ಬಿಜೆಪಿ ಸೋಲಿಸಲು 'ಮ್ಯಾನೇಜ್ಮೆಂಟ್' ಸೂತ್ರ ಹಿಡಿದ ಕಾಂಗ್ರೆಸ್
ಬೆಂಗಳೂರು, ಏಪ್ರಿಲ್ 12: ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ನಿರ್ವಹಣಾ ಕೌಶಲವನ್ನು ಸಮರ್ಥವಾಗಿ ಎದುರಿಸಲು ಮತ್ತು ಬಿಜೆಪಿಯನ್ನು ಮಣಿಸಿ ಮತ್ತೆ ಬಹುಮತ ಪಡೆದು ಅಧಿಕಾರ ಹಿಡಿಯಲು ಕಾಂಗ್ರೆಸ್ ವಿವಿಧ ತಂತ್ರಗಳನ್ನು ರೂಪಿಸುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಕಾಂಗ್ರೆಸ್ನ ಮೂರು ತಂಡಗಳು ಚುನಾವಣಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೆವಾಲಾ ನೇತೃತ್ವದ ಸಂವಹನ ತಂಡ, ದಿವ್ಯ ಸ್ಪಂದನ ನೇತೃತ್ವದ ಸಾಮಾಜಿಕ ಮಾಧ್ಯಮ ತಂಡ ಮತ್ತು ರಾಜೀವ್ ಗೌಡ ನೇತೃತ್ವದ ಅಧ್ಯಯನ ವಿಭಾಗಗಳು ಮುಖ್ಯವಾಗಿ ಯುವಮತದಾರರಿಗೆ ಕರ್ನಾಟಕದ ಅಭಿವೃದ್ಧಿ ಮಾದರಿಯನ್ನು ತಲುಪಿಸುವ ಹಾಗೂ ಪಕ್ಷದ ಮುಖಂಡರು ಆರ್ಎಸ್ಎಸ್, ಬಿಜೆಪಿಯ ಹಿಂದುತ್ವ ಅಥವಾ ಹಿಂದುತ್ವದೆಡೆಗಿನ ಮೃದು ಧೋರಣೆಯ ಜಾಲದೊಳಗೆ ಬೀಳದಂತೆ ತಡೆಯುವ ಪ್ರಯತ್ನಗಳನ್ನು ನಡೆಸುತ್ತಿವೆ.

ಕಾಂಗ್ರೆಸ್ ಪರ ಐಐಎಂ-ಬಿ ವರದಿ
ಅಭಿವೃದ್ಧಿ ಹೆಸರಿನಲ್ಲಿ ಕಳೆದ ನಾಲ್ಕು ವರ್ಷದಲ್ಲಿ ಭಾರಿ ಯಶಸ್ಸು ಕಂಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪ್ರಚಾರ ತಂತ್ರಗಳಿಗೆ ಪ್ರತಿ ತಂತ್ರ ಹೆಣೆಯಲು ಕಾಂಗ್ರೆಸ್, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಿದ್ಧಪಡಿಸಿದ ವರದಿಯನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ.
ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಸಂಸ್ಥೆ ನಡೆಸಿದ ವಿವಿಧ ವಿಷಯಾಧಾರಿತ ಉಪನ್ಯಾಸಗಳ ಆಧಾರದಲ್ಲಿ 'ಕರ್ನಾಟಕ ಇನ್ನೋವೇಷನ್ ರಿಪೋರ್ಟ್: ಸ್ಟೇಕ್ ಹೋಲ್ಡರ್ಸ್ ಡೈಲಾಗ್ಸ್' ಎಂಬ ಶೀರ್ಷಿಕೆಯ ವರದಿಯನ್ನು ಐಐಎಂ-ಬಿ ಸಿದ್ಧಪಡಿಸಿದೆ. ಅದರಲ್ಲಿ ಸಿದ್ದರಾಮಯ್ಯ ಸರ್ಕಾರದ ಆಡಳಿತದ ಕಾರ್ಯವೈಖರಿಯ ಮೌಲ್ಯಮಾಪನ ಮಾಡಲಾಗಿದೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕಾರ್ಯಯೋಜನೆಗಳನ್ನು ಶ್ಲಾಘಿಸಿರುವ ಈ ವರದಿಯನ್ನು ಮುಂದಿಟ್ಟುಕೊಂಡು ಬಿಜೆಪಿಯ ಅಭಿವೃದ್ಧಿ ಮಂತ್ರಕ್ಕೆ ಪ್ರತಿ ಮಂತ್ರ ಜಪಿಸಲು ಕಾಂಗ್ರೆಸ್ ಮುಂದಾಗಿದೆ.

ಸ್ಥಳೀಯ ಆಡಳಿತದ ಸುಧಾರಣೆ
ಐಐಎಂ-ಬಿ ವರದಿಯು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಿರುವುದಕ್ಕಾಗಿ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಶ್ಲಾಘಿಸಿದೆ. ಸಿದ್ದರಾಮಯ್ಯ ಸರ್ಕಾರವು ಪಂಚಾಯತ್ ರಾಜ್ ಕಾಯ್ದೆಯನ್ನು 2015ರಲ್ಲಿ ಬದಲಾಯಿಸುವ ಮೂಲಕ ಪಂಚಾಯತ್ ಸಂಸ್ಥೆಗಳಿಗೆ ಹೆಚ್ಚು ಅಧಿಕಾರ ನೀಡಿದೆ. ಅವುಗಳ ಕಾರ್ಯಚಟುವಟಿಕೆಗಳು, ಆರ್ಥಿಕತೆಗಳನ್ನು ವಿಸ್ತರಿಸಿದ್ದಲ್ಲದೆ, ಹೊಸ ಚಟುವಟಿಕೆಗಳನ್ನು ಅಡಕ ಮಾಡಿದೆ ಎಂದು ಅದು ತಿಳಿಸಿದೆ.
ನರೇಗಾ ಯೋಜನೆ, ಸ್ವಚ್ಛ ಭಾರತ ಅಭಿಯಾನದಂತಹ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸ್ಥಳೀಯ ಸಂಸ್ಥೆಗಳು ತಳಮಟ್ಟದಿಂದ ಕಾರ್ಯನಿರ್ವಹಿಸುವಂತೆ ಸರ್ಕಾರ ಮಾಡಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಶೇ 50ರಷ್ಟು ಸೀಟುಗಳನ್ನು ಮಹಿಳೆಯರಿಗೆ ಮೀಸಲಿರಿಸಿರುವುದು ಕರ್ನಾಟಕದಲ್ಲಿ ಮಹಿಳಾ ಸಬಲೀಕರಣದ ಪ್ರಮುಖ ಹೆಜ್ಜೆಯಾಗಿದೆ. ಪಂಚಾಯತ್ ರಾಜ್ ಸಂಸ್ಥೆಗಳ ಚುನಾವಣೆಗಳಲ್ಲಿ ಮತದಾನವನ್ನು ಕಡ್ಡಾಯಗೊಳಿಸಲಾಗಿದೆ ಎಂದು ವರದಿ ವಿವರಿಸಿದೆ.
ಈ ವರದಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಮಾಡಿರುವ ಕೆಲಸಗಳನ್ನು ಹೈಲೈಟ್ ಮಾಡಲಾಗಿದೆ.
ಕೃಷಿಗೆ ನೆರವು
ರೈತರ ಆದಾಯವನ್ನು ಹೆಚ್ಚಿಸಲು ರಾಷ್ಟ್ರೀಯ ಇ-ಮಾರುಕಟ್ಟೆ ಸೇವೆಗಳು ಮತ್ತು ಎನ್ಸಿಡಿಇಎಕ್ಸ್ ಇ-ಮಾರುಕಟ್ಟೆ ಸೇವೆಗಳ ಜಂಟಿ ಸೇವೆ ಆರಂಭಿಸಿದ್ದನ್ನು ವರದಿ ಪ್ರಶಂಸಿಸಿದೆ.
ಕೃಷಿ ಭಾಗ್ಯ, ಕೃಷಿ ಹೊಂಡ ಯೋಜನೆಗಳು ಬರಪೀಡಿತ ಪ್ರದೇಶಗಳಲ್ಲಿ ಮಳೆನೀರಿನ ಪರಿಣಾಮಕಾರಿ ಬಳಕೆಗೆ ನೆರವಾಗಿವೆ. ಸಣ್ಣ ಮತ್ತು ಮಧ್ಯಮ ರೈತರಿಗೆ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಒದಗಿಸಿರುವುದು ಸಾಕಷ್ಟು ನೆರವಾಗಿದೆ ಎಂದು ಹೇಳಿದೆ.
ಸ್ಟಾರ್ಟ್ಅಪ್ಗಳಿಗೆ ಉತ್ತೇಜನ
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಲಯಗಳ ಪ್ರಗತಿಗೆ ಅಗತ್ಯವಾದ ಮೂಲಸೌಕರ್ಯಗಳನ್ನು ನೀಡಿದೆ. ಸುಮಾರು 1,400 ಸ್ಟಾರ್ಟ್ಅಪ್ಗಳಿಗೆ ಸರ್ಕಾರದ ಅನುದಾನ ನೀಡಿದೆ. ಸುಮಾರು 6,000 ಗ್ರಾಮ ಪಂಚಾಯಿತಿಗಳಿಗೆ ಬ್ರಾಡ್ಬ್ಯಾಂಡ್ ಮತ್ತು ಉಚಿತ ವೈ ಫೈ ಸೌಲಭ್ಯ ಒದಗಿಸಿದೆ ಎಂದು ತಿಳಿಸಿದೆ.
ಪೌಷ್ಟಿಕ ಆಹಾರ ಪೂರೈಕೆ
ಅತಿ ಕಡಿಮೆ ದರದಲ್ಲಿ ಉಪಾಹಾರ ಮತ್ತು ಊಟ ಒದಗಿಸುವ ಇಂದಿರಾ ಕ್ಯಾಂಟೀನ್ಗಳನ್ನು ಸ್ಥಾಪನೆ ಮಾಡಲಾಗಿದೆ. ಅಲ್ಲದೆ ಗರ್ಭಿಣಿಯರು ಮತ್ತು ತಾಯಂದಿರಿಗೆ ಮಧ್ಯಾಹ್ನ ಪೌಷ್ಟಿಕ ಆಹಾರ ನೀಡುವ ಮಾತೃಪೂರ್ಣ ಯೋಜನೆ ಜಾರಿಮಾಡಲಾಗಿದೆ. ಮಕ್ಕಳಿಗೆ ಕ್ಷೀರಭಾಗ್ಯ, ಮೊಟ್ಟೆ ಭಾಗ್ಯ ಯೋಜನೆಗಳನ್ನು ತರಲಾಗಿದೆ.
ಶಿಕ್ಷಣ ಕ್ಷೇತ್ರದ ಅಭಿವೃದ್ಧಿ
ಶಿಕ್ಷಣ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಸಾಕಷ್ಟು ಕೆಲಸಗಳನ್ನು ಮಾಡಿದೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಾದರಿಯಲ್ಲಿ ಬೆಂಗಳೂರು ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಆರಂಭಿಸಿದ್ದಲ್ಲದೆ, ದಲಿತರು, ಬುಡಕಟ್ಟು ಜನರು ಮತ್ತು ಇತರೆ ಹಿಂದುಳಿದ ವರ್ಗದವರಿಗೆ ಶೇ 30ರ ಕೋಟಾ ನಿಗದಿಪಡಿಸಲಾಗಿದೆ ಎಂದು ವರದಿ ಹೇಳಿದೆ.












Click it and Unblock the Notifications