Get Updates
Get notified of breaking news, exclusive insights, and must-see stories!

ಕಾಳಿ ಸಿಗರೇಟ್ ವಿವಾದ: ನಿರ್ದೇಶಕಿಯ ಟ್ವೀಟ್ ಹಿಂಪಡೆದ ಟ್ವಿಟ್ಟರ್

ಬೆಂಗಳೂರು, ಜುಲೈ 6: ಹಿಂದೂ ದೇವತೆ ಕಾಳಿ ಮಾತೆ ಸಿಗರೇಟ್ ಸೇದುತ್ತಿರುವ ಪೋಸ್ಟರ್ ಹಾಕಿ ಲೀನಾ ಮಣಿಮೇಕಲೈ ಮಾಡಿದ್ದ ಟ್ವೀಟ್ ಅನ್ನು ಟ್ವಿಟ್ಟರ್ ನಿರ್ಬಂಧಿಸಿದೆ. ಭಾರತ ಸರಕಾರದ ಮನವಿ ಮೇರೆಗೆ ಟ್ವಿಟ್ಟರ್ ಈ ಕ್ರಮ ಕೈಗೊಂಡಿದೆ.

ಕೆನಡಾದ ಟೊರಂಟೋ ನಗರದ ಆಗಾ ಖಾನ್ ಮ್ಯೂಸಿಯಂನಲ್ಲಿ ನಡೆದ 'ರಿದಮ್ಸ್ ಆಫ್ ಕೆನಡಾ' ಕಾರ್ಯಕ್ರಮದಲ್ಲಿ 'ಕಾಳಿ' ಎಂಬ ಡಾಕ್ಯುಮೆಂಟರಿ ಸಿನಿಮಾ ಕಳೆದ ವಾರಾಂತ್ಯದಲ್ಲಿ ಪ್ರದರ್ಶನಗೊಂಡಿತ್ತು. ಜುಲೈ 2ರಂದು ನಿರ್ದೇಶಕಿ ಲೀನಾ ಮಣಿಮೇಕಲೈ ತಮ್ಮ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು.

ಈ ಪೋಸ್ಟರ್‌ನಲ್ಲಿ ಕಾಳಿಮಾತೆ ಸಿಗರೇಟು ಸೇದುತ್ತಿರುವಂತೆ ಚಿತ್ರಿಸಲಾಗಿದೆ. ಇದು ಕಾಳಿ ದೇವರಿಗೆ ಮಾಡಿದ ಅವಮಾನ ಎಂದು ಹಲವು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಭಾರತ ಸರಕಾರ ಕೂಡ ಈ ಟ್ವೀಟ್ ಅನ್ನು ಅಳಿಸುವಂತೆ ಟ್ವಿಟ್ಟರ್‌ಗೆ ಸೂಚಿಸಿತ್ತು. ಅದರಂತೆ ಈ ಟ್ವೀಟ್ ಅನ್ನು ನಿರ್ಬಂಧಿಸಲಾಗಿದೆ.

ತಮಿಳುನಾಡು ಮೂಲದ ಲೀನಾ ಮಣಿಮೇಕಲೈ ಚಿಕ್ಕಂದಿನಿಂದಲೂ ಜಾತಿ ವ್ಯವಸ್ಥೆ ವಿರುದ್ಧ ಹೋರಾಡುತ್ತಾ ಬಂದವರು. ಸ್ವತಃ ಸಲಿಂಗಸ್ತ್ರೀಕಾಮಿಯಾಗಿರುವ ಅವರು ಲೈಂಗಿಕ ಅಲ್ಪಸಂಖ್ಯಾತರ ಧ್ವನಿ ಕೂಡ ಆಗಿದ್ದಾರೆ.

ಭಾರತದಲ್ಲಿ ಮಾತ್ರ ಈ ಟ್ವೀಟ್ ಇಲ್ಲ

ಭಾರತದಲ್ಲಿ ಮಾತ್ರ ಈ ಟ್ವೀಟ್ ಇಲ್ಲ

ಲೀನಾ ಮಣಿಮೇಕಲೈ ಮಾಡಿದ ಆ ಟ್ವೀಟ್‌ನಲ್ಲಿ ಪೋಸ್ಟರ್ ಹೊರುತುಪಡಿಸಿ ಬೇರೆ ಅವಹೇಳನಕಾರಿ ಬರಹಗಳಿಲ್ಲ. "ನಮ್ಮ ಇತ್ತೀಚಿನ ಸಿನಿಮಾವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸೂಪರ್ ಥ್ರಿಲ್ ಎನಿಸಿದೆ... ನನ್ನ ತಂಡದ ಜೊತೆ ಉತ್ಸುಕನಾಗಿದ್ದೇನೆ" ಎಂದು ಅವರು ಜುಲೈ 2ರಂದು ಬರೆದುಕೊಂಡಿದ್ದರು.

ಆದರೆ, ಕಾಳಿಮಾತೆ ಸಿಗರೇಟು ಸೇದುತ್ತಿರುವ ಪೋಸ್ಟರ್ ಹಾಕಿದ್ದರಿಂದ ವಿವಾದಕ್ಕೆ ಈಡಾಗಿದ್ದಾರೆ. ಭಾರತ ಸರಕಾರದ ಮನವಿ ಮೇರೆಗೆ ಟ್ವಿಟ್ಟರ್ ಈ ಟ್ವೀಟ್ ಅನ್ನು ನಿರ್ಬಂಧಿಸಿದೆ. ಭಾರತದಲ್ಲಿ ಮಾತ್ರ ಈ ಟ್ವೀಟ್ ಸಿಗದಂತೆ ಹಿಂಪಡೆಯಲಾಗಿದೆ. ಬೇರೆ ದೇಶಗಳಲ್ಲಿ ಈ ಟ್ವೀಟ್ ಕಾಣಬಹುದು.

ಟ್ವಿಟ್ಟರ್‌ನಿಂದ ಕರ್ನಾಟಕ ಹೈಕೋರ್ಟ್ ಮೊರೆ

ಟ್ವಿಟ್ಟರ್‌ನಿಂದ ಕರ್ನಾಟಕ ಹೈಕೋರ್ಟ್ ಮೊರೆ

ಅನೇಕ ವಿವಾದಗಳಲ್ಲಿ ಭಾರತ ಸರಕಾರ ಹಲವು ಟ್ವೀಟ್‌ಗಳನ್ನು ಮತ್ತು ಟ್ವಿಟ್ಟರ್ ಖಾತೆಗಳನ್ನು ಅಳಿಸುವಂತೆ ಅಥವಾ ನಿರ್ಬಂಧಿಸುವಂತೆ ಟ್ವಿಟ್ಟರ್‌ಗೆ ಸೂಚಿಸಿದ್ದಿದೆ. ಭಾರತದ ಕಾನೂನು ಪ್ರಕಾರ ಟ್ವಿಟ್ಟರ್ ಈ ಆದೇಶಗಳನ್ನು ಪಾಲಿಸುವುದು ಅನಿವಾರ್ಯ. ಆದರೆ, ಟ್ವಿಟ್ಟರ್ ಎಂಬುದು ವಾಕ್‌ಸ್ವಾತಂತ್ರ್ಯಕ್ಕೆ ವೇದಿಕೆಯಾಗಿದೆ. ಭಾರತ ಸರಕಾರ ತನ್ನ ಅಧಿಕಾರ ಮತ್ತು ಕಾನೂನು ದುರುಪಯೋಗಿಸಿಕೊಂಡು ಅನಗತ್ಯವಾಗಿ ಟ್ವೀಟ್‌ಗಳನ್ನು ನಿರ್ಬಂಧಿಸುವಂತೆ ಹೇಳುತ್ತಿದೆ. ಈ ಆದೇಶಗಳನ್ನು ಅನೂರ್ಜಿತಗೊಳಿಸುವಂತೆ ಕೋರಿ ಟ್ವಿಟ್ಟರ್ ಸಂಸ್ಥೆ ನಿನ್ನೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.

ದೆಹಲಿ ಮತ್ತು ಉ.ಪ್ರ.ದಲ್ಲಿ ಎಫ್‌ಐಆರ್

ದೆಹಲಿ ಮತ್ತು ಉ.ಪ್ರ.ದಲ್ಲಿ ಎಫ್‌ಐಆರ್

ದೆಹಲಿಯ ಸೈಬರ್ ಕ್ರೈಮ್ ಪೊಲೀಸರು ಐಪಿಸಿ ಸೆಕ್ಷನ್ 153A (ವಿವಿಧ ಗುಂಪುಗಳ ಮಧ್ಯೆ ದ್ವೇಷಕ್ಕೆ ಪ್ರಚೋದನೆ) ಮತ್ತು 295A (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಇನ್ನು, ಉತ್ತರಪ್ರದೇಶದಲ್ಲೂ ಒಂದು ಎಫ್‌ಐಆರ್ ದಾಖಲಾಗಿದೆ. ಅಪರಾಧ ಸಂಚು, ಪೂಜಾಸ್ಥಳಕ್ಕೆ ಅವಮಾನ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದು ಮತ್ತು ಶಾಂತಿಗೆ ಧಕ್ಕೆ ತರುವ ದುರುದ್ದೇಶ ಇತ್ಯಾದಿ ಆರೋಪಗಳನ್ನು ಮಾಡಲಾಗಿದೆ.

Tweet Embed:

ಲೀನಾ ಮಣಿಮೇಕಲೈ ಪ್ರತಿಕ್ರಿಯೆ

ತಮ್ಮ ಕಾಳಿ ಚಿತ್ರದ ಪೋಸ್ಟರ್ ಬಗ್ಗೆ ಎದ್ದಿರುವ ವಿವಾದಗಳಿಗೆ ಲೀನಾ ಮಣಿಮೇಕಲೈ ತಲೆಕೆಡಿಸಿಕೊಂಡಿಲ್ಲ. ತಮ್ಮ ಬದುಕಿನುದ್ದಕ್ಕೂ ಶೋಷಿತರಿಗೆ ಧ್ವನಿಯಾಗಿ ಬಂದಿರುವ ಅವರು, "ನಾನು ಕಳೆದುಕೊಳ್ಳುವಂಥದ್ದು ಏನೂ ಇಲ್ಲ. ನಾನು ಬದುಕಿರುವವರೆಗೂ ನಾನು ನಂಬಿರುವ ವಿಚಾರವನ್ನು ನಿರ್ಭೀತಿಯಿಂದ ಹೇಳಲು ಬಯಸುತ್ತೇನೆ. ನನ್ನ ಪ್ರಾಣ ಬೇಕಾದರೂ ಕೊಡಲು ಸಿದ್ಧನಿದ್ದೇನೆ" ಎಂದು ತಮ್ಮ ಒಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

ಹಾಗೆಯೇ, ಕಾಳಿ ಚಿತ್ರದ ಕಥೆಯ ಬಗ್ಗೆಯೂ ಲೀನಾ ಬರೆದುಕೊಂಡಿದ್ದು, ಚಿತ್ರ ನೋಡಿದರೆ ಬೇರೆಯೇ ಭಾವನೆ ಬರುತ್ತೆ ಎಂದಿದ್ದಾರೆ.

"ಒಂದು ಸಂಜೆ ಕಾಳಿಮಾತೆ ಟೊರಂಟೋ ನಗರದ ಬೀದಿಗಳಲ್ಲಿ ವಿಹರಿಸುವಾಗ ನಡೆಯುವ ಘಟನೆಗಳ ಕಥೆ ಈ ಚಿತ್ರದಲ್ಲಿದೆ. ಇದನ್ನು ವೀಕ್ಷಿಸಿದವರು 'ಅರೆಸ್ಟ್ ಲೀನಾ ಮಣಿಮೇಕಲೈ' ಎನ್ನುವ ಬದಲು 'ಲವ್ ಯೂ ಲೀನಾ ಮಣಿಮೇಕಲೈ' ಎಂದು ಹ್ಯಾಷ್ ಟ್ಯಾಗ್ ಹಾಕಿ ಟ್ವೀಟ್ ಮಾಡುತ್ತಾರೆ" ಎಂದು ಕಾಳಿ ಚಿತ್ರದ ನಿರ್ದೇಶಕಿ ಹೇಳಿದ್ದಾರೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+