ಬಾಗಲಕೋಟೆ: ಇಡೀ ರಾಜ್ಯದಲ್ಲೇ ಪ್ರಸಿದ್ಧಿ ಪಡೆದ ಕೆಂಚಣ್ಣವರ ಗಾಣದ ಅಡುಗೆ ಎಣ್ಣೆ
ಬಾಗಲಕೋಟೆ, ಅಕ್ಟೋಬರ್, 25: ಸಾಮಾನ್ಯವಾಗಿ ಆಲೆಮನೆಯಲ್ಲಿ ಬೆಲ್ಲ ತಯಾರಿಸುವುದು ಗೊತ್ತಿರುವ ವಿಚಾರವಾಗಿದೆ. ಆದರೆ ನಗರದ ವಿದ್ಯಾಗಿರಿ ಕಾಲೇಜು ಸರ್ಕಲ್ ಬಳಿಯಿರುವ ಕೆಂಚಣ್ಣವರ ಎಣ್ಣೆ ಗಾಣದ ಅಂಗಡಿಯಲ್ಲಿ ಕಲಬೆರಕೆಯನ್ನು ತಪ್ಪಿಸಲು ಶುದ್ಧ ಅಡುಗೆ ಎಣ್ಣೆಯನ್ನು ಕಣ್ಣಮುಂದೆಯೇ ತಯಾರಿಸಲಾಗುತ್ತಿದೆ. ಮರದ ಗಾಣದ ಮಾದರಿಯಲ್ಲಿ ಯಂತ್ರದಿಂದ ಎಣ್ಣೆಯನ್ನು ತೆಗೆಯುವ ವಿಧಾನವನ್ನು ಇಲ್ಲಿ ಕಾಣಬಹುದಾಗಿದೆ.
ಕೆಂಚಣ್ಣವರ ಎಣ್ಣೆ ಗಾಣದ ಅಂಗಡಿಯಲ್ಲಿ ಕುಸುಬಿ, ಶೇಂಗಾ, ಕೊಬ್ಬರಿ ಎಣ್ಣೆಯನ್ನು ತೆಗೆದು ಮಾರಾಟ ಮಾಡಲಾಗುತ್ತದೆ. ವಿಶೇಷ ಅಂದರೆ ಕೆಂಚಣ್ಣವರ ಗಾಣದ ಎಣ್ಣೆ ಅಂಗಡಿ ಹಳೆ ಬಾಗಲಕೋಟೆಯಲ್ಲಿ ಇತ್ತು. ವಿದ್ಯಾಗಿರಿಯಲ್ಲಿ ಗಾಣವನ್ನು ಆರಂಭಿಸಿ ಬಹಳ ವರ್ಷಗಳೇ ಕಳೆದಿವೆ. ಕೆಂಚಣ್ಣವರ ಗಾಣದ ಎಣ್ಣೆ ಮತ್ತು ಹಿಂಡಿಯ ಅಂಗಡಿಯನ್ನು ಮೂರನೇ ತಲೆಮಾರಿನ ಶಿವರಾಜ್ ಕೆಂಚಣ್ಣವರ ನೋಡಿಕೊಳ್ಳುತ್ತಿದ್ದಾರೆ. ಇವರ ಗಾಣದ ಎಣ್ಣೆಯನ್ನು ಬಾಗಲಕೋಟೆ ಜಿಲ್ಲೆ ಸೇರಿದಂತೆ ಬೆಂಗಳೂರು, ಮೈಸೂರು, ಚೆನ್ನೈ, ದೆಹಲಿ ಹೀಗೆ ವಿವಿಧೆಡೆಯಿಂದ ಬೇಡಿಕೆ ತಕ್ಕಂತೆ ರವಾನಿಸುತ್ತಿದ್ದಾರೆ.
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಅಡುಗೆ ಎಣ್ಣೆಯಲ್ಲಿ ಕಲಬೆರಕೆ ಮಾಡುತ್ತಿರುವ ಸುದ್ದಿಯನ್ನು ಕೇಳಿರುತ್ತವೆ. ಆದರೆ ಬಾಗಕೋಟೆಯ ವಿದ್ಯಾಗಿರಿ ಕಾಲೇಜು ಸರ್ಕಲ್ ಬಳಿಯಿರುವ ಕೆಂಚಣ್ಣವರ ಎಣ್ಣೆ ಗಾಣದ ಅಂಗಡಿಯಲ್ಲಿ ಯಾವುದೇ ಕಲಬೆರಕೆ ಮಾಡದೇ ಎಣ್ಣೆ ತಯಾರಿಸವುದು ಇದೀಗ ಬೆಳಕಿಗೆ ಬಂದಿದೆ. ಜನರು ಆರೋಗ್ಯದ ದೃಷ್ಟಿಯಿಂದ ಕೆಂಚಣ್ಣವರ ಎಣ್ಣೆ ಗಾಣದ ಕಡೆ ಮುಖ ಮಾಡಿದ್ದು, ಆರೋಗ್ಯಕರ ಎಣ್ಣೆ ಖರೀದಿಸಲು ಮುಂದಾಗಿದ್ದಾರೆ.

ಬಾಗಕೋಟೆಯಲ್ಲಿರುವ ಎಣ್ಣೆ ಗಾಣ
ಕೆಂಚಣ್ಣವರ ಎಣ್ಣೆ ಗಾಣದ ಅಂಗಡಿಯ ಮಾಲೀಕರಾದ ಶಿವರಾಜ ಕೆಂಚಣ್ಣವರ ಈ ಬಗ್ಗೆ ಮಾತನಾಡಿದ್ದು, ಕೆಂಚಣ್ಣವರ ಎಣ್ಣೆ ಗಾಣದ ಅಂಗಡಿಯಲ್ಲಿ ಪರಿಶುದ್ಧ ಸಾಂಪ್ರದಾಯಿಕ ಕುಸುಬೆ, ಶೇಂಗಾ, ಕೊಬ್ಬರಿ ಎಣ್ಣೆ ಮತ್ತು ಹಿಂಡಿಯನ್ನು ಉತ್ಪಾದಿಸಲಾಗುತ್ತದೆ. ಬೆಳಗ್ಗೆಯಿಂದ ಸಂಜೆಯವರೆಗೆ ಅಂಗಡಿ ತೆರೆದಿರುತ್ತದೆ. ಗ್ರಾಹಕರ ಸಮ್ಮುಖದಲ್ಲೇ ಕುಸಬಿ, ಶೇಂಗಾ, ಕೊಬ್ಬರಿ ಎಣ್ಣೆಯನ್ನು ತಯಾರಿಸಿ ಕೊಡಲಾಗುತ್ತದೆ.

ವಿವಿಧ ಬಗೆಯ ಅಡುಗೆ ಎಣ್ಣೆ ತಯಾರಿ
ಕುಸಬಿ ಕಾಳನ್ನು ಗದಗ, ನರಗುಂದ, ನವಲಗುಂದ, ಕೆರೂರು ಭಾಗದಿಂದ ಖರೀದಿ ಮಾಡಿ ತರಲಾಗುತ್ತದೆ. ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಿಂಡಿ ಬೇಕು. ಆದ್ದರಿಂದ ಈ ಕುಸಬಿ, ಶೇಂಗಾ ಹಿಂಡಿಗೆ ಹೆಚ್ಚಿನ ಬೇಡಿಕೆ ಇದ್ದು, ವಿಜಯಪುರ, ಗುಲ್ಬುರ್ಗಾ ರೈತರು ಬಂದು ನಮ್ಮ ಗಾಣಕ್ಕೆ ಬಂದು ಖರೀದಿ ಮಾಡಿಕೊಂಡು ಹೋಗುತ್ತಾರೆ. ಪ್ರತಿದಿನ 1,600 ಕೆ.ಜೆಯಷ್ಟು ಕುಸಬಿ, 6 ಕೆ.ಜೆ. ಶೇಂಗಾ, 500 ಕೆ.ಜೆಯಷ್ಟು ಕೊಬ್ಬರಿ ಎಣ್ಣೆಯನ್ನು ತೆಗೆಯುತ್ತೇವೆ. ಕೊರೊನಾ ನಂತರ ಕುಸಬಿ ಎಣ್ಣೆಗೆ ಹೆಚ್ಚಿನ ಬೇಡಿಕೆ ಇತ್ತು. ಇದೀಗ ಮೊದಲಿಗಿಂತಲೂ ನಮಗೆ ಪೂರೈಕೆ ಮಾಡದಷ್ಟು ಹೆಚ್ಚಿನ ಬೇಡಿಕೆ ಬರುತ್ತಿದೆ. ಕಾರಣ ಜನರು ಆರೋಗ್ಯದ ದೃಷ್ಟಿಯಿಂದ ಜಾಗೃತರಾಗುತ್ತಿದ್ದಾರೆ. ಡಾಕ್ಟರ್ಗಳು ಸಹ ಕುಸಬಿ ಎಣ್ಣೆಯನ್ನು ಬಳಸಿ ಎಂದು ಸಲಹೆ ನೀಡುತ್ತಿದ್ದಾರೆ ಎಂದು ಹೇಳಿದರು.

ರಾಸಾಯನಿಕ ಮುಕ್ತ ಅಡುಗೆ ಎಣ್ಣೆ ತಯಾರಿ
ನಂತರ ಕೆಂಚಣ್ಣವರ ಎಣ್ಣೆ ಅಂಗಡಿಯ ಗ್ರಾಹಕ ರಮೇಶ್ ಸೋಮಣ್ಣವರ ಮಾತನಾಡಿ, ಮರದ ಗಾಣಗಳಿಂದ ತೆಗೆಯುವ ಎಣ್ಣೆಗಳು ರಾಸಾಯನಿಕಗಳಿಂದ ಹೊರತಾಗಿರುತ್ತದೆ. ಅಲ್ಲದೇ ನೈಸರ್ಗಿಕತೆಯ ಪ್ರತೀಕವೂ ಆಗಿರುತ್ತದೆ. ಸುವಾಸನೆ ಹೊಂದಿರುವ ಕುಸುಬಿ, ಶೇಂಗಾ, ಕೊಬ್ಬರಿ ಎಣ್ಣೆಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿ ಇರುತ್ತವೆ. ಸ್ವಲ್ಪ ದುಬಾರಿ ಎನಿಸಿದರೂ ಆರೋಗ್ಯದ ದೃಷ್ಟಿಯಿಂದ ಅದಕ್ಕೆ ನಾವು ತಿಂಗಳಿಗೆ ಒಮ್ಮೆ ಕುಸುಬಿ ಎಣ್ಣೆ, ಕೊಬ್ಬರಿ ಎಣ್ಣೆ ತೆಗೆದುಕೊಂಡು ಹೋಗುತ್ತೇವೆ ಎಂದರು.

ಕುಸಬಿ ಎಣ್ಣೆಗೆ ಹೆಚ್ಚಿದ ಬೇಡಿಕೆ
ಒಟ್ಟಿನಲ್ಲಿ ಬಾಗಲಕೋಟೆ ವಿದ್ಯಾಗಿರಿಯ ಕೆಂಚಣ್ಣವರ ಕುಸಬಿ, ಶೇಂಗಾ, ಕೊಬ್ಬರಿ ಎಣ್ಣೆಯನ್ನು ಸಾಂಪ್ರದಾಯಿಕ ಮೀಲ್ನಲ್ಲಿ ತಯಾರಿಸುತ್ತಾರೆ. ಕೊರೊನಾ ನಂತರ ಕುಸಬಿ ಎಣ್ಣೆಗೆ ಬೇಡಿಕೆ ಹೆಚ್ಚಾಗಿದೆ. ಜನರು ಆರೋಗ್ಯದ ಕಡೆ ಹೆಚ್ಚಾಗಿ ಗಮನ ನೀಡುತ್ತಿದ್ದಾರೆ. ಅಡುಗೆಗೆ ಯಾವ ಒಳ್ಳೆಯ ಎಣ್ಣೆ ಬಳಸಿದರೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿ ಇರುವವರು ಕೆಂಚನ್ನವರ ಎಣ್ಣೆ ಗಾಣದತ್ತ ಮುಖಮಾಡುತ್ತಿದ್ದಾರೆ.












Click it and Unblock the Notifications