ಲೀಲಾವತಿ ಹಾಗೂ ಯಜ್ಞಾವತಿಗೆ ಅಬ್ಬಕ್ಕ ಪ್ರಶಸ್ತಿ
ಉಳ್ಳಾಲ: ಬ್ರಿಟಿಷರ ವಿರುದ್ಧ ಹೋರಾಡಿದ ತುಳುವ ರಾಣಿ ಅಬ್ಬಕ್ಕದೇವಿಯ ಹೆಸರಿನಲ್ಲಿ ನೀಡುವ ಅಬ್ಬಕ್ಕ ಪ್ರಶಸ್ತಿಗೆ ತುಳು- ಕನ್ನಡ ಲೇಖಕಿ ಯಜ್ಞಾವತಿ ಕೇಶವ ಕಂಗನ್ ಮತ್ತು ಯಕ್ಷಗಾನದ ಮಹಿಳಾ ಭಾಗವತರಾದ ಲೀಲಾವತಿ ಬೈಪಡಿತ್ತಾಯ ಅವರು ಆಯ್ಕೆಯಾಗಿದ್ದಾರೆ. ತುಳು ನಾಡಿನ ಸಾಹಿತ್ಯ ಮತ್ತು ಸಂಸ್ಕೃತಿಯ ಹಿನ್ನೆಲೆಯಿರುವ ಈ ಇಬ್ಬರು ಮಹಿಳೆಯರಿಗೆ ಅಬ್ಬಕ್ಕ ಪ್ರಶಸ್ತಿ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ. ಡಾ. ಬಿ. ಎ. ವಿವೇಕ ರೈ, ಪ್ರೊ. ಅಮೃತ ಸೋಮೇಶ್ವರ, ಕೆ. ಜಯರಾಂ ಶೆಟ್ಟಿ, ಬಿ. ಎಂ. ಇದಿನಬ್ಬ, ಫಾ. ಡೆನಿಸ್ ಡೇಸ, ದಿನಕರ ಉಳ್ಳಾಲ, ಭಾಸ್ಕರ ರೈ ಕುಕ್ಕುವಳ್ಳಿ, ಯು. ಆರ್. ಚಂದರ್ ಮತ್ತು ಅಬ್ದುಲ್ ರಹೀಂ ಟೀಕೆ ಅವರು ಆಯ್ಕೆ ಸಮಿತಿಯಲ್ಲಿದ್ದರು.
ಮಂಗಳೂರಿನ ಹೊಯ್ಗೆ ಬಜಾರಿನಲ್ಲಿರುವ ಯಜ್ಞಾವತಿ ಕೇಶವ ಕಂಗನ್ ಅವರು ಸ್ವಾತಂತ್ರ್ಯ ಹೋರಾಟಗಾರ ಕೃಷ್ಣಪ್ಪ ತಿಂಗಳಾಯ ಅವರ ಮಗಳು. ತುಳು ಹಾಗೂ ಕನ್ನಡ ಭಾಷೆಯಲ್ಲಿ ಲೇಖನ ವ್ಯವಸಾಯ ಮಾಡುತ್ತಿರುವ ಯಜ್ಞಾವತಿ ಅವರ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.
ಕರಾವಳಿಯ ಗಂಡು ಮೆಟ್ಟಿನ ಕಲೆ ಎಂದೇ ಕರೆಸಿಕೊಂಡ ಯಕ್ಷಗಾನದಲ್ಲಿ ಮಹಿಳೆಯರು ಅಷ್ಟಾಗಿ ಗುರುತಿಸಿಕೊಂಡಿಲ್ಲ. ಆದರೆ ಭಾಗವತಿಕೆ ಕ್ಷೇತ್ರದಲ್ಲಿ ಲೀಲಾವತಿ ಬೈಪಡಿತ್ತಾಯ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಡಿ. 29ರಂದು ಉಳ್ಳಾಲದಲ್ಲಿ ನಡೆಯಲಿರುವ ಐದನೇ ವೀರರಾಣಿ ಅಬ್ಬಕ್ಕ ಉತ್ಸವದಲ್ಲಿ ಸಚಿವ ಬಿ. ರಮಾನಾಥ ರೈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications