Hijab Row: ಹಿಜಾಬ್ಗೆ ಅವಕಾಶ: ಮುಂದೆ ಉದ್ಭವಿಸಲಿರುವ ಪರಿಸ್ಥಿತಿಗಳಿಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ: ಬಿಜೆಪಿ
Hijab Row: ಕರ್ನಾಟಕವೂ ಶಾಲಾ - ಕಾಲೇಜುಗಳಲ್ಲಿ ನಿಷೇಧವನ್ನು ರದ್ದು ಮಾಡಿರುವುದು ಹಾಗೂ ಸಮವಸ್ತ್ರದ ಜೊತೆಗೆ ಹಿಜಾಬ್, ಜನಿವಾರ, ರುದ್ರಾಕ್ಷಿ ಹಾಗೂ ಪೇಟ ಸೇರಿದಂತೆ ಕೆಲವೊಂದು ಧರ್ಮಿಕ ಸಂಕೇತಗಳ ಬಳಕೆಗೆ ಅವಕಾಶ ಮಾಡಿಕೊಟ್ಟಿರುವುದನ್ನು ಬಿಜೆಪಿ ವಿರೋಧಿಸಿದೆ. ಬಿಜೆಪಿ ಸರ್ಕಾರ ಹೊರಡಿಸಿದ್ದ ನಿಷೇಧವನ್ನು ತೆರವು ಮಾಡಿರುವುದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ತುಷ್ಠಿಕರಣ ರಾಜಕಾರಣ ಶಿಕ್ಷಣದ ಅಂಗಳಕ್ಕೂ ಕಾಲಿಟ್ಟಿರುವುದು ಅತ್ಯಂತ ದುರದೃಷ್ಟಕರ. ಹಿಜಾಬ್ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳು ಇನ್ನೂ ಸುಪ್ರೀಂ ಕೋರ್ಟ್ನ ಸಾಂವಿಧಾನಿಕ ಪೀಠದ ಮುಂದೆ ಬಾಕಿ ಇರುವಾಗಲೇ, ನ್ಯಾಯಾಂಗದ ಪ್ರಕ್ರಿಯೆಯನ್ನು ಕಡೆಗಣಿಸಿ ಹಿಜಾಬ್ ನಿಷೇಧವನ್ನು ಸರ್ಕಾರ ಹಿಂಪಡೆದಿರುವುದು ನ್ಯಾಯಾಂಗ ವ್ಯವಸ್ಥೆಗೆ ಮಾಡುವ ಅಪಮಾನ.

ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆಯ ಮೂಲ ಉದ್ದೇಶವೇ ವಿದ್ಯಾರ್ಥಿಗಳಲ್ಲಿ ಸಮಾನತೆ ಬೆಳೆಸುವುದು. ಆದರೆ ಕಾಂಗ್ರೆಸ್ ಸರ್ಕಾರವೇ ಈ ರೀತಿ ಧರ್ಮದ ಆಧಾರದ ಮೇಲೆ ತಾರತಮ್ಯ ಎಸಗುತ್ತಿರುವುದು ಖಂಡನೀಯ. ದೇಶದೆಲ್ಲೆಡೆ ಏಕರೂಪ ನಾಗರಿಕ ಸಂಹಿತೆ ಜಾರಿ ತರುತ್ತಿರುವ ಈ ಬೆನ್ನಲ್ಲೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಧರ್ಮಗಳನ್ನು ಒಡೆದು ಆಳುವ ನೀತಿಗೆ ಕೈಹಾಕಿದೆ. ಕೇಸರಿ ಶಾಲು ಧಾರ್ಮಿಕವಲ್ಲ, ಯಾವ ಬಣ್ಣಗಳ ಹಾಕಬೇಕು, ಹಾಕಬಾರದು ಎಂದು ಹಕ್ಕನ್ನು ಕಸಿದುಕೊಳ್ಳುವ ಸರ್ವಾಧಿಕಾರದ ಧೋರಣೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರದರ್ಶಿಸುತ್ತಿದೆ.
ಒಂದು ನಿರ್ದಿಷ್ಟ ವರ್ಗವನ್ನು ಓಲೈಸಲು ಹೋಗಿ ಶೈಕ್ಷಣಿಕ ವಾತಾವರಣವನ್ನು ಹಾಳುಮಾಡಲಾಗುತ್ತಿದೆ. 'ವಿಭಜಕ ನೀತಿ'ಯನ್ನು ಅಳವಡಿಸಿಕೊಂಡು ಶಾಲಾ ಶಿಸ್ತನ್ನು ಹದಗೆಡಿಸುವ ಹುನ್ನಾರಕ್ಕೆ ಸರ್ಕಾರ ಮುಂದಾಗಿರುವುದು ನಿಜಕ್ಕೂ ಶೋಚನೀಯ ಎಂದು ಹೇಳಿದ್ದಾರೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಶೈಕ್ಷಣಿಕ ಕೇಂದ್ರಗಳಲ್ಲಿ ಸಮಾನತೆ ಮತ್ತು ಶಾಲಾ ಮಕ್ಕಳಲ್ಲಿ ಏಕತೆಯನ್ನು ತರುವ ಉದ್ದೇಶದಿಂದ ಹಿಂದಿನ ಬಿಜೆಪಿ ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ಶಿಸ್ತುಬದ್ಧ ಸಮವಸ್ತ್ರ ನಿಯಮವನ್ನು ಹಿಂಪಡೆದಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿರ್ಧಾರ ಖಂಡನೀಯ.
ಸಮವಸ್ತ್ರದ ಮೂಲ ಆಶಯವೇ ಮಕ್ಕಳಲ್ಲಿ ಮೇಲು-ಕೀಳು, ಜಾತಿ-ಮತದ ಭೇದ ಮರೆಸಿ ಸಮಾನತೆಯ ದೀಕ್ಷೆ ನೀಡುವುದಾಗಿದೆ. ಮಕ್ಕಳ ಮನಸ್ಸಿನಲ್ಲಿ 'ನಾವೆಲ್ಲರೂ ಒಂದು' ಎಂಬ ಭಾವನೆ ಬಿತ್ತುವ ಬದಲು, ಕೇವಲ ಅವರ ಓಟ್ ಬ್ಯಾಂಕ್ ವರ್ಗದ ಓಲೈಕೆಗಾಗಿ ಶಾಲಾ ಆವರಣದಲ್ಲೂ ಮತೀಯ ವಿಭಜನೆಗೆ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಕೈಹಾಕಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸರ್ಕಾರ ಶೈಕ್ಷಣಿಕ ಪಾವಿತ್ರ್ಯತೆಗಿಂತ ವೋಟ್ ಬ್ಯಾಂಕ್ ರಾಜಕಾರಣಕ್ಕೇ ಆದ್ಯತೆ ನೀಡುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಮಕ್ಕಳಿಗೆ ಹಿಜಾಬ್ ಧರಿಸಲು ಸರ್ಕಾರ ಅವಕಾಶ ನೀಡಿ, ಕೇಸರಿ ಶಾಲ್ ಧರಿಸುವುದಕ್ಕೆ ನಿರ್ಬಂಧ ವಿಧಿಸಿರುವ ನಿಮ್ಮ ತುಘಲಕ್ ಆದೇಶವನ್ನು ಕೂಡಲೇ ಹಿಂಪಡೆಯಿರಿ.
ಶಿಕ್ಷಣ ಸಂಸ್ಥೆಗಳು ಜ್ಞಾನ ಸರೋವರವಿದ್ದಂತೆ, ಇಲ್ಲಿ ವಸ್ತ್ರ ಸಂಹಿತೆ (ಸಮವಸ್ತ್ರ) ಶಿಸ್ತು, ಸಮಭಾವ ಹಾಗೂ ಸಹೋದರತ್ವ ಭಾವವನ್ನು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಕೋಮು ಸಂಕೇತ ಪ್ರತಿನಿಧಿಸುವ ವಸ್ತ್ರ ಧರಿಸಲು ಅವಕಾಶ ನೀಡುವುದು ಹಾಗೂ ಪ್ರೇರಣೆ ನೀಡುವುದು ಶಿಕ್ಷಣ ಸರೋವರಕ್ಕೆ ಕೆಸರು ತುಂಬುವ ಕೆಟ್ಟ ನಡೆಯಾಗುತ್ತದೆ. ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರ ಅಕ್ಷರಶಃ ಅವಿವೇಕಿತನದ ಪರಮಾವಧಿಯಾಗಿದೆ. ಮಾನ್ಯ ಮುಖ್ಯಮಂತ್ರಿಗಳೇ, ಸರ್ವವ್ಯಾಪಿ ಸರ್ವಸ್ಪರ್ಶಿ ನಿರ್ಮಲ ಸರೋವರದಂತೆ, ಜ್ಞಾನ ದೀವಿಗೆ ಬೆಳಗುತ್ತಿರುವ ನಮ್ಮ ಶಿಕ್ಷಣ ವ್ಯವಸ್ಥೆಗೆ ಕೋಮು ಸಂಕೇತಿಸುವ ಹಿಜಾಬ್ ನಿಂದ ಉಸಿರುಗಟ್ಟಿಸಿ, ಶಿಕ್ಷಣ ಕ್ಷೇತ್ರದಲ್ಲಿಯೂ ಕೋಮುವಾದದ ಜ್ವಾಲೆ ಹತ್ತಿಸಬೇಡಿ.
ಶಿಕ್ಷಣ ಸುಧಾರಣೆಯ ಯೋಜನೆ ಹಾಗೂ ಕಾರ್ಯಕ್ರಮಗಳ ಕುರಿತು ತಲೆಕೆಡಿಸಿಕೊಳ್ಳದ ಶಿಕ್ಷಣ ಇಲಾಖೆ ಸರ್ಕಾರಿ ಶಾಲಾ ಕಟ್ಟಡಗಳ ಸುರಕ್ಷತೆ, ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿಯೂ ವಿಫಲವಾಗಿದೆ, ನೈಜ ಶಿಕ್ಷಣ ಬದ್ಧತೆಯನ್ನು ಪ್ರದರ್ಶಿಸುವ ಬದಲು ಸದ್ಯ ಇರುವ ವ್ಯವಸ್ಥೆಯನ್ನೂ ಕುಲಗೆಡಿಸುತ್ತಿರುವುದು ಶಿಕ್ಷಣ ವಿದ್ರೋಹಿ ಕ್ರಮವಾಗಿದೆ. ಈ ಕೂಡಲೇ ಹಿಜಾಬ್ ಅನುಮತಿಯ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳದೇ ಹೋದರೆ ಮುಂದೆ ಉದ್ಭವಿಸಲಿರುವ ಪರಿಸ್ಥಿತಿಗಳಿಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications