'ನಾನು ಮುಖ್ಯಮಂತ್ರಿಯಾದರೆ....' ಒನ್ ಇಂಡಿಯಾ ಓದುಗರ ಪ್ರತಿಕ್ರಿಯೆ
ಬೆಂಗಳೂರು, ಏಪ್ರಿಲ್ 06: "ಇದ್ದಕ್ಕಿದ್ದಂತೆ ನೀವು ಈ ರಾಜ್ಯದ ಮುಖ್ಯಮಂತ್ರಿಯಾದರೆ..." ಅಯ್ಯೋ ಛಾನ್ಸೇ ಇಲ್ಲ, ಮುಖ್ಯಮಂತ್ರಿ ಹುದ್ದೆ ಎಲ್ಲಿ, ನಾವೆಲ್ಲಿ ಅನ್ಬೇಡಿ. ನಿಮಗೆ ದಿಢೀರ್ ಅಂತ ಮುಖ್ಯಮಂತ್ರಿಯಾಗುವ ಸುವರ್ಣಾವಕಾಶವನ್ನು 'ಒನ್ ಇಂಡಿಯಾ' ನೀಡಿದೆ!
ಇನ್ನೇನು ಕೆಲವೇ ವಾರಗಳಲ್ಲಿ ಕರ್ನಾಟಕದ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಎಲ್ಲ ಪಕ್ಷಗಳೂ ಪ್ರಚಾರ, ಟಿಕೇಟ್ ಹಂಚಿಕೆ, ಪರಸ್ಪರ ಕೆಸರೆರಚಾಟದಲ್ಲಿ ಮಗ್ನವಾಗಿವೆ. ಈ ಸಂದರ್ಭದಲ್ಲಿ 'ನಿರ್ಣಾಯಕ' ಸ್ಥಾನ ವಹಿಸುವ ಮತದಾರ ಈ ಎಲ್ಲಕ್ಕೂ ಮೌನ ಸಾಕ್ಷಿಯಾಗಿದ್ದಾನೆ. ಸಂವಿಧಾನ ನೀಡಿದ ಅಮೂಲ್ಯ ಹಕ್ಕನ್ನು ಚಲಾಯಿಸುವುವ ಮೂಲಕ ರಾಜ್ಯದ ಭವಿಷ್ಯವನ್ನು ನಿರ್ಧರಿಸುವಂಥ ನಾಯಕನನ್ನು ಆರಿಸಲು ಉತ್ಸುಕನಾಗಿದ್ದಾನೆ.
ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರೆ
ಇಂಥ ಸಂದರ್ಭದಲ್ಲಿ ಈ ರಾಜ್ಯಕ್ಕೆ ಮತದಾರ ಪ್ರಭುವಿಗೆ, ಜನಸಾಮಾನ್ಯರಿಗೆ ಈ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶವನ್ನು ಒನ್ ಇಂಡಿಯಾ ನೀಡಿತ್ತು! 'ಒಂದು ವೇಳೆ ನೀವು ಕರ್ನಾಟಕದ ಮುಖ್ಯಮಂತ್ರಿಯಾದರೆ, ರಾಜ್ಯಕ್ಕೆ ನಿಮ್ಮ ಆದ್ಯತೆಗಳೇನಿರುತ್ತಿದ್ದವು?' ಎಂದು ನಾವು ಕೇಳಿದ ಪ್ರಶ್ನೆಗೆ ಹಲವಾರು ಓದುಗರು ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯಾಗಿ ಯೋಚಿಸುವ ಈ ಸುವರ್ಣಾವಕಾಶವನ್ನು ಬಳಸಿಕೊಂಡು ತಮ್ಮ ವಸ್ತುನಿಷ್ಠ ಅಭಿಪ್ರಾಯವನ್ನು ತಿಳಿಸಿದ್ದಾರೆ. ಪ್ರತಿಕ್ರಿಯಿಸಿದ ಎಲ್ಲರಿಗೂ 'ಒನ್ ಇಂಡಿಯಾ' ಧನ್ಯವಾದ ಅರ್ಪಿಸುತ್ತದೆ. ಓದುಗರ ಪ್ರತಿಕ್ರಿಯೆಯಲ್ಲಿ ಆಯ್ದ ಕೆಲವು ಇಲ್ಲಿದೆ.

ನಾವು ನೀಡಿದ ಆಯ್ಕೆಗಳು...
'ಒಂದು ವೇಳೆ ನೀವು ಕರ್ನಾಟಕದ ಮುಖ್ಯಮಂತ್ರಿಯಾದರೆ, ರಾಜ್ಯಕ್ಕೆ ನಿಮ್ಮ ಆದ್ಯತೆಗಳೇನಿರುತ್ತಿದ್ದವು?' ಎಂಬ ನಮ್ಮ ಪ್ರಶ್ನೆಗೆ ನಾವು ನೀಡಿದ್ದ ಆಯ್ಕೆಗಳು ಹೀಗಿದ್ದವು.
* ಕರ್ನಾಟಕದ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ.
* ರಾಜ್ಯಾದ್ಯಂತ ಉತ್ತಮ ರಸ್ತೆಗಳು ಇರುವಂತೆ ನೋಡಿಕೊಳ್ಳುತ್ತೇನೆ.
* ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣಕ್ಕೆ ವಿಶೇಷ ಗಮನ ಮತ್ತು ಗುಣಮಟ್ಟದ ಶಿಕ್ಷಣ ಸಿಗಲು ಪ್ರಯತ್ನಿಸುತ್ತೇನೆ.
* ರಾಜ್ಯದಲ್ಲಿ ಜಾತಿ ರಾಜಕೀಯ ನಿರ್ನಾಮವಾಗುವಂತೆ ಮಾಡುತ್ತೇನೆ.
* ಇತರ ರಾಜ್ಯಗಳೊಂದಿಗಿನ ನೀರು ವ್ಯಾಜ್ಯ ಪರಿಹರಿಸಲು ಯತ್ನಿಸುತ್ತೇನೆ.
* ಅಗತ್ಯವಿದ್ದವರಿಗೆ ಸರಕಾರಿ ಹಣ ತಲುಪುವಂತೆ ನೋಡಿಕೊಳ್ಳುತ್ತೇನೆ.
* ಕೋಮುವಾದಿ ರಾಜಕೀಯಕ್ಕೆ ಕೊನೆ ಹಾಡುತ್ತೇನೆ.
* ಮಹಿಳೆಯರಿಗೆ ರಕ್ಷಣೆ ನನ್ನ ಪ್ರಮುಖ ಆದ್ಯತೆ.
* ನಗರಗಳು ದಟ್ಟಣೆಯಿಂದ ಮುಕ್ತವಾಗುವಂತೆ ಮಾಡುತ್ತೇನೆ.
* ರಾಜ್ಯದಲ್ಲಿ ಹೆಚ್ಚು ಬಂಡವಾಳ ಹರಿಸುತ್ತೇನೆ.
* ಕಾನೂನು ಮತ್ತು ಸುವ್ಯವಸ್ಥೆ, ಮತ್ತು ಭಯೋತ್ಪಾದನೆ ನಿಗ್ರಹಿಸಲು ಎಲ್ಲ ಕ್ರಮ ತೆಗೆದುಕೊಳ್ಳುತ್ತೇನೆ.
* ವಿದ್ಯುತ್ ಕೊರತೆ ಬಾರದಂತೆ ಎಲ್ಲ ಕ್ರಮ ಜರುಗಿಸುತ್ತೇನೆ

2588 ಜನರ ಪ್ರತಿಕ್ರಿಯೆ
ಈಮೇಲಿನ ಆಯ್ಕೆಗಳಿಗೆ ಸುಮಾರು 2588 ಜನರು ಪ್ರತಿಕ್ರಿಯೆ ನೀಡಿದ್ದಾರೆ. ಕರ್ನಾಟಕದ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಮತ್ತು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣಕ್ಕೆ ವಿಶೇಷ ಗಮನ ಮತ್ತು ಗುಣಮಟ್ಟದ ಶಿಕ್ಷಣ ನೀಡುವ ಬಗ್ಗೆ ತಲಾ ಶೇ.81 ಜನರಷ್ಟು ಜನ ಮಹತ್ವ ನೀಡದಿದ್ದಾರೆ.
ನಗರಗಳು ದಟ್ಟಣೆಯಿಂದ ಮುಕ್ತವಾಗುವಂತೆ ಮಾಡುವುದಕ್ಕೆ ಶೇ.68 ರಷ್ಟು ಜನ ಮಹತ್ವ ನೀಡಿದ್ದಾರೆ. ಉಳಿದಂತೆ ಎಲ್ಲಾ ಆಯ್ಕೆಗಳಿಗೂ ಸರಾಸರಿ ಶೇ.70 ರಷ್ಟು ಜನ ಮಹತ್ವ ನೀಡಿದ್ದಾರೆ.

ರೈತರ ಆತ್ಮಹತ್ಯೆ ನಿಯಂತ್ರಿಸುತ್ತೇನೆ...
"ನನ್ನ ಮೊದಲ ಆದ್ಯತೆ ಬೆಳೆ ಬೆಳೆವ ರೈತರಿಗೆ ನಿರಂತರ ನೀರು ಮತ್ತು ವಿದುತ್ ಒದಗಿಸುವುದರತ್ತ. ನಂತರ ಎಲ್ಲಾ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗುವಂತೆ ಮಾಡುತ್ತೇನೆ. ನಮ್ಮ ದೇಶ ಮಹಿಳೆಯರಿಗೆ ಸಾಕಷ್ಟು ಗೌರವ ನೀಡುತ್ತದೆ. ಆದ್ದರಿಂದ ಮಹಿಳೆಯರ ರಕ್ಷಣೆಯೂ ನನ್ನ ಆದ್ಯತೆ. ಮೊದಲ ಎರಡು ವರ್ಷದಲ್ಲಿ ಹಳ್ಳಿ, ನಗರ ಎಲ್ಲೆಡೆ ಸಮರ್ಪಕ ರಸ್ತೆ ನಿರ್ಮಾಣ ಮಾಡಿಸುತ್ತೇನೆ" ಎಂದು ಪ್ರತಿಕ್ರಿಯಿಸಿದ್ದಾರೆ ನಾಗರಾಜ್ ಆರ್. ಎಂಬುವವರು.

ಜಾತಿ ರಾಜಕೀಯ ಮಾಡುವುದಿಲ್ಲ
* "ನಾನು ಮುಖ್ಯಮಂತ್ರಿಯಾದರೆ ಸಿದ್ದರಾಮಯ್ಯ ಅವರಂತೆ ಜಾತಿ ರಾಜಕೀಯ ಮಾಡುವುದಿಲ್ಲ" ಎಂದು ಅಮರೇಶ್ ಎಂಬುವವರು ಪ್ರತಿಕ್ರಿಯೆ ನೀಡಿದ್ದಾರೆ.
* "ನನ್ನ ಕನಸು ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿ ಮಾಡುವುದು" ಎಂದಿದ್ದಾರೆ ಶ್ಯಾಮ ರಾವ್.
* "ನನ್ನ ಮೊದಲ ಆದ್ಯತೆ ದೊಡ್ಡ ಮಟ್ಟದ ಭ್ರಷ್ಟಾಚಾರ ನಿರ್ಮೂಲನೆ. ಇದನ್ನು ಮಾಡಿದರೆ ನೀವು ನೀಡಿದ ಎಲ್ಲಾ ಆಯ್ಕೆಗಳೂ ಸುಂದರವಾಗಿಯೇ ಕಾಣುತ್ತದೆ" ಎಂದಿದ್ದಾರೆ ವೆಂಕಟೇಶ್.

ಮೀಸಲಾತಿ ರದ್ದುಮಾಡುತ್ತೇನೆ
* ಎಂ ಎಸ್ ಎಂಬುವವರು ಪ್ರತಿಕ್ರಿಯಿಸಿ, "ನಾನು ಮುಖ್ಯಮಂತ್ರಿಯಾದರೆ ಈ ರಾಜ್ಯದ ಭವಿಷ್ಯದ ಪೀಳಿಗೆಯನ್ನು ಸುಂದರಗೊಳಿಸುವುದಕ್ಕಾಗಿ ಎಲ್ಲ ರೀತಿಯ ಜಾತಿ ಆಧಾರಿತ ಮೀಸಲಾತಿಯನ್ನೂ ಹೋಗಲಾಡಿಸುತ್ತೇನೆ" ಎಂದಿದ್ದಾರೆ.
* "ಆರೋಗ್ಯ, ಶಿಕ್ಷಣ ಮತ್ತು ಭ್ರಷ್ಟಾಚಾರ ನಿರ್ಮೂಲನೆಯ ಜೊತೆಗೆ ಪರಿಸರಕ್ಕೆ ಯಾವುದೇ ಹಾನಿಯಾಗದಂಥ ಅಭಿವೃದ್ಧಿ ಯೋಜನೆಗಳ ಮೇಲೆ ನನ್ನ ಗಮನ" ಎಂದಿದ್ದಾರೆ ನಾಗರಾಜ್.
* "ನನಗೆ ಕರ್ನಾಟಕದ ಬಗ್ಗೆ ದೂರದೃಷ್ಟಿ ಇದೆ. ನಾನು ಕರ್ನಾಟಕದ ಮುಖ್ಯಮಂತ್ರಿಯಾಗುವ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ಈ ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ನೋಡೋಣ ಏನಾಗುತ್ತದೆ ಅಂತ" ಎಂದಿದ್ದಾರೆ ರವಿಗೌಡ!

ರಸ್ತೆಗಳು ನಾಗರೀಕತೆಯ ಸಂಕೇತ..!
"ಒಂದು ರಾಜ್ಯದ ಅಭಿವೃದ್ಧಿಯ ಮಾನದಂಡಗಳಲಲ್ಲಿ ರಸ್ತೆ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ನನ್ನ ಮೊದಲ ಆದ್ಯತೆ ಉತ್ತಮ ರಸ್ತೆ ನಿರ್ಮಾಣ. ನಾನು ಭ್ರಷ್ಟಾಚಾರವನ್ನು ಒಮ್ಮೆಲೇ ನಾಶಮಾಡುತ್ತೇನೆ ಎನ್ನುವುದಿಲ್ಲ. ಆದರೆ ಅದನ್ನು ನಿಯಂತ್ರಣಕ್ಕೆ ತರುತ್ತೇನೆ. ಜಾತಿಯಾಧಾರದ ಮೇಲೆ ಸೌಲಭ್ಯ ನೀಡುವುದನ್ನು ನಿಲ್ಲಿಸುತ್ತೇನೆ. ರೈತರಿಗೆ ವಿದುತ್, ನೀರು, ರಸಗೊಬ್ಬರ ಕಡಿಮೆ ಬೆಲೆಗೆ ಸಿಗುವಂತೆ ಮಾಡುತ್ತೇನೆ. ಕಡಿಮೆ ಬಡ್ಡಿಯ ಸಾಲ, ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗುವಂತೆ ಮಾಡುತ್ತೇನೆ. ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಿ ಸರ್ಕಾರಿ ಶಾಲೆಯ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸುತ್ತೇನೆ. ಸ್ಪರ್ಧಾತ್ಮಕ ಪರೀಕ್ಷೆ, ಸರ್ಕಾರಿ ಕೆಲಸಗಳಲ್ಲಿ ಪಾರದರ್ಶಕತೆ ತರಲು ಯತ್ನಿಸುತ್ತೇನೆ. ಯಾವುದೇ ಕ್ಷೇತ್ರದ ಸಮಸ್ಯೆಗಳಿಗೆ ಆಯಾ ಕ್ಷೇತ್ರದ ಶಾಸಕರೇ ಹೊಣೆ ಎನ್ನುತ್ತೇನೆ" ಎಂದಿದ್ದಾರೆ ಸಂತೋಷ್.

ಶಾಸಕ ಭವನವನ್ನು ಖಾಲಿ ಮಾಡಿಸುತ್ತೇನೆ!
* "ಅಕಸ್ಮಾತ್ ನಾನು ಈ ರಾಜ್ಯದ ಮುಖ್ಯಮಂತ್ರಿಯಾದರೆ ಮೊದಲು ಎಂ ಎಲ್ ಎ ಭವನವನ್ನು ಖಾಲಿ ಮಾಡಿಸಿ, ಎಲ್ಲಾ ಶಾಸಕರನ್ನೂ ಅವರವರ ಕ್ಷೇತ್ರಕ್ಕೆ ಕಳಿಸುತ್ತೇನೆ. ಆಯಾ ಶಾಸಕರು ಅವರ ಕ್ಷೇತ್ರಗಳಲ್ಲಿ ನಿರಂತರವಾಗಿ ಕೆಲಸ ಮಾಡಬೇಕು. ಅದರ ವರದಿಯನ್ನು ಕಾಲಕಾಲಕ್ಕೆ ನೀಡುತ್ತಿರುವಂತೆ ಕೇಳುತ್ತೇನೆ" ಎಂದಿದ್ದಾರೆ ಪರಮಶಿವಯ್ಯ.
* ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಹೆಚ್ಚಿಸುತ್ತೇನೆ. ನೀರು ಮತ್ತು ಸೌರ ವಿದ್ಯುತ್ ಯೋಜನೆಗಳಿಗೆ ಮಹತ್ವ ನೀಡುತ್ತೇನೆ. ರೈತರಿಗೆ ಆದ್ಯತೆ ಎಂದಿದ್ದಾರೆ ಸತೀಶ ಎಂಬುವವರು.

ಸಾಕಷ್ಟು ಪ್ರತಿಕ್ರಿಯೆ
ಈ ಚರ್ಚೆಯಲ್ಲಿ ಭಾಗವಹಿಸಿದ್ದ ನೂರಾರು ಜನ ಸಾಕಷ್ಟು ಪ್ರತಿಕ್ರಿಯೆ ನೀಡಿದ್ದಾರೆ. ಈ ರಾಜ್ಯದ ಭವಿಷ್ಯದ ಬಗೆಗಿನ ಅವರ ಕಾಳಜಿ ಅನನ್ಯ. ಎಲ್ಲರ ಕಾಮೆಂಟ್ ಗಳನ್ನೂ ಇಲ್ಲಿ ಉಲ್ಲೇಖಿಸಲು ಸಾಧ್ಯವಾಗದಿದ್ದರೂ, ಪ್ರತಿಕ್ರಿಯಿಸಿದ ಎಲ್ಲರಿಗೂ ಒನ್ ಇಂಡಿಯಾ ಧನ್ಯವಾದ ಅರ್ಪಿಸುತ್ತದೆ. ನಾವು ನೀಡಿದ ಆಯ್ಕೆಗಳು ತೀರಾ ಮಾಮೂಲಾದವು. ಇನ್ನೂ ಕೆಲವನ್ನು ಅವಕ್ಕೆ ಸೇರಿಸಬಹುದಿತ್ತು ಎಂದೂ ಕೆಲವರು ಸಲಹೆ ನೀಡಿದ್ದಾರೆ. ಕರುನಾಡನ್ನು 'ಸರ್ವಜನಾಂಗದ ಶಾಂತಿಯ ತೋಟ'ವನ್ನಾಗಿ ಮಾಡುವ ನಿಮ್ಮೆಲ್ಲರ ಉದ್ದೇಶ ಚುನಾವಣೆಯ ನಂತರ ಈಡೇರಲಿ ಎಂಬುದು ನಮ್ಮ ಹಾರೈಕೆ.
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications