ಬಿಳಿ ಇಲಿಯನ್ನು ಸಾಕಿದ ಸಂತಸ ಹಾಗೂ ಸಂಕಟಗಳು
ಬಿಳಿ ಇಲಿಯೂ ದಂಶಕವೇ. ಆದರೆ ಇತರೆ ಇಲಿಗಳಂತೆ ಉಪದ್ರವಿಯಲ್ಲ. ಇವಿದ್ದರೆ ಮಾಮೂಲಿ ಇಲಿಗಳು ಬರುವುದಿಲ್ಲ. ಹಾಗಾಗಿ ಇಂದಿಗೂ ಕೆಲವು ತರಕಾರಿ ಅಂಗಡಿಗಳವರು ಇವನ್ನು ತಮ್ಮ ಅಂಗಡಿಗಳಲ್ಲಿ ಸಾಕಿರುತ್ತಾರೆ. ಇವುಗಳನ್ನು ಸಾಕುವುದರಿಂದ ಮದ್ದು ಹಾಕಿ ಕೊಲ್ಲುವುದರಿಂದ ಉಂಟಾಗುವ ಕೆಲವು ಸಮಸ್ಯೆಗಳನ್ನು ನೀಗಿಕೊಳ್ಳಬಹುದು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇಲಿಗಳಿಗೆ ವಿಷವಿಕ್ಕಿದಾಗ ಅವು ತಿಂದು, ತಿಂದಲ್ಲೆ ಸಾಯುವುದಿಲ್ಲ. ಇನ್ನೆಲ್ಲೋ ಸಾಯುತ್ತವೆ. ಅವುಗಳ ಹೆಣ ಸಿಕ್ಕರೆ ಎತ್ತಿ ಹೊರಗೆಸೆಯಬಹುದು. ಸುಲಭವಾಗಿ ಕೈಗೆ ಸಿಗದ, ಕಣ್ಣಿಗೆ ಕಾಣದ ಮರೆಯಲ್ಲಿ ಸತ್ತರೆ ಅದರ ಕೆಟ್ಟ ವಾಸನೆ ಪರಿಸರವನ್ನು ಕೆಡಿಸುತ್ತದೆ. ಬಿಳಿ ಇಲಿ ಇದ್ದರೆ ಈ ಸಮಸ್ಯೆ ಇರದು. ಇದೂ ಒಂದು ಕಾರಣವಾಗಿ ಬಿಳಿ ಇಲಿಗಳನ್ನು ಸಾಕಲಾಗುವುದು. ಮುದ್ದಿಗಾಗಿಯು ಸಾಕುವವರುಂಟು. ನಾಯಿ, ಬೆಕ್ಕು, ಕಾಗೆ, ಹದ್ದುಗಳು ಇವಕ್ಕೆ ಶತ್ರುಗಳು.
ಬಿಳಿ ಇಲಿಯ ಮೈ ತುಪ್ಪಳ ಬಿಳಿಬಣ್ಣದ ಹಕ್ಕಿಗಳ ರೆಕ್ಕೆಪಕ್ಕಗಳಂತೆ ನುಣುಪು, ಜಿಡ್ಡಿನಿಂದ ಕೂಡಿರದು. ಹಾಗಾಗಿ ಇದರ ಬಿಳಿ ಬಣ್ಣ ಬೇಗ ಮಾಸಲಾಗುತ್ತದೆ. ತೊಳೆಯುವ ಕೆಲಸ ಮಾಡಬೇಕು. ಇಲ್ಲವೆಂದರೆ ನೋಡಲು ಅಂದವಿರದು. ನಾವು ಉಗುರು ಬೆಚ್ಚಗಿನ ನೀರಿನಿಂದ ಆಗಾಗ ಅದರ ಮೈ ತೊಳೆಯುತ್ತಿದ್ದೆವು. ಹೀಗೆ ಮಾಡುವುದು ಮಕ್ಕಳಿಗೆ ಮೋಜು.
ಸಾಧುವಾಗಿಯೇ ಇದ್ದ ಈ ಗಂಡಿಲಿ ಕ್ರೂರಿಯಾದುದೆ ದುರಂತ. ಅದಾಗಿ ಆದುದಲ್ಲವಾದುದರಿಂದ ಅದು ಅಪರಾಧಿಯಲ್ಲ. ಹಾಗಾಗುವಂತೆ ಮಾಡಿದ್ದೇ ಅಪರಾಧ. ಮಕ್ಕಳು ಅದರೊಂದಿಗೆ ಆಟವಾಡುವ ನೆಪದಲ್ಲಿ ಅದನ್ನು ಹಿಂಸಿಸುತ್ತಿದ್ದರು. ಶಾಲೆಗೆ ಬಂದವರೂ ಹಾಗೇ ಮಾಡುತ್ತಿದ್ದರು. ಅದನ್ನು ನಿವಾರಿಸಲು ಕಾವಲು ಕಾಯುವುದಾಗುತ್ತಿರಲಿಲ್ಲ. ಅದು ಸಾಧ್ಯವೂ ಇರಲಿಲ್ಲ.
ಅದು ತನ್ನನ್ನು ರಕ್ಷಿಸಿಕೊಳ್ಳುವ ಕಚ್ಚುವುದನ್ನು ಕಲಿಯಿತು. ಒಂದಿಬ್ಬರು ಮಕ್ಕಳು ಗಾಯಗೊಂಡವು. ಅವರಿಗೆ ನನ್ನ ಖರ್ಚಿನಲ್ಲಿ ವೈದ್ಯ ಮಾಡಿಸಿದೆ. ಇದರಿಂದ ಅದಕ್ಕೆ ಮಕ್ಕಳ ಕಾಟ ತಪ್ಪಿತು.
ಮಗುವಿನ ಭಾಷೆ ಅರಿಯುವ ಅಮ್ಮನಿಗೆ ಹೋಲಿಕೆ ಎಲ್ಲುಂಟು?
ಬಿಡುವಿದ್ದಾಗ ಯಾವುದಾದರೂ ಒಂದು ಪ್ರಾಣಿಯನ್ನು ಹಿಡಿದುಕೊಂಡು ಅದರ ಮೈ ನೇವರಿಸುತ್ತಿದ್ದೆ. ಒಂದು ದಿನ ಈ ಬಿಳಿ ಇಲಿಯನ್ನು ಹಿಡಿದು ನನ್ನ ಮೇಜಿನ ಮೇಲೆ ಬಿಟ್ಟು ಅದರ ಮೈ ನೇವರಿಸುತ್ತಿದ್ದೆ. ಎಳೆ ಮಗುವಿನಂತೆ ತನ್ನ ಮೈಯನ್ನು ಒಪ್ಪಿಸಿ ಮಲಗಿತ್ತು. ನೇವರಿಸುವಾಗ ನನ್ನ ಬಲಗೈಯ ತೋರು ಬೆರಳು ಅದರ ಮುಂಭಾಗಕ್ಕೆ ಹೋದದ್ದೇ ಅದು ಚಕ್ಕನೆ ಬಾಯಿ ಹಾಕಿ ಕಚ್ಚಿತು. ನೆತ್ತರು ತೊಟ್ಟಿಕ್ಕಿತು.
ಒರೆಸಬೇಕು ಅಂದುಕೊಳ್ಳುವಷ್ಟರಲ್ಲಿ ಅದು ನೆಕ್ಕಿಬಿಟ್ಟಿತು. ಆಕಸ್ಮಿಕ ಘಟನೆ ಎಂದುಕೊಂಡು ಸುಮ್ಮನಾದೆ. ಇನ್ನೊಮ್ಮೆ ಇದೇ ಪುನರಾವರ್ತನೆಗೊಂಡಾಗ ಜಾಗೃತನಾದೆ. ಆಗ ಮಾನವನ ರಕ್ತದ ರುಚಿ ಕಂಡ ಹುಲಿ ಸಿಂಹಗಳಂತೆ ವರ್ತಿಸಿತ್ತು. ಇನ್ನು ಇದು ಶಾಲೆಯಲ್ಲಿರುವುದು ಸರಿಯಲ್ಲ ಅನ್ನಿಸಿತು. ಆದರೆ ಏನು ಮಾಡುವುದೆಂದು ತೋಚಲಿಲ್ಲ. ಯಾರಿಗಾದರೂ ಕೊಟ್ಟರೆ ಅವರು ತಿಂದುಬಿಡಬಹುದು. ಇದಕ್ಕಾಗಿ ಸಾಕಬೇಕಿತ್ತೆ ಅನ್ನಿಸಿತು.
ಕವಿ ಮಿತ್ರ, ಪತ್ರಕರ್ತ ಚೌಡರೆಡ್ಡಿ ಒಂದು ದಿನ ಶಾಲೆಗೆ ಬಂದರು. ಅವರು ಬಿಳಿ ಇಲಿಯ ಬಳಿ ನಿಂತು ನೋಡುತ್ತಿದ್ದಾಗ ಅದರ ಕಥೆ ಹೇಳಿದೆ. ಪರಿಸರ ಬದಲಾಯಿಸಿದರೆ ಸರಿ ಹೋದೀತು ಎಂದರು. ಕೊಟ್ಟರೆ ತನ್ನ ಮನೆಯಲ್ಲಿ ಸಾಕಿಕೊಳ್ಳುತ್ತೇನೆ ಎಂದು ಪರಿಹಾರ ಸೂಚಿಸಿದರು. ಸಂತೋಷದಿಂದ ಅವರಿಗೆ ದತ್ತು ಕೊಟ್ಟೆ.
ಕೆಲವೇ ದಿನಕ್ಕೆ ಚೌಡರೆಡ್ಡಿ ಅದರಿಂದ ಗಾಯಗೊಂಡು ಚಿಕಿತ್ಸೆ ಪಡೆಯುವಂತಾಯಿತು. ಪ್ರಚೋದನೆ ಇಲ್ಲದೆಯೆ ಕಾಲಿನ ಹೆಬ್ಬೆರಳನ್ನು ಕಡಿದು ನೆತ್ತರನ್ನು ನೆಕ್ಕಿತ್ತು. ಅವರು ಏನು ಮಾಡಲಿ ಎಂದು ಕೇಳಿದರು. ಅದರ ಹಣೆಬರಹ. ಯಾರಿಗಾದರೂ ಕೊಟ್ಟುಬಿಡಿ ಎಂದೆ.
ಆದರೆ, ಬಿಳಿ ಇಲಿ ಸಾಕುವ ವ್ಯಾಮೋಹ ನನ್ನಿಂದ ದೂರಾಗಲಿಲ್ಲ. ಮತ್ತೊಂದು ಜೋಡಿಯನ್ನು ತರಿಸಿದೆ. ಅವನ್ನು ಜೋಪಾನವಾಗಿ ನೋಡಿಕೊಂಡೆ. ಅದರ ಸಂತಾನ ಹತ್ತಾರು ಆಯಿತು. ಸಾಕುವೆ ಎಂದವರಿಗೆ ಕೊಟ್ಟೆ. ಅವರಲ್ಲಿ ಸಾಕಿಕೊಂಡವರು ಒಂದಿಬ್ಬರು ಮಾತ್ರ. ಉಳಿದವರು ಅವುಗಳ ಮಾಂಸದ ಸವಿಯನ್ನು ಸವಿದಿದ್ದರು.
ಒಂದು ವರ್ಷ ಕಾಲ ಇವುಗಳ ರಾಜ್ಯ ಶಾಲೆಯಲ್ಲಿತ್ತು. ನಂತರ ಗಿನಿಪಿಗ್ಗುಗಳ ಪುಟ್ಟ ರಾಜ್ಯ ಅವುಗಳ ತಾವಿನಲ್ಲಿ ಸ್ಥಾಪನೆಗೊಂಡಿತು. ಇದರ ಅವಧಿ ಎರಡು ವರ್ಷಗಳು. ಈ ಅನುಭವದಲ್ಲಿ ಸಾಮ್ರಾಜ್ಯಗಳ ಉದಯ, ಏಳಿಗೆ, ಪತನದ ಇತಿಹಾಸ ನೆನಪಿಗೆ ಬರುತ್ತದೆ.