ಎಲ್ಲರಿಗೂ ಮನೆಭಾಗ್ಯ, ಆವಾಸ್ ಯೋಜನೆ- ನೀವು ಪಟ್ಟಿಯಲ್ಲಿದ್ದೀರಾ? ಪರಿಶೀಲಿಸುವುದು ಹೇಗೆ?
ಪ್ರತಿಯೊಬ್ಬರಿಗೂ ಇರಲು ಮನೆ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಎನಿಸಿದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಹಳ ಜನಪ್ರಿಯವಾಗಿದೆ. ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಬಹಳ ಕಡಿಮೆ ಬಡ್ಡಿದರದಲ್ಲಿ ಅಥವಾ ರಿಯಾಯಿತಿ ಬಡ್ಡಿ ದರದಲ್ಲಿ ಗೃಹ ಸಾಲ ಒದಗಿಸಲಾಗುತ್ತದೆ.
ಪಿಎಂಎವೈ ಎಂದು ಖ್ಯಾತವಾಗಿರುವ ಈ ಯೋಜನೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಎಲ್ಲಿಯಾದರೂ ಮನೆ ಹೊಂದಲು ಸಹಾಯ ಮಾಡಲಾಗುತ್ತದೆ. 3 ಲಕ್ಷದಿಂದ 18 ಲಕ್ಷ ರೂ ವರೆಗಿನ ಆದಾಯ ಇರುವ ಕುಟುಂಬಗಳು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.
34,432.46 ಕೋಟಿ ರುಪಾಯಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ, 48,850 ಉದ್ಯೋಗಾವಕಾಶ ಸೃಷ್ಟಿ
2015, ಜೂನ್ 1ರಂದು ಆರಂಭವಾದ ಈ ಯೋಜನೆಯಲ್ಲಿ 2 ಕೋಟಿ ಮನೆಗಳನ್ನು ನಿರ್ಮಿಸುವ ಉದ್ದೇಶ ಇದೆ. ಇದಕ್ಕೆ ನೀಡುವ ಸಾಲಕ್ಕೆ ವಾರ್ಷಿಕ ಬಡ್ಡಿ ದರ ಶೇ. 6.50ರಿಂದ ಆರಂಭವಾಗುತ್ತದೆ. ಈಗ ಆರ್ಬಿಐ ಬಡ್ಡಿ ದರ ಹೆಚ್ಚಿರುವುದರಿಂದ ಈ ಯೋಜನೆಯಲ್ಲಿನ ಬಡ್ಡಿ ದರದಲ್ಲೂ ವ್ಯತ್ಯಯವಾಗಿರುತ್ತದೆ. 20 ವರ್ಷಗಳವರೆಗೆ ಸಾಲದ ಕಂತು ಕಟ್ಟುವ ಅವಕಾಶ ಕೊಡಲಾಗುತ್ತದೆ.
ಈ ವರ್ಷದ ಮಾರ್ಚ್ 31ಕ್ಕೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಿತ್ತು. ಅದೀಗ ಮುಗಿದುಹೋಗಿದೆ. ಇನ್ನೀಗ ಅರ್ಜಿ ಸಲ್ಲಿಸಲು ಆಗುವುದಿಲ್ಲ. ಮುಂಬರುವ ವರ್ಷಗಳಲ್ಲಿ ಸರಕಾರ ಮತ್ತೊಮ್ಮೆ ಆವಾಸ್ ಯೋಜನೆಗೆ ಅರ್ಜಿ ಆಹ್ವಾನಿಸುವವರೆಗೂ ಕಾಯಬೇಕಾಗುತ್ತದೆ.
ಈಗ ನೀವು ಪಿಎಂಎವೈ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ಯೋಜನೆಯ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂಬುದನ್ನು ಪರಿಶೀಲಿಸಬಹುದು. ಈ ಯೋಜನೆ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.
ಪಿಎಂಎಐ ಯೋಜನೆ ಏನು?
ಗ್ರಾಮೀಣ ಹಾಗೂ ನಗರ ಎರಡು ಪ್ರದೇಶಗಳಿಗೆ ಪ್ರತ್ಯೇಕವಾಗಿ ಪಿಎಂಎಐ ಯೋಜನೆಗಳಿವೆ. ಸರಕಾರವೇ ಈ ಯೋಜನೆಯ ಅಡಿ ಮನೆಗಳನ್ನು ನಿರ್ಮಿಸಿಕೊಡುತ್ತದೆ. ಪರಿಸರಪೂರಕ ವಸ್ತುಗಳನ್ನು ಬಳಸಿ ಮನೆ ನಿರ್ಮಿಸಲಾಗುವುದು ವಿಶೇಷ.
ನಿರ್ದಿಷ್ಟ ಆದಾಯ ಗುಂಪಿನ ಜನರು ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. 3ರಿಂದ 6 ಲಕ್ಷದವರೆಗೆ ವಾರ್ಷಿಕ ಅದಾಯ ಇರುವ ಜನರಿಗೆ 6 ಲಕ್ಷ ರೂವರೆಗೆ ಸಬ್ಸಿಡಿ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಇರುತ್ತದೆ. ಹಾಗೆಯೇ ಮಧ್ಯಮ ಮಟ್ಟದ ಆದಾಯ ಇರುವ ವರ್ಗದ ಜನರಿಗೆ 12 ಲಕ್ಷ ರೂ ವರೆಗೆ ಸಬ್ಸಿಡಿ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಈ ಎರಡನೇ ವರ್ಗದ ಜನರಿಗೆ ಬಡ್ಡಿ ದರ ಬಹಳ ಕಡಿಮೆ ಇರುತ್ತದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಉಚಿತವಾಗಿ ಮನೆಗಳನ್ನು ಕೊಡಲಾಗುವುದಿಲ್ಲ. ಮನೆ ಕೊಳ್ಳಲು ಕಡಿಮೆ ಬಡ್ಡಿ ದರದ ಸಾಲದ ಸೌಲಭ್ಯವನ್ನು ಮಾತ್ರ ಒದಗಿಸಲಾಗುತ್ತದೆ.
ಆದಾಯ ತೆರಿಗೆ ರಿಟರ್ನ್ ಇ-ಪರಿಶೀಲನೆ ಕಡ್ಡಾಯ: ಇ-ಪರಿಶೀಲನೆಗೆ ಮಾಡುವುದು ಹೀಗೆ
ಫಲಾನುಭವಿಗಳ ಮಾನದಂಡ ಹೇಗೆ?
ದುರ್ಬಲ ವರ್ಗ ಮತ್ತು ಬಡವರಿಗೆ ಸ್ವಂತ ಮನೆ ಸಂಪಾದಿಸಲು ನೆರವಾಗುವ ಉದ್ದೇಶ ಪ್ರಧಾನಮಂತ್ರಿ ಆವಾಸ್ ಯೋಜನೆಯದ್ದಾಗಿದೆ. ಈ ಯೋಜನೆಯ ಅಡಿ ಮನೆ ಹೊಂದುವ ಉದ್ದೇಶ ಇರುವವರು ಖಾಯಂ ಸ್ಥಳದ್ಲಿ ಬೇರೆಲ್ಲೂ ಸ್ವಂತ ಸೂರು ಹೊಂದಿರಬಾರದು ಎಂಬುದು ಪ್ರಮುಖ ನಿಯಮ. ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ನೀಡುವುದು ಕಡ್ಡಾಯ. ಇದರಿಂದ ನಕಲಿ ಅರ್ಜಿಗಳನ್ನು ತಡೆಯಬಹುದು.
ಕರ್ನಾಟಕದಲ್ಲಿ ಶೇ. 25
ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿ ಅತಿ ಹೆಚ್ಚು ಮಂಜೂರಾದ ಮನೆಗಳ ಪಟ್ಟಿಯಲ್ಲಿ ಆಂಧ್ರವೇ ನಂಬರ್ ಒನ್. ಇಲ್ಲಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮನೆಗಳು ಮಂಜೂರಾಗಿವೆ. ಕರ್ನಾಟಕದಲ್ಲಿ 6.51 ಲಕ್ಷ ಮನೆಗಳು ಮಾತ್ರ ಮಂಜೂರಾಗಿರುವುದು.
ಯೋಜನೆಯಲ್ಲಿ ಪೂರ್ಣಗೊಂಡ ಮನೆಗಳ ಪಟ್ಟಿಯಲ್ಲಿ ಗುಜರಾತ್ ಮೊದಲ ಸ್ಥಾನ ಪಡೆದಿದೆ. ಈವರೆಗೆ ಈ ರಾಜ್ಯದಲ್ಲಿ ಮಂಜೂರಾಗಿರುವ ಮನೆಗಳಲ್ಲಿ ಶೇ. 58ರಷ್ಟು ಮನೆಗಳು ಫಲಾನುಭವಿಗಳ ಕೈ ಸೇರಿವೆ. ಕರ್ನಾಟಕದಲ್ಲಿ ಶೇ. 25ರಷ್ಟು ಮನೆಗಳು ಪೂರ್ಣಗೊಂಡಿರುವುದು ತಿಳಿದುಬಂದಿದೆ.
ದೇಶಾದ್ಯಂತ 1.22 ಕೋಟಿ ಮನೆಗಳು ಪಿಎಂಎವೈ ಯೋಜನೆ ಅಡಿ ಮಂಜೂರಾಗಿವೆ. 61.77 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿವೆ, ಅಥವಾ ಫಲಾನುಭವಿಗಳ ಕೈ ಸೇರಿವೆ.
ಅರ್ಜಿ ಪರಿಶೀಲಿಸುವುದು ಹೇಗೆ?
ಪಿಎಂಎವೈ ಯೋಜನೆಗೆ ಅರ್ಜಿ ಸಲ್ಲಿಸಲು ಸಮಯಾವಕಾಶ ಮುಗಿದಿದೆ. ಈಗಾಗಲೇ ನೀವು ಅರ್ಜಿ ಸಲ್ಲಿಸಿದ್ದರೆ ಅದರ ಸ್ಥಿತಿಗತಿ ಪರಿಶೀಲಿಸಲು ಅವಕಾಶ ಇದೆ. ಪಿಎಂಎವೈಎಂಐಎಸ್ ವೆಬ್ಸೈಟ್ಗೆ ಭೇಟಿ ಕೊಟ್ಟು ಲಾಗಿನ್ ಅಗಬೇಕು. ಆಗ ನಿಮಗೆ ಟ್ರ್ಯಾಕಿಂಗ್ ಮಾಡುವ ಅವಕಾಶ ಸಿಗುತ್ತದೆ. ಪರದ ಮೇಲೆಯೇ ಎಲ್ಲಾ ಸೂಚನೆಗಳು ನಿಮಗೆ ಸಿಗುತ್ತವೆ. ಅದರಂತೆ ಕ್ಲಿಕ್ ಮಾಡುತ್ತಾ ಹೋದರೆ ನೀವು ಈ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿದ್ದೀರಾ ಇಲ್ಲವಾ ಎಂಬುದು ಗೊತ್ತಾಗುತ್ತದೆ.
ಈ ಯೋಜನೆಯ ನೋಡಲ್ ಸಂಸ್ಥೆಗಳನ್ನು ವಿವಿಧ ರಾಜ್ಯಗಳಲ್ಲಿ ನಿಯೋಜಿಸಲಾಗಿದೆ. ಕರ್ನಾಟಕದಲ್ಲಿ ಇದರ ಕಚೇರಿ ಬೆಂಗಳೂರಿನ ವಿಧಾನಸೌಧ ಬಳಿಯ ವಿಶ್ವೇಶ್ವರಯ್ಯ ಟವರ್ನ ೯ನೇ ಮಹಡಿಯಲ್ಲಿ ಇದೆ.
ಪಿಎಂಎಐ ಯೋಜನೆಯ ಅಡಿ ಸಾಲ ನೀಡುವ ಬ್ಯಾಂಕುಗಳು
ಬ್ಯಾಂಕ್ ಆಫ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಕ್ಸಿಸ್ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್, ಬಂಧನ್ ಬ್ಯಾಂಕ್, ಬ್ಯಾಂಕ್ ಅಫ್ ಇಂಡಿಯಾ, ಹೆಚ್ಡಿಎಫ್ಸಿ ಬ್ಯಾಂಕ್, ಐಡಿಬಿಐ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್. ಇವು ಪ್ರಮುಖ ಬ್ಯಾಂಕುಗಳು. ಇನ್ನೂ ಕೆಲ ಬ್ಯಾಂಕುಗಳು ಈ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸುತ್ತವೆ.
(ಒನ್ಇಂಡಿಯಾ ಸುದ್ದಿ)