ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರುಳಿಸಿ, ಮುಂದೆ ಅದು ನಮ್ಮನ್ನುಳಿಸಬಹುದು

By Staff
|
Google Oneindia Kannada News

Save waer today, it will save you tomorrow
ಕಾಂಬೋಡಿಯಾ, ಕೀನ್ಯಾದಂಥ ರಾಷ್ಟ್ರಗಳಲ್ಲಿ ಮಾತ್ರವಲ್ಲ ಬೆಂಗಳೂರಿನಂಥ ಬೆಂಗಳೂರೇ ನೀರಿನ ಭೀಕರ ಕೊರತೆ ಎದುರಿಸುವ ದಿನ ದೂರವಿಲ್ಲ. ನೀರಿನಂತೆ ಹರಿದುಬರುತ್ತಿರುವ ಸುತ್ತಲಿನ ರಾಜ್ಯಗಳ ಜನ, ಬರಿದಾಗುತ್ತಿರುವ ಹಳ್ಳಿಗಳು, ನಗರದ ಕೆರೆಗಳು ನೀರಿನ ಒರತೆಯನ್ನು ಒರೆಸಿಹಾಕುತ್ತಿವೆ. ಹಾಗಾದರೆ, ನೀರನ್ನು ಉಳಿಸುವುದೊಂದೇ ಇದಕ್ಕೆ ಪರಿಹಾರವಾ? ಸಮಸ್ಯೆ ಇನ್ನಷ್ಟು ಕ್ಲಿಷ್ಟವಾಗುತ್ತಾ ಸಾಗುತ್ತಿದೆ. ಇದಕ್ಕೆ ಮಾರ್ಗೋಪಾಯಗಳೇನು?

* ಶ್ರೀನಿಧಿ ಡಿಎಸ್

ಇತ್ತೀಚಿಗೆ ಯಾವುದೋ ಡಾಕ್ಯುಮೆಂಟರಿ ನೋಡುತ್ತಿದ್ದೆ. ಅದು, ಕಾಂಬೋಡಿಯಾ, ಕೀನ್ಯಾ ದೇಶಗಳ ಕುರಿತಾಗಿದ್ದು. ಅದರಲ್ಲಿ ನೋಡಿದ ಪ್ರಕಾರ, ಅಲ್ಲಿನ ಜನರ ಬರಗಾಲದಿಂದ ತತ್ತರಿಸುತ್ತಿದ್ದಾರೆ. ನೀರೇ ಇಲ್ಲದೆ ಇಲ್ಲಿನ ಭೂಮಿ ಬಾಯ್ಬಿಟ್ಟಿದೆ. ಎಲ್ಲಿ ನೋಡಿದರಲ್ಲಿ ಬಿಸಿಲ ಧಗೆ, ನೀರ ಹುಡುಕಾಟದಲ್ಲಿರುವ ಜನರು ಮತ್ತು ಪ್ರಾಣಿಗಳು. ಭೂಮಿಯ ಆಳದ ಅಂತರ್ಜಲ ಬತ್ತಿ ಬರಿದಾಗಿದೆ. ನೀರೇ ಇಲ್ಲವಾದ್ದರಿಂದ ಯಾವುದೇ ಬೆಳೆಯನ್ನೂ ಬೆಳೆಯಲು ಸಾಧ್ಯವಾಗುತ್ತಿಲ್ಲ. ಜನರು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ನೀರಿಲ್ಲದೆಯೂ ಬೆಳೆಯಬಲ್ಲ ವಿಷಜಾತಿಗೆ ಸೇರಿದ ಗಡ್ಡೆಗಳನ್ನು ತಿನ್ನುತ್ತಿದ್ದಾರೆ. ಈ ವಿಷಕಾರಿ ಗಡ್ಡೆ ಅವರ ಜೀವಕ್ಕೆ ಅಪಾಯವನ್ನು ತರಬಲ್ಲದು. ಆದರೆ ಅದನ್ನು ತಿನ್ನದಿದ್ದರೆ ಆ ಜನರು ಹಸಿವಿನಿಂದ ನರಳುತ್ತಾ ಸಾಯುಬೇಕಾಗುತ್ತದೆ. ಹಾಗಾಗಿ ಅವರು ಇದನ್ನೇ ತಿನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಹೀಗಿದೆ ಇವರ ಬದುಕಿನ ಸ್ಥಿತಿ.

ಇಂದು ನಗರಗಳು ಅತೀ ವೇಗವಾಗಿ ಬೆಳೆಯುತ್ತಿವೆ. ಆಧುನೀಕರಣ, ನಗರೀಕರಣ, ಕೈಗಾರಿಕೀಕರಣಗಳು ನಮ್ಮ ನೈಸರ್ಗಿಕ ಸಂಪತ್ತಿನ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಕಾರ್ಖಾನೆಗಳ ಮತ್ತಿತರ ತ್ಯಾಜ್ಯ ವಸ್ತುಗಳನ್ನು ನೇರವಾಗಿ ನದಿಗಳಿಗೆ ಬಿಡುವುದರಿಂದ ನೀರು ಕಲುಷಿತಗೊಳ್ಳುತ್ತಿದೆ. ಬೆಂಗಳೂರಿನಂತಹ ಬೃಹತ್ ನಗರದಲ್ಲಿ ದಿನೇ ದಿನೇ ಜನಸಂಖ್ಯೆ ಮಿತಿ ಮೀರಿ ಹೆಚ್ಚುತ್ತಿದ್ದು ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಅಪಾಯದ ಮಟ್ಟವನ್ನು ದಾಟುತ್ತಿದೆ. ಸಂಶೋಧನೆಯೊಂದರ ಪ್ರಕಾರ, ಇಂದು ಜಗತ್ತಿನಾದ್ಯಂತ ಸುಮಾರು ಒಂದು ಬಿಲಿಯನ್ ಜನರು ಸ್ವಚ್ಛ ಕುಡಿಯುವ ನೀರು ಸಿಗದೆ ನರಳಾಡುತ್ತಿದ್ದಾರೆ. ಒಂದು ವೇಳೆ ಪರಿಸ್ಥಿತಿ ಹೀಗೆಯೇ ಮುಂದುವರೆದರೆ 2025 ವೇಳೆಗೆ ಈ ಸಂಖ್ಯೆ 2.3 ಬಿಲಿಯನ್ ತಲುಪುತ್ತದೆ.

ಬೆಂಗಳೂರನ್ನು ಉದಾಹರಣೆಗೆ ತೆಗೆದುಕೊಂಡರೆ ಇಲ್ಲಿನ ನೀರಿನ ಅತಿದೊಡ್ಡ ಮೂಲ ನೂರು ಕಿಲೋಮೀಟರ್ ದೂರದಲ್ಲಿರುವ ಕಾವೇರಿ ನದಿ. ಪ್ರತಿನಿತ್ಯ ಲಕ್ಷಾಂತರ ಲೀಟರ್ ನೀರನ್ನು ಕಾವೇರಿ ನದಿಯಿಂದ ಇಲ್ಲಿಗೆ, ವಾರ್ಷಿಕ 350ರಿಂದ 400 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸರಬರಾಜು ಮಾಡಲಾಗುತ್ತದೆ. ಇಲ್ಲಿನ ಮತ್ತೆರಡು ಪ್ರಮುಖ ಮೂಲಗಳೆಂದರೆ ತಿಪ್ಪಗೊಂಡನ ಹಳ್ಳಿ ಜಲಾಶಯ ಮತ್ತು ಅಂತರ್ಜಲ. ಆದರೆ ಇತ್ತೀಚಿನ ದಿನಗಳಲ್ಲಿ ತಿಪ್ಪಗೊಂಡನ ಹಳ್ಳಿ ಜಲಾಶಯದ ನೀರು ಗಣನೀಯವಾಗಿ ಕಡಿಮೆ ಆಗುತ್ತಿದ್ದು, ಮುಂದೊಂದು ದಿನ ಒಣಗಿ ಹೋಗುವ ಸಾಧ್ಯತೆ ಇದೆ. ಇನ್ನು ಅಂತರ್ಜಲದ ಮಟ್ಟವಂತೂ ದಿನೇ ದಿನೇ ಕುಸಿಯುತ್ತಿದೆ. ಇಡೀ ಬೆಂಗಳೂರಿನ ಜನರು ಕೇವಲ ಒಂದೇ ಕಾವೇರಿ ನದಿಯ ನೀರಿನ ಮೇಲೆ ಅವಲಂಬಿತರಾದರೆ, ಆ ನದಿ ಹೆಚ್ಚು ದಿನ ಆಸರೆ ನೀಡಲು ಸಾಧ್ಯವಿಲ್ಲ.

ಹಿಂದೆ ಬೆಂಗಳೂರು ಹಾಗೂ ಸುತ್ತಮುತ್ತ ಸುಮಾರು 200ಕ್ಕೂ ಹೆಚ್ಚು ದೊಡ್ಡ ಕೆರೆಗಳಿದ್ದವು. ಆದರೆ ಬೆಂಗಳೂರು ಬೆಳೆದಂತೆಲ್ಲಾ ಕೆರೆಗಳ ಸಂಖ್ಯೆ ಕಡಿಮೆ ಆಗುತ್ತಾ ಬಂತು. ಇತ್ತೀಚಿನ ವರದಿಯೊಂದರ ಪ್ರಕಾರ ಇಂದು ಕೇವಲ 81 ಕೆರೆಗಳು ಮಾತ್ರ ಉಳಿದಿವೆ. ಅಂದರೆ ಉಳಿದ 119 ಕೆರೆಗಳನ್ನು ಬೆಂಗಳೂರು ನುಂಗಿಬಿಟ್ಟಿದೆ.

ಅಂಕಿ ಅಂಶವೊಂದರ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 50,000ಕ್ಕೂ ಹೆಚ್ಚು ಮಕ್ಕಳು ತಮ್ಮ 5ನೇ ವರ್ಷ ದಾಟುವುದರೊಳಗಾಗಿ ಸಾಯುತ್ತಿದ್ದಾರೆ. ಇದಕ್ಕೆ ಕಾರಣ ಕಲುಷಿತ ನೀರಿನಿಂದ ಉಂಟಾಗುವ ಬೇಧಿ, ಜಠರ-ಕರುಳುಗಳ ಉರಿಯೂತ, ಹೆಪಟೈಟಿಸ್ ನಂತಹ ರೋಗಗಳು. ನಮ್ಮ ದೇಶದಲ್ಲಿ ಇಂದು ಸುಮಾರು 224 ದಶಲಕ್ಷ ಜನರು ನೀರಿನ ಕೊರತೆ ಎದುರಿಸುತ್ತಿದ್ದಾರೆ.

ಭೂಮಿಯ ಮೂರನೇ ಎರಡು ಭಾಗ ನೀರಿನಿಂದಾವೃತವಾಗಿದೆ. ಆದರೆ, ಈ ಎಲ್ಲಾ ನೀರೂ ಬಳಕೆಗೆ ಯೋಗ್ಯವಲ್ಲ. ಭೂಮಿಯ ಒಟ್ಟು ನೀರಿನ ಸೆಲೆಯ 3 ಶೇಕಡಾ ಮಾತ್ರ ಸಿಹಿನೀರು ಲಭ್ಯ. ಸಿಹಿನೀರಿನ 30 ಶೇಕಡಾ ಪಾಲು ಅಂತರ್ಜಲದಿಂದ ದೊರೆತರೆ, 0.3 ಶೇಕಡಾ ಪಾಲು ನದಿ, ಕೆರೆ, ಮತ್ತಿತರ ಮೂಲಗಳಿಂದ ದೊರೆಯುತ್ತದೆ. ಉಳಿದ ಸಿಂಹಪಾಲು ಮಂಜುಗಡ್ಡೆಗಳ ರೂಪದಲ್ಲಿದ್ದು, ಅವುಗಳ ಬಳಕೆ ಕಷ್ಟ.

ನೀರಿನ ಅತಿಯಾದ ಬೇಡಿಕೆ, ಅಂತರ್ಜಲವನ್ನು ಹೆಚ್ಚು ಹೆಚ್ಚು ಉಪಯೋಗಿಸುವಂತೆ ಮಾಡುತ್ತಿದೆ. ಇದು, ನೀರಿನ ಎಲ್ಲ ಮೂಲಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಭೂಮಿಯೊಳಗೆ ಇಂಗುವ ನೀರಿಗಿಂತ ಅಲ್ಲಿಂದ ಹೊರತೆಗೆಯುವ ನೀರಿನ ಪ್ರಮಾಣವೇ ಹೆಚ್ಚಾಗಿರುವುದು ಅಂತರ್ಜಲದ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದಕ್ಕೆ ಕಾರಣ. ಅಂತರ್ಜಲದ ಅಭಾವದಿಂದಾಗಿ ಬೆಂಗಳೂರಿನಂತಹ ಮಹಾ ನಗರಗಳಲ್ಲಿ ನೀರಿನ ಬೆಲೆ ಏರುತ್ತಿದೆ. ನೀರಿನ ಸಮಸ್ಯೆ ಹೀಗೆಯೇ ಮುಂದುವರೆದರೆ ದೇಶಾದ್ಯಂತ ಜಲಕ್ಷಾಮ ತಲೆದೂರುವ ಅಪಾಯವಿದೆ. ಬೃಹತ್ ನಗರಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ, ಅಪಾರ್ಟ್ ಮೆಂಟ್ ಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿವೆ. ಒಂದೊಂದು ಕಟ್ಟಡಕ್ಕೂ ಹತ್ತಾರು ಬೋರ್ ವೆಲ್ ಗಳನ್ನು ಕೊರೆಯಲಾಗುತ್ತಿದೆ. ಬೆಂಗಳೂರಿನಲ್ಲೇ ಪ್ರತಿ ದಿನ ಸುಮಾರು 290 ಮಿಲಿಯನ್ ಲೀಟರ್ ಅಂತರ್ಜಲವನ್ನು ಹೊರ ತೆಗೆಯಲಾಗುತ್ತಿದೆ.

ಅನಿಯಂತ್ರಿತವಾಗಿ ನೀರನ್ನು ಹೊರತೆಗೆಯುವುದರಿಂದ ಅಂತರ್ಜಲದ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಹಲವಾರು ಕಡೆಗಳಲ್ಲಿ ಅಂತರ್ಜಲ 1000ದಿಂದ 1500 ಅಡಿಗಳಷ್ಟು ಆಳಕ್ಕೆ ಇಳಿದಿದೆ. ನಿರ್ದಿಷ್ಟ ಮಟ್ಟಕ್ಕಿಂತ ಆಳದಲ್ಲಿರುವ ನೀರಿನ ಬಳಕೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.

ನೀರಿನ ಕುರಿತು ಒಂದಿಷ್ಟು ಮಾಹಿತಿ:

* ನಮ್ಮ ದೇಹದಲ್ಲಿನ ನೀರಿನ ಪ್ರಮಾಣ, ನಿಗದಿತ ಪ್ರಮಾಣಕ್ಕಿಂತ 20 ಶೇಕಡಾ ಕಡಿಮೆಯಾದರೆ ನಾವು ಸಾಯುತ್ತೇವೆ.
* ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು ಸರಾಸರಿ ಹದಿನಾಲ್ಕು ಲಕ್ಷ ಜನರು ಕುಡಿಯುವ ನೀರಿನ ಸಮಸ್ಯೆಯಿಂದ ಸಾಯುತ್ತಿದ್ದಾರೆ.
* ನಮ್ಮ ದೇಶದ ಒಂದು ಲಕ್ಷದ ನಲವತ್ತೆಂಟು ಸಾವಿರ ಹಳ್ಳಿಗಳಲ್ಲಿ ಕುಡಿಯುವ ನೀರಿನ ಮೂಲಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ.
* ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ವಿಶ್ವದ ಅರ್ಧದಷ್ಟು ಜನರು ಶುದ್ಧ ಕುಡಿಯುವ ನೀರಿನ ಕೊರತೆಯಿಂದಾಗಿ ನೀರಿಗೆ ಸಂಬಂಧಿಸಿದ ಹಲವು ಕಾಯಿಲೆಯಿಂದ ಬಳಲುತ್ತಿದ್ದಾರೆ.
* ನೀರಿನ ಸಮಸ್ಯೆ ಹೀಗೆಯೇ ಮುಂದುವರೆದರೆ 2025ನೇ ಇಸ್ವಿಯ ವೇಳೆಗೆ ವಿಶ್ವಾದ್ಯಂತ ಸುಮಾರು 270 ಕೋಟಿ ಜನರು ನೀರಿಗಾಗಿ ಹಗಲಿರುಳೂ ಪರದಾಡುವ ಪರಿಸ್ಥಿತಿ ಬರಬಹುದು.

ಪರಿಸ್ಥಿತಿ ಹೀಗಿರುವಾಗ ಮನೆಯ ನಲ್ಲಿಯಿಂದ ಒಂದೊಂದೇ ಹನಿ ಸೋರುತ್ತಿದ್ದರೂ ಆ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಪ್ರತಿ ನಿಮಿಷಕ್ಕೆ ಒಂದು ಹನಿ ನೀರು ಪೋಲಾಗುತ್ತಾ ಹೋದರೆ, ಒಂದು ವರ್ಷಕ್ಕೆ ಸುಮಾರು 45,000 ಲೀಟರ್ ನೀರು ಸೋರಿ ಹೋಗುತ್ತದೆ. ಈ ನೀರಿನಲ್ಲಿ ಒಬ್ಬ ಮನುಷ್ಯ ಸುಮಾರು 15 ತಿಂಗಳ ಕಾಲ ಬದುಕಬಹುದು. ಆದ್ದರಿಂದ ಹನಿ ಹನಿ ನೀರಿಗೂ ಅದರದ್ದೇ ಆದ ಮಹತ್ವವಿದೆ. ನೀರುಳಿಸಿ ನೋಡೋಣ,ಮುಂದೆ ಅದು ನಮ್ಮನ್ನುಳಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X