ಮುದ್ದೇಬಿಹಾಳ ಕ್ಷೇತ್ರ: ಐತಿಹಾಸಿಕ ತಾಣದಲ್ಲಿ ಗೆಲ್ಲುವುದು ಯಾರು?
ವಿಜಯಪುರ - ಮುದ್ದೇಬಿಹಾಳ ರಾಜ್ಯ ಹೆದ್ದಾರಿಯಲ್ಲಿರುವ ಮುದ್ದೇಬಿಹಾಳ ಐತಿಹಾಸಿಕ ಪ್ರಸಿದ್ಧಿ ಪಡೆದ ತಾಣ. ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ತಾಳಿಕೋಟಿ ಯುದ್ಧ ನಡೆದ ಸ್ಥಳಗಳು ಇಲ್ಲಿಯೇ ಇವೆ!
ಮುದ್ದೇಬಿಹಾಳವನ್ನು ಬಾಸರಗೌಡ ನಾಡಗೌಡರ ಪೂರ್ವಜರಾದ ಪರಮಣ್ಣ ಎಂಬುವವರು 1680 ರಲ್ಲಿ ಕಟ್ಟಿದರು ಎಂಬ ಬಗ್ಗೆ ಮಾಹಿತಿ ಸಿಗುತ್ತದೆ. ತಾಳಿಕೋಟಿಯು ತಾಲೂಕು ಕೇಂದ್ರ ಮುದ್ದೇಬಿಹಾಳಕ್ಕಿಂತ ವ್ಯಾಪಾರ ಮುಂತಾದ ಕ್ಷೇತ್ರಗಳಲ್ಲಿ ಮುಂದಿದೆ. ಜಿಲ್ಲೆಯ ಅತ್ಯಂತ ಚಿಕ್ಕ ಗಾತ್ರದ ತಾಲೂಕು.
ಇಲ್ಲಿರುವ ಒಂದು ಈಶ್ವರ ದೇವಾಲಯ, ಬಸರಕೋಡ ಗ್ರಾಮದಲ್ಲಿ ಜಕಣಾಚಾರ್ಯರಿಂದ ನಿರ್ಮಿತವಾದ ಒಂದು ಜೈನ ದೇವಾಲಯ ಸೇರಿದಂತೆ ಹಲವು ಧಾರ್ಮಿಕ ತಾಣಗಳು ಈ ಕ್ಷೇತ್ರದಲ್ಲಿ ಕಂಡುಬರುತ್ತವೆ. ಇಲ್ಲಿನ ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಟವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಕೃಷಿ ಪ್ರಮುಖ ಉದ್ಯೋಗ, ಕೆಲವೆಡೆ ನೇಕಾರಿಕೆಯೂ ಇದೆ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು.

ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಸಾಕ್ಷರತೆ ಪ್ರಮಾಣ ಶೇ. 67. 2011 ರ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ಸುಮಾರು 4.5 ಲಕ್ಷಕ್ಕೂ ಹೆಚ್ಚಿದೆ. 70%ಗಿಂತಲೂ ಹೆಚ್ಚು ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ.
ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆ.
ಇಲ್ಲಿನ ರಾಜಕೀಯ ಸ್ಥಿತಿಗತಿ ಬಗ್ಗೆ ಯೋಚಿಸುವುದಕ್ಕೆ ಹೋದರೆ, 2013 ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ನ ಹಾಲಿ ಶಾಸಕ ಸಿ.ಎಸ್.ನಾಡಗೌಡ ಈ ಬಾರಿಯೂ ಸ್ಪರ್ಧಿಸುವುದು ಖಚಿತ. ಈ ಬಾರಿ ಮಂತ್ರಿಯಾಗಲಿಲ್ಲ ಎಂಬ ಕೊರಗು ಅವರನ್ನು ಕಾಡುತ್ತಿದ್ದಂತಿದೆ. ಕಳೆದ ಬಾರಿ ಕೆಜೆಪಿಯಿಂದ ಪ್ರಬಲ ಸ್ಪರ್ಧೆ ನೀಡಿದ್ದ ಸಚಿವೆ ವಿಮಲಾಬಾಯಿ ದೇಶಮುಖ್ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತ.
ಕಳೆದ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ನ ಸಿ.ಎಸ್.ನಾಡಗೌಡ, 34747 ಮತಗಳನ್ನು ಪಡೆದು, 22545 ಮತಗಳನ್ನು ಪಡೆದಿದ್ದ ಆಗಿನ ಕೆಜೆಪಿ ಅಭ್ಯರ್ಥಿ ವಿಮಲಾಭಾಯಿ ಅವರನ್ನು ಸೋಲಿಸಿದ್ದರು.












Click it and Unblock the Notifications