ದಿನವಿಡೀ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ, ಸಂಜೆ ಸಿದ್ದರಾಮಯ್ಯ ಜೊತೆ
ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಅಸ್ತಿತ್ವವನ್ನು ತೋರಿಸಲು ಏನೆಲ್ಲಾ ಸರ್ಕಸ್ ದಳಪತಿಗಳು ಮಾಡುತ್ತಿದ್ದರೂ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಜೊತೆಗಿನ ಮನಸ್ತಾಪದಿಂದ ದೂರ ಹೋಗುತ್ತಿರುವವರ ಸಂಖೆ ಹೆಚ್ಚುತ್ತಲೇ ಇದೆ.
ಈ ಕಾರಣಕ್ಕಾಗಿಯೇ, ಜೆಡಿಎಸ್ ನಾಯಕರನ್ನು ಸಂಪರ್ಕಿಸಿ, ಮನವೊಲಿಸಿ ತಮ್ಮತ್ತ ಸೆಳೆಯಲು ಕಾಂಗ್ರೆಸ್ ನಾಯಕರಿಗೆ ಹೆಚ್ಚು ಕಷ್ಟ ಆಗದೇ ಇರುವುದು. ಆದರೆ, ಜೆಡಿಎಸ್ ಬಿಡುವವರ ಅಥವಾ ನಮ್ಮ ಶಾಸಕರನ್ನು ಸಂಪರ್ಕಿಸುತ್ತಿರುವವರ ಪಟ್ಟಿ ನನ್ನ ಬಳಿಯಿದೆ ಎಂದು ಕುಮಾರಸ್ವಾಮಿ ಹೇಳುತ್ತಿರುವುದು ನಡೆಯುತ್ತಿರುವ ವಿದ್ಯಮಾನದ ಬಗ್ಗೆ ಅಸಡ್ಡೆಯೋ ಅಥವಾ ಬಿಡುವವರು ಬಿಡಲಿ ಎನ್ನುವ ಗಟ್ಟಿ ನಿರ್ಧಾರವೋ?
ರವಿ ಚನ್ನಣ್ಣನವರ್ ವರ್ಗಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರವೇನು?
ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರನ್ನು ಅವರ ತವರು ಜಿಲ್ಲೆಯ ಕ್ಷೇತ್ರದಲ್ಲಿ, ಅದರಲ್ಲೂ ಭಾರೀ ಅಂತರದಿಂದ ಸೋಲಿಸಿದ್ದ ಜಿ.ಟಿ.ದೇವೇಗೌಡ್ರನ್ನೇ ದಳಪತಿಗಳಿಗೆ ಜೆಡಿಎಸ್ ನಲ್ಲಿ ಉಳಿಸಿಕೊಳ್ಳಲು ಆಗದೇ ಇರುವುದು, ಕಾರ್ಯಕರ್ತರಲ್ಲೇ ಅಭದ್ರತೆಯನ್ನು ಉಂಟು ಮಾಡುತ್ತಿದೆಯಾ ಎನ್ನುವ ಪ್ರಶ್ನೆ ಎದುರಾಗುವುದು ಸಹಜ.
ಜೆಡಿಎಸ್ ನಿಂದ ಅಧಿಕೃತವಾಗಿ ಹೊರ ಹೋಗುತ್ತಿರುವುದಾಗಿ ಈಗಾಗಲೇ ಮೂವರು ಶಾಸಕರು ಸಾರ್ವಜನಿಕವಾಗಿ ಹೇಳಿದ್ದಾಗಿದೆ. ಈ ಪಟ್ಟಿಗೆ ಇನ್ನೂ ಕೆಲವರು ಇದ್ದಾರೆ ಎನ್ನುವ ಸುದ್ದಿಯ ನಡುವೆ ಮಂಡ್ಯ ಜಿಲ್ಲಾ ವ್ಯಾಪ್ತಿಯ ಜೆಡಿಎಸ್ ಶಾಸಕರೊಬ್ಬರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿದ್ದಾರೆ. ಅದೂ, ದಿನವಿಡೀ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಿ..
'ಎಫ್.ಎಂ ರೇನ್ ಬೋ ಕನ್ನಡ ರೇಡಿಯೋ ವಾಹಿನಿಯ ಕತ್ತು ಕುಯ್ಯುವ ಕೆಲಸ'
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸಖ್ಯ
ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಕೋಲಾರ ಎಂಎಲ್ಎ ಶ್ರೀನಿವಾಸ ಗೌಡ ಈಗಾಗಲೇ ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿದ್ದಾರೆ. ಇದನ್ನು ಅಧಿಕೃತವಾಗಿ ಅವರೇ ಹೇಳಿದ್ದಾಗಿದೆ. ಅದರಲ್ಲೂ ಗುಬ್ಬಿ ಶಾಸಕರು ಏಕವಚನದಲ್ಲಿ, ಭಯಂಕರ ಪದಗಳನ್ನು ಬಳಸಿ ಕುಮಾರಸ್ವಾಮಿ ವಿರುದ್ದ ಸಾರ್ವಜನಿಕ ಸಭೆಯಲ್ಲೇ ಹರಿಹಾಯ್ದಿದ್ದಾರೆ. ಜೆಡಿಎಸ್ ಬಿಡುತ್ತಿರುವವರ ಪಟ್ಟಿಗೆ ಇನ್ನೋರ್ವ ಶಾಸಕ ಸೇರ್ಪಡೆಯಾಗಲಿದ್ದಾರೆ ಎನ್ನುವ ಗುಸುಗುಸು ಸುದ್ದಿಗೆ ಗುರುವಾರದ (ಜ 27) ವಿದ್ಯಮಾನ ಪುಷ್ಟೀಕರಿಸುವಂತೆ ಮಾಡಿದೆ.
ಲೋಕಸಭಾ ಚುನಾವಣೆಯಲ್ಲಿ ಹಾಗೇ ತಿರುಗಿಸಿಕೊಟ್ಟವರು ಮಂಡ್ಯದವರೇ
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಏಳಕ್ಕೆ ಏಳೂ ಜೆಡಿಎಸ್ಸಿಗೆ ಇಳುವರಿ ನೀಡಿದ ಜಿಲ್ಲೆ ಮಂಡ್ಯ. ಇದೇ ಹುಮ್ಮಸ್ಸಿನಲ್ಲಿದ್ದ ದಳಪತಿಗಳಿಗೆ ಲೋಕಸಭಾ ಚುನಾವಣೆಯಲ್ಲಿ ಹಾಗೇ ತಿರುಗಿಸಿಕೊಟ್ಟವರು ಮಂಡ್ಯದವರೇ. ಈ ಜಿಲ್ಲೆಯ ರಾಜಕಾರಣದ ಮೇಲೆ ಸಿದ್ದರಾಮಯ್ಯನವರಿಗೆ ಕಣ್ಣು ಬಿದ್ದಿದೆ ಎನ್ನುವುದು ದೇವೇಗೌಡ್ರು ಮತ್ತು ಕುಮಾರಸ್ವಾಮಿಯವರಿಗೆ ಕಾಡುತ್ತಿರುವ ಭಯ. ಈ ಭಯ ನಿಜವಾಗುತ್ತಿದೆಯಾ ಎನ್ನುವ ಗುಮಾನಿ ಕಾಡಲು ಆರಂಭವಾಗಿರುವುದು ಜಿಲ್ಲೆಯ ಇಬ್ಬರ ಶಾಸಕರ ರಾಜಕೀಯ ಹೆಜ್ಜೆಗಳು.
ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು
ಕುಮಾರಸ್ವಾಮಿಯವರ ಜೊತೆಗೆ ಗಳಸ್ಯ ಕಂಠಸ್ಯದಂತೆ ಇದ್ದ ಚೆಲುವರಾಯಸ್ವಾಮಿ, ಜಮೀರ್ ಅಹ್ಮದ್, ಎಚ್.ಸಿ.ಬಾಲಕೃಷ್ಣ ಈಗ ಕಾಂಗ್ರೆಸ್ಸಿನ ಸಿದ್ದರಾಮಯ್ಯನವರ ಕ್ಯಾಂಪಿನಲ್ಲಿ ಭದ್ರವಾಗಿದ್ದಾರೆ. ಇದೇ ರೀತಿ ಗೌಡ್ರ ಕುಟುಂಬಕ್ಕೆ ತೀರಾ ಹತ್ತಿರವಾಗಿರುವ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಅವರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿದ್ದಾರೆ. ಭೇಟಿಗೆ ಕಾರಣ ಕ್ಷೇತ್ರದ ವ್ಯಾಪ್ತಿಯ ದೇವಸ್ಥಾನದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸಿದ್ದರಾಮಯ್ಯನವರನ್ನು ಆಹ್ವಾನಿಸಲೆಂದು.
"ನಮ್ಮ ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಕುರುಬ ಸಮುದಾಯ ಪ್ರಬಲವಾಗಿದೆ. ಡಿಂಕಾ ಮಲ್ಲಿಗೆರೆ ಗ್ರಾಮದಲ್ಲಿ ನಿರ್ಮಿಸಿರುವ ಸಿದ್ದರಾಮೇಶ್ವರ ದೇಗುಲದ ಉದ್ಘಾಟನೆ ಫೆಬ್ರವರಿ 14ಕ್ಕೆ ಇದ್ದು, ಅದರ ಉದ್ಘಾಟನೆಗೆ ಸಿದ್ದರಾಮಯ್ಯ ಅವರನ್ನು ಕರೆಯಲು ಸ್ಥಳೀಯ ಮುಖಂಡರ ಜೊತೆ ಹೋಗಿದ್ದೆ. ಇದರಲ್ಲಿ ಏನೂ ರಾಜಕೀಯವಿಲ್ಲ"ಎಂದು ಸಿ.ಎಸ್.ಪುಟ್ಟರಾಜು ಸ್ಪಷ್ಟನೆಯನ್ನು ನೀಡಿದ್ದಾರೆ.
ಕೋರ್ ಕಮಿಟಿ ಪಟ್ಟಿಯಲ್ಲಿ ಪುಟ್ಟರಾಜು ಅವರ ಹೆಸರು ಕೂಡಾ ಇದೆ
ಇಲ್ಲಿ ಗಮನಿಸಬೇಕಾದ ವಿಚಾರ ಏನಂದರೆ, ಹೊಸದಾಗಿ ಘೋಷಣೆಯಾಗಿರುವ ಕೋರ್ ಕಮಿಟಿ ಪಟ್ಟಿಯಲ್ಲಿ ಪುಟ್ಟರಾಜು ಅವರ ಹೆಸರು ಕೂಡಾ ಇದೆ. ಪಟ್ಟಿ ಪ್ರಕಟವಾದ ಮರುದಿನ ದಿನವಿಡೀ ಕೋರ್ ಕಮಿಟಿ ಸಭೆಯಲ್ಲಿ ಪುಟ್ಟರಾಜು ಭಾಗವಹಿಸುತ್ತಾರೆ. ಆದರೆ, ರಾತ್ರಿ/ಸಂಜೆ ಸಿದ್ದರಾಮಯ್ಯನವರನ್ನು ಭೇಟಿಯಾಗುತ್ತಿದ್ದೇನೆ ಎನ್ನುವ ವಿಚಾರವನ್ನು ಯಾರ ಬಳಿಯೂ ಪುಟ್ಟರಾಜು ಪ್ರಸ್ತಾವಿಸುವುದಿಲ್ಲ. ಇದು ಕುಮಾರಣ್ಣನ ಅನುಮಾನಕ್ಕೆ ಕಾರಣ, ಹಾಗಾಗಿಯೇ.. ಜೆಡಿಎಸ್ಸಿನಿಂದ ಇನ್ನೊಂದು ವಿಕೆಟ್ ಪತನವಾಗಲಿದೆಯಾ ಎನ್ನುವ ಪ್ರಶ್ನೆ ಎದುರಾಗುವುದು. ಉತ್ತರಕ್ಕೆ ಹೆಚ್ಚು ದಿನ ಕಾಯಬೇಕಾಗಿಲ್ಲ.
"ಪುಟ್ಟರಾಜು ಹಾಗೂ ಇತರೆ ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಯಾರನ್ನು ಭೇಟಿ ಮಾಡುತ್ತಾರೋ ಅದನ್ನು ಕಟ್ಟಿಕೊಂಡು ನನಗೇನು" ಎಂದು ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
Recommended Video