ಸುಷ್ಮಾ ಉಲ್ಲೇಖಿಸಿದ ಬಿಜೆಪಿ ಗೆಲುವಿನ ಸಪ್ತ ಕುದುರೆಗಳು
ಹುಬ್ಬಳ್ಳಿ/ಬಿಜಾಪುರ, ಏ 29: ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿಗೆ ಬಡ ಕುಟುಂಬದ ಗೃಹಿಣಿಯರ ಸಂಕಷ್ಟದ ಅರಿವಿದೆಯೇ? ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ರೂಪದಲ್ಲಿ ಬಡವರ ಅನ್ನ ಕಸಿದುಕೊಂಡಿದೆ. ಮೂರು ಲೋಕದಲ್ಲಿ ಭ್ರಷ್ಟಾಚಾರ ಎಸಗಿದ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಹುಬ್ಬಳ್ಳಿ ಮತ್ತು ಬಿಜಾಪುರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಸುಷ್ಮಾ, ವಾಜಪೇಯಿ ಈ ಹಿಂದೆ ಹೇಳಿದ ಮಾತು ಈಗಾಲೂ ನೆನಪಿದೆ, ನಾವು ಅಭಿವೃದ್ದಿ ಮಾಡಲಾಗದಿದ್ದರೂ ಪರವಾಗಿಲ್ಲ, ಬಡಜನರ ಅನ್ನ ಕಸಿದು ಕೊಳ್ಳಬಾರದೆಂದಿದ್ದರು. ಬೆಲೆ ಏರಿಕೆಯ ಮೂಲಕ ಜನರ ಬಾಳು ಕತ್ತಲಲ್ಲಿದೆ ಎಂದು ಸುಷ್ಮಾ ಸ್ವರಾಜ್ ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭ್ರಷ್ಟಾಚಾರದ ಗಾಜಿನ ಮನೆಯಲ್ಲಿ ಕೂತು ಇನ್ನೊಬ್ಬರ ಮನೆಗೆ ಕಲ್ಲು ಎಸೆಯುಯುವ ಪ್ರವೃತ್ತಿ ಕಾಂಗ್ರೆಸ್ ಪಕ್ಷದ್ದು. ತನ್ನ ಮುಂದೆಯೇ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ದಿವ್ಯ ಮೌನ ಕಾಪಾಡಿಕೊಂಡು ಬಂದಿರುವ ಕೇಂದ್ರದ ಕಾಂಗ್ರೆಸ್ ನಾಯಕರಿಗೆ ಕರ್ನಾಟಕದ ಭ್ರಷ್ಟಾಚಾರದ ಕುರಿತು ಮಾತನಾಡುವ ಯಾವ ನೈತಿಕ ಹಕ್ಕಿದೆ ಎಂದು ಸುಷ್ಮಾ ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಉತ್ತಮ ಚಾರಿತ್ರ್ಯ ಹೊಂದಿರುವ ಏಳು ಮುಖಂಡರು ರಾಜ್ಯದಲ್ಲಿ ಮತ್ತೆ ಗೆಲುವಿನ ರಥ ಎಳೆಯಲಿದ್ದಾರೆ. ಈ ಏಳೂ ಕುದುರೆಗಳು ಉತ್ಸಾಹದಿಂದ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸುಷ್ಮಾ ಹೇಳಿದ್ದಾರೆ.
ಸುಷ್ಮಾ ಉಲ್ಲೇಖಿಸಿದ ಬಿಜೆಪಿಯನ್ನು ಅಧಿಕಾರದ ದಡಕ್ಕೆ ಸೇರಿಸುವ ಏಳು ಮುಖಂಡರು ಯಾರು - ಸ್ಲೈಡಿನಲ್ಲಿದೆ..

ಪ್ರಹ್ಲಾದ್ ಜೋಷಿ
ಸಂಸದ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಆದರೆ ಅತಿ ಉತ್ಸಾಹದಿಂದ ರಾಜ್ಯದೆಲ್ಲಡೆ ಓಡಾಡಿ ಬಿಜೆಪಿ ಗೆಲುವಿನ ಟೊಂಕ ಕಟ್ಟಿದ್ದಾರೆ.

ಕೆ ಎಸ್ ಈಶ್ವರಪ್ಪ
ಉಪ ಮುಖ್ಯಮಂತ್ರಿ ಹುದ್ದೆಯಲ್ಲಿರುವ ಈಶ್ವರಪ್ಪ ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಶಿವಮೊಗ್ಗ ನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಈಶ್ವರಪ್ಪ ಅವರಿಗೆ ಕಾಂಗ್ರೆಸ್ ಮತ್ತು ಕೆಜೆಪಿಯಿಂದ ತೀವ್ರ ಪೈಪೋಟಿಯಿದೆ.

ಅನಂತ್ ಕುಮಾರ್
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ, ಪಕ್ಷದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಮತ್ತು ಕೇಂದ್ರದಲ್ಲಿನ ಪ್ರಭಾವಿ ಮುಖಂಡ. ಅನಂತ್ ಕುಮಾರ್ ಬೆಂಗಳೂರು ನಗರ ವ್ಯಾಪ್ತಿಯ ಪ್ರಚಾರದಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.

ಜಗದೀಶ್ ಶೆಟ್ಟರ್
ಮುಖ್ಯಮಂತ್ರಿ ಮತ್ತು ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಇವರೇ ಮುಂದಿನ ಸಿಎಂ ಎಂದು ಬಿಜೆಪಿ ಈಗಾಗಲೇ ಘೋಷಿಸಿದೆ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿಯಾಗಿರುವ ಶೆಟ್ಟರ್ ನಾಡಿನಾದ್ಯಂತ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಅವರು ಸ್ಪರ್ಧಿಸಿದ ಕ್ಷೇತ್ರದಲ್ಲಿ ಅವರ ಪತ್ನಿ ಅವರ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ.

ಆರ್ ಅಶೋಕ್
ಉಪ ಮುಖ್ಯಮಂತ್ರಿ ಕಮ್ ಸಾರಿಗೆ ಮಂತ್ರಿ ಕಮ್ ಗೃಹ ಸಚಿವ ಅಶೋಕ್, ಬೆಂಗಳೂರು ಪದ್ಮನಾಭ ನಗರದ ಅಭ್ಯರ್ಥಿ. ಬೆಂಗಳೂರು ನಗರದ ಪ್ರಚಾರದಲ್ಲಿ ಅಶೋಕ್ ಹೆಚ್ಚಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ.

ಸದಾನಂದ ಗೌಡ
ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ಗೌಡ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಕರಾವಳಿ ಭಾಗದಲ್ಲಿ ಹೆಚ್ಚಾಗಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ.

ಗೋವಿಂದ ಕಾರಜೋಳ
ಮುಧೋಳ ಮೀಸಲು ಕ್ಷೇತ್ರದ ಅಭ್ಯರ್ಥಿ. ಉತ್ತರ ಕರ್ನಾಟಕದ ಪ್ರಚಾರ ಕಾರ್ಯಕ್ಕೆ ಹೆಚ್ಚಾಗಿ ಗಮನ ಕೊಡುತ್ತಿದ್ದಾರೆ.












Click it and Unblock the Notifications