ಯುಗಾದಿ ಹಬ್ಬಕ್ಕೆ ಬರಿಗಾಲಲ್ಲಿ ಪಾದಯಾತ್ರೆ ನಡೆಸುವ ಹುಣಸೂರಿನ ವಿಶಿಷ್ಟ ಆಚರಣೆ
ಮೈಸೂರು, ಮಾರ್ಚ್ 15: ಯುಗಾದಿ ಹಬ್ಬವನ್ನು ಮನೆಗಳಲ್ಲಿ ಸಂಭ್ರಮದಿಂದ ಆಚರಿಸುವುದು ಸಾಮಾನ್ಯ. ಆದರೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿಯಲ್ಲಿ ಗ್ರಾಮದೇವತೆ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಪೂಜಾ ಕೈಂಕರ್ಯ, ಉತ್ಸವ ಕೊಂಡೋತ್ಸವ ಹೀಗೆ ಮೂರು ದಿನಗಳ ಜಾತ್ರಾ ಮಹೋತ್ಸವವನ್ನು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಯುಗಾದಿ ಹಬ್ಬದ ಮುನ್ನಾ ದಿನದಿಂದ ವರ್ಷತೊಡಕುವರೆಗೆ ಈ ಸಂಭ್ರಮ ನಡೆಯುತ್ತದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಗ್ರಾಮಸ್ಥರೆಲ್ಲರೂ ಜಾತಿ-ಭೇದ ಮರೆತು ಒಟ್ಟಿಗೆ ಸೇರಿ ಆಚರಿಸುವುದು ಈ ಹಬ್ಬದಲ್ಲಿ ಕಂಡು ಬರುವ ವಿಶೇಷತೆ. ಇಷ್ಟೇ ಅಲ್ಲದೆ ಕೆ.ಆರ್. ನಗರ ತಾಲೂಕಿನ ಚುಂಚನಕಟ್ಟೆ ಕಾವೇರಿ ನದಿಯಿಂದ ಉತ್ಸವ ಮೂರ್ತಿಗಳನ್ನು ತೊಳೆದು ಬರಿಗಾಲಿನಲ್ಲಿ ಸುಮಾರು 18 ಕಿ.ಮೀ. ಪಾದಯಾತ್ರೆ ಮೂಲಕ ತಂದು ಪೂಜಿಸಲಾಗುತ್ತದೆ. ಅಲ್ಲದೆ, ಯುಗಾದಿ ಮಾರನೆಯ ದಿನ ಹೊನ್ನಾರು ನಡೆಸುವ ಮೂಲಕ ಜಾತ್ರೆಗೆ ತೆರೆ ಎಳೆಯಲಾಗುತ್ತದೆ.
ಯುಗಾದಿ ಎಂಬ ಹೊಸ ವರ್ಷ... ಏನಿದರ ಮಹತ್ವ?
ಯುಗಾದಿ ಹಬ್ಬದ ಹಿಂದಿನ ದಿನ ಶ್ರೀ ಮಲ್ಲಿಕಾರ್ಜುನ ಉತ್ಸವ ಮೂರ್ತಿಯನ್ನು ಪಕ್ಕದ ಕೆ. ಆರ್.ನಗರ ತಾಲೂಕಿನ ಚುಂಚನಕಟ್ಟೆವರೆಗೆ ಗ್ರಾಮದ ಪ್ರತಿ ಕುಟುಂಬದಿಂದ ಕನಿಷ್ಟ ಒಬ್ಬರಂತೆ ರಾತ್ರಿ ಮನೆಯಿಂದ ತರುವ ಬುತ್ತಿಯೊಂದಿಗೆ ಎಲ್ಲರೂ ಒಂದೆಡೆ ಸೇರಿ ರಾತ್ರಿ ಇಡೀ ಬರಿಗಾಲಿನಲ್ಲಿ ನಡೆದುಕೊಂಡು ಬರುತ್ತಾರೆ.
ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ನಂತರ ಮುಂಜಾನೆ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಮಡಿಯುಟ್ಟು ಗ್ರಾಮದಿಂದ ತಂದ ಶ್ರೀ ಮಲ್ಲಿಕಾರ್ಜುನ ಉತ್ಸವ ಮೂರ್ತಿಯನ್ನು ನದಿಯಲ್ಲಿ ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಿದ ನಂತರ ಹೊಸಬಟ್ಟೆ ತೊಟ್ಟು ಮನೆಯಿಂದ ತಂದ ಬುತ್ತಿಯನ್ನು ಸಾಮೂಹಿಕವಾಗಿ ಸೇವಿಸುತ್ತಾರೆ.
ಯುಗಾದಿಯಂದು ಕಲಾರಸಿಕರನ್ನು ಮನರಂಜಿಸುವ 'ಸಂಗೀತ ಸಂಪದ'
ಇದಕ್ಕೂ ಮುನ್ನ ಹಬ್ಬದ ಪ್ರಯುಕ್ತ ಪರಸ್ವರ ಬೇವುಬೆಲ್ಲ ಸೇವಿಸುತ್ತಾರೆ. ನಂತರ ಗ್ರಾಮದೇವತೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮೂರ್ತಿಯನ್ನು ಕೆ.ಆರ್.ನಗರ ತಾಲೂಕಿನ ಶ್ರೀರಾಂಪುರ, ಮಳಲಿ, ಮಾವತ್ತೂರು ಮಾರ್ಗದ ಮೂಲಕ ಬಿರು ಬಿಸಿಲಿನಲ್ಲಿ ಬರಿಗಾಲಿನಲ್ಲಿ ನಡೆದು ಬಂದು ಸೇರುವ ಇವರಿಗೆ ಗ್ರಾಮಸ್ಥರು ನೀರು ಮಜ್ಜಿಗೆ ಪಾನಕ ನೀಡಿ ದಾಹ ತಣಿಸುತ್ತಾರೆ. ಉತ್ಸವ ಮೂರ್ತಿ ಊರಿನ ದೇವಸ್ಥಾನ ತಲುಪುತ್ತಿದ್ದಂತೆಯೇ ಗ್ರಾಮದ ಮಹಿಳೆಯರು ಮಕ್ಕಳು ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಬಳಿಕ ಹಬ್ಬದೂಟ ಸವಿಯುತ್ತಾರೆ.
ಬಳಿಕ ಸಂಜೆ 3 ಗಂಟೆಗೆ ದೇವಸ್ಥಾನದ ಬಳಿ ಮತ್ತೆ ಸೇರುವ ಗ್ರಾಮಸ್ಥರು ಸಂಪ್ರದಾಯದಂತೆ ಪುರೋಹಿತರನ್ನು ಕರೆಯಿಸಿ ಹೊಸ ಪಂಚಾಂಗದಂತೆ ಯಾರ ಹೆಸರಿನಲ್ಲಿ ಹಾಗೂ ಯಾವ ಬಣ್ಣದ ಎತ್ತುಗಳಿಂದ ಉಳುಮೆ ಮಾಡಬೇಕೆಂಬುದನ್ನು ನಿರ್ಧರಿಸಿ ಆಯ್ಕೆ ಮಾಡಿದ ರೈತನ ತಲೆಗೆ ಟವಲಿನಿಂದ ಪೇಟ ಬಿಳಿ ಪಂಚೆ ಶರ್ಟ್ ತೊಡಿಸುತ್ತಾರೆ. ಉಳುವ ಎತ್ತುಗಳನ್ನು ಏರುಕಟ್ಟಿ ತಮಟೆ ವಾದ್ಯಗಳೊಂದಿಗೆ ಇಡೀ ಊರು ಸುತ್ತಿ ಉಳುಮೆ ಮಾಡಿದ ನಂತರ ದೇವಸ್ಥಾನ ತಲುಪಿ ಹೊನ್ನಾರು ಪೂಜೆ ಮಾಡಿ ಉತ್ತಮ ಮಳೆ ಬೆಳೆಯಾಗಲಿ ಎಂದು ಬೇಡಿಕೊಳ್ಳುತ್ತಾರೆ.
ಮತ್ತೆ ರಾತ್ರಿ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವರ ಉತ್ಸವ ನಡೆಯುತ್ತದೆ. ಮಾರನೆಯ ದಿನ ಬೆಳಿಗ್ಗೆ 5.30ಕ್ಕೆ ಕೊಂಡೋತ್ಸವ ನಡೆಯಲಿದೆ.