೂಡುತ್ತದೆ. ಗ್ರಹಣದ ಆಧಾರದಿಂದ ರಾಷ್ಟ್ರದ, ಪಕ್ಷಗಳ ಹಾಗೂ ಪ್ರಮುಖ ರಾಜಕಾರಣಿಗಳ ಆಗು ಹೋಗುಗಳ ಫಲನಿರೂಪಣೆಗೆ ಅನುಕೂಲವಾಗುತ್ತದೆ. ಹೊರತು, ಪ್ರತೀ ವ್ಯಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. ಗ್ರಹಣದಿಂದ ಯಾರೂ ಭಯಪಡುವುದು ಬೇಡ. ಗಾಳಿಸುದ್ಧಿಗಳಿಗೆ ಕಿವಿಗೊಡದೆ, ಗ್ರಹಣವನ್ನು ಎಲ್ಲರೂ ವೀಕ್ಷಿಸಬಹುದು.

ಸೂರ್ಯ ಗ್ರಹಣದ ವೇಳೆಯಲ್ಲಿ ಮಾಧ್ಯಮಗಳಲ್ಲಿ ಗಾಬರಿ ಹುಟ್ಟಿಸುವಂತಹ ಹಾಗೂ ಜನರನ್ನು ತಪ್ಪುದಾರಿಗೆ ಎಳೆಯುವ ಮತ್ತು ಇದಕ್ಕೆ ಪರಿಹಾರಗಳನ್ನು ಸೂಚಿಸುವವರಿದ್ದಾರೆ. ಅದರಲ್ಲೂ ಸೂರ್ಯಗ್ರಹಣದ ಸಂದರ್ಭದಲ್ಲಿ ಮಗುವಿನ ಜನನವನ್ನು ಅನಿಷ್ಟವೆಂದು ತಾಯಿ ಮತ್ತು ಮಗುವಿಗೆ ಕೆಟ್ಟದ್ದಾಗುತ್ತದೆಂದು ಹೇಳುತ್ತಾರೆ. ಸೂರ್ಯಗ್ರಹಣವು ಹೋರಾ ಅಥವಾ ಜಾತಕಸ್ಕಂದಕ್ಕೆ ಸಂಬಂಧಿಸಿರುವುದಿಲ್ಲ. ಸಂಹಿತಾಸ್ಕಂದದಲ್ಲಿ ಪ್ರಪಂಚದ ಆಗು ಹೋಗುಗಳ ಬಗ್ಗೆ ಗ್ರಹಣಗಳಿಂದ ತಿಳಿಯಬಹುದಾಗಿದೆ.

ಈ ಹಿಂದೆ ಜುಲೈ 22, 2009ರಲ್ಲಿ ಸೂರ್ಯ ಗ್ರಹಣ ಸಂಭವಿಸಿತ್ತು. ದೆಹಲಿಯಲ್ಲಿ ಸಂಶೋಧಕರಾದ ನೀಲಂ ಗುಪ್ತ ಎಂಬುವವರು ದೆಹಲಿಯ ಕಸ್ತೂರಿಬಾ ಗಾಂಧಿ ಆಸ್ಪತ್ರೆಯಲ್ಲಿ ಪರಿಶೀಲಿಸಿದಾಗ ಜುಲೈ 22ರಂದು ಸೂರ್ಯ ಗ್ರಹಣದ ದಿವಸ 37 ಶಿಶುಗಳ ಜನನವಾಗಿದೆ ಎಂದು ತಿಳಿಯಪಟ್ಟರು. ಗ್ರಹಣದ ಹಿಂದಿನ ದಿವಸ ಅಂದರೆ ಜುಲೈ 21ರಂದು 31 ಶಿಶುಗಳ ಜನನವಾಗಿರುವುದಾಗಿ ದಾಖಲೆಯಿದ್ದು, ಈ ಎರಡೂ ದಿವಸಗಳಲ್ಲಿ ಜನಿಸಿದ ಶಿಶುಗಳು, ಬೇರೆ ದಿವಸಗಳಲ್ಲಿ ಜನಸಿದ ಶಿಶುಗಳಂತೆಯೇ ಆರೋಗ್ಯವಾಗಿ ಸಹಜ ಸ್ಥಿತಿಯಲ್ಲಿದ್ದವು.

ಯಾವುದೇ ವ್ಯತ್ಯಾಸ ಕಂಡುಬಂದಿರುವುದಿಲ್ಲ. ದೆಹಲಿಯ ಡಾ. ರಾಮ್ ಶರ್ಮ ಹೃದಯ ರೋಗತಜ್ಞರು ಹಿಂದೂರಾವ್ ಆಸ್ಪತ್ರೆಯಲ್ಲಿ ಜುಲೈ 21, 2009ರ ಮಧ್ಯರಾತ್ರಿಯಿಂದ, ಜುಲೈ 22, 2009ರ ಮಧ್ಯರಾತ್ರಿಯವರೆಗೆ ಒಟ್ಟು 18 ಶಿಶುಗಳು ಜನನವಾದ ಬಗ್ಗೆ ದಾಖಲಿಸಿದ್ದು, ಇದರಲ್ಲಿ 14 ಶಿಶುಗಳು ಸಹಜವಾಗಿ ಜನನವಾಗಿದ್ದರೆ, 1 ಸಿಜೆರಿಯನ್ ಮೂಲಕ ಜನಸಿದ್ದು, 3 ಶಿಶುಗಳು ಕಿರಿಯ ಸಹಾಯಕ ವೈದ್ಯರುಗಳ ನೆರವು ಪಡೆದಿದ್ದು, 1 ಶಿಶು ಗರ್ಭಾಶಯದ ತೊಂದರೆಯಿದ್ದುದರಿಂದ ಶಸ್ತ್ರ ಕ್ರಿಯೆಯಿಂದ ಹೊರತೆಗೆಯಲಾಗಿತ್ತು. ಆದರೆ ಯಾವುದೇ ಶಿಶುವನ್ನು ತೀವ್ರ ಚಿಕಿತ್ಸಾಘಟಕದಲ್ಲಿರಿಸಿರಲಿಲ್ಲ. ಗಮನಿಸಬೇಕಾದ ಅಂಶವೇನೆಂದರೆ, ಸಾಮಾನ್ಯ ದಿನಗಳಲ್ಲಿ 3 ಅಥವಾ 4 ಶಿಶುಗಳನ್ನು ತೀವ್ರ ಚಿಕಿತ್ಸಾಘಟಕದಲ್ಲಿರಿಸಲಾಗುತ್ತಿತ್ತು ಹಾಗೂ ವೀಕ್ಷಣೆಯಲ್ಲಿಡಲಾಗುತ್ತಿತ್ತು. ಸೂರ್ಯ ಗ್ರಹಣದ ದಿವಸ ಮಕ್ಕಳು ಹುಟ್ಟಿದರೂ ಒಳ್ಳೆಯದೆ, ಹಾಗೂ ಇದು ವ್ಯಕ್ತಿಗೆ ವೈಯುಕ್ತಿಕವಾಗಿ ಯಾವುದೇ ರೀತಿಯ ಉತ್ಪಾತವನ್ನುಂಟು ಮಾಡುವುದಿಲ್ಲವೆಂದು ಈ ಮೇಲಿನ ಅಂಶಗಳಿಂದ ಗೊತ್ತಾಗುತ್ತದೆ. ಈ ಸಂದರ್ಭದಲ್ಲಿ ಪ್ರಕೃತಿಯು ಜಪ, ತಪಕ್ಕೆ ಒಳ್ಳೆಯ ಸುಯೋಗವನ್ನು ಒದಗಿಸುತ್ತದೆ.

ಆರ್. ಸೀತಾರಾಮಯ್ಯ, ಜೋತೀಷ್ಕರು,"ಕಮಲ", 5 ನೇ ತಿರುವು,ಬಸವನಗುಡಿ, ಶಿವಮೊಗ್ಗ. ಸೆಲ್ : 94490 48340 ಫೋನ್: 08182-227344

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X