Get Updates
Get notified of breaking news, exclusive insights, and must-see stories!

ಪುಣ್ಯಕೋಟಿ ಹಾಡು : ಒಂದು ಹೊಸ ನೋಟ!

Govina Haadu - A review by Vikram Hathwar
ಈ ಲೇಖನದಲ್ಲಿನ ಅಭಿಪ್ರಾಯಗಳನ್ನು ಒಂದು ಸಲ ಓದಿ... ನಂತರ 'ಪುಣ್ಯಕೋಟಿಯ ಪದ್ಯ’ ಓದಿ...

ಒಂದು ಕೃತಿಯ ವಿವರಗಳನ್ನು ತನ್ನ ಉದ್ದೇಶಗಳಿಗೆ ತಕ್ಕ ಹಾಗೆ ತನಗೆ ಬೇಕಾದಂತೆ ತಿರುಚಿಕೊಂಡು ವ್ಯಾಖ್ಯಾನಿಸುವುದಕ್ಕೆ ವಿಶೇಷವಾದ ಪ್ರತಿಭೆ ಪರಿಣತಿ ಹೊಂದಿರಬೇಕಾದ ಅವಶ್ಯಕತೆ ಇಲ್ಲವೆಂದು ನನ್ನ ಅನಿಸಿಕೆ. ಎಂತಹ ಗಂಭೀರವಾದ ಉತ್ಕೃಷ್ಟವಾದ ಕವಿತೆಯನ್ನೂ ಗೇಲಿ ಮಾಡಬಹುದು. ಅತ್ಯಂತ ಸಾಧಾರಣ ಕವಿತೆಯಲ್ಲೂ ವಿಶಿಷ್ಟ ಪ್ರಜ್ಞೆ ತೆರೆದುಕೊಳ್ಳುವಂತೆ ವಿಸ್ಮಯದಿಂದ ನೋಡಬಹುದು. ಬಹುಶಃ ಕವಿತೆಗಿಂತ ತಮಾಷೆಯ ವಸ್ತು ಮತ್ತೊಂದಿಲ್ಲ.

ಎಷ್ಟು ಸರಳವಾದ, ಸತ್ಯ'ವಾದ’ ಕತೆಯದು ಪುಣ್ಯಕೋಟಿಯದು. ಶುರುವಾಗುವುದು ಹೀಗಲ್ಲವೆ- 'ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ...’. ಕರ್ನಾಟಕ ಭೂಮಂಡಲದ ಮಧ್ಯದಲ್ಲಿ ಇದೆಯೇನು?, ಅಂದರೆ ಈ ಸೂರ್ಯ ಮಂಡಲದ ಮಧ್ಯದಲ್ಲಿ ಸೂರ್ಯ ಇರ್ತಾನಲ್ಲ ಹಾಗೆ? ಜನಪದರಿಗೆ ಖಗೋಳಶಾಸ್ತ್ರ ಗೊತ್ತಿರಬೇಕು ಅಂತ ನಿರೀಕ್ಷಿಸೋದು ತಪ್ಪು ಅಂತೇನೋ ಹೇಳಿಬಿಡಬಹುದು. ಆದರೆ, ಆಗ ಇದರಲ್ಲಿರುವ ಒಂದು ಸೊಗಸಿನಿಂದ ವಂಚಿತರಾಗಬೇಕಾಗುತ್ತದೆ. ಮಧ್ಯದಲ್ಲಿ ಮೆರೆಯುವುದೆಂದರೆ ಪ್ರಾಧಾನ್ಯತೆಯ ಸಂಕೇತ, ಅದೇ- center of attraction. ಊರ ಜಾತ್ರೆಯಲ್ಲಿ ತೇರಿನ ಸುತ್ತ ಜನಜಂಗುಲಿ ನೆರೆದಿರುವಂತೆ, ಗ್ರಹಗಳೆಲ್ಲ ಸೂರ್ಯನ ಸುತ್ತಲಿರುವಂತೆ ಕರ್ನಾಟಕ ಸಂಸ್ಕೃತಿ ಜಗತ್ತಿನ ಸಂಸ್ಕೃತಿಗಳಲ್ಲಿ ಕೇಂದ್ರ ಬಿಂದುವಾಗಿ ಮೆರೆಯುತ್ತಿದೆ ಅಂತಲ್ಲವೆ?.

ಇಲ್ಲಿರುವವನು ದನಗಳನ್ನು ಬರಿಯ ಮೇಯಿಸುವ ಗೊಲ್ಲನಲ್ಲ. ಕೊಳಲನೂದುವ ಗೊಲ್ಲ, ಹಸುಗಳನ್ನು ಆದರಿಸಿ ಪ್ರೀತಿಸುವ ಗೊಲ್ಲ. ತಾನು ತಾನಾಗೇ ಇರುವ ಸಂಸ್ಕೃತಿ-ಸಂಸ್ಕಾರ ಶ್ರೀಮಂತಿಕೆಯ ಕನ್ನಡ ಜನಪದವೆಂಬ ಗೊಲ್ಲ. ಆ ಹಸುಗಳಾದರು ಎಂಥವು! ಎಲ್ಲೆಂದರಲ್ಲಿ ಅಟರಪಟರಾ ಅಲೆದಡಿಕೊಂಡು, ಹುಲ್ಲು ಮೇಯ್ದು, ಒಂದೋ ಎರಡೋ ಸಿದ್ದಿ ಹಾಲು ಕೊಟ್ಟು ಬಿದ್ದುಕೊಳ್ಳುವಂತದ್ದಲ್ಲ. ಅದು ಗಂಗೆ, ಅದು ಗೌರಿ, ಅದು ತುಂಗಭದ್ರೆ ತಾಯಿ. ಅದು ಪರಂಪರೆ ಅದು ನದಿ ಅದು ಕ್ರಿಯಾಶೀಲತೆ ಅದು ಪಾತಿವೃತ್ಯ(ಗೌರಿ) ಅದು ಧಾರ್ಮಿಕತೆ(ಗೌರಿ). ಇವೆಲ್ಲಕು ಮಿಗಲಾದ ಕೋಟಿಪುಣ್ಯದ ಸತ್ಯವಿದೆ. ಇವೆಲ್ಲವೂ ನಮ್ಮ ಜನಪದರ ಆಸ್ತಿಯೇ ಅಲ್ಲವೇನು? ಅವುಗಳನ್ನು ಸುಮ್ಮನೆ ಮೇಯಿಸುವುದಲ್ಲ. ಮೂಢರಾಗಿ ಆಚರಿಸುವುದಲ್ಲ. ಉಸಿರನಿತ್ತು ಆದರಿಂದ ಓಲೈಸಬೇಕು. ಕಾಳಿಂಗನದು ಬರೀ calling ಅಲ್ಲ, ಬಾ ತಾಯೇ ಎಂದು ಆದರದಿಂದ ಕರೆದು ಧ್ಯಾನಿಸುತ್ತಾನೆ. ಆಗ ತಂತಾನೆ ಹಾಲಿನ ಹೊಳೆ! ಅವು ಪ್ರತಿಫಲ ಕೊಟ್ಟೇಕೊಡುತ್ತವೆ. ಇಲ್ಲಿ ಮತ್ತೊಂದು ಆಯಾಮವಿದೆ: ಆ ಮುಗ್ಧ ಹಸುಗಳನ್ನು ಅತಿಮರ್ಯಾದೆಯಿಂದ ಪುಸಲಾಯಿಸಿ ಪಿಳ್ಳಂಗೋವಿ ಊದಿ ಮರಳು ಮಾಡಿ ತಾನೊಂದು ನಯಾಪೈಸೆ ಶ್ರಮವಿಲ್ಲದೆ ಹಾಲು ಪಡೆಯುವ ಕ್ಯಾಪಿಟಲಿಸ್ಟು ಆ ಗೊಲ್ಲ.

ಈಗ ಅರ್ಭುತಾನೆಂದೆಂಬ ವ್ಯಾಘ್ರನ ರಂಗಪ್ರವೇಶ. ಇದಂತೂ ಅತ್ಯಂತ ಹಾಸ್ಯಾಸ್ಪದ. ಅಲ್ರೀ, ಹಸಿದ ಹುಲಿ ಬಾಯಿಗೆ ಸಿಕ್ಕಿದ ಹಸುವನ್ನ ಹೋಗ್‌ ಒಂದ್‌ ರೌಂಡ್‌ ಹೊಡ್ಕೊಂಡು ಬಾ ಅನ್ನೋವಷ್ಟು ಗುಲ್ಡುನಾ? ಪಾಪ, ಆ ಕವಿ ಹುಲಿಯನ್ನು ನೋಡಿದ್ದಾನೋ ಇಲ್ವೋ. ಅನುಭವದ ಕೊರತೆಯಿಂದ ಇಂತಹ ಪ್ರಮಾದಗಳು ಆಗ್ತವೆ.

ಸರಿ, ಬೀಟ್‌ ಹೊಡ್ಕೊಂಡು ಬಾ ಅಂತ ಕಳಿಸಿರೋ ವ್ಯಾಘ್ರ ದುಷ್ಟನಲ್ಲ; ಅದು ವ್ಯಗ್ರ ಅದು ಹಸಿವು ಅಷ್ಟೆ. ಮತ್ತೆ, ಪುಣ್ಯಕೋಟಿ ಹಿಂದಿರುಗಿ ಬರುತ್ತೆ ಅನ್ನೋ ನಂಬಿಕೆ ಇಲ್ದೇ ಇದ್ದಿದ್ರೆ ಅದು ಕಳುಹಿಸತ್ತಲೇ ಇರಲಿಲ್ಲ. ಜನಪದರ ಮೂಲ ಮೌಲ್ಯವಾದ ಪರಸ್ಪರ ನಂಬಿಕೆ ದೇವರ ಮೇಲಿನ ನಂಬಿಕೆಯ ಸಂಸ್ಕಾರ ವ್ಯಾಘ್ರನಿಗೆ ಇದೆ ಅಂತಾಯಿತು. ಆಣೆ-ಭಾಷೆಗಳ ಮೇಲೆ ಸಾಸಿವೆ ಚೂರಿನಷ್ಟೂ ವಿಶ್ವಾಸ ಉಳಿಸಿಕೊಂಡಿರದ ಇಂದಿನ 'ನಾಗರೀಕರಿಗೆ’ ಮಾತ್ರ ಇದೊಂದು ಸೋಜಿಗವೆನಿಸಬಹುದು (ನನಗಿಲ್ಲಿ ಮೊನ್ನೆ ನಮ್ಮ ಅಂಬ್ರೀಸನ್ನ ಕಾವೇರಿ ವಿಸಯದಾಗೆ ತಾಯಿ ಮೇಲೆ ಆಣೆ ಮಡಗಿದ್ದು ಗೆಪ್ತಿಗೆ ಬತ್ತೈತೆ). ಅಥವಾ ಮೇಟೇರಿಯಲಿಸ್ಟಿಕ್ಕಾಗಿ ನೋಡಿದರೂ, ಹುಲಿಯ ನಡವಳಿಕೆ ತೀರ ಆಶ್ಚರ್ಯವೇನಲ್ಲ. ಹಸು ಎಲ್ಲಿ ತಪ್ಪಿಸಿಕೊಂಡು ಹೋಗುತ್ತೆ?. ಇಂದಲ್ಲ ನಾಳೆ ಸಿಕ್ಕೇ ಸಿಗುತ್ತೆ. ಒಂದು ದಿನದ ಉಪವಾಸ ಹುಲಿಯ ಪ್ರಾಣ ತೆಗೆಯೋದಿಲ್ವಲ್ಲ?.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+