ಲಾಲೂ ಪುತ್ರ ತೇಜಸ್ವಿ ಪ್ರೇಮ ಕಥೆ; ಕ್ರೈಸ್ತ ಹುಡುಗಿ ರಾಚೆಲ್ ಗಾಡಿನ್ಹೋ ಯಾರು?
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಮಗ ತೇಜಸ್ವಿ ಯಾದವ್ ಇದೀಗ ಎರಡನೇ ಬಾರಿ ಆ ರಾಜ್ಯದ ಡಿಸಿಎಂ ಆಗಿದ್ದಾರೆ. ಮೊದಲ ಬಾರಿ ಉಪಮುಖ್ಯಮಂತ್ರಿಯಾಗಿದ್ದಾಗ ರಾಜ್ಯಭಾರದ ಹೊಣೆ ಇತ್ತು. ಈಗ ಅವರ ಜವಾಬ್ದಾರಿ ಡಬಲ್ ಆಗಿದೆ.
ತೇಜಸ್ವಿ ಮತ್ತು ರಾಚೆಲ್ ಮದುವೆಯಾಗಿ ಇನ್ನೂ ಒಂದು ವರ್ಷ ಕಳೆದಿಲ್ಲ. ಹೀಗಾಗಿ ಅವರಿನ್ನೂ ನವ ವಿವಾಹಿತರೇ. ರಾಚೆಲ್ ಗಾಡಿನ್ಹೋ ಈಗ ರಾಜಶ್ರೀಯಾಗಿ ಬದಲಾಗಿದ್ದಾರೆ. ತೇಜಸ್ವಿ ಯಾದವ್ ಮತ್ತೆ ಉಪ ಮುಖ್ಯಮಂತ್ರಿ ಎನಿಸಿದ್ದಾರೆ.
ಕಳೆದ ವರ್ಷವಷ್ಟೇ ತೇಜಸ್ವಿ ಯಾದವ್ ಮದುವೆಯಾಗಿತ್ತು. ಈಗ ಸಂಸಾರದ ನೊಗ ಹೊತ್ತು ಎರಡನೇ ಬಾರಿ ಡಿಸಿಎಂ ಆಗಿದ್ದಾರೆ. ಅವರು ವಿವಾಹವಾಗಿದ್ದು ರಾಚೆಲ್ ಗಾಡಿನ್ಹೋ ಎಂಬ ಕ್ರೈಸ್ತ ಧರ್ಮೀಯ ಹುಡುಗಿಯನ್ನು. ಹೀಗಾಗಿ, ಕಳೆದ ವರ್ಷ ನಡೆದ ಅವರ ಮದುವೆ ಭಾರೀ ಸುದ್ದಿ ಮಾಡಿತ್ತು.
ನನ್ನ ನಿವಾಸದಲ್ಲೇ ಇ.ಡಿ, ಸಿಬಿಐ ಕಚೇರಿ ತೆರೆಯಲಿ: ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್
ಬಿಹಾರದಂಥ ಜಾತಿ ಸೂಕ್ಷ್ಮ ರಾಜ್ಯದಲ್ಲಿ, ಅದರಲ್ಲೂ ಯಾದವ ಸಮುದಾಯದವರು ಅಂತರ್ಜಾತಿ ಮದುವೆ ಎಂದರೆ ಆಕಾಶ ತಲೆಕೆಳಗಾದಂತೆ ವರ್ತಿಸುವುದುಂಟು. ಹೀಗಾಗಿರುವಾಗ ಯಾದವ ಜಾತಿಯ ಪ್ರಶ್ನಾತೀತ ನಾಯಕರೆನಿಸಿದ ಲಾಲೂ ಪ್ರಸಾದ್ ಯಾದವ್ ಮನೆಯಲ್ಲಿ ಹೀಗೆ ಅಂತರ್ಜಾತಿ ಮದುವೆಯಾದರೆ ಹೇಗಿದ್ದೀತು?
ಯಾರು ಈ ರಾಚೆಲ್ ಗಾಡಿನ್ಹೋ?
ರಾಚೆಲ್ ಗಾಡಿನ್ಹೋ ಹರಿಯಾಣದ ರೇವಾಡಿ ಜಿಲ್ಲೆಯವರು. ಕ್ರೈಸ್ತ ಧರ್ಮೀಯ ಹುಡುಗಿ. ರಾಚೆಲ್ ಅವರ ತಂದೆ ಶಿಕ್ಷಣ ತಜ್ಞರಾಗಿದ್ದು, ದೆಹಲಿಯ ಶಾಲೆಯೊಂದರಲ್ಲಿ ಪ್ರಿನ್ಸಿಪಾಲ್ ಅಗಿ ನಿವೃತ್ತಿ ಹೊಂದಿದ್ದಾರೆ. ದಕ್ಷಿಣ ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೊನಿಯಲ್ಲಿ ಅವರಿಗೆ ಸ್ವಂತ ಮನೆಯೂ ಇದೆ.
ರಾಚೆಲ್ ಗಾಡಿನ್ಹೋ ಸಿವಿಲ್ ಏವಿಯೇಶನ್ ಉದ್ಯಮದಲ್ಲಿ ಕೆಲಸ ಮಾಡಿದ್ದು ಬಿಟ್ಟರೆ ಆಕೆಯ ವೈಯಕ್ತಿಕ ಮತ್ತು ಕೌಟುಂಬಿಕ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.
ತೇಜಸ್ವಿ ಪರಿಚಯ ಹೇಗೆ?
ಸೌತ್ ದಿಲ್ಲಿಯ ಆರ್ ಕೆ ಪುರಂನಲ್ಲಿರುವ ಡಿಲ್ಲಿ ಪಬ್ಲಿಕ್ ಸ್ಕೂಲ್ನಲ್ಲಿ ರಾಚೆಲ್ ಗಾಡಿನ್ಹೋ ಮತ್ತು ತೇಜಸ್ವಿ ಯಾದವ್ ಇಬ್ಬರೂ ಪರಿಚಿತರೆನ್ನಲಾಗಿದೆ.
ಇಬ್ಬರೂ ಮದುವೆಯಾಗಿದ್ದು 2021 ಡಿಸೆಂಬರ್ 9ರಂದು. ಮದುವೆಗೆ ಏಳೆಂಟು ವರ್ಷಗಳ ಮುಂಚಿನಿಂದಲೂ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದುದು ತಿಳಿದುಬಂದಿದೆ. ಆದರೆ, ಈ ವಿಚಾರವನ್ನು ಇಬ್ಬರೂ ರಹಸ್ಯವಾಗಿ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದರು.
ತನ್ನ ಪತಿ ತೇಜಸ್ವಿ ಬಗ್ಗೆ ರಾಚೆಲ್ ಪ್ರೀತಿ ವ್ಯಕ್ತಪಡಿಸಿವುದು ಹೀಗೆ: "ತೇಜಸ್ವಿ ಯಾದವ್ ರಾಜಕೀಯಕ್ಕೆ ಬರುವ ಮುಂಚಿನಿಂದಲೂ ನನಗೆ ಗೊತ್ತು. ಅವರೆಂದರೆ ನನಗೆ ಬಹಳ ಗೌರವ. ಅವರು ಬುದ್ಧಿವಂತ, ಯುವ ಮುಖಂಡ" ಎಂದು ಆಕೆ ಬುದ್ಧಿವಂತಿಕೆಯ ಉತ್ತರ ನೀಡುತ್ತಾರೆ.
"ಈಕೆ ನನ್ನ ಸರಿಜೋಡಿ" ಎಂದು ತಮ್ಮ ಪತ್ನಿ ಬಗ್ಗೆ ತೇಜಸ್ವಿ ಹೇಳುತ್ತಾರೆ.
ಇನ್ನೂ 32 ವರ್ಷ ವಯಸ್ಸಿನ ತರುಣನಾಗಿರುವ ತೇಜಸ್ವಿ ಯಾದವ್ ಅವರದ್ದು ದೊಡ್ಡ ಕುಟುಂಬ. ಲಾಲೂ ಪ್ರಸಾಧ್ ಯಾದವ್ ಅವರ ಒಂಬತ್ತು ಮಕ್ಕಳಲ್ಲಿ ತೇಜಸ್ವಿ ಎಂಟನೆಯವರು. ಏಳು ಸಹೋದರಿಯರು ಮತ್ತು ಒಬ್ಬ ಸಹೋದರ ಇದ್ದಾರೆ. ಸಹೋದರ ತೇಜ್ ಪ್ರತಾಪ್ ಯಾದವ್ ಕೂಡ ರಾಜಕೀಯದಲ್ಲಿದ್ದಾರೆ.
ಲಾಲೂ ಪ್ರತಿಕ್ರಿಯೆ ಹೇಗಿತ್ತು?
ಲಾಲೂ ಪ್ರಸಾದ್ ಯಾದವ್ ಬಹಳ ಸಂಪ್ರದಾಯವಾದಿ ಎಂದು ಹೇಳುವವರಿದ್ದಾರೆ. ಆದರೆ, ತಮ್ಮ ಮಗ ತೇಜಸ್ವಿ ಯಾದವ್ ಒಬ್ಬ ಕ್ರೈಸ್ತ ಧರ್ಮೀಯ ಹುಡುಗಿಯನ್ನು ಮದುವೆಯಾಗಲು ಹೊರಟಾಗ ಹೇಗೆ ಅದನ್ನು ಸ್ವೀಕರಿಸಿದರು ಎಂಬುದು ಕುತೂಹಲ.
ತೇಜಸ್ವಿ ಯಾದವ್ ಪ್ರಕಾರ, ಅವರ ಮದುವೆಗೆ ಅಪ್ಪ ಲಾಲೂ ಪ್ರಸಾದ್ ಯಾದವ್ ಯಾವ ತಕರಾರೂ ಎತ್ತಲಿಲ್ಲವಂತೆ. "ಅಪ್ಪ ನಾನು ಈ ಹುಡುಗಿಯ ಡೇಟಿಂಗ್ ಮಾಡುತ್ತಿದ್ದೇನೆ. ಆಕೆಯನ್ನು ಮದುವೆಯಾಗಲು ಬಯಸುತ್ತೇನೆ. ಆದರೆ, ಆಕೆ ಕ್ರಿಶ್ಚಿಯನ್" ಎಂದು ನಾನು ಅಪ್ಪನ ಬಳಿ ಹೇಳಿದೆ.
"ಅದಕ್ಕೆ ಅಪ್ಪ, 'ಅದು ಓಕೆ. ಪರವಾಗಿಲ್ಲ' ಎಂದು ಹೇಳಿದರು" ಎಂದು ಹೇಳುವ ತೇಜಸ್ವಿ ಯಾದವ್, ಜನರು ಲಾಲೂಜಿಯ ಈ ವಿಚಾರದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಅಪ್ಪನ ಬಗ್ಗೆ ತಪ್ಪು ಕಲ್ಪನೆ
ಲಾಲೂ ಪ್ರಸಾದ್ ಯಾದವ್ ಕುಟುಂಬದ ವಿಚಾರ ಬಂದಾಗ ಬಹಳ ಕಟ್ಟು ನಿಟ್ಟು. ತಾನು ಹಾಕಿದ ಗೆರೆಯನ್ನು ಯಾರೂ ದಾಟಬಾರದು ಎಂದು ತಾಕೀತು ಮಾಡುತ್ತಾರೆ. ಅದರಲ್ಲೂ ಹೆಣ್ಮಕ್ಕಳನ್ನು ಬಹಳ ಹದ್ದುಬಸ್ತಿನಲ್ಲಿಡುತ್ತಾರೆ ಎಂಬಂತೆ ಬಿಹಾರದ ಜನರು ಮಾತನಾಡಿಕೊಳ್ಳುವುದುಂಟು. ಮಗ ತೇಜಸ್ವಿ ಯಾದವ್ ಈ ವಿಚಾರಗಳನ್ನು ಅಲ್ಲಗಳೆಯುತ್ತಾರೆ. ತನ್ನಪ್ಪ ಬಹಳ ಆಧುನಿಕ ಮನೋಭಾವದ ವ್ಯಕ್ತಿ ಎಂದು ಹೇಳುತ್ತಾರೆ.
"ನಮ್ಮ ತಂದೆ, ನಮ್ಮ ಕುಟುಂಬ ಮತ್ತು ನಮ್ಮ ಬಿಹಾರ ರಾಜ್ಯದ ಬಗ್ಗೆ ಒಂದು ಕಲ್ಪನೆ ಬೆಳೆದುಬಿಟ್ಟಿದೆ. ವಾಸ್ತವವಾಗಿ ಅದು ಹಾಗಿಲ್ಲ. ನನ್ನ ಅಕ್ಕಂದಿರಿಗೆ ಅಪ್ಪ ಸದಾ ಸ್ವಾತಂತ್ರ್ಯ ಕೊಟ್ಟಿದ್ದರು. ಅವರನ್ನು ಮುಂಚೂಣಿಯಲ್ಲಿಡುತ್ತಿದ್ದರು. ಅಕ್ಕಂದಿರೆಲ್ಲರದ್ದೂ ಅರೆಂಜ್ಡ್ ಮ್ಯಾರೇಜ್ ಆದರೂ ಯಾವುದೂ ಬಲವಂತವಾಗಿ ಮಾಡಿದ್ದಲ್ಲ. ಹುಡುಗ ಇಷ್ಟವಾಗದಿದ್ದರೆ ಅವರಿಗೆ ತಿರಸ್ಕರಿಸುವ ಸ್ವಾತಂತ್ರ್ಯ ಕೊಡಲಾಗಿತ್ತು" ಎಂದು ತೇಜಸ್ವಿ ಯಾದವ್ ವಿವರಿಸುತ್ತಾರೆ.
ಪತ್ನಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರಾ?
ಕ್ರೈಸ್ತ ಧರ್ಮದ ರಾಚೆಲ್ ಗಾಡಿನ್ಹೋ ತೇಜಸ್ವಿ ಯಾದವ್ ಅವರನ್ನು ಮದುವೆಯಾದ ಬಳಿಕ ರಾಜ್ಶ್ರೀ ಎಂದು ಹೆಸರು ಬದಲಾಯಿಸಿಕೊಂಡಿದ್ಧಾರೆ. ಅಂದಹಾಗೆ, ಹೀಗೆ ಹೆಸರು ಬದಲಾಯಿಸಿದ್ದು ಆಕೆಯಲ್ಲ, ಬದಲಾಗಿ ಲಾಲೂ ಪ್ರಸಾದ್ ಯಾದವ್ ಅವರಂತೆ.
ಬಿಹಾರದ ಜನರಿಗೆ ರಾಚೆಲ್ ಎಂದು ಕರೆಯಲು ಕಷ್ಟವಾಗುತ್ತದೆ ಎಂದು ಆ ಹೆಸರನ್ನು ರಾಜಶ್ರೀ ಎಂದು ಬದಲಾಯಿಸಿಕೊಳ್ಳಲು ಲಾಲೂ ಸಲಹೆ ನೀಡಿದ್ದರಂತೆ. ಅದರಂತೆ ರಾಚೆಲ್ ಗೋಡಿನ್ಹೋ ಈಗ ರಾಜಶ್ರೀಯಾಗಿ ಬದಲಾಗಿದ್ದಾರೆ.
ಕೇವಲ ಹೆಸರು ಬದಲಾವಣೆ ಆಗಿದೆಯೋ ಅಥವಾ ಆಕೆ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೋ ಎಂಬುದು ಗೊತ್ತಾಗಿಲ್ಲ.
ಸೋದರ ಮಾವನ ವಿರೋಧ
ತೇಜಸ್ವಿ ಯಾದವ್ ಕ್ರೈಸ್ತ ಹುಡುಗಿ ರಾಚೆಲ್ ಗಾಡಿನ್ಹೋರನ್ನು ಮದುವೆಯಾದಾಗ ಲಾಲೂ ವಿರೋಧಿಸಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ಅವರ ಸೋದರ ಮಾವ ಸಾಧು ಯಾದವ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಸಾಧು ಯಾದವ್ ಅವರು ಲಾಲೂ ಪತ್ನಿ ರಾಬ್ರಿ ದೇವಿಯ ಸಹೋದರ. ಅಂದರೆ, ತೇಜಸ್ವಿ ಯಾದವ್ಗೆ ಸೋರ ಮಾವ.
"ಆತ ಬೇರೆ ಸಮುದಾಯದ ಹುಡುಗಿಯನ್ನು ಮದುವೆಯಾಗುವ ಮೂಲಕ ಲಾಲೂ ಪ್ರಸಾಧ್ ಕುಟುಂಬದ ಘನತೆಗೆ ಮಸಿ ಬಳಿದಿದ್ದಾನೆ. ಬಿಹಾರ ವಿಧಾನಸಭೆಯ ವಿಪಕ್ಷ ನಾಯಕನಾಗಲು ಆತ ಅರ್ಹನಲ್ಲ... ಆತನ ನಮ್ಮನ್ನು ಆಳಬಯಸುತ್ತಾನೆ. ನಾವದಕ್ಕೆ ಅವಕಾಶ ಕೊಡುವುದಿಲ್ಲ. ನಾವು ಆತನನ್ನು ನಿಷೇಧಿಸುತ್ತೇನೆ. ಆತನಿಗೆ ಪಾಠ ಕಲಿಸುತ್ತೇವೆ" ಎಂದು ತೇಜಸ್ವಿ ಯಾದವ್ ಮದುವೆಯ ವೇಳೆ ಸಾಧು ಯಾದವ್ ಸಿಡಿಗುಟ್ಟಿದ್ದರು. ಕಳೆದ ವರ್ಷ ನಡೆದ ಆ ಮದುವೆಗೆ ಸಾಧುಗೆ ಆಮಂತ್ರಣ ನೀಡಲಾಗಿರಲಿಲ್ಲ.
ಇದೀಗ ಡಿಸಿಎಂ ಆದ ಬಳಿಕ ತೇಜಸ್ವಿ ಯಾದವ್ ತನ್ನ ಮದುವೆಗೆ ಮಾವ ವಿರೋಧ ವ್ಯಕ್ತಪಡಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಮಾಮಾಜಿಯನ್ನು ನಾನು ಗೌರವಿಸುತ್ತೇನೆ. ಅವರ ಮಾತುಗಳನ್ನು ನಾನು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ಯುವ ಜನರು ಈ ವಿಚಾರವನ್ನು ಮುಂದುವರಿಸಿಕೊಂಡು ಹೋಗಲು ಬಯಸುವುದಿಲ್ಲ" ಎಂದು ತೇಜಸ್ವಿ ಯಾದವ್ ಅಭಿಪ್ರಾಯಪಟ್ಟಿದ್ದಾರೆ.
(ಒನ್ಇಂಡಿಯಾ ಸುದ್ದಿ)