ರವಿನಂದನನ ಕೃಪೆಯಿಂದಾಗಿ ಕುಂಭ ರಾಶಿಗೆ ರಾಜಯೋಗ
ಈ ಹಿಂದೆ ನೀವು ತಿಳಿದುಕೊಂಡಂತೆ ರವಿನಂದನ(ಶನಿದೇವ)ನು ಮಹಾಶಿವನ ಪರಮಭಕ್ತ. ಮಹಾಶಿವನಿಂದಲೇ ಲೋಕದಲ್ಲಿನ ಸಮಸ್ತ ಜನರ ಪಾಪ-ಪುಣ್ಯಗಳ ಲೆಕ್ಕ ಮಾಡುತ್ತ ಅವರಿಗೆ ಸಮನಾಗಿ ಫಲ ನೀಡುವ ವರ ಪಡೆದುಕೊಂಡಿದ್ದಾನೆ ರವಿನಂದನ.
ತನ್ನ ಉಚ್ಚ ರಾಶಿ ತುಲಾ ರಾಶಿಯಲ್ಲಿ ಸಂಚರಿಸುತ್ತಿರುವ ರವಿನಂದನನು, ಕುಂಭ ರಾಶಿಯವರಿಗೆ ಗೋಚಾರದಲ್ಲಿ 9ನೇಯವನಾಗಿ ಸಂಚರಿಸುತ್ತಿದ್ದಾನೆ. ಇದರಿಂದ ಕುಂಭ ರಾಶಿಯವರಿಗೆ ಲಾಭಗಳೇ ಹೆಚ್ಚು. ಪರಸ್ಥಳಗಳಿಗೆ ಪ್ರವಾಸ, ಹೆಚ್ಚಿನ ವಿದ್ಯಾಭ್ಯಾಸ, ಬಾಳಿನಲ್ಲಿ ಮತ್ತೊಬ್ಬರ ಆಗಮನದಿಂದ ಸಂತಸ ಒಂಥರಾ ಸಂಭ್ರಮದ ಸಮಯವಿದ್ದಂಗೆ ಕುಂಭ ರಾಶಿಯವರಿಗೆ ಈಗ.
ಕೆಲವರಿಗಂತೂ ಸಾಮಾಜಿಕ ಕ್ಷೇತ್ರದಲ್ಲಿ ವಿಪರೀತ ರಾಜಯೋಗವೂ ಕೂಡ ಬಂದಿದೆ. ಇದರಿಂದಾಗಿ ಸಹಜವಾಗಿ ನಿಮ್ಮ ಗೌರವ, ಅಂತಸ್ತು ಹೆಚ್ಚಲಿದೆ. ಇನ್ನು ಕುಟುಂಬದಲ್ಲಂತು ಎಲ್ಲರೂ ನಿಮ್ಮಿಂದ ಸಂತೋಷವಾಗಿರುತ್ತಾರೆ. ಆದರೆ ನೆನಪಿರಲಿ ಇದು ರವಿನಂದನನ ಕೃಪೆಯಿಂದಾಗಿ ಎಂಬುದನ್ನು. ಮರೆತಾದರೂ ನಿಮ್ಮ ಈ ಒಳ್ಳೆಯ ಸಮಯದಲ್ಲಿ ಏನೇನೋ ಅನಾಚಾರದ ಕೆಲಸ ಮಾಡಿದರೆನ್ನಿ. ಮುಂದೆ ಮತ್ತೆ ಶನಿದೇವ ತನ್ನ ಪ್ರಭಾವ ತೋರಲು ಬಂದಾಗ ನಿಮಗೆ ತೋರಿಸುತ್ತಾನೆ ಅನಾಚಾರ ಮಾಡಿದರ ಘೋರ ಫಲ ಎಂಬ ಎಚ್ಚರಿಕೆ ಇರಲಿ ಮನದಲಿ.
ಇನ್ನು ಈ ಶ್ರಾವಣ ಮಾಸದಲ್ಲಿ ನಿಮ್ಮ ಕೈಲಾದಷ್ಟು ರವಿನಂದನನ ಇಷ್ಟದೇವರು ಮಹಾಶಿವನ ಪೂಜೆ, ಪುನಸ್ಕಾರಗಳಲ್ಲಿ ಪಾಲ್ಗೊಳ್ಳಿ. ಹಳ್ಳಿಗಳಲ್ಲಂತೂ ನೀವು ನೋಡಬೇಕು ಶ್ರಾವಣದ ಸಂಭ್ರಮದ ಆಚರಣೆ. ಬೆಳಗಿನ 4ರ ಹೊತ್ತಿಗೇನೆ ಭಜನೆ, ಪೂಜೆ, ರುದ್ರಾಭಿಷೇಕ, ಬಿಲ್ವಾರ್ಚನೆ ಮಹಾಶಿವನ ಕೃಪೆಗಾಗಿ ನಡೆಯುತ್ತಿರುತ್ತವೆ.
ರವಿನಂದನನ ಕೃಪೆಯನ್ನು ಅತೀ ಬೇಗ ಮತ್ತು ಅತೀ ಹೆಚ್ಚು ಪಡೆದುಕೊಳ್ಳಲು ಶ್ರಾವಣ ಮಾಸದಂತಹ ಕಾಲ ವರ್ಷದಲ್ಲಿ ಮತ್ತೊಂದಿಲ್ಲ ಎಂದರೆ ತಪ್ಪಾಗಲಾರದು. ಆದ್ದರಿಂದ ಹತ್ತಿರದ ಶಿವಮಂದಿರದಲ್ಲಿ ನೀವು ಕುಟುಂಬದ ಸದಸ್ಯರೊಂದಿಗೆ ಆರ್ಥಿಕ ಸಾಮರ್ಥ್ಯಕ್ಕನುಗುಣವಾಗಿ ಪೂಜೆ ಮಾಡಿಸಿಕೊಂಡು ಮಹಾಶಿವನ ಕೃಪೆಗೆ ಪಾತ್ರರಾಗುವುದರೊಂದಿಗೆ ರವಿನಂದನನ್ನು ಪ್ರಸನ್ನಗೊಳಿಸಿಕೊಳ್ಳಿ.
ಅಡ್ಡ ದಾರಿ ಹಿಡಿಯಲೇಬೇಡಿ : ಆದರೆ ಒಂದು ವಿಪರ್ಯಾಸವೆಂದರೆ ಸಾಡೇಸಾತಿಯಲ್ಲಿ ನಡೆಯುತ್ತಿರುವ ಕೆಲವೊಂದು ಜನರಿಗೆ ಪೂಜೆ ಮಾಡಿಸಲೂ ಕೂಡ ಹಣವಿರುವುದಿಲ್ಲ ಎಂದರೆ ನಂಬಲೇಬೇಕು. ಅಷ್ಟೇ ಅಲ್ಲ ವೈದ್ಯಕೀಯ ಖರ್ಚಿಗೂ ಹಣವಿಲ್ಲದೇ ಪರದಾಡುತ್ತಿರುತ್ತಾರೆ. ಹೀಗಾಗಿ ಎಷ್ಟೋ ಜನರು ಹಣ ಗಳಿಸಲು ಅಡ್ಡದಾರಿ ಹಿಡಿಯುತ್ತಾರೆ. ಹಿಡಿದ ಅಡ್ಡದಾರಿಯಲ್ಲಿ ರವಿನಂದನನಿಂದ ಅಡೆತಡೆಯುಂಟಾಗಿ ಕೃಷ್ಣನ ಜನ್ಮಸ್ಥಾನಕ್ಕೂ ಹೋಗುತ್ತಾರೆ. ಅದಕ್ಕೆಂದೇ ಹೇಳುವುದು ಸಾಡೇಸಾತಿಯಲ್ಲಿ ಅಪ್ಪಿತಪ್ಪಿಯೂ ಅನ್ಯಾಯದ ಹಾದಿ ಹಿಡಿಯಬಾರದು ಎಂದು.
ಕೆಲವೊಮ್ಮೆ ಕೆಲ ಸಾಡೇಸಾತಿ ರಾಶಿಗಳವರಲ್ಲಿನ ದರಿದ್ರತನ ವಿಪರೀತ ಮಟ್ಟಕ್ಕೆ ಹೋಗುತ್ತದೆ. ಇದು ರವಿನಂದನನಿಂದ ಉಂಟಾಗುವ ಒಂಥರಾ ಅರಿಷ್ಟ. ಅದಕ್ಕೆಂದೇ ಹೇಳುವುದು ಏಕಾಂತವಾಗಿ ಇರಲೇಬೇಡಿ ಈ ಸಮಯದಲ್ಲಿ. ಎಷ್ಟೇ ನೋವಿದ್ದರೂ ಎಲ್ಲರೊಂದಿಗೆ ಹೊಂದಿಕೊಂಡು ಹೋಗುವುದನ್ನು ಕಲಿಯಬೇಕು. ಇನ್ನು ಕೆಲ ಅಪರಾಧ ಪ್ರದೇಶಗಳಲ್ಲಿ, ಸೂಕ್ಷ್ಮ ಪ್ರದೇಶಗಳಲ್ಲಿ, ನಿಮ್ಮನ್ನು ವಿರೋಧಿಸುವ ಜನರ ಹತ್ತಿರ ಅಪ್ಪಿತಪ್ಪಿಯೂ ಹೋಗದೇ ಜಾಗೃತರಾಗಿರಿ.
ಏಕೆಂದರೆ ಸುಖಾಸುಮ್ಮನೆ ನೀವು ಏನೂ ಮಾಡದಿದ್ದರೂ ಆರೋಪ ಹೊರಬೇಕಾಗುತ್ತದೆ. ಅಂತಿಂಥ ವಿಷಯಗಳ ಬಗ್ಗೆ ಚರ್ಚೆ ಮಾಡುವುದಾಗಲಿ, ಎಲ್ಲವೂ ಗೊತ್ತಿದೆ ಎಂದು ದೊಡ್ಡದಾಗಿ ಹೇಳಿಕೊಳ್ಳುವುದಾಗಲಿ, ಅಪರಿಚಿತರೊಂದಿಗೆ ಅಪರಿಮಿತ ಸ್ನೇಹ ಮತ್ತು ಪ್ರೀತಿಯಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ಅಲ್ಲದೇ ಅಪರಿಚಿತ ಸ್ತ್ರೀ ಅಥವಾ ಪುರುಷರೊಂದಿಗೆ ನಿಮ್ಮನ್ನು ಹಂಚಿಕೊಳ್ಳಬೇಡಿ. ಇದೆಲ್ಲಾ ಮಾಡಿದ್ದೇನೆ ನನಗೆ ಏನೂ ಆಗಿಲ್ಲ ಎಂದವರಿಗೆ ಆ ರವಿನಂದನನೇ ಉತ್ತರ ಕೊಡುತ್ತಾನೆ ಸಮಯಕ್ಕನುಸಾರವಾಗಿ ಅನುಭವಿಸಿ.
ಖರ್ಚು ಕಡಿಮೆ ಮಾಡುವುದು ಕಲಿಯಿರಿ : ಸಾಮಾನ್ಯವಾಗಿ ಸಾಡೇಸಾತಿಯಲ್ಲಿ ನಡೆಯುವವರು ಖರ್ಚು ಕಮ್ಮಿ ಮಾಡಿಕೊಂಡು ಜೀವನ ಸಾಗಿಸಲು ಕಲಿಯಬೇಕು. ಮನೆಯಲ್ಲಾದರೂ ಇತರ ಸದಸ್ಯರಿಗೂ ನಿಮ್ಮ ಪರಿಸ್ಥಿತಿಯನ್ನು ವಿವರಿಸಿ. ಮನೆಗೋಸ್ಕರ ಸಾಲವನ್ನೇನಾದರು ಮಾಡಿದ್ದರೆ ಮನೆ ಮಂದಿಯೆಲ್ಲ ಒಂದು ಹೊತ್ತು ಊಟ ಕಮ್ಮಿ ಮಾಡಿ ಹಣ ಉಳಿಸಿ ಸಾಲ ತೀರಿಸಲು ಪ್ರಯತ್ನಿಸಬೇಕು. ಇಲ್ಲವಾದರೆ ನೀವು ತಿಂದುಂಡು ಚೆನ್ನಾಗಿದ್ದರೂ ಸಾಲಗಾರರ ಕಾಟದಿಂದ ಇಡೀ ಮನೆ ಮಂದಿಗೆಲ್ಲ ತಿಂದಿದ್ದು ಹೊಟ್ಟೆಗೆ ಹತ್ತಲ್ಲ ಎಂಬುದನ್ನು ಮನಗಾಣಬೇಕು. ಅದಕ್ಕೆಂದೇ ಹಣದ ಅಡಚಣೆಯಿಂದಾಗಿ ಸಾಡೇಸಾತಿಯಲ್ಲಿನವರು ಪರಿಹಾರಕ್ಕಾಗಿ ಕಮ್ಮಿ ಖರ್ಚಿನ ಪರಿಹಾರೋಪಾಯಗಳನ್ನು ಮಾಡಿಕೊಳ್ಳಿ.
ನಿಮ್ಮ ಸ್ಥಿತಿಗತಿ ಹೇಗೆ ಇದ್ದರೂ ಈ ಶ್ರಾವಣ ಮಾಸದಲ್ಲಿ ಮಹಾಶಿವನ ಕೃಪಾಕಟಾಕ್ಷ ಪಡೆದುಕೊಳ್ಳಲು ಮರೆಯಬೇಡಿ. ಶಿವನು ಬಹಳ ಬೇಗ ಒಲಿಯುವವನು ಹಾಗೂ ಬಹಳ ಬೇಗ ಸಿಟ್ಟಿಗೇಳುವವನು ಎಂಬುದು ಪುರಾಣದಲ್ಲಿದೆ. ನೀವೇ ನಿರ್ಧರಿಸಿಕೊಳ್ಳಿ ನಿಮಗೆ ಶಿವನ ಸಿಟ್ಟು ಒಳ್ಳೆಯದೋ ಅಥವಾ ಶಿವನ ಕೃಪಾಕಟಾಕ್ಷವೋ ಎಂಬುದನ್ನು.
ಹಬ್ಬಗಳ ಸಾಲು ಆರಂಭವಾಗಿದೆ, ಆದರೂ ತೊಂದರೆ ಇರುವವರಿಗೆ ಹಬ್ಬಗಳು ಬಂದವೆಂದರೆ ಖರ್ಚಿನ ಕಾರಣಕ್ಕಾಗಿ ಯಾಕಾದರೂ ಹಬ್ಬ ಬರ್ತಾವಪ್ಪಾ ಎನ್ನುವಂತಾಗಿರುತ್ತದೆ. ಆದರೆ ಚಿಂತೆ ಮಾಡಬೇಡಿ, ನಿಮ್ಮ ಶಕ್ತ್ಯಾನುಸಾರ ಖರ್ಚು ಮಾಡಿ ಸರಳವಾಗಿ ಹಬ್ಬ ಆಚರಿಸುವುದನ್ನು ಕಲಿತುಕೊಳ್ಳಿ. ದೈವಕೃಪೆಯಾಗೇ ಆಗುತ್ತದೆ.
ಶನಿದೇವನ ಕೃಪೆಗೆ : ರವಿನಂದನ ಕೃಪೆಗೆ ಪ್ರತಿದಿನ ತುಳಸೀದಾರು ರಚಿಸಿದ ಶ್ರೀ ಹನುಮಾನ ಚಾಲೀಸಾ ಪಠಣ ಮಾಡಬೇಕು. (ಒನ್ಇಂಡಿಯಾ ಕನ್ನಡ)
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ ಲೇಖಕರನ್ನು ನೇರವಾಗಿ ಫೋನಾಯಿಸಬಹುದು. (ಲೇಖಕರ ಮೊಬೈಲ್ : 94815 22011).