Pitru Paksha 2022: ಶ್ರಾದ್ಧ ಕರ್ಮದ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳು
ಸೆಪ್ಟೆಂಬರ್ 11ರಂದು ಪ್ರಾರಂಭವಾದ ಪಿತೃ ಪಕ್ಷ ಸೆಪ್ಟೆಂಬರ್ 25ರವರೆಗೂ ಇದೆ. ಭಾದ್ರಪದ ಮಾಸದ ಕೃಷ್ಣಪಕ್ಷದ ಪೌರ್ಣಮಿಯಿಂದ ಅಮಾವಾಸ್ಯವರೆಗೂ ಇರುವ ಈ ಪಿತೃ ಪಕ್ಷದ ಅವಧಿ ನಮ್ಮ ಪೂರ್ವಿಕರ ಆತ್ಮಗಳಿಗೆ ನಾವು ನಮನ ಸಲ್ಲಿಸಿ ಅವರಿಗೆ ಮೋಕ್ಷ ಪ್ರಾಪ್ತಿಯಾಗಲು ನೆರವಾಗುತ್ತೇವೆ.
ಪಿತೃ ಪಕ್ಷದ ಅವಧಿಯಲ್ಲಿ ನಮ್ಮ ಹಿಂದಿನ ಪೂರ್ವಜರ ಮೂರು ತಲೆಮಾರಿನವರ ಆತ್ಮಗಳು ನಮ್ಮ ಬಳಿ ಬರುತ್ತವೆಂಬ ನಂಬಿಕೆ ಇದೆ. ಈ ಅವಧಿಯಲ್ಲಿ ಅವರಿಗೆ ನಾವು ಗೌರವ ತೋರಿಸಿದರೆ ಸಂತುಷ್ಟಿಪಡುತ್ತಾರೆ.
ಪಿಂಡದಾನ ಶ್ರಾದ್ಧ ಕರ್ಮ ವಿಧಿಗಳು ಬಹಳ ಮುಖ್ಯ. ಪಿತೃ ಪಕ್ಷದ ಕೊನೆಯಲ್ಲಿ ಮಹಾಲಯ ಅಮಾವಾಸ್ಯೆ ಅತಿ ಮುಖ್ಯ. ಈ ದಿನ ಪೂರ್ವಿಕರ ಅತ್ಮಗಳನ್ನು ಸ್ಮರಿಸಿ ಎಡೆ ಹಾಕಲಾಗುತ್ತದೆ. ಅದನ್ನು ಗೋವು, ಕಾಗೆಗಳಿಗೆ ಸಮರ್ಪಿಸಲಾಗುತ್ತದೆ.
ನಮ್ಮ ಪೂರ್ವಜರ ಆತ್ಮಗಳು ಕಾಗೆಗಳ ರೂಪದಲ್ಲಿ ಬಂದು ನಮ್ಮ ನೈವೇದ್ಯವನ್ನು ಸ್ವೀಕರಿಸಿ ಹೋಗುತ್ತಾರೆ ಎಂಬ ನಂಬಿಕೆ ಇದೆ. 15 ದಿನಗಳ ಪಿತೃ ಪಕ್ಷದಲ್ಲಿ ಏನೆಲ್ಲಾ ಕಾರ್ಯಗಳನ್ನು ಮಾಡಲಾಗುತ್ತದೆ, ಹೇಗೆಲ್ಲಾ ಮಾಡಲಾಗುತ್ತದೆ ಎಂಬ ವಿವರ ಇಲ್ಲಿದೆ.

ಪಿತೃ ಪಕ್ಷದ ಬಗ್ಗೆ ತಿಳಿಯಬೇಕಾದ ಸಂಗತಿಗಳು
* ಮನೆಯ ಹಿರಿಯ ಮಗ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡು ಶುಚಿಗೊಳ್ಳಬೇಕು.
* ಶ್ರಾದ್ಧ ಕಾರ್ಯ ಮಾಡುವವರು ಶುಭ್ರ ವಸ್ತ್ರ ಧರಿಸಿರಬೇಕು.
* ಮರದ ಹಲಗೆ ಅಥವಾ ಮಣೆಯ ಮೇಲೆ ದಕ್ಷಿಣಾಭಿಮುಖಿಯಾಗಿರುವ ನಿಮ್ಮ ಪೂರ್ವಿಕರ ಫೋಟೋ ಇರಿಸಬೇಕು.
* ತುಪ್ಪ, ಜೇನುತುಪ್ಪ, ಅಕ್ಕಿ, ಆಡಿನ ಹಾಲು, ಸಕ್ಕರೆ ಮತ್ತು ಬಾರ್ಲಿಯನ್ನು ಮಿಶ್ರ ಮಾಡಿ ಮುದ್ದೆಯ ರೀತಿ ಪಿಂಡಗಳನ್ನು ತಯಾರಿಸಬೇಕು.
* ಬಾರ್ಲಿ, ಹಿಟ್ಟು, ಗರಿಕೆ ಮತ್ತು ಕಪ್ಪೆಳ್ಳು ಮತ್ತು ನೀರು ಬಳಸಿ ತರ್ಪಣ ತಯಾರಿಸಬೇಕು.
* ಪೂರ್ವಿಕರಿಗೆ ತರ್ಪಣ ಬಿಡುವವರು ಪವಿತ್ರತೆಯನ್ನು ಕಾಪಾಡಿಕೊಳ್ಳಬೇಕು.
* ಅರ್ಚಕರು ಮತ್ತು ಕಾಗೆಗಳಿಗೆ ಆಹಾರ ಅರ್ಪಿಸಬೇಕು.
* ಪಿತೃ ಪಕ್ಷವು ಪಶ್ಚಾತಾಪದ ಕಾಲ. ಈ 15 ದಿನದ ಆದ್ಯಂತ ಬಹಳ ಸಂಯಮದಿಂದ ಇರಬೇಕು.

ಈ ಕೆಲಸವನ್ನು ಮಾಡದಿರಿ
* ಪಿತೃಪಕ್ಷದ ಅವಧಿಯಲ್ಲಿ ಮನಸು ಶುದ್ಧವಾಗಿರಬೇಕು. ಮಾಂಸಾಹಾರ ಸೇವಿಸಬಾರದು. ಈರುಳ್ಳಿ, ಬೆಳ್ಳುಳ್ಳಿ, ಬದನೆಕಾಯಿಯಂಥ ತಾಮಸಿಕ ಆಹಾರವನ್ನೂ ಸೇವಿಸಬಾರದು. ಮದ್ಯ, ಸಿಗರೇಟು, ತಂಬಾಕುಗಳು ಮುಟ್ಟದಿರಿ.
* ಹಿರಿಯರಿಗೆ ಹಿಂದಿರುಗಿ ಮಾತನಾಡಬೇಡಿ. ಅಗೌರವ ತೋರಬೇಡಿ.
* ಈ ಕಾಲಾವಧಿಯಲ್ಲಿ ಯಾವುದಾದರೂ ಶುಭ ಕಾರ್ಯಗಳನ್ನು ಮಾಡಬೇಡಿ.
* ಪಿತೃ ಪಕ್ಷದ ಅವಧಿಯಲ್ಲಿ ಹೊಸ ಬಟ್ಟೆ ಧರಿಸುವುದಾಗಲೀ, ಖರೀದಿಸುವುದಾಗಲೀ ಬೇಡ.
* ಈ ಅವಧಿಯಲ್ಲಿ ಹೇರ್ ಕಟಿಂಗ್, ಶೇವಿಂಗ್ ಮಾಡಬೇಡಿ. ಉಗುರು ಕೂಡ ಕತ್ತರಿಸಬೇಡಿ.

ಹೆಣ್ಮಕ್ಕಳು ಶ್ರಾದ್ಧ ಮಾಡಬಹುದೇ?
ಹಿಂದೂ ಶಾಸ್ತ್ರಗಳ ಪ್ರಕಾರ ಸಾಮಾನ್ಯವಾಗಿ ಶ್ರಾದ್ಧ, ತರ್ಪಣ, ಪಿಂಡದಾನ ಕರ್ಮ ವಿಧಿಗಳನ್ನು ಕುಟುಂಬದ ಹಿರಿಯ ಮಗ ಮಾಡಬೇಕೆಂದು ಹೇಳಲಾಗುತ್ತದೆ. ಹಿರಿಯ ಮಗ ಇಲ್ಲದಿದ್ದರೆ ಬೇರೆ ಗುಂಡು ಮಕ್ಕಳಲ್ಲಿ ಒಬ್ಬರು ಮಾಡಬಹುದು. ಗಂಡು ಸಂತಾನವೇ ಇಲ್ಲದಿದ್ದ ಪಕ್ಷದಲ್ಲಿ, ಅಥವಾ ಅವರು ಶ್ರಾದ್ಧ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರೆ ಆಗ ಹೆಣ್ಮಕ್ಕಳು ಆ ಕರ್ಮಗಳನ್ನು ಮಾಡಲು ಅನುಮತಿ ಇದೆ.

ಪಿತೃ ಲೋಕ ಎಲ್ಲಿದೆ?
ಪಿತೃ ಪಕ್ಷದಲ್ಲಿ ಮೂರು ತಲೆಮಾರಿನ ಪೂರ್ವಿಕರ ಆತ್ಮಗಳಿಗೆ ಶ್ರಾದ್ಧ ಮಾಡಲು ಕಾರಣ ಇದೆ. ಹಿಂದೂ ಪುರಾಣಗಳ ಪ್ರಕಾರ ನಮ್ಮ ಮೂರು ತಲೆಮಾರಿನ ಪೂರ್ವಜರ ಆತ್ಮಗಳು ಪಿತೃ ಲೋಕದಲ್ಲಿ ಇರುತ್ತವೆ ಎನ್ನಲಾಗುತ್ತದೆ. ಭೂಮಿ ಮತ್ತು ಸ್ವರ್ಗದ ಮಧ್ಯೆ ಈ ಲೋಕ ಇದ್ದು, ಇದಕ್ಕೂ ಯಮನೇ ಅಧಿಪತಿ.
(ಒನ್ಇಂಡಿಯಾ ಸುದ್ದಿ)












Click it and Unblock the Notifications