Get Updates
Get notified of breaking news, exclusive insights, and must-see stories!

400 ನೇ ಮೈಸೂರು ದಸರಾ ಜಂಬೂಸವಾರಿ

400th Mysore Dasara Jambu savari Procession
ಮೈಸೂರು, ಅ.17: ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ 400 ವರ್ಷಗಳು ತುಂಬಿದ ಸಂಭ್ರಮ. 750 ಕಿ.ಗ್ರಾಂ. ತೂಕದ ಬಂಗಾರದ ಅಂಬಾರಿಯನ್ನು ಬಹುಶಃ ಕೊನೆ ಬಾರಿಗೆ ಹೊತ್ತ ಬಲರಾಮ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾನೆ. ಬಲರಾಮ ಹಿಂದೆ ಸುಂದರವಾಗಿ ಅಲಂಕೃತಗೊಂಡ ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸಿದೆ. ಇಂದು ಮಧ್ಯಾಹ್ನ 1.45 ರಿಂದ 2.10ಕ್ಕೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ನಂತರ ಒಳಾವರಣದ ವೇದಿಕೆಯಲ್ಲಿ ನಿಂತು ದೇವಿ ಚಾಮುಂಡೇಶ್ವರಿಯನ್ನು ಅಂಬಾರಿ ಹೊತ್ತು ಬಂದ ಬಲರಾಮ ನೇತೃತ್ವದ 'ಜಂಬೂ ಸವಾರಿ' ಮೆರವಣಿಗೆಗೆ ಹಸಿರು ಶಾಲು ಹೊದ್ದ ಸಿಎಂ ಪುಷ್ಪ ಸಮರ್ಪಣೆ ಮಾಡಿ ವಿದ್ಯುಕ್ತವಾಗಿ ಚಾಲನೆ ನೀಡಿದರು.

ರಾಜವಂಶಸ್ಥ, ಮಾಜಿ ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ರಾಜ್ಯ ಹೈ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್ , ಮೈಸೂರು ಉಸ್ತುವಾರಿ ಸಚಿವ ಎ ರಾಮದಾಸ್ , ಮೈಸೂರು ನಗರ ಮೇಯರ್ ಸಂದೇಶ್ ಸ್ವಾಮಿ ಮತ್ತಿತ್ತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಜಂಬೂ ಸವಾರಿಗೆ ಚಾಲನೆ ಸಿಕ್ಕ ಮರುಕ್ಷಣವೇ ಮಳೆ ಸುರಿಸುವ ಮೂಲಕ ವರುಣ ದೇವ ಕೃಪೆ ನಾಡಿಗೆ ಶುಭ ಹಾರೈಸಿದ್ದಾನೆ. ಅರಮನೆಯಿಂದ ಹೊರಟ ಜಂಬೂ ಸವಾರಿ ಸುಮಾರು 5.30 ರ ವೇಳೆಗೆ ಬನ್ನಿಮಂಟಪ ಸೇರುವ ನಿರೀಕ್ಷೆಯಿದೆ.

ಕಳೆದ ಒಂದೆರಡು ವಾರಗಳಿಂದ ರಾಜಕೀಯ ಸುದ್ದಿ ಭರಾಟೆಯಲ್ಲೇ ಮುಳುಗಿಹೋಗಿದ್ದ ಖಾಸಗಿ ಸುದ್ದಿ ವಾಹಿನಿಗಳು ದೂರದರ್ಶನದ ಚಂದನ ವಾಹಿನಿಯಿಂದ ಫೀಡ್ ಪಡೆದು ಸುಮಾರು ಮೂರುಗಂಟೆಗಳ ಕಾಲ ಜಂಬೂ ಸವಾರಿ ಉತ್ಸವದ ನೇರ ಪ್ರಸಾರ ಮಾಡಿದ್ದು ವಿಶೇಷ.

ಮನಸಾರೆ ಕುಣಿದ ಕಲಾವಿದರು: ಕರಗ, ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ, ನಂದಿ ಕೋಲು ಕುಣಿತ, ಸೋಮನ ಕುಣಿತ, ಪೂಜಾ ಕುಣಿತ..ಕೋಲಾಟ ಹೀಗೆ ವಿವಿಧ ಕಲಾವಿದರ ಕಲೆ ಆವರಣಕ್ಕೆ ಉತ್ತಮ ವೇದಿಕೆಯಾದ ದಸರಾ ಮೆರವಣಿಗೆ ವಿಭಿನ್ನ ಜನಪದ ಪ್ರಕಾರಗಳು ತೆರೆದಿಟ್ಟವು.

ಜನಮೆಚ್ಚಿದ್ದ ಸ್ತಬ್ಧ ಚಿತ್ರಗಳು: ಆಯಾ ಜಿಲ್ಲೆಗಳ ವಿಶೇಷತೆಗಳನ್ನು ಎತ್ತಿ ತೋರಿಸುವ ಸ್ತಬ್ಧಚಿತ್ರಗಳು ಪ್ರದರ್ಶಿತವಾದವು. ಗದಗಿನ ಗಾನಯೋಗಿ ದಿ. ಪುಟ್ಟರಾಜ ಗವಾಯಿಗಳ ಸ್ತಬ್ದ ಚಿತ್ರ ಕಣ್ಮನ ಸೆಳೆಯಿತು. ಮಂಡ್ಯಜಿಲ್ಲೆಯಿಂದ ಮೈಸೂರು ದರ್ಬಾರ್ ಚಿತ್ರ, ಚಿತ್ರದುರ್ಗದ ಕಲ್ಲಿನ ಕೋಟೆ, ಕೊಪ್ಪಳದ ಆನೆಗೊಂದಿ ಕೋಟೆ, ದಕ್ಷಿಣ ಕನ್ನಡ ಜಿಲ್ಲೆ ರಾಣಿ ಅಬ್ಬಕ್ಕನ ಚಿತ್ರ, ತುಮಕೂರಿನ ಮಧುಗಿರಿ ಬೆಟ್ಟ, ಬಿಜಾಪುರದ ಗೋಲ್ ಗುಂಬಜ್ ಚಿತ್ರ, ಶಿವಮೊಗ್ಗದ ಬಿದನೂರು ಕೋಟೆ ಚಿತ್ರಗಳು ಗಮನ ಸೆಳೆದವು. ಈ ಬಾರಿ ಹೆಚ್ಚಿನ ಜಿಲ್ಲೆಗಳು ಕೋಟೆ ಕೊತ್ತಲಗಳನ್ನು ಪ್ರದರ್ಶಿಸಿದ್ದು ವಿಶೇಷ.

ಆಕರ್ಷಕ ಜಂಬೂ ಸವಾರಿ : ವಿಜಯ ದಶಮಿ ದಿನದಂದು ನಡೆಯುವ ಜಂಬೂ ಸವಾರಿ ಮೈಸೂರು ದಸರಾದ ಪ್ರಮುಖ ಆಕರ್ಷಣೆ. ನವವರ ವಧುವಿನಂತ ಸಿಂಗಾರಗೊಂಡ ಆನೆಗಳು ಗಂಭೀರ ಗತಿಯಲ್ಲಿ ಮೆರವಣಿಗೆ ಹೊರಡುವುದು ನೋಡಲು ಮುದ ನೀಡುತ್ತದೆ.

4900 ಕೆ ಜಿ ತೂಕುವ 52 ವರ್ಷದ ಬಲರಾಮ ಸುಮಾರು 15 ವರ್ಷಗಳಿಂದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾನೆ. ದ್ರೋಣನ ನಂತರ 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಕಳೆದ 12 ವರ್ಷಗಳಿಂದ ಹೊತ್ತು ತರುತ್ತಿದ್ದಾನೆ. ಜಂಬೂ ಸವಾರಿ ಮೆರವಣಿಗೆಯಲ್ಲಿ ಬಲರಾಮನಿಗೆ ಅಭಿಮನ್ಯು, ವರಲಕ್ಷ್ಮಿ, ಗಜೇಂದ್ರ, ಅರ್ಜುನ, ಸರಳಾ, ಮೇರಿ ಸಾಥ್ ನೀಡಿದ್ದಾರೆ.

ಬಾಲರಾಮನಿಗೆ ನಿವೃತ್ತಿ ಕಾಲ: ಬಲರಾಮನಿಗೆ ವಯಸ್ಸಾಗುತ್ತಿರುವುದರಿಂದ ಕಣ್ಣಿನಲ್ಲಿ ಪೊರೆ ಬಂದಿರುವ ಕಾರಣ ಕೊನೆ ಬಾರಿಗೆ ಚಿನ್ನದ ಅಂಬಾರಿಯನ್ನು ಹೊತ್ತಿದ್ದಾನೆ. ಕೆ.ಗುಡಿ ಅರಣ್ಯ ಪ್ರದೇಶದ ಗಜೇಂದ್ರನಿಗೆ ಬಹುಶಃ ಮುಂದಿನ ಚಿನ್ನದ ಅಂಬಾರಿ ಹೊರುವ ಅವಕಾಶ ಲಭ್ಯವಾಗುವ ಎಲ್ಲ ಲಕ್ಷಣಗಳು ಕಂಡುಬಂದಿದೆ.

ವೈವಿಧ್ಯಮಯ ದಸರಾ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಂದ ಉದ್ಘಾಟನೆಗೊಂಡ ದಸರಾ ಮಹೋತ್ಸವ ಕಳೆದ ಒಂಭತ್ತು ದಿನಗಳಿಂದ ಮನರಂಜನಾ ದಸರಾ, ಯುವದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ರೈತರ ದಸರಾ, ಆಹಾರ ಮೇಳ, ಯೋಗ ದಸರಾ, ಚಲನಚಿತ್ರೋತ್ಸವ, ಗ್ರಾಮೀಣ ದಸರಾ, ಭಜನಾ ದಸರಾ, ಕ್ರೀಡಾಕೂಟ, ಕುಸ್ತಿ, ಗಾಳಿಪಟ ಸ್ಪರ್ಧೆ, ಸೈಕಲ್ ಸ್ಪರ್ಧೆ ಮುಂತಾದ ವಿವಿಧ ಕಾರ್ಯಕ್ರಮಗಳ ಮೂಲಕ ಜನಮನಸೂರೆಗೊಂಡಿತು.

ಪಂಜಿನ ಕವಾಯತು: ಬನ್ನಿಮಂಟಪದಲ್ಲಿ ಸಂಜೆ 6.30ಕ್ಕೆ ರಾಜ್ಯಪಾಲ ಎಚ್ ಭಾರದ್ವಾಜ್ ಅವರು ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಅಶ್ವಾರೋಹಿದಳ, ಟೆಂಟ್ ಪೆಗ್ಗಿಂಗ್, ಮೋಟರ್ ಸೈಕಲ್ ಚಮತ್ಕಾರ, ಲೇಸರ್ ಷೋ, ಪಂಜಿನ ಕವಾಯತು ಪ್ರಮುಖ ಆಕರ್ಷಣೆಯಾಗಲಿದೆ.

ದಸರಾ ಸಮಗ್ರ ಸುದ್ದಿಗಳು |ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+