ಭಾರತದ ಸ್ವಾತಂತ್ರ್ಯ ಯೋಧರಿಗೆ ಸ್ಪೂರ್ತಿಯಾದ ಕವಿತೆ, ಕಾವ್ಯ ಮತ್ತು ಸಂಗೀತದ ಸಾಲುಗಳು
ಭಾರತದ ಸ್ವಾತಂತ್ರ್ಯ ಹೋರಾಟ ತ್ಯಾಗ, ಬಲಿದಾನಗಳ ಸಂಕೇತವಾಗಿದೆ. ನಮ್ಮ ನೆಲದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬ್ರಿಟೀಷರ ವಿರುದ್ಧ ತೊಡೆ ತಟ್ಟಿ ನಿಂತ ನಾಯಕರಿಗೆ ಸ್ಪೂರ್ತಿಯಾದ ಅಂಶಗಳು ಒಂದು ಎರೆಡಲ್ಲ.
ದೇಶದ ಸ್ವಾತಂತ್ರ್ಯ ಯೋಧರಿಗೆ ಆಗಿನ ಕಾಲದಲ್ಲಿ ಕವಿಗಳು ಬರೆದ ಕವನ ಮತ್ತು ಕವಿತೆಗಳ ಸಾಲುಗಳು ಸ್ಪೂರ್ತಿಯ ಚಿಲುಮೆಯಾಗಿದ್ದವು. ಹೋರಾಟದ ಹಾದಿಯಲ್ಲಿ ಹೊಸ ಹುಮ್ಮಸ್ಸು ತುಂಬುವ ಅಕ್ಷರದ ಸಾಲಿಗೆ ಒಡೆಯರು ಒಬ್ಬರು ಇಬ್ಬರಲ್ಲ. ಭಾರತದ ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದವರನ್ನು ಸ್ಮರಿಸಿಕೊಳ್ಳುವುದಕ್ಕೆ ಇದೊಂದು ಸದಾವಕಾಶವಾಗಿದೆ.
ಬ್ರಿಟಿಷರ ನಿದ್ದೆಗೆಡಿಸಿದ್ದ ಹಲಗಲಿ ಬೇಡರ ಬಗ್ಗೆ ನಿಮಗೆಷ್ಟು ಗೊತ್ತು?
ಭಾರತವು 2022ರಲ್ಲಿ ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಸುಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಂಬಲವಾಗಿ ನಿಂತ ಆ ಅಕ್ಷರದ ಸಾಲುಗಳು ಯಾವುವು? ಹೋರಾಟಗಾರರಿಗೆ ಹುಮ್ಮಸ್ಸು ತುಂಬುವ ಸಾಲುಗಳನ್ನು ಬರೆದ ಆ ಅಕ್ಷರಗಳ ಕರ್ತೃಗಳು ಯಾರು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಯಾರು ರಾಮಪ್ರಸಾದ್ ಬಿಸ್ಮಿಲ್?
ಭಾರತೀಯ ಸ್ವಾತಂತ್ರ್ಯದ ಬಗ್ಗೆ ರಾಮ್ ಪ್ರಸಾದ್ ಬಿಸ್ಮಿಲ್ ಬರೆದ ಸರ್ಫರೋಷಿ ಕಿ ತಮನ್ನಾ (ಕ್ರಾಂತಿಯ ಬಯಕೆ) ಕಾವ್ಯವು ಅತ್ಯಂತ ಸ್ಪೂರ್ತಿದಾಯಕ ಕೃತಿಗಳಲ್ಲಿ ಒಂದಾಗಿದೆ. ಆರ್ಯ ಸಮಾಜಿ ರಾಮ್ ಪ್ರಸಾದ್ ಬಿಸ್ಮಿಲ್ ಬರೆದ ಉರ್ದು ಗಜಲ್ ದೇಶಕ್ಕಾಗಿ ಹೋರಾಡಿದ ಮತ್ತು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಉತ್ಸಾಹವನ್ನು ಇಮ್ಮಡಿಗೊಳಿಸುವಂತಿದೆ.
ಝಂಡಾ ಊಂಚಾ ರಹೇ ಹಮಾರಾ ಸಾಲು
ಶಾಮಲಾಲ್ ಗುಪ್ತಾ 1896ರ ಸೆಪ್ಟೆಂಬರ್ 9ರಂದು ಜನಿಸಿದ್ದು, ಇವರು ಬರೆದ ಝಂಡಾ ಊಂಚಾ ರಹೇ ಹುಮಾರಾ (ನಮ್ಮ ಧ್ವಜ ಯಾವಾಗಲೂ ಎತ್ತರದಲ್ಲಿ ಹಾರಲಿ) ಎಂಬ ಹಿಂದಿ ಗೀತೆಯ ಸಾಲುಗಳು ಇಂದಿಗೂ ಸ್ಪೂರ್ತಿದಾಯಕವಾಗಿದೆ. ಅಲ್ಲದೇ ಈ ಹಾಡು ನಮ್ಮ ಭಾರತೀಯ ಧ್ವಜದ ಮೇಲಿನ ದೇಶಭಕ್ತಿ ಮತ್ತು ಪ್ರೀತಿಯ ಮನೋಭಾವವನ್ನು ಹುಟ್ಟಿಸುವುದನ್ನು ಮುಂದುವರೆಸಿದೆ.
ಪುಷ್ಪ್ ಕಿ ಅಭಿಲಾಷಾ ಹಾಡಿನ ಸಾಲು
ಏಪ್ರಿಲ್ 4, 1889 ರಂದು ಜನಿಸಿದ ಮಖಾಂಲಾಲ್ ಚತುರ್ವೇದಿ ಬರೆದ "ಪುಷ್ಪ್ ಕಿ ಅಭಿಲಾಷಾ" (ಹೂವಿನ ಕನಸು) ಚೈತನ್ಯದ ಚಿಲುಮೆಯಾಗಿತ್ತು. ಇನ್ನು ಚತುರ್ವೇದಿ ಕೇವಲ ಕವಿಯಾಗಿರಲಿಲ್ಲ, ಬರಹಗಾರರು ಮತ್ತು ಪತ್ರಕರ್ತರೂ ಆಗಿದ್ದರು. ಅವರ ಈ ಕವಿತೆ ಸ್ವಾತಂತ್ರ್ಯ ಹೋರಾಟದ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ. ಇದು ದೇಶಭಕ್ತಿಯ ಕಾವ್ಯದ ಅತ್ಯುತ್ತಮ ಕೃತಿಗಳಲ್ಲಿ ಒಂದಾಗಿದೆ.
ಆಜಾದಿ ಕಾ ಗೀತ್ ಬರೆದ ಬಚ್ಚನ್
ನವೆಂಬರ್ 27 1907ರಂದು ಜನಿಸಿದ ಹರಿವಂಶ್ ರೈ ಬಚ್ಚನ್ ಆಜಾದಿ ಕಾ ಗೀತ್ (ಸ್ವಾತಂತ್ರ್ಯದ ಹಾಡು) ಎಂಬ ಕವಿತೆಯು ಅನೇಕ ಭಾಷೆಗಳಿಗೆ ಅನುವಾದವಾಯಿತು. ಸ್ವಾತಂತ್ರ್ಯ ಗೆದ್ದು ಉಜ್ವಲ ಭವಿಷ್ಯಕ್ಕಾಗಿ ಎದುರು ನೋಡುತ್ತಿದ್ದ ಭಾರತದ ಭಾವನೆಗಳನ್ನು ಈ ಕವಿತೆಯಲ್ಲಿ ಸುಂದರ ಸಾಲುಗಳ ಮೂಲಕ ಹೇಳಲಾಗಿದೆ.