ಅತಿಥಿ ಸತ್ಕಾರಕ್ಕೆ ಆರು ಅಡುಗೆ
ಶಕುಂತಲಾ ದೇವಿಯವರು ಸಂಖ್ಯಾಶಾಸ್ತ್ರದ ಪ್ರಕಾರ ನನ್ನ ಭವಿಷ್ಯವನ್ನೂ ಹೇಳಿದ್ದಾರೆ. '2010ನೇ ವರ್ಷ ನಿಮಗೆ ಗುಡ್ ಇಯರ್' ಎಂದು ಹೇಳಿದ್ದು ನನ್ನ ಆವತ್ತಿನ ಭವಿಷ್ಯದ ಒಟ್ಟಾರೆ ಸುದ್ದಿಯಾಗಿತ್ತು. ನೀವು ಏನೇ ಅನ್ನಿ, ಶಕುಂತಲಾ ದೇವಿಯವರ ವಾರ್ಷಿಕ ಮುನ್ನೋಟ ಅಷ್ಟು ಬೇಗ ನಿಜವಾಗುವ ಹಾದಿಯಲ್ಲಿ ಸಾಗುತ್ತದೆ ಎಂದು ನಾನೆಣಿಸಿರಲಿಲ್ಲ. ಹೊಸ ವರ್ಷಕ್ಕೆ ಕಾಲಿಟ್ಟ ಮೂರನೇ ದಿನವೇ ಹಿತಕರವಾದ ಒಂದು ಔತಣಕೂಟಕ್ಕೆ ನನಗೆ ಆಹ್ವಾನ ಬರಬೇಕೆ!
ನೆಟ್ ನೋಟ ಅಂಕಣಕಾರ ವಿಜ್ಞಾನಿ ಹಾಲ್ದೊಡ್ಡೇರಿ ಸುಧೀಂದ್ರ ಅವರು ಭಾನುವಾರ ಮಧ್ಯಾನ್ಹದ ಊಟಕ್ಕೆ ತಮ್ಮ ರಾಗಿಗುಡ್ಡದ ತಪ್ಪಲಿನ ಹೊಸ ಮನೆಗೆ ಬರುವಂತೆ ಕರೆದರು. ಕರ್ನಾಟಕ ಪ್ರವಾಸದಲ್ಲಿರುವ ಅಮೆರಿಕನ್ನಡಿಗ ಲೇಖಕ ಶ್ರೀವತ್ಸ ಜೋಶಿ ಮತ್ತವರ ಕುಟುಂಬ ಹಾಗೂ ವ್ಯಂಗ್ಯ ಚಿತ್ರಕಾರ ಮತ್ತು ಚಿತ್ರದುರ್ಗದ ಲೋಕಸಭಾ ಸದಸ್ಯ ಜನಾರ್ದನಸ್ವಾಮಿ ಅವರ ಕುಟುಂಬ ಮತ್ತು ಅಳಿಯನ ಜೊತೆಗೆ ಗೆಳೆಯನಂತೆ ನಾನು ಎಲ್ಲಾ ಸೇರಿ ಒಳ್ಳೆ ಊಟ ಹೊಡೆದೆವು. ಊಟದ ನಂತರ ಊರ ಉಸಾಬರಿಯ ಮಾತಿನ ಜತೆಗೆ ಕುಟ್ಟಡಿಕೆ.
ಅತಿಥಿಗಳನ್ನು ತೃಪ್ತಿಪಡಿಸುವುದಕ್ಕಿಂತ ಹೆಚ್ಚಾಗಿ ತಮ್ಮ ಮನೆಯ ಪ್ರತಿಷ್ಠೆ ಮತ್ತು ಗೌರವವನ್ನೇ ಮುಖ್ಯವಾಗಿ ಪರಿಗಣಿಸಿ ಮೆನು ಲಿಸ್ಟ್ ತಯಾರಿಸುವ ಪರಿಪಾಠ ಅನೇಕರಲ್ಲಿ ಮನೆ ಮಾಡಿರುತ್ತದೆ. ಆದರೆ, ಸುಧೀಂದ್ರ ಅವರ ಮಡದಿ ಸೌಮ್ಯ ಮತ್ತು ಅವರ ತಾಯಿ ಪ್ರೇಮ ಅವರು ಆ ತಪ್ಪು ಮಾಡದೇ ಇದ್ದುದು ಆವತ್ತಿನ ಭೋಜನ ಕೂಟದ ಸ್ವಾರಸ್ಯವಾಗಿತ್ತು. ನಾಕಾರು ಐಟಂ ಮಾಡಿಟ್ಟರೆ ತಿನ್ನುವವರಿಗೂ ಸಂತೋಷ ತಯಾರಿಸುವವರಿಗೂ ಸೌಖ್ಯ.
ಊಟಕ್ಕೆ ಒಟ್ಟು ಆರು ಪದಾರ್ಥಗಳು ಇದ್ದವು. ಹದವಾದ ಗಸಗಸೆ ಪಾಯಸ. ಪರಿಪೂರ್ಣವಾಗಿ ಬೆಂದ ಅಕ್ಕಿರೊಟ್ಟಿ, ಅದರ ಜತೆಗೆ ಜುಗಲಬಂದಿಗೆ ಕಿತ್ತಳೆ ಹಣ್ಣಿನ ಸಿಪ್ಪೆಯ ಗೊಜ್ಜು. ಹಿತುಕಿದ ಅವರೆಬೇಳೆ ಹುಳಿಯ ಋತುಸಂಹಾರ, ಆಹಾರಭಾರ ನಿವಾರಣೆಗೆ ನಿಂಬೆರಸದಿಂದ ಮಾಡಿದ ತೆಳ್ಳನೆಯ ನೈಲಾನ್ ಸಾರು ಮತ್ತು ಜನಗಣಮನಕ್ಕೆ ಮೊಸರನ್ನ. ಈ ನಡುವೆ ಇಷ್ಟಪಟ್ಟರೆ ಉಪ್ಪಿನಕಾಯಿ ಮತ್ತು ಕಾಳು ಮೆಣಸಿನಪುಡಿಯಿಂದ ಹಚ್ಚೆ ಹಾಕಿಸಿಕೊಂಡ ಹುರಿದ ಇಡಿ ಗೋಡಂಬಿ.
ನನಗೆ ತುಂಬಾ ಇಷ್ಟವಾದದ್ದು ಅಪರೂಪದ ಪದಾರ್ಥ ಸಿ ಅನ್ನಾಂಗ ಭರಿತ ಕಿತ್ತಳೆ ಸಿಪ್ಪೆಯ ಸಿಹಿ ಕಹಿ ಹುಳಿ ಗೊಜ್ಜು. ಅತ್ತೆ ಸೊಸೆ ಕೂಡಿ ಮಾಡಿದ ಆ ಗೊಜ್ಜನ್ನು ಮೆಚ್ಚಿ ತಿಂದದ್ದಲ್ಲದೆ ಉಂಡೂ ಹೋದ ಕೊಂಡೂ ಹೋದ ಗಾದೆಯಂತೆ ಗೊಜ್ಜಿನ ರೆಸಿಪಿಯನ್ನು ನಿಮಗೋಸ್ಕರ ಕೇಳಿ ತಂದಿದ್ದೇನೆ. ಅದು ಹೀಗಿದೆ: